ಬೆಂಗಳೂರು: ಮಳೆಯಿಂದಾಗಿ ಮತ್ತೆ ಬಾಯ್ದೆರೆದ ರಸ್ತೆಗುಂಡಿಗಳು, 15 ದಿನದ ಮಳೆಗೆ 5,500 ರಸ್ತೆಗುಂಡಿ ಸೃಷ್ಟಿ

ಕಳೆದ ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದ ಇದಕ್ಕೆ ಕಳಪೆ ಗುಣಮಟ್ಟದ ರಸ್ತೆಗಳ ಡಾಂಬಾರು ಕಿತ್ತು ಬರುತ್ತಿದೆ. ಹೀಗಾಗಿ ನಗರದಲ್ಲಿ ರಸ್ತೆ ಗುಂಡಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು 15 ದಿನದ ಮಳೆಗೆ 5,500 ರಸ್ತೆಗುಂಡಿ ಸೃಷ್ಟಿಯಾಗಿವೆ. ಇದರಿಂದ ವಾಹನ ಸವಾರರಿಗೆ ಸಮಸ್ಯೆ ಎದುರಾಗಿದೆ,

ಬೆಂಗಳೂರು: ಮಳೆಯಿಂದಾಗಿ ಮತ್ತೆ ಬಾಯ್ದೆರೆದ ರಸ್ತೆಗುಂಡಿಗಳು, 15 ದಿನದ ಮಳೆಗೆ 5,500 ರಸ್ತೆಗುಂಡಿ ಸೃಷ್ಟಿ
ಮಳೆಗೆ ರಸ್ತೆ ಗುಂಡಿಗಳ ಹೆಚ್ಚಳ
Follow us
| Updated By: ಆಯೇಷಾ ಬಾನು

Updated on: May 21, 2024 | 3:00 PM

ಬೆಂಗಳೂರು, ಮೇ.21: ಬಾರೋ ಬಾರೋ ಮಳೆರಾಯ ಅಂತಿದ್ದ ಸಿಟಿಮಂದಿಗೆ (Bengaluru Rain) ಇದೀಗ ಮಳೆರಾಯನ ಎಂಟ್ರಿಯಿಂದ ಒಂದಷ್ಟು ಸಮಸ್ಯೆ ತಲೆದೂರಿದೆ. ಮಳೆರಾಯನ ಆಗಮನದಿಂದ ಬೆಂಗಳೂರಿನ ರಸ್ತೆಗಳ ಬಂಡವಾಳ ಮತ್ತೆ ಬಟಾಬಯಲಾಗಿದ್ದು, ಸಿಟಿಮಂದಿಯನ್ನ ಬೆಂಬಿಡದೇ ಕಾಡಿದ್ದ ರಸ್ತೆಗುಂಡಿಗಳು (potholes) ಮತ್ತೆ ಬಲಿಗಾಗಿ ಬಾಯ್ದೆರೆದಿವೆ. ಹದಿನೈದು ದಿನದ ಮಳೆಗೆ ನಗರದ ಹಲವೆಡೆ 5ಸಾವಿರಕ್ಕೂ ಹೆಚ್ಚು ರಸ್ತೆಗುಂಡಿ ಬಾಯ್ದೆರೆದು ಜನರಿಗೆ ಕಂಟಕ ತಂದಿಟ್ಟಿದೆ.

ರಾಜ್ಯ ರಾಜಧಾನಿಯ ಮಾನವನ್ನ ರಾಷ್ಟ್ರ ಮಟ್ಟದಲ್ಲಿ ಹರಾಜ್ ಹಾಕಿದ್ದ ರಸ್ತೆಗುಂಡಿಗಳು ಇದೀಗ ಮತ್ತೆ ಬಾಯ್ದೆರೆದಿವೆ. ಒಂದಷ್ಟು ದಿನದ ಮಳೆಗೆ ಬೆಂಗಳೂರಿನ ಹಲವೆಡೆ ರಸ್ತೆಗುಂಡಿಗಳು ಕಾಣಿಸಿಕೊಂಡಿದ್ದು, ವಾಹನ ಸವಾರರಿಗೆ ಕಂಟಕವಾಗ್ತಿವೆ. ಹೊರಮಾವು-ಅಗರ ಮುಖ್ಯರಸ್ತೆಯಲ್ಲಿ ಡೆಡ್ಲಿಗುಂಡಿಗಳು ಕಾಣಿಸಿಕೊಂಡಿದ್ದು ಪ್ರತಿನಿತ್ಯ ಒಬ್ಬರಲ್ಲ ಒಬ್ಬರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ವಾರದ ಹಿಂದೆಯಷ್ಟೇ ಇದೇ ರಸ್ತೆಯಲ್ಲಿ ಇಬ್ಬರು ಸಾವನ್ನಪ್ಪಿದ್ರು ಗುಂಡಿ ಮುಚ್ಚಿಲ್ಲ ಅಂತಾ ಜನರು ಕಿಡಿಕಾರುತ್ತಿದ್ದಾರೆ

ಇನ್ನು ಈ ರಸ್ತೆಯಲ್ಲಿ ಮಳೆ ಬಂದಾಗ ನೀರು ತುಂಬಿ ರಸ್ತೆಗುಂಡಿಗಳು ಕಾಣದೇ ವಾಹನಸವಾರರಿಗೆ ಅಪಾಯ ತಂದಿಡ್ತಿದೆ. ಕಿತ್ತೋದ ರಸ್ತೆಯಲ್ಲೇ ಜಲಮಂಡಳಿಯ ಕಾಮಗಾರಿ ಕೂಡ ನಡಿತೀರೋದರಿಂದ ಜನರು ಮತ್ತಷ್ಟು ಅಪಾಯಕ್ಕೆ ಸಿಲುಕಿದ್ದಾರೆ. ಇಷ್ಟಾದ್ರೂ ಎಚ್ಚೆತ್ತುಕೊಳ್ಳದ ಪಾಲಿಕೆ ಹಾಗೂ ಸ್ಥಳೀಯ ಶಾಸಕರ ವಿರುದ್ಧ ಜನ ಕಿಡಿಕಾರುತ್ತಿದ್ದಾರೆ.

ಇದನ್ನೂ ಓದಿ: ಕಳ್ಳ ಅಂತ ಪೊಲೀಸರನ್ನು ಅಟ್ಟಿಸಿಕೊಂಡು ಹೋದ ಜನರು

ಇತ್ತ ಬೆಂಗಳೂರಲ್ಲಿ 5 ಸಾವಿರಕ್ಕೂ ಹೆಚ್ಚು ರಸ್ತೆಗುಂಡಿ ಇದೆ ಅಂತಿರೋ ಬಿಬಿಎಂಪಿ ಆಯುಕ್ತರು ,ಈಗ ಮಳೆ ಇರೋದರಿಂದ ಗುಂಡಿ ಮುಚ್ಚಲು ಆಗ್ತಿಲ್ಲ, ಮಳೆ ನಿಂತ ಮೇಲೆ ಕೋಲ್ಡ್ ಮಿಕ್ಸ್ ಹಾಕ್ತೀವೆ ಅಂತಿದ್ದಾರೆ. ಅಲ್ಲದೇ ಪ್ರತಿ ವಲಯದಲ್ಲಿ 500 ರಿಂದ 800 ಗುಂಡಿಗಳಿವೆ ಮಳೆ ನಿಂತ ಮೇಲೆ ನಾಲ್ಕೈದು ದಿನದಲ್ಲಿ ಮುಚ್ಚುತ್ತೇವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದಾರೆ.

ಒಟ್ಟಿನಲ್ಲಿ ಒಂದೆಡೆ ಮಳೆಯಿಂದ ಅವಾಂತರ ಸೃಷ್ಟಿಯಾಗ್ತಿದ್ರೆ, ಮತ್ತೊಂದೆಡೆ ಸಿಟಿ ಮಂದಿಯ ನೆಮ್ಮದಿ ಕೆಡಿಸಿದ್ದ ರಸ್ತೆಗುಂಡಿಗಳು ನಿಧಾನಕ್ಕೆ ಕಣ್ತೆರೆಯುತ್ತಿವೆ. ಸದ್ಯ ಮಳೆಗಾಲ ಕೂಡ ಆರಂಭವಾಗ್ತಿದ್ದು ಅಪಾಯ ಆಗೋ ಮೊದಲೇ ಪಾಲಿಕೆ ಎಚ್ಚೆತ್ತುಕೊಳ್ಳಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ