ಜೆಪಿ ನಗರ ವೆಗಾಸಿಟಿ ಮಾಲ್ನಿಂದ ಕಡಬಗೆರೆ ವರೆಗೆ ಮೆಟ್ರೋ ವಿಸ್ತರಣೆಗೆ ಮೋದಿ ಶಂಕುಸ್ಥಾಪನೆ: ತೇಜಸ್ವಿ ಸೂರ್ಯ
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 10 ರಂದು ಬೆಂಗಳೂರಿಗೆ ಭೇಟಿ ನೀಡಿ ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಇದರ ಜೊತೆಗೆ, 17 ಸಾವಿರ ಕೋಟಿ ರೂ. ವೆಚ್ಚದ ಮೆಟ್ರೋ ಫೇಸ್-3 ಯೋಜನೆಗೆ ಅಡಿಪಾಯ ಹಾಕಲಿದ್ದಾರೆ. ಜೆಪಿ ನಗರದಿಂದ ಕಡಬಗೆರೆಗೆ ಮೆಟ್ರೋ ವಿಸ್ತರಣೆಗೆ ಶಂಕುಸ್ಥಾಪನೆ ಕೂಡ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದ್ದಾರೆ.

ಬೆಂಗಳೂರು, ಆಗಸ್ಟ್ 07: ಆಗಸ್ಟ್ 10ರಂದು ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಬಹು ನಿರೀಕ್ಷಿತ ಮೆಟ್ರೋ (metro) ಹಳದಿ ಮಾರ್ಗ ಉದ್ಘಾಟನೆಗೊಳಿಸಲಿದ್ದಾರೆ. ಮೆಟ್ರೋ ಫೇಸ್ 3ಗೆ ಅಡಿಪಾಯ ಹಾಕಲಿರು ಮೋದಿ ಸಿಲಿಕಾನ್ ಸಿಟಿ ಜನರಿಗೆ ಮತ್ತೊಂದು ಗುಡ್ ನ್ಯೂಸ್ ನೀಡಲಿದ್ದಾರೆ. ಜೆಪಿ ನಗರ ವೆಗಾಸಿಟಿ ಮಾಲ್ನಿಂದ ಕಡಬಗೆರೆ ವರೆಗೆ ಮೆಟ್ರೋ ವಿಸ್ತರಣೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಸಂಸದ ತೇಜಸ್ವಿ ಸೂರ್ಯ ಹೇಳಿದ್ದಾರೆ. ಆ ಮೂಲಕ ನಮ್ಮ ಮೆಟ್ರೋ ಮಾರ್ಗ ಮತ್ತಷ್ಟು ವಿಸ್ತರಣೆಗೊಳ್ಳಲಿದೆ.
ಆಗಸ್ಟ್ 10 ರಂದು ಮೆಟ್ರೋ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಮನ ವಿಚಾರವಾಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, ಮೆಟ್ರೋ ಹಳದಿ ಮಾರ್ಗಕ್ಕೆ ಪ್ರಧಾನಿ ಮೋದಿ ಅವರೇ ಶಂಕುಸ್ಥಾಪನೆ ನೆರವೇರಿಸಿದ್ದರು, ಈಗ ಅವರೇ ಬಂದು ಉದ್ಘಾಟನೆ ಮಾಡತ್ತಿದ್ದಾರೆ. ಇದರ ಜೊತೆಗೆ 17 ಸಾವಿರ ಕೋಟಿ ರೂ ಮೆಟ್ರೋ ಫೇಸ್-3 ಮಾರ್ಗ ಜೆಪಿ ನಗರ ವೆಗಾಸಿಟಿ ಮಾಲ್ನಿಂದ ಕಡಬಗೆರೆ ವರೆಗಿನ ಮೆಟ್ರೋ ಮಾರ್ಗಕ್ಕೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ ಎಂದು ಹೇಳಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ತೇಜಸ್ವಿ ಸೂರ್ಯ ವಾಗ್ದಾಳಿ
ಮೆಟ್ರೋ ಹಳದಿ ಮಾರ್ಗದಲ್ಲಿ ರಾಜ್ಯ ಸರ್ಕಾರದ ಪಾಲೂ ಇದೆ ಎಂಬ ಡಿಸಿಎಂ ಡಿಕೆ ಶಿವಕುಮಾರ್ ಹೇಳಿಕೆ ವಿಚಾರವಾಗಿ ಮಾತನಾಡಿ ಅವರು, ಪ್ರಧಾನಿಯವರನ್ನು ಯಾರು ಕರೆಸಿದರು ಎಂಬ ಬಗ್ಗೆ ಉತ್ತರ ಕೊಡಬೇಕಾಗಿಲ್ಲ. ಈವರೆಗೆ ಹಳದಿ ಮಾರ್ಗದ ಬಗ್ಗೆ ಡಿಸಿಎಂ ತಲೆಕೆಡಿಸಿಕೊಂಡಿರಲಿಲ್ಲ. ಪ್ರಧಾನಿ ಬರುವುದು ಖಚಿತ ಆದ ಕೂಡಲೇ ಟೂರ್ ಹೊಡೆಯುವ ಕೆಲಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ತೇಜಸ್ವಿ ಸೂರ್ಯ ಟ್ವೀಟ್
LIVE: Addressing a Press Conference on Namma Metro Yellow Line Inauguration https://t.co/heg6ZJEOVW
— Tejasvi Surya (@Tejasvi_Surya) August 7, 2025
ಕೋವಿಡ್ ಸಮಯದಲ್ಲೂ ಮೆಟ್ರೋ ಸಿವಿಲ್ ಕೆಲಸ ಮುಂದುವರೆದಿತ್ತು. ಬಿಎಂಆರ್ಸಿಎಲ್ಗೆ ಒಬ್ಬ ಫುಲ್ ಟೈಮ್ ಎಂಡಿ ಅನ್ನು ನೇಮಕ ಮಾಡಲು ಕಾಂಗ್ರೆಸ್ ಸರ್ಕಾರಕ್ಕೆ ಆಗಿರಲಿಲ್ಲ. ನಾನು ತಿಟಾಘರ್ ಮೆಟ್ರೋ ಬೋಗಿ ತಯಾರಿಕಾ ಘಟಕಕ್ಕೆ ಮೂರು ಬಾರಿ ಭೇಟಿ ಕೊಟ್ಟಿದ್ದೇನೆ. ಆದರೆ ಮೆಟ್ರೋ ಎಂಡಿಗಳು ಭೇಟಿ ಕೊಟ್ಟಿರಲಿಲ್ಲ ಎಂದರು.
ಆರ್ಸಿಬಿ ಐಪಿಎಲ್ ಗೆದ್ದಾಗ ಕ್ರೆಡಿಟ್ ತೆಗೆದುಕೊಳ್ಳಲು ಬಂದವರು ಮೆಟ್ರೋದಲ್ಲಿ ಕ್ರೆಡಿಟ್ ತೆಗೆದುಕೊಳ್ಳಲು ಬರದೇ ಇರುತ್ತಾರೆ. ಆದಷ್ಟು ಬೇಗ ಉದ್ಘಾಟನೆ ಆಗಬೇಕು ಅಂತಾ ನಮಗೆ ಆತುರ ಇದೆ. ಜೀರೋ ಟ್ರಾಫಿಕ್ ನಲ್ಲಿ ಓಡಾಡುವವರಿಗೆ ಆತುರ ಇರಲು ಸಾಧ್ಯವಿಲ್ಲ. ಕೇಳಿದರೆ ಚಿಕ್ಕ ಹುಡುಗ, ಆತುರ ಅಂತಾ ಹೇಳುತ್ತಾರೆ. ರೋಡ್ ಬೇಗ ಓಪನ್ ಮಾಡಿ ಎಂದು ಕೇಳುವುದೇ ರಾಜ್ಯ ಸರ್ಕಾರಕ್ಕೆ ತಪ್ಪಾಗಿಬಿಟ್ಟಿದೆ.
ಇದನ್ನೂ ಓದಿ: ಮೆಟ್ರೋ ಹಳದಿ ಮಾರ್ಗ ಉದ್ಘಾಟನೆಗೆ ಮುಹೂರ್ತ ಫಿಕ್ಸ್: ಬೆಂಗಳೂರಿಗೆ ಆಗಮಿಸಲಿರುವ ಪ್ರಧಾನಿ ಮೋದಿ
ಈಜಿಪುರ 2.5 ಕಿ.ಮೀ. ಫ್ಲೈ ಓವರ್ ಎಂಟು ವರ್ಷ ಆದರೂ ಮುಗಿದಿಲ್ಲ. ಈಗ ಉಪಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ನೂರು ಕಿ.ಮೀ. ರೋಡ್ ಮಾಡಲು ಹೊರಟಿದ್ದಾರೆ. ಇಂದಿರಾಗಾಂಧಿ ಶಂಕುಸ್ಥಾಪನೆ ಮಾಡಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಉದ್ಘಾಟನೆ ಕಾಲ ಹೊರಟು ಹೋಯಿತು. ಈಗ ಮೋದಿಯವರೇ ಶಂಕುಸ್ಥಾಪನೆ ಮಾಡುತ್ತಾರೆ, ಮೋದಿಯವರೇ ಉದ್ಘಾಟನೆ ಮಾಡುತ್ತಾರೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:28 pm, Thu, 7 August 25








