Mantri Mall: ಮಂತ್ರಿ ಮಾಲ್​ಗೆ ಹಾಕಲಾಗಿದ್ದ ಬೀಗ ತೆಗೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ

Bengaluru: ಮಂತ್ರಿ ಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ.

Mantri Mall: ಮಂತ್ರಿ ಮಾಲ್​ಗೆ ಹಾಕಲಾಗಿದ್ದ ಬೀಗ ತೆಗೆಯಲು ಬಿಬಿಎಂಪಿಗೆ ಹೈಕೋರ್ಟ್ ಆದೇಶ
ಮಂತ್ರಿ ಮಾಲ್‌
Edited By:

Updated on: Dec 10, 2021 | 6:50 PM

ಬೆಂಗಳೂರು: ತೆರಿಗೆ ಕಟ್ಟದ ಆರೋಪದಲ್ಲಿ ಬೆಂಗಳೂರಿನ ಪ್ರಮುಖ ಶಾಪಿಂಗ್ ಮಾಲ್ ಆದ ಮಂತ್ರಿ ಮಾಲ್​ಗೆ (Mantri Mall) ಬಿಬಿಎಂಪಿ ಅಧಿಕಾರಿಗಳು 4 ದಿನಗಳ ಹಿಂದೆ ಮತ್ತೆ ಬೀಗ ಹಾಕಿದ್ದರು. ಆದರೆ, ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಬಿಬಿಎಂಪಿಗೆ (BBMP) ಹೈಕೋರ್ಟ್ ಆದೇಶ ನೀಡಿದೆ. ತೆರಿಗೆ ಬಾಕಿಯ ಸ್ವಲ್ಪ ಭಾಗವನ್ನು ತಕ್ಷಣ ಪಾವತಿಸಲು ಹೈಕೋರ್ಟ್​ನ ಏಕಸದಸ್ಯ ಪೀಠ ಅರ್ಜಿದಾರ ಹಮಾರಾ ಷೆಲ್ಟರ್ಸ್, ಅಭಿಷೇಕ್ ಪ್ರಾಪರ್ಟೀಸ್​ಗೆ ಇಂದು ಸೂಚನೆ ನೀಡಿದೆ. ತಕ್ಷಣ 4 ಕೋಟಿ ರೂ. ಮೊತ್ತದ ಚೆಕ್ ನೀಡಲು ಸೂಚನೆ ನೀಡಿದೆ. ಡಿ.13ರ ಮಧ್ಯಾಹ್ನದೊಳಗೆ ರೂ. 2 ಕೋಟಿ ಡಿಡಿ ಪಾವತಿಗೆ ಸೂಚನೆ ನೀಡಲಾಗಿದೆ.

ಮಂತ್ರಿಮಾಲ್, ಬಿಬಿಎಂಪಿ ಎರಡೂ ನಿಯಮಗಳನ್ನು ಉಲ್ಲಂಘಿಸಿವೆ. ನಿಗದಿತ ಅವಧಿಯಲ್ಲಿ ಮಂತ್ರಿ ಮಾಲ್ ತೆರಿಗೆ ಪಾವತಿಸಿಲ್ಲ. ಸೀಲ್ ಮಾಡಿ ಬಿಬಿಎಂಪಿಯೂ ನಿಯಮಾವಳಿ ಉಲ್ಲಂಘಿಸಿದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅಭಿಪ್ರಾಯಪಟ್ಟಿದ್ದಾರೆ. ಈ ಪ್ರಕರಣದ ಕುರಿತು ಮತ್ತೆ ಡಿಸೆಂಬರ್ 13ಕ್ಕೆ ಹೈಕೋರ್ಟ್ ವಿಚಾರಣೆ ನಡೆಸಲಿದೆ.

ಮಂತ್ರಿ ಮಾಲ್​​ನಲ್ಲಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳಿವೆ. ಕೊಳೆಯುವಂತಹ ವಸ್ತುಗಳು ಕೂಡ ಇವೆ ಎಂದು ಅರ್ಜಿದಾರರ ಪರ ವಕೀಲರು ವಾದ ಮಂಡಿಸಿದ್ದರು. ಈ ಹಿನ್ನೆಲೆಯಲ್ಲಿ ಮಲ್ಲೇಶ್ವರದಲ್ಲಿರುವ ಮಂತ್ರಿ ಮಾಲ್ ಬೀಗಮುದ್ರೆ ತೆರೆಯಲು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಬೆಂಗಳೂರಿನ ಪ್ರತಿಷ್ಠಿತ ಮಂತ್ರಿ ಮಾಲ್ ಬಿಬಿಎಂಪಿಗೆ ಸುಮಾರು 27 ಕೋಟಿ ತೆರಿಗೆ ಬಾಕಿ ಉಳಿಸಿಕೊಂಡಿದೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಡಿ. 6ರಂದು ಮತ್ತೊಮ್ಮೆ ಮಂತ್ರಿ ಮಾಲ್​ಗೆ ಬೀಗ ಹಾಕಲಾಗಿತ್ತು. 3 ವರ್ಷದಿಂದ ಮಂತ್ರಿ ಮಾಲ್ ಬಿಬಿಎಂಪಿಗೆ ಒಟ್ಟು 27 ಕೋಟಿ ತೆರಿಗೆಯನ್ನು ಪಾವತಿಸಿಲ್ಲ. ಪದೇಪದೆ ನೋಟಿಸ್ ಜಾರಿ ಮಾಡಿದರೂ ತೆರಿಗೆ ಪಾವತಿಸಿಲ್ಲ ಎಂಬ ಕಾರಣಕ್ಕೆ ಬಿಬಿಎಂಪಿ ಅಧಿಕಾರಿಗಳು ಮಂತ್ರಿ ಮಾಲ್​ಗೆ ಬೀಗ ಜಡಿದಿದ್ದರು. ಈಗಾಗಲೇ ಮೂರ್ನಾಲ್ಕು ಬಾರಿ ಮಂತ್ರಿ ಮಾಲ್​ಗೆ ಇದೇ ಕಾರಣಕ್ಕೆ ಬೀಗ ಹಾಕಲಾಗಿದೆ.

ಈ ಹಿಂದೆ 15 ದಿನಗಳೊಳಗೆ ತೆರಿಗೆ ಪಾವತಿಸುವಂತೆ ಮಾಲ್​ಗೆ ಗಡುವು ನೀಡಲಾಗಿತ್ತು. 15 ದಿನದೊಳಗೆ ತೆರಿಗೆ ಪಾವತಿಸುವುದಾಗಿ ಮಾಲೀಕರು ಮನವಿ ಮಾಡಿದ್ದರು. ಬಿಬಿಎಂಪಿ ಆಯುಕ್ತರ ಬಳಿ ಮಂತ್ರಿಮಾಲ್ ಮಾಲೀಕ ಮನವಿ ಮಾಡಿಕೊಂಡಿದ್ದರು. ಹೀಗಾಗಿ ಬಿಬಿಎಂಪಿ 15 ದಿನಗಳ ಕಾಲಾವಕಾಶ ನೀಡಿತ್ತು. ನವೆಂಬರ್ ತಿಂಗಳ ಅಂತ್ಯದೊಳಗೆ ತೆರಿಗೆ ಪಾವತಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇನ್ನು ಉಳಿದ ಬಾಕಿ ತೆರಿಗೆ ಹಣ ನೀಡದ ಕಾರಣ ಡಿ. 6ರಂದು ಮತ್ತೆ ಬೀಗ ಹಾಕಲಾಗಿತ್ತು.

ಚುನಾವಣಾ ಫಲಿತಾಂಶಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಮೇಲ್ಮನವಿ:
ಬೆಂಗಳೂರು ನಗರ ಎಂಎಲ್‌ಸಿ ಚುನಾವಣೆ ವಿಚಾರವಾಗಿ ಚುನಾವಣಾ ಫಲಿತಾಂಶಕ್ಕೆ ತಡೆಯಾಜ್ಞೆ ಪ್ರಶ್ನಿಸಿ ಚುನಾವಣಾ ಆಯೋಗದಿಂದ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗಿದೆ. ತುರ್ತು ವಿಚಾರಣೆಗೆ ವಿಭಾಗೀಯ ಪೀಠಕ್ಕೆ ಮನವಿ ಮಾಡಲಾಗಿದೆ. 15 ಸದಸ್ಯರ ಮತವನ್ನು ಪ್ರತ್ಯೇಕವಾಗಿರಿಸುವಂತೆ ಸೂಚಿಸಿದ್ದು, ಫಲಿತಾಂಶ ಪ್ರಕಟಿಸದಂತೆ ಮಧ್ಯಂತರ ಆದೇಶ ನೀಡಿದೆ. ಇದರಿಂದ ಉಳಿದ ಕ್ಷೇತ್ರಗಳ ಚುನಾವಣೆ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಏಕಸದಸ್ಯ ಪೀಠದ ಆದೇಶಕ್ಕೆ ತಡೆ ನೀಡಬೇಕು ಎಂಬ ಮೇಲ್ಮನವಿ ಅರ್ಜಿಯ ತುರ್ತು ವಿಚಾರಣೆಗೆ ಮನವಿ ಮಾಡಲಾಗಿದೆ. ಡಿಸೆಂಬರ್ 14ಕ್ಕೆ ಹೈಕೋರ್ಟ್​ ವಿಚಾರಣೆಗೆ ದಿನ ನಿಗದಿಪಡಿಸಿದೆ.

ಇದನ್ನೂ ಓದಿ: Mantri Mall: ಬಿಬಿಎಂಪಿ ಅಧಿಕಾರಿಗಳಿಂದ ಬೆಂಗಳೂರಿನ ಮಂತ್ರಿ ಮಾಲ್​ಗೆ ಮತ್ತೆ ಬಿತ್ತು ಬೀಗ

ಬೆಂಗಳೂರು: ತೆರಿಗೆ ಪಾವತಿಸದ ಮಂತ್ರಿ ಮಾಲ್‌ಗೆ ಮತ್ತೆ ಬೀಗ ಹಾಕಿದ BBMP ಅಧಿಕಾರಿಗಳು

Web contact

TV9 Kannada

Read More
Follow Us