ನನ್ನ ವಿರುದ್ಧದ ಲೋಕಾಯುಕ್ತ ದೂರು ಶುದ್ಧ ಹಾಸ್ಯಾಸ್ಪದ, ರಾಜಕೀಯ ಪಿತೂರಿ: ಬಿಜೆಪಿ ಶಾಸಕ ಸುರೇಶ್ ಕುಮಾರ್

ತಮ್ಮ ವಿರುದ್ಧ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಭ್ರಷ್ಟಾಚಾರದ ದೂರು ಸಂಪೂರ್ಣ ಸುಳ್ಳು ಮತ್ತು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಲೋಕಾಯುಕ್ತರಿಂದ ನೋಟಿಸ್ ಬರುವ ಮುನ್ನವೇ, ಇನ್ನೆರಡು ದಿನಗಳಲ್ಲಿ ತಾವು ದೂರಿನ ಪ್ರತಿ ಅಂಶಕ್ಕೂ ಸುದೀರ್ಘ ಲಿಖಿತ ಉತ್ತರ ಸಲ್ಲಿಸುವುದಾಗಿ ಅವರು ಪ್ರಕಟಿಸಿದ್ದಾರೆ.

ನನ್ನ ವಿರುದ್ಧದ ಲೋಕಾಯುಕ್ತ ದೂರು ಶುದ್ಧ ಹಾಸ್ಯಾಸ್ಪದ, ರಾಜಕೀಯ ಪಿತೂರಿ: ಬಿಜೆಪಿ ಶಾಸಕ ಸುರೇಶ್ ಕುಮಾರ್
ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ (ಚಿತ್ರ ಕೃಪೆ: ಶಾಸಕರ ಫೇಸ್​​ಬುಕ್ ಪುಟ)
Image Credit source: Facebook
Edited By:

Updated on: Jul 02, 2026 | 5:08 PM

ಮುಖ್ಯಾಂಶಗಳು

  • ಲೋಕಾಯುಕ್ತ ದೂರು ಶುದ್ಧ ಹಾಸ್ಯಾಸ್ಪದ ಎಂದ ಶಾಸಕ
  • ನೋಟಿಸ್‌ಗೂ ಮುನ್ನವೇ ಸುದೀರ್ಘ ಉತ್ತರ ಸಲ್ಲಿಕೆ
  • 4 ದಶಕದ ಬದುಕಿನಲ್ಲಿ ಭ್ರಷ್ಟಾಚಾರ ಮಾಡಿಲ್ಲ

ಬೆಂಗಳೂರು, ಜುಲೈ 2: ರಾಜಾಜಿನಗರ ಕ್ಷೇತ್ರದ ಹಿರಿಯ ಬಿಜೆಪಿ (BJP) ಶಾಸಕ ಎಸ್. ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದ್ದು, ಈ ಸಂಬಂಧ ಶಾಸಕರು ಮಾಧ್ಯಮ ಪ್ರಕಟಣೆ ಹೊರಡಿಸುವ ಮೂಲಕ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಎಂಬುವವರು ತಮ್ಮ ವಿರುದ್ಧ ನೀಡಿರುವ ದೂರು ಸಂಪೂರ್ಣ ಸುಳ್ಳು ಹಾಗೂ ಹಾಸ್ಯಾಸ್ಪದ ಎಂದು ಸುರೇಶ್ ಕುಮಾರ್ ಹೇಳಿದ್ದಾರೆ. ಅಧಿಕಾರ ದುರುಪಯೋಗ ಪಡಿಸಿಕೊಂಡು, ನಿಯಮ ಗಾಳಿಗೆ ತೂರಿ ಬೇನಾಮಿ ಗುತ್ತಿಗೆದಾರರಿಗೆ ಲಾಭ ಮಾಡಿಕೊಟ್ಟು ಸರ್ಕಾರಿ ಖಜಾನೆಗೆ ನಷ್ಟ ಉಂಟುಮಾಡಿದ್ದಾರೆ ಎಂಬ ಆರೋಪವನ್ನು ಶಾಸಕರು ಖಡಾಖಂಡಿತವಾಗಿ ನಿರಾಕರಿಸಿದ್ದಾರೆ.

ಯಾರ ಪರವಾಗಿ ಕಾರ್ಯಾಚರಣೆ ಅಂತ ಗೊತ್ತು: ಸುರೇಶ್ ಕುಮಾರ್ ವಾಗ್ದಾಳಿ

ತಮ್ಮ ವಿರುದ್ಧ ದೂರು ನೀಡಿರುವ ಸೂರ್ಯ ಮುಕುಂದರಾಜ್ ಅವರ ಹಿನ್ನೆಲೆ ಮತ್ತು ಉದ್ದೇಶದ ಕುರಿತು ಪ್ರಕಟಣೆಯಲ್ಲಿ ಪ್ರಸ್ತಾಪಿಸಿರುವ ಸುರೇಶ್ ಕುಮಾರ್, ‘ದೂರುದಾರರು ಯಾರ ಪರವಾಗಿ ಈ ಎಲ್ಲಾ ಕಾರ್ಯಾಚರಣೆ ಮಾಡುತ್ತಿದ್ದಾರೆ ಎಂಬುದು ನನಗೆ ಸ್ಪಷ್ಟವಾಗಿ ಗೊತ್ತಿದೆ. ಇಡೀ ಬೆಂಗಳೂರಿನಲ್ಲಿ ಕಾಮಗಾರಿಗಳನ್ನು ಕೈಗೊಂಡು, ಕೆಲಸ ಮಾಡದೆಯೇ ಬಿಲ್ ಪಡೆಯುವ ಕುಖ್ಯಾತಿಯನ್ನು ಹೊಂದಿರುವ ಕೆಲ ವ್ಯಕ್ತಿಗಳಿದ್ದಾರೆ. ಅಂತಹ ವ್ಯಕ್ತಿಗಳ ಪರವಾಗಿ ಸೂರ್ಯ ಮುಕುಂದರಾಜ್ ಅವರು ಈ ರೀತಿಯ ವಕಾಲತ್ತು ವಹಿಸಿರುವುದು ನನಗೆ ನಿಜಕ್ಕೂ ಕನಿಕರವೆನಿಸುತ್ತಿದೆ’ ಎಂದು ಲೇವಡಿ ಮಾಡಿದ್ದಾರೆ.

ನಾಲ್ಕು ದಶಕಗಳ ರಾಜಕಾರಣದಲ್ಲಿ ಭ್ರಷ್ಟಾಚಾರ ಮಾಡಿಲ್ಲ: ಸುರೇಶ್ ಕುಮಾರ್

‘ನನ್ನ ನಾಲ್ಕು ದಶಕಗಳ ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ನಾನು ಎಂದಿಗೂ, ಯಾವುದೇ ಗುತ್ತಿಗೆಯ ಕೆಲಸಗಳಲ್ಲಿ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೈ ಹಾಕಿಲ್ಲ. ಬೇನಾಮಿ ಗುತ್ತಿಗೆದಾರರು ಎಂಬ ಅಂಶವೇ ನನ್ನ ಜೀವನದಲ್ಲಿ ಬಂದಿಲ್ಲ. ಸರ್ಕಾರಕ್ಕಾಗಲಿ ಅಥವಾ ನಗರ ಪಾಲಿಕೆಗಾಗಲಿ ನಷ್ಟ ಉಂಟು ಮಾಡುವ ಮನಸ್ಥಿತಿ ನನ್ನದಲ್ಲ. ಬೆಂಗಳೂರಿನ ರಾಜಕಾರಣದಲ್ಲಿರುವವರಿಗೆ ಮತ್ತು ನಗರ ಪಾಲಿಕೆಯ ಎಲ್ಲಾ ಅಧಿಕಾರಿಗಳಿಗೆ ನನ್ನ ವ್ಯಕ್ತಿತ್ವ ಏನು ಎಂಬುದು ಚೆನ್ನಾಗಿ ತಿಳಿದಿದೆ. ಈ ದೂರು ಕೇವಲ ನನ್ನ ಹೆಸರಿಗೆ ಕೆಸರೆರಚುವ ರಾಜಕೀಯ ದುರುದ್ದೇಶದ ಪ್ರಯತ್ನವಷ್ಟೇ’ ಎಂದು ಶಾಸಕರು ಬೇಸರ ವ್ಯಕ್ತಪಡಿಸಿದ್ದಾರೆ.

ನಿಷ್ಪಕ್ಷಪಾತ ತನಿಖೆಗೆ ಆಗ್ರಹ

ಲೋಕಾಯುಕ್ತ ಸಂಸ್ಥೆಯು ಈ ಕುರಿತು ಸಂಪೂರ್ಣ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಸುರೇಶ್ ಕುಮಾರ್ ಆಗ್ರಹಿಸಿದ್ದಾರೆ. ಲೋಕಾಯುಕ್ತ ಕಚೇರಿಯಿಂದ ತಮಗೆ ಯಾವುದೇ ಅಧಿಕೃತ ನೋಟಿಸ್ ಬರುವ ಮುನ್ನವೇ, ಮುಂದಿನ ಎರಡು ದಿನಗಳಲ್ಲಿ ದೂರಿನ ಎಲ್ಲಾ ಅಂಶಗಳಿಗೂ ತಾವೇ ಸ್ವತಃ ಸುದೀರ್ಘವಾದ ಉತ್ತರವನ್ನು ಸಲ್ಲಿಸುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ: ಶಾಸಕರ ಮತದಾನದಲ್ಲಿ ಎರಡು ನಿಯಮ ಯಾಕೆ? ಚುನಾವಣಾ ಆಯೋಗದ ದ್ವಂದ್ವ ನೀತಿ ಪ್ರಶ್ನಿಸಿ ಶಾಸಕ ಎಸ್. ಸುರೇಶ್ ಕುಮಾರ್ ಪತ್ರ

ದೂರಿನಲ್ಲಿರುವ ಪ್ರತಿಯೊಂದು ಅಂಶಕ್ಕೂ ಪೂರ್ಣ ಉತ್ತರ ನೀಡುವ ಮುಖಾಂತರ, ಈ ದೂರುದಾರರ ಒಟ್ಟು ದುರುದ್ದೇಶದ ಕುರಿತು ಉನ್ನತ ಮಟ್ಟದ ತನಿಖೆ ಮಾಡಬೇಕೆಂದು ಲೋಕಾಯುಕ್ತರನ್ನು ಕೋರುವುದಾಗಿ ಸುರೇಶ್ ಕುಮಾರ್ ತಿಳಿಸಿದ್ದಾರೆ.

ಸುರೇಶ್ ಕುಮಾರ್ ವಿರುದ್ಧ ಲೋಕಾಯುಕ್ತಕ್ಕೆ ನೀಡಿದ ದೂರಿನಲ್ಲೇನಿದೆ?

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್. ಸುರೇಶ್ ಕುಮಾರ್ ಅವರು ಸಾರ್ವಜನಿಕ ಕಾಮಗಾರಿಗಳ ಟೆಂಡರ್ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಿ ವಕೀಲ ಸೂರ್ಯ ಮುಕುಂದರಾಜ್ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. 2020ರಿಂದಲೇ ಬಿಬಿಎಂಪಿ ಅಧಿಕಾರಿಗಳ ಮೇಲೆ ರಾಜಕೀಯ ಪ್ರಭಾವ ಬೀರಿರುವ ಶಾಸಕರು, ಅರ್ಹ ಎಲ್-1 (L1) ಬಿಡ್ಡರ್‌ಗಳನ್ನು ಕಡೆಗಣಿಸಿ ತಮ್ಮ ಆಪ್ತ ಹಾಗೂ ಬೇನಾಮಿ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಕೊಡಿಸಲು ಕೆಟಿಪಿಪಿ ಕಾಯ್ದೆ ಸೇರಿದಂತೆ ಟೆಂಡರ್ ನಿಯಮಾವಳಿಗಳನ್ನು ಗಾಳಿಗೆ ತೂರಿ ಪಾರದರ್ಶಕತೆಯನ್ನು ಉಲ್ಲಂಘಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ. ಈ ಬಗ್ಗೆ ಲೋಕಾಯುಕ್ತ ಸಂಸ್ಥೆಯು ಸಮಗ್ರ ತನಿಖೆ ನಡೆಸಬೇಕು ಎಂದು ದೂರುದಾರರು ಒತ್ತಾಯಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us