ಪರಪ್ಪನ ಅಗ್ರಹಾರ ರಾಜಾತಿಥ್ಯ ಪ್ರಕರಣ: ತನಿಖೆ ವೇಳೆ ಬಯಲಾಯ್ತು ಜೈಲೊಳಗಿನ ಮತ್ತಷ್ಟು ರಹಸ್ಯ, ಶೀಘ್ರದಲ್ಲೇ ಚಾರ್ಜ್​​ಶೀಟ್ ಸಲ್ಲಿಕೆ

| Updated By: ಗಣಪತಿ ಶರ್ಮ

Updated on: Oct 04, 2024 | 6:59 AM

ಪರಪ್ಪನ ಅಗ್ರಹಾರ ಜೈಲಿನಲ್ಲಿ ನಟ ದರ್ಶನ್ ಇದ್ದ ವೇಳೆ ಸಿಕ್ಕ ರಾಜಾತಿಥ್ಯದ ತನಿಖೆ ಕೊನೆಗೂ ಮುಕ್ತಾಯದ ಹಂತ ತಲುಪಿದೆ. ವಿಶೇಷ ಸವಲತ್ತುಗಳ ಜಾಡಿ ಹಿಡಿದ ಪೊಲೀಸರಿಗೆ ರಾಜಾತಿಥ್ಯದ ಪಿನ್ ಟು ಪಿನ್ ಸಾಕ್ಷಿಗಳು ದೊರೆತಿದ್ದು, ಇದರ ಹೊರತಾಗಿ ಜೈಲಿನಲ್ಲಿ ಸಿಗುವ ಮದ್ಯದ ಬಾಟಲ್​​ಗಳ ಮತ್ತೊಂದು ಕಹಾನಿ ಬೆಳಕಿಗೆ ಬಂದಿದೆ.

ಪರಪ್ಪನ ಅಗ್ರಹಾರ ರಾಜಾತಿಥ್ಯ ಪ್ರಕರಣ: ತನಿಖೆ ವೇಳೆ ಬಯಲಾಯ್ತು ಜೈಲೊಳಗಿನ ಮತ್ತಷ್ಟು ರಹಸ್ಯ, ಶೀಘ್ರದಲ್ಲೇ ಚಾರ್ಜ್​​ಶೀಟ್ ಸಲ್ಲಿಕೆ
ರಾಜಾತಿಥ್ಯ ತನಿಖೆ ತನಿಖೆ ವೇಳೆ ಬಯಲಾಯ್ತು ಮತ್ತಷ್ಟು ಸ್ಫೋಟಕ ರಹಸ್ಯ!
Follow us on

ಬೆಂಗಳೂರು, ಅಕ್ಟೋಬರ್ 4: ಪರಪ್ಪನ ಅಗ್ರಹಾರ ಜೈಲಿನೊಳಗೆ ನಟ ದರ್ಶನ್​ಗೆ ಸಿಕ್ಕ ರಾಜಾತಿಥ್ಯದ ಸಂಬಂಧ ದಾಖಲಾಗಿದ್ದ ಎರಡು ಎಫ್​ಐಆರ್​​ಗಳ ತನಿಖೆ ಬಹುತೇಕ ಪೂರ್ಣಗೊಂಡಿದೆ. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ನಡೆಸಿದ ತನಿಖೆ ವೇಳೆ ರಾಜಾತಿಥ್ಯದ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ. ಜೊತೆಗೆ ಇದಕ್ಕೆ ಕಾರಾಗೃಹದ ಸಿಬ್ಬಂದಿಗಳು ಸಹಕರಿಸಿರೊ ಸಂಗತಿ ಸಹ ಬಯಲಾಗಿದೆ. ಸದ್ಯ ಈ ಎಲ್ಲಾ ಮಾಹಿತಿಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಿರುವ ಪೊಲೀಸರು ಕೊರ್ಟ್​ಗೆ ಸಲ್ಲಿಸುವ ತಯಾರಿಯಲ್ಲಿದ್ದಾರೆ.

ಜೈಲಿನ ಒಳಗಡೆ ದರ್ಶನ್ ರೌಂಡ್ ಟೇಬಲ್​​ನಲ್ಲಿ ಟೀ ಪಾರ್ಟಿ ಮಾಡಿದ್ದು, ಜೈಲಿನೊಳಗೆ ಹೊರಗಿನ ವ್ಯಕ್ತಿ ಜೊತೆ ವಿಡಿಯೋ ಕಾಲ್ ಸಂಭಾಷಣೆ ನಡೆಸಿದ್ದು. ಈ ಎರಡು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ವಿಸ್ತೃತ ಆರೋಪ ಪಟ್ಟಿ ತಯಾರಿಸಿದ್ದಾರೆ. ಸದ್ಯ ಈ ಆರೋಪ ಪಟ್ಟಿ ಅಂತಿಮ ಹಂತದ ತಯಾರಿಯಲ್ಲಿದ್ದು, ಪೊಲೀಸರು ಅಂತಿಮ ಪರಾಮರ್ಶೆಗೆಂದು ಕಾನೂನು ತಜ್ಞರ ಮೊರೆ ಹೊಗಿದ್ದಾರೆ. ಈ ಮೂಲಕ ಕಾನೂನು ತಜ್ಞರ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ಜೈಲಿನಲ್ಲಿರುವ ರೌಡಿಗಳಿಗೆ ದುಬಾರಿ ಮದ್ಯ?

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್​ಗೆ ಸಿಕ್ಕಿದ್ದ ರಾಜಾತಿಥ್ಯ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಈಗ ಹೊಸದಂದು ಸಂಗತಿ ಕೇಳಿ ಬಂದಿದೆ. ಜೈಲಿನಲ್ಲಿರುವ ಕೆಲ ರೌಡಿಗಳಿಗೆ ದುಬಾರಿ ಮದ್ಯ ಸರಬರಾಜು ಆಗುತ್ತಿದೆಯಂತೆ. ಅದು ಮೂರು ಹಂತಗಳಲ್ಲಿ ಹೊರಗಿನಿಂದ ಜೈಲಿನೊಳಗೆ ಮದ್ಯ ತಲುಪುತಿದ್ದೆಯಂತೆ. ಮದ್ಯದ ಬಾಟಲ್ ಅಸಲಿ ಬೆಲೆ 2,000 ರೂಪಾಯಿ ಇದ್ದರೆ ಅದನ್ನು ಒಳಗೆ ಕೊಡಲು 25 ಸಾವಿರ ರೂಪಾಯಿ ನೀಡಲಾಗುತ್ತಿದೆಯಂತೆ. ಬಾಟಲ್​​ನ ಓರ್ವ ಹೊರಗಡೆಯಿಂದ ತಂದರೆ, ಅದನ್ನು ಜೈಲಿನ ಒಳಗೆ ತೆಗೆದುಕೊಂಡು ಹೊಗುವವನು ಮತ್ತೊಬ್ಬನಂತೆ. ಬಳಿಕ ಅದನ್ನು ರೌಡಿಗೆ ತಲುಪಿಸೊನು ಮತ್ತೋಬ್ಬನಂತೆ. ಇನ್ನು ಈ ಸರಬರಾಜು ಪ್ರಕ್ರಿಯೆಯಲ್ಲಿ ಜೈಲಿನ ಕೆಲ ಸಿಬ್ಬಂದಿಗಳು ಹಾಗೂ ಕೆಲ ಸಜಾ ಬಂಧಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹೀಗೆ ಒಳಗೆ ಸಪ್ಲೈ ಮಾಡಿ ಎಣ್ಣೆಗೆ ಹಣ ಹೊರಗಡೆಯೇ ಪಡೆಯಲಾಗುತ್ತದೆಯಂತೆ! ಸದ್ಯ ಯಾರ್ಯಾರು ಎಣ್ಣೆ ತಂದು ಕೊಡುತಿದ್ದರು ಎಂಬ ಬಗ್ಗೆ ತನಿಖೆ ಆರಂಭಿಸಿರುವ ಆಗ್ನೇಯ ವಿಭಾಗದ ಪೊಲೀಸರು ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಇದನ್ನೂ ಓದಿ: ಪರಪ್ಪನ ಅಗ್ರಹಾರ ಜೈಲಿನಲ್ಲಿ ದುಡ್ಡಿದ್ದವರದ್ದೇ ದುನಿಯಾ: ಬಿಸಿ ನೀರು, ಎಣ್ಣೆ, ಸಿಗರೇಟು, ಊಟಕ್ಕೆ ಒಂದೊಂದು ರೇಟ್

ಇದೆಲ್ಲದರ ನಡುವೆ ನಗರ ಪೊಲೀಸ್ ಆಯುಕ್ತರು ಜೈಲಿನ ರಾಜಾತಿಥ್ಯದ ಬಗ್ಗೆ ವರದಿ ನೀಡುವಂತೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾರಿಮಾಗೆ ಸೂಚಿಸಿದ್ದರು. ಅದರಂತೆ ತನಿಖೆ ವೇಳೆ ಕಂಡು ಬಂದ ಅಂಶಗಳ ಸಹಿತ ರಾಜಾತಿಥ್ಯದ ವರದಿ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾರೆ. ಸದ್ಯ ರಾಜಾತಿಥ್ಯದ ತನಿಖೆ ಕೈಗೊಂಡಿದ್ದ ಪೊಲೀಸರು ಬಹುತೇಕ ತನಿಖೆ ಮುಕ್ತಾಯ ಗೊಳಿಸಿದ್ದು, ಶೀಘ್ರದಲ್ಲೇ ಕೊರ್ಟ್​​ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಆ ಬಳಿಕ ಜೈಲಿನ ಅಕ್ರಮ ಚಟುವಟಿಕೆಗಳ ಮತ್ತಷ್ಟು ಸಂಗತಿ ಬಯಲಾಗಲಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ