ಪ್ರತಿಮಾ ಕೊಲೆ ಕೇಸ್: ಆರೋಪಿ ಕಿರಣ್ ನವೆಂಬರ್ 15 ರವರೆಗೆ ಪೊಲೀಸ್ ಕಸ್ಟಡಿಗೆ

ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾರನ್ನು ಕೊಲೆ ಮಾಡಿರುವುದಾಗಿ ಆರೋಪಿ ಕಿರಣ್‌ ಒಪ್ಪಿಕೊಂಡಿದ್ದಾನೆ ಎಂದು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್​ ಹೇಳಿದ್ದರು. ಇದೀಗ ನವೆಂಬರ್​ 15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 2ನೇ ACMM ಕೋರ್ಟ್‌ ಆದೇಶ ಹೊರಡಿಸಿದೆ.

ಪ್ರತಿಮಾ ಕೊಲೆ ಕೇಸ್: ಆರೋಪಿ ಕಿರಣ್ ನವೆಂಬರ್ 15 ರವರೆಗೆ ಪೊಲೀಸ್ ಕಸ್ಟಡಿಗೆ
ಮೃತ ಪ್ರತಿಮಾ, ಆರೋಪಿ ಕಿರಣ್
Follow us
| Updated By: ಗಂಗಾಧರ​ ಬ. ಸಾಬೋಜಿ

Updated on:Nov 06, 2023 | 6:05 PM

ಬೆಂಗಳೂರು, ನವೆಂಬರ್​​​​​ 06: ಗಣಿ-ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕಿ ಪ್ರತಿಮಾ ಕೊಲೆ (Pratima murder case) ಆರೋಪಿ ಕಿರಣ್​ನ​ನ್ನು ನವೆಂಬರ್​ 15ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿ ಬೆಂಗಳೂರಿನ 2ನೇ ACMM ಕೋರ್ಟ್‌ ಆದೇಶ ಹೊರಡಿಸಿದೆ. ಪ್ರತಿಮಾ ಅವರ ಕಾರು ಡ್ರೈವರ್ ಆಗಿದ್ದ ಕಿರಣ್​ನನ್ನು ಅನುಮಾನದ ಹಿನ್ನೆಲೆ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಅವನು ಹತ್ಯೆ ಮಾಡಿರುದಾಗಿ ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್​ ಸ್ಪಷ್ಟನೆ ನೀಡಿದ್ದರು.

ಹೆಚ್ಚಿನ ವಿಚಾರಣೆಗಾಗಿ ಆರೋಪಿ ಕಿರಣ್​ನ​ನ್ನು 11 ದಿನ ವಶಕ್ಕೆ ನೀಡುವಂತೆ ಕೋರ್ಟ್​ಗೆ ಪೊಲೀಸರು ಮನವಿ ಮಾಡಿಕೊಂಡಿದ್ದರು. ಸದ್ಯ ನವೆಂಬರ್​ 15ರವರೆಗೆ ಕಸ್ಟಡಿಗೆ ನೀಡಲಾಗಿದೆ.

ಇದನ್ನೂ ಓದಿ: ಪ್ರತಿಮಾ ಕೊಲೆ ಕೇಸ್, ಆರೋಪಿ ಕಿರಣ್ ತಪ್ಪೊಪ್ಪಿಗೆ: ಡಿಸಿಪಿ ರಾಹುಲ್ ಕುಮಾರ್ ಸ್ಪಷ್ಟನೆ

ಬೆಂಗಳೂರಿನ 2ನೇ ACMM ಕೋರ್ಟ್‌ಗೆ ಆರೋಪಿಯನ್ನು ಹಾಜರು ಪಡೆಸಿದಾಗ ನ್ಯಾಯಾಧೀಶರ ಮುಂದೆ ಕಿರಣ್​ ಕೈ ಮುಗಿದುಕೊಂಡೆ ನಿಂತಿದ್ದ. ನ್ಯಾಯಾಧೀಶರಿಂದ ನಿನ್ನದೇನಾದರೂ ತಾಕರಾರು ಇದೆಯಾ ಎಂದು ಆರೋಪಿಗೆ ಪ್ರಶ್ನೆ ಮಾಡಿದ್ದು, ಈ ವೇಳೆ ನನ್ನನ್ನು ಜೈಲಿಗೆ ಕಳುಹಿಸಿ ಎಂದು ಹೇಳಿದ್ದಾನೆ.

ಈ ಕುರಿತಾಗಿ ದಕ್ಷಿಣ ವಿಭಾಗದ ಡಿಸಿಪಿ ರಾಹುಲ್ ಕುಮಾರ್​ ಮಾತನಾಡಿದ್ದು, ನ. 05ರಂದು ಗೋಕುಲ್ ಬಡಾವಣೆಯಲ್ಲಿ ಮನೆಯಲ್ಲಿ ಪ್ರತಿಮಾ ಕೊಲೆಯಾಗಿದೆ ಎಂದು ಸುದ್ದಿ ಬರುತ್ತೆ. ಸುದ್ದಿ ಬಂದ ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸ್ಥಳಕ್ಕೆ ಹೋದಾಗ ಪ್ರತಿಮಾ ಅವರ ಕೊಲೆಯಾಗಿತ್ತು. ಕೂಡಲೇ ಮೂರು ತಂಡಗಳನ್ನ ರಚನೆ ಮಾಡಿ ಇನ್ವೆಸ್ಟೀಗೆಷನ್ ಮಾಡಲಾಗಿತ್ತು. ಸಂಬಂಧಿಸಿದ ವ್ಯಕ್ತಿಗಳನ್ನ ವಿಚಾರಣೆ ಮಾಡಿದ ವೇಳೆ ಕ್ಲ್ಯೂ ಸಿಕ್ಕಿತ್ತು. ಅವರ ಜೊತೆ ಕೆಲಸ ಮಾಡ್ತಿದ್ದ ವ್ಯಕ್ತಿಯೇ ಕೊಲೆ ಮಾಡಿರೋದಾಗಿ ಬೆಳಕಿಗೆ ಬಂದಿತ್ತು.

ಇದನ್ನೂ ಓದಿ: ಕೆಲಸದಿಂದ ತೆಗೆದುಹಾಕಿದ ಕಾರಣಕ್ಕೆ ಪ್ರತಿಮಾರನ್ನು ಅವರ ಕಾರು ಚಾಲಕ ಕಿರಣ್ ಹತ್ಯೆಗೈದ: ರಾಹುಲ್ ಕುಮಾರ್, ಡಿಸಿಪಿ

ನಿನ್ನೆ ಸಂಜೆ ಆರೋಪಿಯನ್ನ ಮಲೇಮಹದೇಶ್ವರ ಬೆಟ್ಟದಲ್ಲಿ ಬಂಧಿಸಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಆರೋಪಿ ಪ್ರತಿಮಾ ಅವರ ಬಳಿ ಡ್ರೈವರ್ ಕೆಲಸ ಮಾಡುತ್ತಿದ್ದ. ಆಗಾಗ ಅವನನ್ನ ಬೈಯ್ತಿದ್ದರಂತೆ. ಅದರ ಜೊತೆಗೆ ಎರಡು ತಿಂಗಳ ಹಿಂದೆ ಕೆಲಸದಿಂದ ತೆಗೆದು ಹಾಕಲಾಗಿತ್ತು. ಕೆಲಸ ಕಳೆದುಕೊಂಡ ಹಿನ್ನೆಲೆ ಪತ್ನಿ ಸಹ ಆರೋಪಿಯನ್ನ ಬಿಟ್ಟು ಹೋಗಿದ್ದರು. ಹೀಗಾಗಿ ಆರೋಪಿಗೆ ಆರ್ಥಿಕ ಸಂಕಷ್ಟ ಎದುರಾಗಿತ್ತು.

ತೀರ್ಥಹಳ್ಳಿಯಲ್ಲಿ ಪ್ರತಿಮಾ ಅಂತ್ಯಕ್ರಿಯೆ 

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಲ್ಲಿ ಉಪ ನಿರ್ದೇಶಕಿಯಾಗಿದ್ದ ಪ್ರತಿಮಾ, ಶನಿವಾರ ರಾತ್ರಿ ಅಪಾರ್ಟ್​ಮೆಂಟ್​ನಲ್ಲಿ ಹತ್ಯೆಯಾಗಿದ್ದರು. ಸದ್ಯ ಪ್ರತಿಮಾ ಮೃತದೇಹವನ್ನು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಗೆ ಕುಟುಂಬಸ್ಥರು ತೆಗೆದುಕೊಂಡು ಬಂದಿದ್ದು, ಹಿಂದು ರುದ್ರಭೂಮಿಯಲ್ಲಿ ಇಂದು ಮುಂಜಾನೆ 9.30 ಕ್ಕೆ ಪ್ರತಿಮಾ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:44 pm, Mon, 6 November 23