ಇನ್ಮುಂದೆ ರೌಡಿಶೀಟರ್ಗಳನ್ನು ಬೇಕಾಬಿಟ್ಟಿ ಠಾಣೆಗೆ ಕರೆಸುವಂತ್ತಿಲ್ಲ: ಪ್ರಕ್ರಿಯೆ ನಿಗದಿಪಡಿಸಿದ ಹೈಕೋರ್ಟ್
ಚುನಾವಣೆ, ಹಬ್ಬ ಹರಿ ದಿನಗಳಂದು ಸೇರಿ ಕೆಲ ಸಂದರ್ಭದಲ್ಲಿ ಮೌಖಿಕವಾಗಿ ಠಾಣೆಗೆ ರೌಡಿಶೀಟರ್ಗಳನ್ನು ಕರೆಸಿ ಪೊಲೀಸರು ಎಚ್ಚರಿಕೆ ನೀಡುತ್ತಿದ್ದರು. ಸದ್ಯ ಈ ವಿಧಾನಕ್ಕೆ ಬ್ರೇಕ್ ಬೀಳಲಿದೆ. ರೌಡಿಶೀಟರ್ಗಳನ್ನು ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಪ್ರಕ್ರಿಯೆ ನಿಗದಿ ಪಡಿಸಿ ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ ಆದೇಶ ಹೊರಡಿಸಿದೆ.

ಬೆಂಗಳೂರು, ಡಿಸೆಂಬರ್ 10: ಇನ್ಮುಂದೆ ರೌಡಿಶೀಟರ್ಗಳನ್ನು (Rowdysheeter) ಪೊಲೀಸ್ ಠಾಣೆಗೆ ಕರೆಸುವುದಕ್ಕೆ ಪ್ರಕ್ರಿಯೆ ನಿಗದಿ ಮಾಡಲಾಗಿದೆ. ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೊಲೀಸ್ ಠಾಣೆಗೆ (Police Station) ಕರೆಸಬಹುದು ಎಂದು ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ ಬುಧವಾರ ಆದೇಶ ಹೊರಡಿಸಿದೆ. ಆ ಮೂಲಕ ಮೌಖಿಕವಾಗಿ ಪೊಲೀಸ್ ಠಾಣೆಗೆ ರೌಡಿಶೀಟರ್ಗಳನ್ನು ಕರೆಸುವುದಕ್ಕೆ ಬ್ರೇಕ್ ಬಿದ್ದಂತಾಗಿದೆ.
ಹೈಕೋರ್ಟ್ ಮೆಟ್ಟಿಲೇರಿದ್ದ ರೌಡಿಶೀಟರ್ ಸೈಲೆಂಟ್ ಸುನೀಲ್
ಅಲೋಕ್ ಕುಮಾರ್ ಹೆಚ್ಚುವರಿ ಆಯುಕ್ತರಾಗಿದ್ದಾಗ ರೌಡಿಶೀಟರ್ ಸುನೀಲ್ ಕುಮಾರ್ ಅಲಿಯಾಸ್ ಸೈಲೆಂಟ್ ಸುನೀಲ್ ಕರೆಸಿ ಎಚ್ಚರಿಸಿದ್ದರು. ಅಲೋಕ್ ಕುಮಾರ್ ವಾರ್ನಿಂಗ್ ನೀಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹೀಗಾಗಿ ಸೈಲೆಂಟ್ ಸುನೀಲ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಇದೀಗ ಸುನೀಲ್ ಕುಮಾರ್ ರಿಟ್ ಅರ್ಜಿ ಸಂಬಂಧ ಆದೇಶ ಹೊರಡಿಸಲಾಗಿದೆ.
ಇದನ್ನೂ ಓದಿ: ಕೊನೆಗೂ ಅಲೋಕ್ ಕುಮಾರ್ಗೆ ಸಿಕ್ತು ಮುಂಬಡ್ತಿ: ಸರ್ಕಾರದ ವಿರುದ್ಧ ತೊಡೆತಟ್ಟಿ ಗೆದ್ದ IPS
ಎಸ್ಎಂಎಸ್ ಅಥವಾ ವಾಟ್ಸಾಪ್ ಮೂಲಕ ಪೊಲೀಸ್ ಠಾಣೆಗೆ ಕರೆಸಬಹುದು. ಠಾಣೆಗಳಿಗೆ ರೌಡಿಶೀಟರ್ಗಳು ತಮ್ಮ ಮೊಬೈಲ್ ನಂಬರ್ ನೀಡಬೇಕು. ಮೌಖಿಕವಾಗಿ ಕರೆಯುವ ಬದಲು SMS, ವಾಟ್ಸಾಪ್ ಸಂದೇಶ ನೀಡಬೇಕು. ಒಂದು ವೇಳೆ ಆಗಲೂ ಠಾಣೆಗೆ ಬರದಿದ್ದರೆ ರೌಡಿಶೀಟರ್ ಮನೆಗೆ ಪೊಲೀಸರು ತೆರಳಬಹುದು ಎಂದು ಪೀಠ ತಿಳಿಸಿದೆ.
ಇದನ್ನೂ ಓದಿ: ಅತ್ಯಾಚಾರ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣಗೆ ಮತ್ತೊಂದು ಶಾಕ್; ಜೀವಿತಾವಧಿ ಸೆರೆವಾಸ ಶಿಕ್ಷೆಗೆ ತಡೆ ನೀಡಲು ಹೈಕೋರ್ಟ್ ನಕಾರ
ಇನ್ನು ಅಪರಾಧ ಚಟುವಟಿಕೆಯಲ್ಲಿ ಭಾಗಿಯಾದರೆ ಈ ಆದೇಶದ ರಕ್ಷಣೆ ಸಿಗುವುದಿಲ್ಲ. ದಂಡಾಧಿಕಾರಿಯ ಅಧಿಕಾರವನ್ನು ಈ ಆದೇಶ ಕುಂಠಿತಗೊಳಿಸುವುದಿಲ್ಲ. ಸರ್ಕಾರ ಕಾನೂನು ರೂಪಿಸುವವರೆಗೆ ಈ ಪ್ರಕ್ರಿಯೆ ಪಾಲಿಸಲು ನ್ಯಾಯಮೂರ್ತಿ ಆರ್.ನಟರಾಜ್ ಅವರಿದ್ದ ಹೈಕೋರ್ಟ್ ಪೀಠ ಸೂಚನೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:24 pm, Wed, 10 December 25



