ಬೆಂಗಳೂರು ದರೋಡೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ: RBIಗೆ ಪತ್ರ, ಹೊಸ ಮಾರ್ಗಸೂಚಿಗೆ ಸಿದ್ದತೆ

ಎಟಿಎಂ ವಾಹನವನ್ನ ಹೊತ್ತೊಯ್ದು, ಏಳು ಕೋಟಿ ದೋಚಿದ್ದ ಕೇಸ್​​ ಬೆಂಗಳೂರು ಪೊಲೀಸರ ನಿದ್ದೆ ಭಂಗ ಮಾಡಿತ್ತು. ಆದರೆ ಸತತ ಕಾರ್ಯಚರಣೆ ಬಳಿಕ ದರೋಡೆಕೋರರನ್ನು ಬಂಧಿಸುವ ಮೂಲಕ ಪ್ರಕರಣವನ್ನು ಭೇದಿಸಿದರು. ಸದ್ಯ ಇದರಿಂದ ಎಚ್ಚೆತ್ತಿರುವ ಪೊಲೀಸರು ಇದೀಗ ಹೊಸ ಮಾರ್ಗಸೂಚಿಗೆ ಸಿದ್ದತೆ ನಡೆಸಿದ್ದಾರೆ.

ಬೆಂಗಳೂರು ದರೋಡೆ ಬೆನ್ನಲ್ಲೇ ಎಚ್ಚೆತ್ತ ಪೊಲೀಸ್ ಇಲಾಖೆ: RBIಗೆ ಪತ್ರ, ಹೊಸ ಮಾರ್ಗಸೂಚಿಗೆ ಸಿದ್ದತೆ
Robbery Case

Updated on: Dec 01, 2025 | 8:56 PM

ಬೆಂಗಳೂರು, ಡಿಸೆಂಬರ್​​ 01: ಸಿದ್ದಾಪುರ ಠಾಣಾ ವ್ಯಾಪ್ತಿಯಲ್ಲಿ 7.1 ಕೋಟಿ ರೂ. ದರೋಡೆ ಕೇಸ್ (Robbery Case) ಬೆನ್ನಲ್ಲೇ ಪೊಲೀಸ್ ಇಲಾಖೆಯೂ ಅಲರ್ಟ್ ಆಗಿದೆ. ಸಿಎಂಎಸ್ ಸೆಕ್ಯೂರಿಟಿಯಿಂದ ಪದೇ ಪದೇ ಭದ್ರತಾ ಲೋಪ ಆಗುತ್ತಿರುವುದರಿಂದ ಹೊಸ ಮಾರ್ಗಸೂಚಿಗೆ ಸಿದ್ದತೆ ನಡೆಯುತ್ತಿದೆ. ಇದಕ್ಕಾಗಿ ಆರ್​ಬಿಐ (RBI) ಮೂಲಕವೇ ಬ್ಯಾಂಕ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಯಲಿದೆ.

ರಾಬರಿ ಬೆನ್ನಲ್ಲೇ ಪೊಲೀಸ್ ಇಲಾಖೆ ಮತ್ತಷ್ಟು ಅಲರ್ಟ್

ರಾಜ್ಯವನ್ನೇ ಬೆಚ್ಚಿಬೀಳಸಿದ್ದ‌ ಎಟಿಎಂ ವಾಹನದ ರಾಬರಿ‌ ಕೇಸ್ ತಾರ್ಕಿಕ ಅಂತ್ಯಕ್ಕೆ ಬಂದಿದೆ. 9 ಆರೋಪಿಗಳನ್ನ ಹೆಡೆಮುರಿ ಕಟ್ಟಿರುವ ಖಾಕಿ ಪಡೆ 98% ಹಣವನ್ನ ವಶಕ್ಕೆ ಪಡೆದಿದೆ. ಆದರೆ ಎಟಿಎಂ ವಾಹನಗಳ ಭದ್ರತಾ ಲೋಪ, ರಾಬರಿಗಳಲ್ಲಿ ಸಿಬ್ಬಂದಿಯೇ ಭಾಗಿ ಆಗುತ್ತಿರುವುದರಿಂದ ಪೊಲೀಸ್ ಇಲಾಖೆ ಮತ್ತಷ್ಟು ಅಲರ್ಟ್ ಆಗಿದೆ.

ಇದನ್ನೂ ಓದಿ: ಬೆಂಗಳೂರು ದರೋಡೆ ಕೇಸ್​: 2 ಕೋಟಿ ಕದಿಯಲು ಹೋಗಿ 7 ಕೋಟಿ ರೂ ಕದ್ದಿದ್ದ ರಾಬರ್ಸ್

CMS ಸೆಕ್ಯೂರಿಟಿ ಸಂಸ್ಥೆಯ ಭದ್ರತಾ ಲೋಪ ಕಂಡು ಬಂದ ಹಿನ್ನಲೆ ಈಗಾಗಲೇ ಸಂಸ್ಥೆಯ ವಿರುದ್ದ ಕ್ರಮಕ್ಕೆ ಕೋರಿ ಪತ್ರ ಪೊಲೀಸರು ಪತ್ರ ಬರೆದಿದ್ದಾರೆ. ಅಂತೆಯೇ ಎಟಿಎಂಗಳಿಗೆ ಹಣ ತುಂಬುವ ಪ್ರಕ್ರಿಯೆಗೆ ಹೊಸ ಮಾರ್ಗಸೂಚಿಗೂ ನಿರ್ಧರಿಸಲಾಗಿದೆ. ಇದಕ್ಕಾಗಿ ಆರ್​ಬಿಐ ಮೂಲಕ ಎಟಿಎಂಗೆ ಹಣ ತುಂಬುವ ಬ್ಯಾಂಕ್ ಗಳು, ಸೆಕ್ಯೂರಿಟಿ ಸಂಸ್ಥೆಗಳ ಜೊತೆಗೆ ನಗರ ಪೊಲೀಸ್ ಆಯುಕ್ತರು ಸಭೆ ನಡೆಸಲು ತಯಾರಿ ನಡೆಸಿದ್ದಾರೆ.

ಇದಕ್ಕಾಗಿ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಯಾ ವಿಭಾಗಗಳ ಡಿಸಿಪಿಗಳು ಬ್ಯಾಂಕ್​ಗಳ ಲಿಸ್ಟ್ ಕಲೆಕ್ಟ್ ಮಾಡ್ತಿದ್ದಾರೆ. ಲಿಸ್ಟ್ ರೆಡಿಯಾದ ಬಳಿಕ ಆರ್​ಬಿಐಗೆ ಮಾರ್ಗಸೂಚಿಗಳ ಬಗ್ಗೆ ಪತ್ರ ಬರೆಯಲಿದ್ದಾರೆ. ಈ ಕುರಿತಾಗಿ ಈಗಾಗಲೇ ಆರ್​ಬಿಐ ಅಧಿಕಾರಿಗಳ ಜೊತೆಯೂ ಕಮಿಷನರ್ ಚರ್ಚೆ ನಡೆಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: 7 ಕೋಟಿ ರೂ ಹೊತ್ತೊಯ್ದರೂ CMS ಸಿಬ್ಬಂದಿಗೆ ಊಟದ ಚಿಂತೆ; ದರೋಡೆಯ ಮತ್ತಷ್ಟು ಸಂಗತಿ ಬೆಳಕಿಗೆ

ಇನ್ನು ಬ್ಯಾಂಕ್ ಅಧಿಕಾರಿಗಳು, ಸೆಕ್ಯೂರಿಟಿ ಏಜೆನ್ಸಿಗಳ ಜೊತೆ ಈ ವಾರ ಕಮಿಷನರ್ ಕಚೇರಿಯಲ್ಲಿ ಸಭೆ ನಡೆಯಲಿದೆ. ಈ ವೇಳೆ ಸಿಬ್ಬಂದಿ ನೇಮಕದಲ್ಲಿ ಎನ್​​ಒಸಿ ಪಡೆಯದಿರೋದು, ದಾಖಲೆ ಪಡೆಯದೆ ಕೆಲಸಕ್ಕೆ ಸಿಬ್ಬಂದಿ ನೇಮಕ ಬಗ್ಗೆ ತಿಳುವಳಿಕೆ‌ ನೀಡಲಿರುವ ಪೊಲೀಸರು ಹೊಸ ಮಾರ್ಗಸೂಚಿ ಬಗ್ಗೆ ತಿಳಿಸಲಿದ್ದಾರೆ. ಈ  ಬಗ್ಗೆ ಆರ್​​ಬಿಐ ಜೊತೆಯೋ ಚರ್ಚೆ ನಡೆಸಿ ಮಾರ್ಗಸೂಚಿ ಪಾಲನೆಗೆ ಬ್ಯಾಂಕ್​​ಗಳಿಗೆ ಸೂಚನೆ ಕೊಡಿಸುವ ಕೆಲಸ ಮಾಡಲಿದ್ದಾರೆ.

ವರದಿ: ಪ್ರದೀಪ್ ಚಿಕ್ಕಾಟಿ, Tv9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.