RCB IPL Victory Stampede: ಐಪಿಎಲ್ ಗೆದ್ದ ಬೇರೆ ತಂಡಗಳೂ ವಿಜಯೋತ್ಸವ ನಡೆಸಿವೆ; ಆದರೆ ಆರ್​​ಸಿಬಿಗೆ ಯಡವಟ್ಟಾಗಿದ್ದು ಎಲ್ಲಿ? ಯಾರು ಹೊಣೆ?

Reasons for stampede incident during RCB victory celebration: ಆರ್​​ಸಿಬಿ ತಂಡದ ಐಪಿಎಲ್ ಗೆಲುವಿನ ಸಂಭ್ರಮಾಚರಣೆಗೆಂದು ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ನೂಕುನುಗ್ಗುಲಾಗಿ ಹಲವರು ಬಲಿಯಾದ ದುರಂತ ಸಂಭವಿಸಿದೆ. ಹತ್ತಕ್ಕೂ ಹೆಚ್ಚು ಜನರು ಕಾಲ್ತುಳಿತದಿಂದ ಸಾವನ್ನಪ್ಪಿದ್ದಾರೆ. ಬೇರೆ ತಂಡಗಳು ಐಪಿಎಲ್ ಗೆದ್ದಾಗ ಸಂಭ್ರಮಾಚರಣೆ ನಡೆಸಿವೆ. ಎಂದೂ ಈ ರೀತಿ ದುರಂತ ಆಗಿದ್ದಿಲ್ಲ. ಆರ್​​​ಸಿಬಿ ವಿಚಾರದಲ್ಲಿ ಯಡವಟ್ಟಾಗಿದ್ದು ಎಲ್ಲಿ?

RCB IPL Victory Stampede: ಐಪಿಎಲ್ ಗೆದ್ದ ಬೇರೆ ತಂಡಗಳೂ ವಿಜಯೋತ್ಸವ ನಡೆಸಿವೆ; ಆದರೆ ಆರ್​​ಸಿಬಿಗೆ ಯಡವಟ್ಟಾಗಿದ್ದು ಎಲ್ಲಿ? ಯಾರು ಹೊಣೆ?
ಆರ್​​ಸಿಬಿ ಸಂಭ್ರಮಾಚರಣೆ

Updated on: Jun 04, 2025 | 7:11 PM

ಬೆಂಗಳೂರು, ಜೂನ್ 4: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (RCB) 18 ವರ್ಷದ ನಂತರ ಚೊಚ್ಚಲ ಐಪಿಎಲ್ ಗೆದ್ದ ಸಂಭ್ರಮ ಇತ್ತು. ಅದಾಗಿ ಒಂದೇ ದಿನದೊಳಗೆ ಆ ಸಂಭ್ರಮವೆಲ್ಲವೂ ನಿಂತು ಬೆಂಗಳೂರಿನಲ್ಲಿ ಸೂತಕ ಛಾಯೆ ಹರಡಿದೆ. ಆರ್​ಸಿಬಿ ಗೆಲುವಿನ ಸಂಭ್ರಮಾಚರಣೆಯು ಶೋಕಾಚರಣೆಯಾಗಿ ಮಾರ್ಪಟ್ಟಿದೆ. ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆಯೋಜಿಸಲಾಗಿದ್ದ ಸೆಲಬ್ರೇಶನ್ ಕಾರ್ಯಕ್ರಮದಲ್ಲಿ ನೂಕುನುಗ್ಗಲಿನ ದುರಂತ ಸಂಭವಿಸಿದೆ. ಈ ವರದಿ ಬರೆಯುವ ವೇಳೆಗೆ ಸಾವಿನ ಸಂಖ್ಯೆ 10 ದಾಟಿತ್ತು. ಇನ್ನೂ ಹಲವರು ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ. ಅವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿರುವುದು ತಿಳಿದುಬಂದಿದೆ.

ಈ ದುರಂತಕ್ಕೆ ಯಾರು ಹೊಣೆ? ಸಾಲು ಸಾಲು ಪ್ರಶ್ನೆಗಳಿಗೆ ಸಿಗಬೇಕಿದೆ ಉತ್ತರ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​​ಸಿಬಿ ವಿಜಯೋತ್ಸವ ಆಚರಣೆಯನ್ನು ಆಯೋಜಿಸಿದ್ದು ಸರ್ಕಾರವೇ. ಫ್ರಾಂಚೈಸಿಗೆ ತಿಳಿಸಿ ಈ ಕಾರ್ಯಕ್ರಮ ನಡೆಸಲಾಯಿತಾ ಗೊತ್ತಿಲ್ಲ. ಆರ್​ಸಿಬಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಸೇರುತ್ತಾರೆ ಎಂದು ಸರ್ಕಾರಕ್ಕೆ ಗೊತ್ತಾಗಲಿಲ್ಲವಾ? ಯಾವ ಮುನ್ನೆಚ್ಚರಿಕೆಯನ್ನೂ ತೆಗೆದುಕೊಳ್ಳದೇ ಕಾರ್ಯಕ್ರಮ ಆಯೋಜಿಸಿದ್ದು ಎದ್ದು ಕಾಣುತ್ತದೆ.

ಇದನ್ನೂ ಓದಿ: Bangalore Stampede: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ 10 ಸಾವು

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈ ಹಿಂದೆ ಲೆಕ್ಕವಿಲ್ಲದಷ್ಟು ಪಂದ್ಯಗಳು ನಡೆದಿವೆ. ಜನರು ಕಿಕ್ಕಿರಿದು ಸೇರಿದ್ದಾರೆ. ಆದರೆ, ಎಂದೂ ಈ ರೀತಿ ಭೀಕರ ಎನಿಸುವಂತಹ ದುರಂತ ಸಂಭವಿಸಿದ್ದಿಲ್ಲ.

ಇತರ ಐಪಿಎಲ್ ತಂಡಗಳೂ ವಿಜಯೋತ್ಸವ ನಡೆಸಿವೆ… ಆದರೆ…

ಈ ಹಿಂದೆ ಐಪಿಎಲ್ ಗೆದ್ದ ವಿವಿಧ ತಂಡಗಳು ತಮ್ಮ ನಗರಗಳಲ್ಲಿ ವಿಜಯೋತ್ಸವ ಆಚರಿಸಿರುವುದುಂಟು. ಕೆಕೆಆರ್, ಮುಂಬೈ, ಸಿಎಸ್​​ಕೆ ಮೊದಲಾದ ತಂಡಗಳ ಸಂಭ್ರಮಾಚರಣೆ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದಿದ್ದವು. ಸಾಮಾನ್ಯವಾಗಿ ಐಪಿಎಲ್ ಗೆದ್ದು ಒಂದೆರಡು ಮೂರು ದಿನಗಳ ಬಳಿಕ ವಿಜಯೋತ್ಸವ ಆಚರಿಸಿವೆ.

ಇದನ್ನೂ ಓದಿ: ಬೆಂಗಳೂರಿಗರೇ ಗಮನಿಸಿ; ಕಬ್ಬನ್ ಪಾರ್ಕ್, ವಿಧಾನಸೌಧ ಮೆಟ್ರೋ ಸ್ಟೇಷನ್ ಬಂದ್

ಆದರೆ, ಆರ್​ಸಿಬಿ ವಿಚಾರದಲ್ಲಿ ಯಾಕೆ ಆತುರ ಮಾಡಲಾಯಿತೋ ಗೊತ್ತಿಲ್ಲ. ಈ ಆತುರದ ಕ್ರಮದಲ್ಲಿ ರಾಯಲ್ ಚಾಲೆಂಜರ್ಸ್ ಫ್ರಾಂಚೈಸಿಯ ಪಾತ್ರ ಇಲ್ಲ. ರೋಡ್​​ಶೋ ನಡೆಸಲು ಮಾತ್ರವೇ ಫ್ರಾಂಚೈಸಿ ನಿರ್ಧರಿಸಿತು. ಆದರೆ ಸರ್ಕಾರವೇ ಉತ್ಸಾಹದಲ್ಲಿ ಈ ಸಂಭ್ರಮಾಚರಣೆ ಕಾರ್ಯಕ್ರಮ ಆಯೋಜಿಸಿದೆ. ಈಗಷ್ಟೇ ಐಪಿಎಲ್ ಗೆದ್ದ ಸಂಭ್ರಮದಲ್ಲಿರುವ ಅಭಿಮಾನಿಗಳನ್ನು ನಿಯಂತ್ರಿಸುವುದು ಸಾಮಾನ್ಯದ ಕೆಲಸವಲ್ಲ. ಆ ಕಾರ್ಯಕ್ರಮವನ್ನು ವ್ಯವಸ್ಥಿತ ರೀತಿಯಲ್ಲಿ ಆಯೋಜಿಸದೇ ಇರುವುದು ಘೋರ ದುರಂತಕ್ಕೆ ಎಡೆ ಮಾಡಿಕೊಟ್ಟಿದೆ.

ಇನ್ನಷ್ಟು ರಾಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us