ಮಹಾರಾಷ್ಟ್ರದ ನಾಂದೇಡ್​ ಮತ್ತು ಬೀದರ್ ನಡುವಿನ ರೈಲು ಮಾರ್ಗ ಯೋಜನೆ ವಿಳಂಬಕ್ಕೆ ಕಾರಣ ಬಯಲು!

ಮಹಾರಾಷ್ಟ್ರದ ನಾಂದೇಡ್-ಬೀದರ್ ರೈಲು ಮಾರ್ಗ ಯೋಜನೆ ವಿಳಂಬಕ್ಕೆ ಕಾರಣ ಬಯಲಾಗಿದೆ. ಅಶೋಕ್ ಚವಾಣ್ ಪತ್ರದ ಪ್ರಕಾರ, ಕರ್ನಾಟಕ ಸರ್ಕಾರದ ಅನುಮತಿ ಮತ್ತು ಆರ್ಥಿಕ ಭರವಸೆ ಸಿಕ್ಕಿಲ್ಲ. ಈ 155 ಕಿ.ಮೀ. ಯೋಜನೆಯು ಮಹಾರಾಷ್ಟ್ರದ ಪಾಲನ್ನು ಅನುಮೋದಿಸಿದೆ ಆದರೆ ಕರ್ನಾಟಕ ಸರ್ಕಾರ ಇನ್ನೂ ಅನುಮೋದನೆ ನೀಡಿಲ್ಲ. ಯೋಜನೆ ಪೂರ್ಣಗೊಂಡರೆ, ಇದು ಯಾತ್ರಾಸ್ಥಳಗಳನ್ನು ಸಂಪರ್ಕಿಸಿ, ಬೆಂಗಳೂರಿಗೆ ಪ್ರಯಾಣದ ದೂರ ಕಡಿಮೆ ಮಾಡಿ, ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲಿದೆ ಎಂದು ಅವರು ತಮ್ಮ ಪತ್ರದಲ್ಲಿ ಹೇಳಿದ್ದಾರೆ.

ಮಹಾರಾಷ್ಟ್ರದ ನಾಂದೇಡ್​ ಮತ್ತು ಬೀದರ್ ನಡುವಿನ ರೈಲು ಮಾರ್ಗ ಯೋಜನೆ ವಿಳಂಬಕ್ಕೆ ಕಾರಣ ಬಯಲು!
ಮಹಾರಾಷ್ಟ್ರದ ನಾಂದೇಡ್​ ಮತ್ತು ಬೀದರ ನಡುವಿನ ರೈಲು ಮಾರ್ಗ ಯೋಜನೆ ವಿಳಂಬಕ್ಕೆ ಕಾರಣ ಬಯಲು!

Updated on: Feb 14, 2026 | 2:57 PM

ಬೆಂಗಳೂರು, ಫೆಬ್ರವರಿ 14: ಮಹಾರಾಷ್ಟ್ರದ ನಾಂದೇಡ್​ ಮತ್ತು ಕರ್ನಾಟಕದ ಬೀದರ ನಡುವೆ ಹೊಸ ರೈಲು ಮಾರ್ಗ ಯೋಜನೆಯು ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ (B Y Vijayendra) ಅವರಿಗೆ ಉತ್ತರಿಸಿ ಪತ್ರ ಬರೆದಿರುವ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ್ ಚವಾಣ್, ವಿಳಂಬಕ್ಕೆ ಕಾರಣವೇನೆಂದು ವಿವರಿಸಿದ್ದಾರೆ.

ಚವಾಣ್ ಪತ್ರದಲ್ಲೇನಿದೆ?

ನಾಂದೇಡ್​–ಬೀದರ ನಡುವಿನ ಹೊಸ ರೈಲು ಮಾರ್ಗ ಯೋಜನೆಗೆ ಕರ್ನಾಟಕ ಸರ್ಕಾರದ ಅನುಮೋದನೆ ಇನ್ನೂ ಲಭಿಸದ ಹಿನ್ನೆಲೆಯಲ್ಲಿ ಯೋಜನೆ ಜಾರಿಗೆ ತಡವಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಿರುವ ಚವಾಣ್, ಸುಮಾರು 155 ಕಿಲೋಮೀಟರ್ ಉದ್ದದ ಈ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಸುಮಾರು 100 ಕಿಲೋಮೀಟರ್ ಭಾಗ ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಗೆ ಒಳಪಡುತ್ತದೆ. ಯೋಜನೆ ಪೂರ್ಣಗೊಂಡಲ್ಲಿ ನಾಂದೇಡ್​ ಮತ್ತು ಬೆಂಗಳೂರು ನಡುವಿನ ಪ್ರಯಾಣದ ದೂರ ಕಡಿಮೆಯಾಗುವ ಸಾಧ್ಯತೆ ಇದ್ದು, ಎರಡೂ ರಾಜ್ಯಗಳ ಸಾಮಾಜಿಕ, ಧಾರ್ಮಿಕ ಹಾಗೂ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ಸಿಗಲಿದೆ ಎಂದು ನಿರೀಕ್ಷಣೆ ಇದೆ ಎಂದು ಹೇಳಿದ್ದಾರೆ.

ಕೇಂದ್ರ ಸರ್ಕಾರವು ಈ ಯೋಜನೆಯನ್ನು 50:50 ವೆಚ್ಚ ಹಂಚಿಕೆ ಆಧಾರದಲ್ಲಿ ಜಾರಿಗೆ ತರಲು ತೀರ್ಮಾನಿಸಿದೆ. ಮಹಾರಾಷ್ಟ್ರ ಸರ್ಕಾರವು ತನ್ನ ಪಾಲಿನ ವೆಚ್ಚಕ್ಕೆ ಈಗಾಗಲೇ ಸಚಿವ ಸಂಪುಟದ ಅನುಮೋದನೆ ನೀಡಿ ಯೋಜನೆಗೆ ಬದ್ಧತೆ ವ್ಯಕ್ತಪಡಿಸಿದೆ. ಆದರೆ, ಕರ್ನಾಟಕ ಸರ್ಕಾರದಿಂದ ಇನ್ನೂ ಅಧಿಕೃತ ಒಪ್ಪಿಗೆ ಹಾಗೂ ಹಣಕಾಸಿನ ಭರವಸೆ ಸಿಕ್ಕಿಲ್ಲ ಎಂದು ಚವಾಣ್ ತಮ್ಮ ಪತ್ರದಲ್ಲಿ ವಿವರಿಸಿದ್ದಾರೆ.

ಈ ರೈಲು ಮಾರ್ಗ ಕಾರ್ಯರೂಪಕ್ಕೆ ಬಂದರೆ ನಾಂದೇಡ್​‌ನ ಶ್ರೀ ಹಜೂರ್ ಸಾಹಿಬ್ ಹಾಗೂ ಬೀದರ‌ನ ನಾನಕ್ ಝೀರಾ ಸಾಹಿಬ್ ಯಾತ್ರಾಕ್ಷೇತ್ರಗಳು ನೇರ ಸಂಪರ್ಕ ಪಡೆಯಲಿವೆ. ಇದರಿಂದ ಯಾತ್ರಿಗಳಿಗೆ ಅನುಕೂಲವಾಗುವುದರ ಜೊತೆಗೆ ಪ್ರವಾಸೋದ್ಯಮ, ವ್ಯಾಪಾರ ಹಾಗೂ ಉದ್ಯೋಗಾವಕಾಶಗಳ ವೃದ್ಧಿಗೂ ಸಹಕಾರಿ ಆಗಲಿದೆ ಎಂದು ಅಶೋಕ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Published On - 1:39 pm, Sat, 14 February 26

Loading...
Unable to load recommendations.
Follow Us