
ಬೆಂಗಳೂರು, ಮೇ 16: ನಗರದ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಮೇ 17ರ ಭಾನುವಾರದಂದು ಅತ್ಯಗತ್ಯ ತಾಂತ್ರಿಕ ನಿರ್ವಹಣಾ ಕಾಮಗಾರಿಯನ್ನು ಹಮ್ಮಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಹೊಸಹಳ್ಳಿ-ಕಬ್ಬನ್ ಪಾರ್ಕ್ ನಿಲ್ದಾಣಗಳ ನಡುವೆ ಬೆಳಿಗ್ಗೆ 7:00 ಗಂಟೆಯಿಂದ 9:00 ಗಂಟೆಯವರೆಗೆ ಒಟ್ಟು ಎರಡು ಗಂಟೆಗಳ ಅವಧಿಗೆ ರೈಲು ಸಂಚಾರದಲ್ಲಿ ಭಾಗಶಃ ವ್ಯತ್ಯಯ ಉಂಟಾಗಲಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ಪ್ರಕಟಣೆಯಲ್ಲಿ ತಿಳಿಸಿದೆ.
ಮೆಜೆಸ್ಟಿಕ್ನ ನಾಡಪ್ರಭು ಕೆಂಪೇಗೌಡ ನಿಲ್ದಾಣ ಮತ್ತು ಸೆಂಟ್ರಲ್ ಕಾಲೇಜಿನ ಸರ್ ಎಂ. ವಿಶ್ವೇಶ್ವರಯ್ಯ ಮೆಟ್ರೊ ನಿಲ್ದಾಣಗಳ ನಡುವೆ ತುರ್ತು ಮತ್ತು ಅಗತ್ಯ ಸುರಕ್ಷತಾ ಕಾಮಗಾರಿಗಳು ನಡೆಯಲಿವೆ. ಈ ತಾಂತ್ರಿಕ ಕಾರಣದಿಂದಾಗಿ, ಭಾನುವಾರ ಬೆಳಿಗ್ಗೆ 2 ಗಂಟೆಗಳ ಕಾಲ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ನಿಲ್ದಾಣ (ಹೊಸಹಳ್ಳಿ) ಮತ್ತು ಕಬ್ಬನ್ ಪಾರ್ಕ್ ಮೆಟ್ರೊ ನಿಲ್ದಾಣಗಳ ನಡುವೆ ಮೆಟ್ರೋ ರೈಲು ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಳ್ಳಲಿವೆ. ಬೆಳಿಗ್ಗೆ 9:00 ಗಂಟೆಯ ನಂತರ ಈ ಮಾರ್ಗದಲ್ಲಿ ಎಂದಿನಂತೆ ರೈಲುಗಳು ಸಂಚರಿಸಲಿವೆ.
ಪರ್ಯಾಯ ಮಾರ್ಗಗಳಲ್ಲಿ ಎಂದಿನಂತೆ ಸಂಚಾರ ಲಭ್ಯ
ನೇರಳೆ ಮಾರ್ಗದ ಒಂದು ಭಾಗದಲ್ಲಿ ಸಂಚಾರ ಸ್ಥಗಿತಗೊಂಡಿದ್ದರೂ, ಪ್ರಯಾಣಿಕರ ಅನುಕೂಲಕ್ಕಾಗಿ ಇನ್ನುಳಿದ ಮಾರ್ಗಗಳಲ್ಲಿ ಬೆಳಿಗ್ಗೆ 7:00 ಗಂಟೆಯಿಂದಲೇ ರೈಲು ಸೇವೆಗಳು ಲಭ್ಯವಿರಲಿವೆ. ಚಲ್ಲಘಟ್ಟದಿಂದ ವಿಜಯನಗರದವರೆಗೆ ಮತ್ತು ಎಂ.ಜಿ. ರಸ್ತೆಯಿಂದ ವೈಟ್ಫೀಲ್ಡ್ (ಕಾಡುಗೋಡಿ) ನಿಲ್ದಾಣಗಳ ನಡುವೆ ರೈಲುಗಳು ಎಂದಿನ ವೇಳಾಪಟ್ಟಿಯಂತೆ ಚಲಿಸಲಿವೆ. ಮಾದಾವರ ಮತ್ತು ರೇಷ್ಮೆ ಸಂಸ್ಥೆ ನಿಲ್ದಾಣಗಳ (ಹಸಿರು ಮಾರ್ಗ) ನಡುವಿನ ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಆರ್.ವಿ. ರಸ್ತೆ ಮತ್ತು ಬೊಮ್ಮಸಂದ್ರ (ಹಳದಿ ಮಾರ್ಗ) ನಡುವಿನ ಮೆಟ್ರೋ ರೈಲುಗಳು ಸಹ ಎಂದಿನಂತೆ ಕಾರ್ಯನಿರ್ವಹಿಸಲಿವೆ.
Temporary Suspension of Metro Services on Purple Line for 2 hours on 17.05.2026
ದಿನಾಂಕ 17.05.2026 ರಂದು ನೇರಳೆ ಮಾರ್ಗ ಮೆಟ್ರೋ ಸೇವೆ 2 ರಡು ಗಂಟೆ ಅವಧಿಗೆ ತಾತ್ಕಾಲಿಕ ಸ್ಥಗಿತ. ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆಯನ್ನು ವೀಕ್ಷಿಸಿ@srivasrbmrccoi1 @Secretary_MoHUA @mlkhattar @officeofmlk pic.twitter.com/EypWaXblqy
— ನಮ್ಮ ಮೆಟ್ರೋ (@OfficialBMRCL) May 15, 2026
ಭಾನುವಾರ ಬೆಳಿಗ್ಗೆ ಮೆಜೆಸ್ಟಿಕ್ ಅಥವಾ ಕಬ್ಬನ್ ಪಾರ್ಕ್ ಕಡೆಗೆ ಪ್ರಯಾಣಿಸಲು ಯೋಜಿಸುವ ಸಾರ್ವಜನಿಕರು ಈ ಸಮಯದ ವ್ಯತ್ಯಯವನ್ನು ಗಮನದಲ್ಲಿಟ್ಟುಕೊಂಡು ತಮ್ಮ ಪ್ರಯಾಣವನ್ನು ಯೋಜಿಸಲು ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:46 am, Sat, 16 May 26