AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮೇಜರ್​​ ಸರ್ಜರಿ ನಿರೀಕ್ಷೆ: ಏನೆಲ್ಲ ಬದಲಾವಣೆ ಸಾಧ್ಯತೆ?

ಹೊಸ ಸರ್ಕಾರ ರಚನೆಯಾದ ನಂತರ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಿಗೆ ವೇದಿಕೆ ಸಿದ್ಧವಾಗಿದೆ. ಮುಖ್ಯಮಂತ್ರಿಗಳ ಬದಲಾವಣೆಯಾದಾಗ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಸಾಮಾನ್ಯ ಎಂಬಂತೆ, ಈ ಬಾರಿಯೂ ಖಾಕಿ ಪಡೆ ದೊಡ್ಡ ಪ್ರಮಾಣದ ವರ್ಗಾವಣೆಗಳನ್ನು ನಿರೀಕ್ಷಿಸುತ್ತಿದೆ. ಪ್ರಸ್ತುತ ಖಾಲಿ ಇರುವ ರಾಜ್ಯ ಗುಪ್ತಚರ ಇಲಾಖೆಯ ಮುಖ್ಯಸ್ಥರ ಆಯ್ಕೆಯೂ ನಡೆಯುವ ಸಾಧ್ಯತೆ ಇದೆ. ಮುಖ್ಯಮಂತ್ರಿಗಳ ಪ್ರಮಾಣ ವಚನ ಕಾರ್ಯಕ್ರಮದ ನಂತರ ಈ ಎಲ್ಲ ಪ್ರಕ್ರಿಯೆಗಳು ವೇಗ ಪಡೆಯಲಿವೆ ಎಂದು ನಿರೀಕ್ಷಿಸಲಾಗಿದೆ.

ಹೊಸ ಸರ್ಕಾರ ರಚನೆ ಬೆನ್ನಲ್ಲೇ ಪೊಲೀಸ್ ಇಲಾಖೆಗೆ ಮೇಜರ್​​ ಸರ್ಜರಿ ನಿರೀಕ್ಷೆ: ಏನೆಲ್ಲ ಬದಲಾವಣೆ ಸಾಧ್ಯತೆ?
ಪೊಲೀಸ್​​ ಇಲಾಖೆಗೆ ಮೇಜರ್​​ ಸರ್ಜರಿ ಸಾಧ್ಯತೆImage Credit source: Tv9 Kannada
Kiran HV
| Edited By: |

Updated on:Jun 02, 2026 | 6:05 PM

Share

ಬೆಂಗಳೂರು, ಜೂನ್​​ 02: ಕರ್ನಾಟಕದಲ್ಲಿ ಹೊಸ ಸರ್ಕಾರ ರಚನೆಯಾಗುತ್ತಿದ್ದಂತೆ, ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆಗಳಿಗೆ ಸಿದ್ಧತೆ ನಡೆದಿದೆ. ಸಾಮಾನ್ಯವಾಗಿ ಹೊಸ ಮುಖ್ಯಮಂತ್ರಿ ಅಧಿಕಾರ ವಹಿಸಿಕೊಂಡಾಗ, ತಮ್ಮ ಆಪ್ತ ಹಾಗೂ ವಿಶ್ವಾಸಾರ್ಹ ಅಧಿಕಾರಿಗಳನ್ನು ಒಳಗೊಂಡ ಕೋರ್ ಟೀಮ್ ರಚಿಸುವುದು ವಾಡಿಕೆ. ಇದರ ಭಾಗವಾಗಿ, ರಾಜ್ಯ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ನಡೆಯುವ ಸಾಧ್ಯತೆ ಇದೆ. ಡಿಜಿಪಿ, ಎಡಿಜಿಪಿ ಮತ್ತು ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸೇರಿದಂತೆ ಹಲವು ಉನ್ನತ ಶ್ರೇಣಿಯ ಅಧಿಕಾರಿಗಳ ವರ್ಗಾವಣೆ ಆಗಲಿದೆ ಎನ್ನಲಾಗಿದೆ.

ಗುಪ್ತಚರ ಇಲಾಖೆಗೆ ಹೊಸ ಮುಖ್ಯಸ್ಥ?

ಪ್ರಮುಖವಾಗಿ, ರಾಜ್ಯ ಗುಪ್ತಚರ ಇಲಾಖೆಗೆ ಹೊಸ ಮುಖ್ಯಸ್ಥರ ನೇಮಕದ ನಿರೀಕ್ಷೆಯಿದೆ. ಪ್ರಸ್ತುತ, ಐಜಿಪಿ ಶ್ರೇಣಿಯ ಲಾಬು ರಾಮ್ ಅವರು ಗುಪ್ತಚರ ಇಲಾಖೆಯ ಹೆಚ್ಚುವರಿ ಹೊಣೆಯನ್ನು ನಿಭಾಯಿಸುತ್ತಿದ್ದಾರೆ. ಅವರನ್ನು ಈ ಹೆಚ್ಚುವರಿ ಜವಾಬ್ದಾರಿಯಿಂದ ಮುಕ್ತಿಗೊಳಿಸಿ, ನೂತನ ಮುಖ್ಯಸ್ಥರನ್ನ ನೇಮಿಸುವ ಸಾಧ್ಯತೆ ಇದೆ. ಗುಪ್ತಚರ ಇಲಾಖೆಯ ಮುಖ್ಯಸ್ಥರ ಹುದ್ದೆ ಮುಖ್ಯಮಂತ್ರಿಗಳಿಗೆ ರಾಜ್ಯದ ರಾಜಕೀಯ ಮತ್ತು ಇತರೆ ಪ್ರಮುಖ ಬೆಳವಣಿಗೆಗಳ ಕುರಿತು ಮಾಹಿತಿ ಒದಗಿಸುವ ಪ್ರಮುಖ ಕೀ ಪೋಸ್ಟ್ ಆಗಿದೆ. ಹೀಗಾಗಿ, ತಮ್ಮ ವಿಶ್ವಾಸಾರ್ಹ ಅಧಿಕಾರಿಯನ್ನು ಈ ಹುದ್ದೆಗೆ ನೇಮಕ ಮಾಡಲು ಹೊಸ ಸರ್ಕಾರ ಮುಂದಾಗಿದೆ.

ಇದನ್ನೂ ಓದಿ: ಡಿಕೆ ಶಿವಕುಮಾರ್ ಸಂಪುಟ ಸೇರಲು ಆಕಾಂಕ್ಷಿಗಳ ಭರ್ಜರಿ ಲಾಬಿ, ದೆಹಲಿ ದಂಡಯಾತ್ರೆ; ಸ್ಪೀಕರ್ ಆಗಲು ನಾಯಕರ ಹಿಂದೇಟು

ನಗರ ಪೊಲೀಸ್ ಆಯುಕ್ತರ ಬದಲಾವಣೆಯೂ ಖಚಿತ!

ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆಯೂ ಖಚಿತವಾಗಿದೆ. ಅವರ ಜಾಗಕ್ಕೆ ಯಾರು ಬರುತ್ತಾರೆ ಎಂಬ ಕುತೂಹಲವಿದ್ದು, ಡಿಜಿಪಿ ಶ್ರೇಣಿಯ ಅಧಿಕಾರಿಗಳನ್ನೂ ಸಹ ವರ್ಗಾವಣೆ ಮಾಡಲು ನೂತನ ಸರ್ಕಾರ ತೀರ್ಮಾನಿಸಿದೆ. ಐಪಿಎಸ್ ಅಧಿಕಾರಿಗಳಷ್ಟೇ ಅಲ್ಲದೆ, ಐಎಎಸ್ ಅಧಿಕಾರಿಗಳು, ಅದರಲ್ಲೂ ಮುಖ್ಯಮಂತ್ರಿಗಳ ವೈಯಕ್ತಿಕ ಕಾರ್ಯದರ್ಶಿಗಳಂತಹ ಪ್ರಮುಖ ಹುದ್ದೆಗಳಲ್ಲೂ ಬದಲಾವಣೆಗಳು ನಿರೀಕ್ಷಿತವಾಗಿವೆ.

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳಲ್ಲಿ ಈ ವರ್ಗಾವಣೆ ಪ್ರಕ್ರಿಯೆಗಳು ಆರಂಭವಾಗಲಿವೆ ಎಂದು ಹೇಳಲಾಗಿದೆ. ಈಗಾಗಲೇ ಪೊಲೀಸ್ ಇಲಾಖೆಯಲ್ಲಿ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬ ಬಗ್ಗೆ ವ್ಯಾಪಕ ಚರ್ಚೆಗಳೂ ನಡೆಯುತ್ತಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:03 pm, Tue, 2 June 26

Follow Us
Kiran HV
Kiran HV