ಪ್ರಯಾಣಿಕರಿಗೆ ಬೆಳಗ್ಗೆಯೇ ಕೈಕೊಟ್ಟ ನಮ್ಮ ಮೆಟ್ರೋ: ಕಿಕ್ಕಿರಿದ ಜನಸಂದಣಿಯ ವಿಡಿಯೋ ವೈರಲ್

ಎಂದಿನಂತೆ ಕಚೇರಿ, ಕೆಲಸ ಕಾರ್ಯಗಳಿಗೆ ಹೋಗಲೆಂದು ಬೆಂಗಳೂರು ಮೆಟ್ರೋ ರೈಲು ನಿಲ್ದಾಣಗಳಿಗೆ ಬಂದ ಪ್ರಯಾಣಿಕರಿಗೆ ಸೋಮವಾರ ಬೆಳಗ್ಗೆ ಸಮಸ್ಯೆ ಎದುರಾಯಿತು. ಪೀಕ್ ಅವರ್​​​ನಲ್ಲಿ ಫ್ರೀಕ್ವೆನ್ಸಿ ಕಡಿಮೆಯಾದ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸುವಂತಾಯಿತು. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಯಾಣಿಕರು ಬಿಎಂಆರ್​ಸಿಎಲ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರಯಾಣಿಕರಿಗೆ ಬೆಳಗ್ಗೆಯೇ ಕೈಕೊಟ್ಟ ನಮ್ಮ ಮೆಟ್ರೋ: ಕಿಕ್ಕಿರಿದ ಜನಸಂದಣಿಯ ವಿಡಿಯೋ ವೈರಲ್
ಮೆಟ್ರೋ ನಿಲ್ದಾಣದಲ್ಲಿ ಕಿಕ್ಕಿರಿದು ತುಂಬಿರುವ ಜನ
Image Credit source: Twitter

Updated on: Apr 14, 2025 | 1:09 PM

ಬೆಂಗಳೂರು, ಏಪ್ರಿಲ್ 14: ರಜೆಗಳನ್ನು ಮುಗಿಸಿಕೊಂಡು ಬೆಂಗಳೂರಿಗೆ ಬಂದು ಕಚೇರಿ, ಕೆಲಸಗಳಿಗೆ ಹೋಗಲೆಂದು ಮೆಟ್ರೋ ನಿಲ್ದಾಣಗಳಿಗೆ (Namma Metro ಬಂದ ಪ್ರಯಾಣಿಕರಿಗೆ ಸೋಮವಾರ ಬೆಳಗ್ಗೆ ಆಘಾತ ಕಾದಿತ್ತು. ಬೆಳಗ್ಗೆ ಪೀಕ್ ಅವರ್‌ನಲ್ಲಿ ನಮ್ಮ ಮೆಟ್ರೋ ರೈಲುಗಳು 10 ನಿಮಿಷದ ಅಂತರದಲ್ಲಿ ಸಂಚರಿಸಿದ ಪರಿಣಾಮ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿತ್ತು. ಮೆಟ್ರೋ ರೈಲಿನಲ್ಲಿ (Metro Train) ಸಂಚರಿಸಲು ಪ್ರಯಾಣಿಕರು ಒದ್ದಾಡಬೇಕಾಗಿ ಬಂತು. ಮೆಟ್ರೋ ನಿಲ್ದಾಣಗಳಲ್ಲಿ ಹಾಗೂ ರೈಲುಗಳಲ್ಲಿ ಪ್ರಯಾಣಿಕರು ಕಿಕ್ಕಿರಿದು ತುಂಬಿದ್ದರು. ನಮ್ಮ ಮೆಟ್ರೋ ಈ ಅವ್ಯವಸ್ಥೆಯ ಬಗ್ಗೆ ಪ್ರಯಾಣಿಕರು ಸಾಮಾಜಿಕ ಮಾಧ್ಯಮಗಳ (Socail Media) ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೆಟ್ರೋ ರೈಲು ಫ್ರೀಕ್ವೆನ್ಸಿ ಕಡಿಮೆಯಾದ ಪರಿಣಾಮ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರಿಗೆ, ಕಚೇರಿಗಳಿಗೆ ತೆರಳುವವರಿಗೆ ಸಮಸ್ಯೆ ಉಂಟಾಯಿತು. ಮೆಜೆಸ್ಟಿಕ್, ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಗಳಲ್ಲಿನ ಕೆಲವು ವಿಡಿಯೋಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ಇದನ್ನೂ ಓದಿ
ಯಾದಗಿರಿ: ತಾಪಮಾನ ಏರಿಕೆ ಪರಿಣಾಮ ನವಜಾತ ಶಿಶುಗಳಲ್ಲಿ ಕಿಡ್ನಿ ಬಾವು ಹೆಚ್ಚಳ
ಇಂದು ಮಧ್ಯರಾತ್ರಿಯಿಂದಲೇ ಲಾರಿ ಮುಷ್ಕರ, ಅಗತ್ಯ ವಸ್ತುಗಳಿಗೆ ತಟ್ಟಲಿದೆ ಬಿಸಿ
ಮೆಟ್ರೋ ನಿಲ್ದಾಣದಲ್ಲಿ ಜೋಡಿ ರೋಮ್ಯಾನ್ಸ್ ವಿಡಿಯೋ ವೈರಲ್
ವಾಹನ ಪಾರ್ಕ್ ಮಾಡಿ ಮೆಟ್ರೋದಲ್ಲಿ ಸಂಚರಿಸುವವರಿಗೆ ಸಿಗಲಿದೆ ಡಿಸ್ಕೌಂಟ್

ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಇಂದು ಭಾರೀ ಜನಸಂದಣಿ ಮತ್ತು ಗೊಂದಲ ಉಂಟಾಗಿತ್ತು. ಏಕೆಂದರೆ ಮೆಟ್ರೋ ರೈಲುಗಳು ನಿಗದಿತ ಸಮಯಕ್ಕಿಂತ ನಿಧಾನವಾಗಿ ಓಡುತ್ತಿದ್ದವು. ಪ್ಲಾಟ್‌ಫಾರ್ಮ್‌ಗಳು ತುಂಬಿ ತುಳುಕುತ್ತಿದ್ದವು ಮತ್ತು ಅಧಿಕಾರಿಗಳಿಂದ ಸ್ಪಷ್ಟ ಸಂವಹನವಿಲ್ಲದ ಕಾರಣ, ಪ್ರಯಾಣಿಕರು ಪೀಕ್ ಅವರ್‌ನಲ್ಲಿ ನಿರಾಶೆಯಿಂದ ಕಾಯಬೇಕಾಯಿತು ಎಂದು ‘ಕರ್ನಾಟಕ ಪೋರ್ಟ್​​ಫೊಲಿಯೋ’ ಎಕ್ಸ್​ ಹ್ಯಾಂಡಲ್​​ನಲ್ಲಿ ವಿಡಿಯೋ ಸಹಿತ ಸಂದೇಶ ಪ್ರಕಟಿಸಲಾಗಿದೆ.

ಮೆಟ್ರೋ ನಿಲ್ದಾಣದಲ್ಲಿ ಜನ ದಟ್ಟಣೆ: ವಿಡಿಯೋ ನೋಡಿ


ಬೆಂಗಳೂರು ಮೆಟ್ರೋ ರೈಲು ನಿಗಮದ ಅವ್ಯವಸ್ಥೆ ಖಂಡಿಸಿ ಬೆಂಗಳೂರು ಸೆಂಟ್ರಲ್ ಸಂಸದ ಪಿಸಿ ಮೋಹನ್ ಸಾಮಾಜಿಕ ಮಾಧ್ಯಮ ಎಕ್ಸ್ ನಲ್ಲಿ ಸಂದೇಶ ಪ್ರಕಟಿಸಿ, ಅಸಮಾಧಾನ ಹೊರಹಾಕಿದ್ದಾರೆ. ಇಂದು ಬೆಳಿಗ್ಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಕಂಡುಬಂದ ದೃಶ್ಯವಿದು. ಇದನ್ನು ಒಪ್ಪಲು ಸಾಧ್ಯವಿಲ್ಲ. ಎಲ್ಲರಿಗೂ ರಜೆ ಇದೆ ಎಂದು ಭಾವಿಸಿ, ದಟ್ಟಣೆ ಇರುವ ಸಮಯದಲ್ಲಿ ರೈಲುಗಳ ಆವರ್ತನವನ್ನು 10 ನಿಮಿಷಗಳಿಗೆ ಇಳಿಸುವುದು ಸಂಪೂರ್ಣ ಅವ್ಯವಸ್ಥೆಗೆ ಕಾರಣವಾಗಿದೆ. ಇಂತಹ ಸಂದರ್ಭಗಳಲ್ಲಿ ಬಿಎಂಆರ್‌ಸಿಎಲ್ ಉತ್ತಮವಾಗಿ ಯೋಜನೆಗಳನ್ನು ರೂಪಿಸಬೇಕು ಮತ್ತು ಫ್ರೀಕ್ವೆನ್ಸಿಯನ್ನು ತಕ್ಷಣವೇ ಪುನಃಸ್ಥಾಪಿಸಬೇಕು ಎಂದು ಪಿಸಿ ಮೋಹನ್ ಆಗ್ರಹಿಸಿದ್ದಾರೆ.


ಮೆಜೆಸ್ಟಿಕ್‌ನಲ್ಲಿ 30 ನಿಮಿಷಗಳಿಂದಲೂ ಹೆಚ್ಚು ಕಾಯಬೇಕಾಯಿತು. ಈ ಶೋಚನೀಯ ಸೇವೆಗಾಗಿ ಇತ್ತೀಚೆಗೆ ಟಿಕೆಟ್ ದರದಲ್ಲಿ ಭಾರಿ ಏರಿಕೆ ಮಾಡಿದ್ದಾರೆ ಎಂದು ಎಂದು ಒಬ್ಬ ಪ್ರಯಾಣಿಕರು ಟ್ವೀಟ್ ಮಾಡಿದ್ದಾರೆ. ನಾನು 10 ನಿಮಿಷಗಳ ನಂತರವೂ ಅಲ್ಲಿದ್ದೆ, ಆದರೆ ಬಂದ ರೈಲು ಅಗಾಗಲೇ ತುಂಬಿತ್ತು. ಒಳಗೆ ಹೋಗಲು ಜಾಗವಿರಲಿಲ್ಲ ಎಂದು ಮತ್ತೊಬ್ಬರು ಪ್ರಯಾಣಿಕರು ದೂರಿದ್ದಾರೆ.

ಇದನ್ನೂ ಓದಿ: ತೆರಿಗೆ ಪಾವತಿಸಿದ್ದು ರಸ್ತೆಗಳಿಗಾಗಿ: ಬೆಂಗಳೂರು ರಸ್ತೆ ಅವ್ಯವಸ್ಥೆ ಬಗ್ಗೆ ಐಟಿ ವೃತ್ತಿಪರರಿಂದ ಹಾಡು ಹಾಡಿ ವಿಭಿನ್ನ ಪ್ರತಿಭಟನೆ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:08 pm, Mon, 14 April 25