ಬೆಂಗಳೂರಿಗೆ ಇಂದು ಪ್ರಧಾನಿ ಮೋದಿ ಭೇಟಿ: ಈ ಮಾರ್ಗದಲ್ಲಿ ಮೆಟ್ರೋ, ವಾಹನಗಳ ಸಂಚಾರ ನಿರ್ಬಂಧ!
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಂಗಳೂರಿಗೆ ಭೇಟಿ ನೀಡುತ್ತಿದ್ದು, ಮೆಟ್ರೋ ಹಳದಿ ಮಾರ್ಗವನ್ನು ಉದ್ಘಾಟಿಸಲಿದ್ದಾರೆ. ಆ ಮೂಲಕ ಸಿಲಿಕಾನ್ ಸಿಟಿ ಜನರ ಬಹುದಿನಗಳ ಕನಸು ನನಸಾಗುತ್ತಿದೆ. ಹೀಗಾಗಿ ನಗರದ ಹಲವೆಡೆ ವಾಹನಗಳು ಸೇರಿದಂತೆ ಮೆಟ್ರೋ ಸಂಚಾರದಲ್ಲಿ ಕೂಡ ಕೆಲ ಬದಲಾವಣೆಗಳನ್ನು ಮಾಡಲಾಗಿದೆ. ಸಂಪೂರ್ಣ ಮಾಹಿತಿ ಇಲ್ಲಿದೆ.

ಬೆಂಗಳೂರು, ಆಗಸ್ಟ್ 10: ಬೆಂಗಳೂರಿಗರ ಬಹುದಿನಗಳ ಕನಸು ಇಂದು ನನಸಾಗುತ್ತಿದೆ. ಮೆಟ್ರೋ ಹಳದಿ (Yellow Line Metro) ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಹಸಿರು ನಿಶಾನೆ ತೋರಿಸಲಿದ್ದಾರೆ. ಪ್ರಧಾನಿ ಮೋದಿ ಭೇಟಿ ಹಿನ್ನಲೆ ನಗರದ ಹಲವೆಡೆ ಸಂಚಾರ ಬದಲಾವಣೆ ಮಾಡಲಾಗಿದ್ದು, ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ. ಸದ್ಯ ಬೆಳಿಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 2:30ರವರೆಗೆ ನೈಸ್ ರಸ್ತೆ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ.
ಸಂಚಾರ ನಿರ್ಬಂಧ
- ಬನ್ನೇರುಘಟ್ಟ ರಸ್ತೆ ನೈಸ್ ಟೋಲ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ವರೆಗೆ
- ಕನಕಪುರ ರಸ್ತೆ ನೈಸ್ ಟೋಲ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
- ನಾಯಂಡಹಳ್ಳಿ ನೈಸ್ ಟೋಲ್ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
- ಸೋಂಪುರ ನೈಸ್ ಟೋಲ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
- ಪಿಇಎಸ್ ಕಾಲೇಜು ನೈಸ್ ಟೋಲ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
- ಕೆಂಗೇರಿ ನೈಸ್ ಟೋಲ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
- ಮಾಗಡಿ ರಸ್ತೆ ನೈಸ್ ಟೋಲ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
- ಮಾಧವರ ರಸ್ತೆ ನೈಸ್ ಟೋಲ್ನಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
- ಪಾರ್ಲೆ ಬಿಸ್ಕಟ್ಸ್ ಫ್ಯಾಕ್ಟರಿ ಕಡೆಯಿಂದ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಹೋಗುವ ವಾಹನಗಳ ಸಂಚಾರ ನಿರ್ಬಂಧ
ಪರ್ಯಾಯ ಮಾರ್ಗಗಳು
ನೆಲಮಂಗಲ ನೈಸ್ ಟೋಲ್-ಮಾಗಡಿ ರಸ್ತೆ ನೈಸ್ ಟೋಲ್-ಕೆಂಗೇರಿ ನೈಸ್ ಟೋಲ್-ಕನಕಪುರ ಟೋಲ್ ಮಾರ್ಗವಾಗಿ ಎಲೆಕ್ಟ್ರಾನಿಕ್ ಸಿಟಿ ಟೋಲ್ ಕಡೆಗೆ ಸಂಚರಿಸುವ ವಾಹನಗಳನ್ನು ಬನ್ನೇರುಘಟ್ಟ ರಸ್ತೆ ನೈಸ್ ಟೋಲ್ನಲ್ಲಿ ತಡೆದು, ಬನ್ನೇರುಘಟ್ಟ ರಸ್ತೆಗೆ ವಾಹನಗಳನ್ನು ಡೈವರ್ಶನ್ ಮಾಡುತ್ತಿದ್ದು, ಎಲೆಕ್ಟ್ರಾನಿಕ್ ಸಿಟಿ ಕಡೆಗೆ ಚಲಿಸುವ ವಾಹನಗಳು ಪ್ರಮುಖವಾಗಿ ಬನ್ನೇರುಘಟ್ಟ ರಸ್ತೆ ಮಾರ್ಗವಾಗಿ-ನೈಸ್ ರಸ್ತೆ ಜಂಕ್ಷನ್-ಶೇರ್ವುಡ್ ಜಂಕ್ಷನ್-ಕೋಳಿಫಾರಂಗೇಟ್ ಜಂಕ್ಷನ್-ಬನ್ನೇರುಘಟ್ಟ ಗಾಮ-ಜಿಗಣಿ ಮಾರ್ಗವಾಗಿ ಹೊಸೂರು ರಸ್ತೆ/ಎಲೆಕ್ಟ್ರಾನಿಕ್ ಸಿಟಿ ಕಡೆಗೆ ತಲುಪಬಹುದಾಗಿದೆ.
ಬೆಂಗಳೂರು ಸಂಚಾರ ಪೊಲೀಸ್ ಟ್ವೀಟ್
“ಸಂಚಾರ ಸಲಹೆ” “Traffic advisory” @blrcitytraffic @Jointcptraffic @DCPSouthTrBCP @acpsetraffic pic.twitter.com/nzdHg2MzmW
— HULIMAVU TRAFFIC BTP (@hulimavutrfps) August 9, 2025
ದಾಬಸ್ಪೇಟೆ ಬಳಿ ಎಡ ತಿರುವು ಪಡೆದು-ದೊಡ್ಡಬಳ್ಳಾಪುರ-ದೇವನಹಳ್ಳಿ-ಸೂಲಿಬೆಲೆ-ಹೊಸಕೋಟೆ-ಮಾರ್ಗವಾ ಚಲಿಸಿ-ಚಂದಾಪುರ-ಅತ್ತಿಬೆಲೆ-ಹೊಸೂರು ರಸ್ತೆ ತಲುಪಬಹುದಾಗಿದೆ.
ಈ ಮಾರ್ಗದ ಮೆಟ್ರೋ ತಾತ್ಕಾಲಿಕ ಬಂದ್
ಇನ್ನು ಬಿಎಂಆರ್ಸಿಎಲ್ನಿಂದ ಕೂಡ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಪ್ರಧಾನ ಮೋದಿ ರಸ್ತೆ ಸಂಚಾರದ ಕಾರಣದಿಂದ ಆಗಸ್ಟ್ 10 ರಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಲಾಲ್ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ ಮತ್ತು ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣಗಳನ್ನು ಸಾರ್ವಜನಿಕರಿಗೆ ತಾತ್ಕಾಲಿಕವಾಗಿ ಮುಚ್ಚಲಾಗುವುದು ಎಂದು ತಿಳಿಸಿದೆ.
ಬಿಎಂಆರ್ಸಿಎಲ್ ಟ್ವೀಟ್
10.08.2025 ರಂದು ಲಾಲ್ಬಾಗ್, ಸೌತ್ ಎಂಡ್ ಸರ್ಕಲ್, ಜಯನಗರ ಮತ್ತು ಆರ್ವಿ ರಸ್ತೆ ಮೆಟ್ರೋ ನಿಲ್ದಾಣಗಳ ತಾತ್ಕಾಲಿಕ ಮುಚ್ಚುವಿಕೆ. ಎಂಡಿ ಹೆಚ್ಚಿನ ವಿವರಗಳಿಗಾಗಿ ಮಾಧ್ಯಮ ಪ್ರಕಟಣೆಯನ್ನು ಪರಿಶೀಲಿಸಿ. pic.twitter.com/GiHrpDFxol
— ನಮ್ಮ ಮೆಟ್ರೋ (@OfficialBMRCL) August 9, 2025
ನಮ್ಮ ಮೆಟ್ರೋ ಪ್ರಯಾಣಿಕರು ಈ ತಾತ್ಕಾಲಿಕ ಮುಚ್ಚುವಿಕೆಯನ್ನು ಗಮನಿಸಿ ಅದಕ್ಕೆ ಅನುಗುಣವಾಗಿ ತಮ್ಮ ಪ್ರಯಾಣವನ್ನು ಯೋಚಿಸಲು ಸೂಚಿಸಲಾಗಿದೆ. ಉಂಟಾದ ಅನಾನುಕೂಲತೆಗೆ ಬಿಎಂಆರ್ಸಿಎಲ್ ವಿಷಾದಿಸಿದ್ದು, ಸಾರ್ವಜನಿಕರು ಸಹಕರಿಸುವಂತೆ ಕೋರಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.







