
ಬೆಂಗಳೂರು, ಆಗಸ್ಟ್ 28: ಇಸ್ರೇಲ್-ಇರಾನ್ ನಡುವಿನ ಯುದ್ಧದ ಪರಿಣಾಮ ದೇಶದಲ್ಲಿ ಎದುರಾಗಿದ್ದ ಎಲ್ಪಿಜಿ ಗ್ಯಾಸ್ (LPG cylinder) ಅಭಾವ ಸಾರ್ವಜನಿಕರನ್ನು ಇನ್ನಿಲ್ಲದಂತೆ ಕಾಡಿತ್ತು. ಸದ್ಯ ಹಳೆಯ ಗ್ರಾಹಕರಿಗೆ ಸಿಲಿಂಡರ್ ಪೂರೈಕೆ ಕೊಂಚ ನಿರಾಳತೆ ತಂದಿದ್ದರೂ, ಹೊಸದಾಗಿ ಗೃಹಬಳಕೆಯ ಎಲ್ಪಿಜಿ ಸಂಪರ್ಕ ಪಡೆಯಲು ಅರ್ಜಿ ಸಲ್ಲಿಸಿರುವ ಗ್ರಾಹಕರ ಪಾಡು ಮಾತ್ರ ಹೇಳತೀರದಾಗಿದೆ. ಕಳೆದ ಆರು ತಿಂಗಳಿಂದ ಹೊಸ ಸಂಪರ್ಕಗಳ ಹಂಚಿಕೆ ಸಂಪೂರ್ಣ ಸ್ಥಗಿತಗೊಂಡಿದ್ದು, ದಿನಬಳಕೆಯ ಅತ್ಯಗತ್ಯ ವಸ್ತುವಿಗಾಗಿ ಜನಸಾಮಾನ್ಯರು ಕಚೇರಿಗಳಿಗೆ ಅಲೆಯುವ ದುಸ್ಥಿತಿ ನಿರ್ಮಾಣವಾಗಿದೆ.
ಹಲವು ತಿಂಗಳ ಹಿಂದೆ ರಾಜ್ಯದಲ್ಲಿ ಎದುರಾಗಿದ್ದ ಎಲ್ಪಿಜಿ ಗ್ಯಾಸ್ ಅಭಾವದಿಂದ ನರಳಾಡದ ಜನರಿಲ್ಲ. ಕೊನೆಗೂ ಹೇಗೋ ನಿಧಾನಗತಿಯಲ್ಲಿ ಬೇಡಿಕೆಗೆ ತಕ್ಕಂತೆ ಎಲ್ಪಿಜಿ ಸಿಲಿಂಡರ್ ಪೂರೈಕೆ ಮಾಡಲಾಗುತ್ತಿದೆ. ಆದರೆ ಮತ್ತೊಂದೆಡೆ ಹೊಸ ಗೃಹ ಬಳಕೆ ಎಲ್ಪಿಜಿ ಸಿಲಿಂಡರ್ಗಳಿಗೆ ಅರ್ಜಿ ಸಲ್ಲಿಸುವ ಗ್ರಾಹಕರು ಕಳೆದ 6 ತಿಂಗಳಿಂದ ತೀವ್ರ ನಿರಾಶೆಯಿಂದಲೇ ಕಾಲ ದೂಡುತ್ತಿದ್ದಾರೆ.
ಹೊಸ ಗೃಹಬಳಕೆಯ ಸಿಲಿಂಡರ್ಗಳಿಗೆ ದಿನೇ ದಿನೆ ಬೇಡಿಕೆ ಹೆಚ್ಚುತ್ತಿದ್ದರೂ, ಕೇಂದ್ರ ಸರ್ಕಾರದಿಂದ ಹೊಸ ಸಂಪರ್ಕಗಳ ಹಂಚಿಕೆಗೆ ಅಗತ್ಯ ಅನುಮೋದನೆ ದೊರೆತಿಲ್ಲ. ಕಳೆದ ಮಾರ್ಚ್ ತಿಂಗಳಿಂದ ಸ್ಥಗಿತಗೊಂಡಿರುವ ಅನುಮೋದನೆ ಪ್ರಕ್ರಿಯೆ ಈವರೆಗೂ ಪುನರಾರಂಭವಾಗಿಲ್ಲ.
ಇದನ್ನೂ ಓದಿ: ಗ್ಯಾಸ್ ಸಿಲಿಂಡರ್ ಬಳಸುವವರಿಗೆ ಹೊಸ ರೂಲ್ಸ್: ಗ್ರಾಹಕರು ಮಾಡಬೇಕಾಗಿದ್ದಿಷ್ಟೇ!
ಇದರ ಪರಿಣಾಮವಾಗಿ ನಗರದ ಬಹುತೇಕ ಪ್ರತಿ ಗ್ಯಾಸ್ ಏಜೆನ್ಸಿಗಳಲ್ಲಿ 200ರಿಂದ 300ಕ್ಕೂ ಅಧಿಕ ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿಯುತ್ತಿವೆ. ನಿತ್ಯ ಗ್ಯಾಸ್ ಏಜೆನ್ಸಿಗಳಿಗೆ ಜನರು ಎಡತಾಕುತ್ತಿದ್ದಾರೆ.
ಕಳೆದ ಆರು ತಿಂಗಳ ಅವಧಿಯಲ್ಲಿ ಮದುವೆಯಾಗಿ ಪ್ರತ್ಯೇಕ ಮನೆ ಮಾಡಿಕೊಂಡವರು ಹಾಗೂ ಉದ್ಯೋಗ ಅರಸಿ ನಗರಕ್ಕೆ ಬಂದು ಹೊಸ ಸಂಸಾರ ಹೂಡಿದ ಕುಟುಂಬಗಳು ಇದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿವೆ. ಗ್ಯಾಸ್ ಸಂಪರ್ಕವಿಲ್ಲದೆ ಅಡುಗೆ ಮಾಡಲು ಹೆಣಗಾಡುತ್ತಿರುವ ಗ್ರಾಹಕರು ದಿಕ್ಕು ತೋಚದಂತಾಗಿದ್ದಾರೆ. ಸಂಕಷ್ಟದಲ್ಲಿರುವ ಈ ಕುಟುಂಬಗಳ ಪರಿಸ್ಥಿತಿಯನ್ನು ಅರಿತು, ಕೇಂದ್ರ ಸರ್ಕಾರವು ಕೂಡಲೇ ಈ ನಿಲುವನ್ನು ಸಡಿಲಿಸಿ ಹೊಸ ಸಂಪರ್ಕಗಳ ವಿತರಣೆಗೆ ಹಸಿರು ನಿಶಾನೆ ತೋರಬೇಕೆಂಬ ಕೂಗು ಸಾರ್ವಜನಿಕ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:52 pm, Fri, 28 August 26