AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PSI Recruitment Scam: ಪಿಎಸ್​ಐ ನೇಮಕಾತಿ ಪ್ರಕರಣ, ಅಕ್ಟೋಬರ್​ನಲ್ಲಿ ಎಲ್ಲ ಪ್ರಕರಣಗಳ ಚಾರ್ಜ್​ಶೀಟ್

ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ನಂತರ ಮರು ಪರೀಕ್ಷೆಯ ದಿನಾಂಕ ಘೋಷಿಸಲಾಗುವುದು ಎಂದು ಪ್ರವೀಣ್ ಸೂದ್ ಹೇಳಿದ್ದಾರೆ.

PSI Recruitment Scam: ಪಿಎಸ್​ಐ ನೇಮಕಾತಿ ಪ್ರಕರಣ, ಅಕ್ಟೋಬರ್​ನಲ್ಲಿ ಎಲ್ಲ ಪ್ರಕರಣಗಳ ಚಾರ್ಜ್​ಶೀಟ್
ಡಿಜಿ ಐಜಿಪಿ ಪ್ರವೀಣ್ ಸೂದ್
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Sep 18, 2022 | 1:42 PM

Share

ಬೆಂಗಳೂರು: ಕರ್ನಾಟಕದ 454 ಸಬ್​ ಇನ್​ಸ್ಪೆಕ್ಟರ್ ಹುದ್ದೆಗಳ ನೇಮಕಾತಿ (PSI Recruitment Scam) ಪ್ರಕ್ರಿಯೆಯಲ್ಲಿ ಆಗಿರುವ ಅವ್ಯವಹಾರಗಳ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಅಕ್ಟೋಬರ್​ನಲ್ಲಿ ಎಲ್ಲ ಪ್ರಕರಣಗಳಿಗೆ ಚಾರ್ಜ್​ಶೀಟ್ (Chargesheet) ಹಾಕಲಾಗುವುದು ಎಂದು ಡಿಜಿ ಮತ್ತು ಐಜಿಪಿ ಪ್ರವೀಣ್​ ಸೂದ್ (Praveen Sood)​ ಹೇಳಿದರು. ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ ನಂತರ ಮರು ಪರೀಕ್ಷೆಯ ದಿನಾಂಕ ಘೋಷಿಸಲಾಗುವುದು. ಪ್ರಕರಣಕ್ಕೆ ಸಂಬಂಧಿಸಿದಂತೆ 90 ದಿನಗಳ ಒಳಗೆ ಚಾರ್ಜ್​ಶೀಟ್ ಸಲ್ಲಿಸಬೇಕಿದೆ ಎಂದು ತಿಳಿಸಿದರು.

ಮಾಹಿತಿಗಾಗಿ ಡಂಗೂರ ಹೊಡೆಸಿದ ಪೊಲೀಸರು

ಪಿಎಸ್‌ಐ ನೇಮಕಾತಿ ಹಗರಣದ ಪಾತ್ರಧಾರಿಗಳಾಗಿರುವ ಎಚ್‌.ಬಿ.ಬೋರೇಗೌಡ ಹಾಗೂ ಸಿದ್ದರಾಜು ಅವರನ್ನು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯವು ಉದ್ಘೋಷಿತ ಆರೋಪಿಗಳು ಘೋಷಿಸಿದೆ. ಒಂದನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. ಈ ಬೆಳವಣಿಗೆಯ ಬೆನ್ನಲ್ಲೇ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಪ್ರಕಟಣೆ ಹೊರಡಿಸಿದೆ. ಆರೋಪಿಗಳ ಸ್ವಂತ ಊರುಗಳಲ್ಲಿ ತಮಟೆ ಮೂಲಕ ಡಂಗೂರ ಸಾರಿಸಿದ್ದಾರೆ. ಮಾಹಿತಿ ಕೊಡುವಂತೆ ಸಾರ್ವಜನಿಕರನ್ನು ವಿನಂತಿಸಿದ್ದಾರೆ.

ತುಮಕೂರು ಜಿಲ್ಲೆ ಕುಣಿಗಲ್‌ ತಾಲೂಕಿನ ಜೋಡಿ ಹೊಸಹಳ್ಳಿ ಆರೋಪಿ ಬೋರೇಗೌಡನ ಸ್ವಗ್ರಾಮವಾಗಿದೆ. ಅಲ್ಲಿ ಹಾಗೂ ಆತನು ಬೆಂಗಳೂರಿನಲ್ಲಿ ವಾಸಿಸುತ್ತಿದ್ದ ಹೆಗ್ಗನಹಳ್ಳಿ ಕ್ರಾಸ್‌ನ ಚಾಮುಂಡೇಶ್ವರಿ ಲೇಔಟ್‌ಗೆ ಭೇಟಿ ನೀಡಿದ್ದ ಸಿಐಡಿ ಅಧಿಕಾರಿಗಳು ಪೊಲೀಸ್‌ ಪ್ರಕಟಣೆಯ ಭಿತ್ತಪತ್ರಗಳನ್ನು ಆತನ ಮನೆಯ ಮೇಲೆ ಅಂಟಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಸಿದ್ದರಾಜು ಬೆಂಗಳೂರಿನ ಲಗ್ಗೆರೆಯಲ್ಲಿ ಮನೆಮಾಡಿಕೊಂಡಿದ್ದ. ಅಲ್ಲಿಯೂ ಸಹ ಪೊಲೀಸರು ಇದೇ ಕ್ರಮ ಅನುಸರಿಸಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿ ಕೊಡಿ. ಯಾರು ಮಾಹಿತಿ ಕೊಟ್ಟಿದ್ದಾರೆ ಎಂಬ ವಿವರವನ್ನು ಸಿಐಡಿ ಗೌಪ್ಯವಾಗಿ ಇರಿಸುತ್ತದೆ ಎಂದು ಪೊಲೀಸರು ಭರವಸೆ ನೀಡಿದ್ದಾರೆ.

ಮತ್ತೊಂದು ಹಗರಣ ಪ್ರಸ್ತಾಪಿಸಿದ ಬಿಜೆಪಿ

2013ರಲ್ಲಿ ನಡೆದ ಪಿಎಸ್‌ಐ ಮತ್ತು ಶಿಕ್ಷಕರ ನೇಮಕಾತಿಯಲ್ಲಿಯೂ ಅಕ್ರಮ ನಡೆದಿದೆ. ಅದರ ಬಗ್ಗೆಯೂ ವಿವರಗಳನ್ನು ಕಲೆಹಾಕಲಾಗಿದೆ ಎಂದು ಬಿಜೆಪಿ ಹೇಳಿದೆ. ಇಂಥ ಪ್ರಕರಣಗಳ ಬಗ್ಗೆಯೂ ತನಿಖೆ ನಡೆಸಲಾಗುವುದು. ಪರೀಕ್ಷೆಯನ್ನೇ ಬರೆಯದ ಹಲವರಿಗೆ ನೇಮಕಾತಿ ಆದೇಶ ನೀಡಲಾಗಿದೆ. ಅಂಥವರು ಕರ್ತವ್ಯಕ್ಕೂ ಹಾಜರಾಗಿದ್ದಾರೆ ಎಂದು ಬಿಜೆಪಿ ರಾಜ್ಯ ವಕ್ತಾರ ಹಾಗೂ ಶಾಸಕ ಪಿ.ರಾಜೀವ್‌ ಆರೋಪ ಮಾಡಿದ್ದಾರೆ.

Published On - 1:42 pm, Sun, 18 September 22