
ಬೆಂಗಳೂರು, ಜೂನ್ 16: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ನೋಂದಣಿಯ ಬಗ್ಗೆ ಪ್ರಶ್ನೆ ಮಾಡುತ್ತಲೇ ಬಂದಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಈ ಸಂಬಂಧ ಸರಸಂಘಚಾಲಕ ಮೋಹನ್ ಭಾಗವತ್ ಅವರಿಗೆ ಬಹಿರಂಗ ಪತ್ರವೊಂದನ್ನು ಬರೆದಿರೋದು ಚರ್ಚೆಗೆ ಗ್ರಾಸವಾಗಿತ್ತು. ಸಂಘಟನೆಯ ಕಾನೂನುಬದ್ಧ ಸ್ಥಾನಮಾನ ಮತ್ತು ಪಾರದರ್ಶಕತೆಯ ಬಗ್ಗೆ ಅವರು ಕೇಳಿದ್ದ ಪ್ರಶ್ನೆಗಳಿಗೆ ತಿರುಗೇಟು ನೀಡಿದ್ದ ಭಾಗವತ್, ಹಿಂದೂ ಧರ್ಮ ರಿಜಿಸ್ಟರ್ ಆಗಿದೆಯೇ? ಎಂದು ಪ್ರಶ್ನಿಸಿದ್ದರು. ಸರ್ಕಾರಿ ಅನುದಾನ ಪಡೆಯುವವರಿಗೆ ಮಾತ್ರ ನೋಂದಣಿ ಅಗತ್ಯವಿದೆ ಎಂದಿದ್ದರು. ಆ ಬೆನ್ನಲ್ಲೇ ಈಗ ಬಿಜೆಪಿ ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ ಕೂಡ ಬಹಿರಂಗ ಪತ್ರ ಬರೆಯುವ ಮೂಲಕ ಪ್ರಿಯಾಂಕ್ಗೆ ತಿರುಗೇಟು ನೀಡಿದ್ದಾರೆ.
ಮಾನ್ಯ ಶ್ರೀ ಪ್ರಿಯಾಂಕ್ ಖರ್ಗೆ ಅವರಿಗೆ,
ಗೃಹ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು,
ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.ವಿಷಯ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕುರಿತು ಶ್ರೀ ಮೋಹನ್ ಭಾಗವತ್ ಜೀ ಅವರಿಗೆ ನೀವು ಬರೆದ ಪತ್ರಕ್ಕೆ ಆರ್.ಎಸ್.ಎಸ್ ನ ಸ್ವಯಂಸೇವಕ ಆದ ನನ್ನ ಉತ್ತರ.
ಮಾನ್ಯರೇ,… pic.twitter.com/GLSmM5tfED
— Narayansa K Bhandage (@NarayansaKB51MP) June 15, 2026
ಕೇವಲ ಸೈದ್ಧಾಂತಿಕ ಭಿನ್ನಾಭಿಪ್ರಾಯದ ಆಧಾರದ ಮೇಲೆ ಒಂದು ಸಂಸ್ಥೆಯ ಅಸ್ತಿತ್ವವನ್ನೇ ಪ್ರಶ್ನಿಸುವುದು ಸೂಕ್ತವಲ್ಲ. ಕಾಂಗ್ರೆಸ್ ಪಕ್ಷವು ಏಕೆ ನಿರಂತರವಾಗಿ ಹಿಂದೂ ಸಂಘಟನೆಗಳನ್ನೇ ಗುರಿಯಾಗಿಸಿಕೊಂಡು ಪ್ರಶ್ನಿಸುತ್ತದೆ ಎಂಬ ಅನುಮಾನ ಮೂಡಿದೆ. ಕರ್ನಾಟಕದಲ್ಲಿ ನಡೆದ ಹುಬ್ಬಳ್ಳಿ ಪೊಲೀಸ್ ಠಾಣೆ ಹಿಂಸಾಚಾರ, ಬೆಂಗಳೂರಿನ ಕೆ.ಜಿ.ಹಳ್ಳಿ ಹಾಗೂ ಡಿ.ಜೆ.ಹಳ್ಳಿ ಗಲಭೆಗಳು, ಹಿಂಸಾತ್ಮಕ ಗುಂಪುಗಳಿಂದ ಸಾರ್ವಜನಿಕ ಆಸ್ತಿ ಹಾಗೂ ಪೊಲೀಸ್ ಸಿಬ್ಬಂದಿ ಮೇಲೆ ನಡೆದ ದಾಳಿಗಳು ರಾಜ್ಯದ ಜನತೆಯ ನೆನಪಿನಲ್ಲಿ ಇನ್ನೂ ಜೀವಂತವಾಗಿವೆ. ಹಿಂಸೆಗೆ ಒಳಗಾದವರಲ್ಲಿ OBC ಕಾಂಗ್ರೆಸ್ ಶಾಸಕರ ಮನೆಯೂ ಸೇರಿದೆ. ಇಂತಹ ಘಟನೆಗಳ ಕುರಿತು ಇದೇ ರೀತಿಯ ಬಹಿರಂಗ ಪತ್ರಗಳು, ಇದೇ ಮಟ್ಟದ ಆಕ್ರೋಶ ಮತ್ತು ಇದೇ ರೀತಿಯ ನೈತಿಕ ಪ್ರಶ್ನೆಗಳು ಏಕೆ ಉದ್ಭವಿಸಲಿಲ್ಲ ಎಂಬುದು ಜನರ ಪ್ರಶ್ನೆಯಾಗಿದೆ ಎಂದು ನಾರಾಯಣಸಾ ಭಾಂಡಗೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: RSS ವಿಚಾರವಾಗಿ ಮೋಹನ್ ಭಾಗವತ್ಗೆ ಪ್ರಿಯಾಂಕ್ ಖರ್ಗೆ ಪತ್ರ, ಈ 8 ಅಂಶಗಳಿಗೆ ವಿವರ ನೀಡುವಂತೆ ಆಗ್ರಹ
ಪಾರದರ್ಶಕತೆ ಮತ್ತು ಉತ್ತರದಾಯಿತ್ವದ ಬಗ್ಗೆ ನಿಮ್ಮ ಕಾಳಜಿ ನಿಜವಾಗಿಯೂ ಪ್ರಾಮಾಣಿಕವಾಗಿದ್ದರೆ ಅದೇ ಮಾನದಂಡವನ್ನು ಧಾರ್ಮಿಕ, ಸಾಮಾಜಿಕ, ರಾಜಕೀಯ, ಸೈದ್ಧಾಂತಿಕ ಹಿನ್ನೆಲೆಯ ಎಲ್ಲ ಸಂಘಟನೆಗಳಿಗೂ ಅನ್ವಯಿಸಬೇಕು. ರಾಜಕೀಯ ಪ್ರತೀಕಾರದ ಭಾವನೆಯಿಂದ ಒಂದು ನಿರ್ದಿಷ್ಟ ಸಂಘಟನೆಯನ್ನು ಮಾತ್ರ ಗುರಿಯಾಗಿಸಿ ಸಾರ್ವಜನಿಕವಾಗಿ ಅನುಮಾನ ವ್ಯಕ್ತಪಡಿಸುವುದು ಸಂವಿಧಾನಾತ್ಮಕ ಮೌಲ್ಯಗಳಿಗೆ ಅನುಗುಣವಾಗುವುದಿಲ್ಲ. ಕಾಂಗ್ರೆಸ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಬಂದಿದೆ. ಹಿಂದೂ ಸಂಘಟನೆಗಳನ್ನು ಗುರಿಯಾಗಿಸುವುದು ಮತ್ತು ಬಹುಸಂಖ್ಯಾತ ಸಮಾಜದ ಭಾವನೆಗಳನ್ನು ಪದೇಪದೇ ನೋಯಿಸುವ ರಾಜಕೀಯ ತಂತ್ರವು ಸಮಾಜದಲ್ಲಿ ವಿಭಜನೆಗೆ ಕಾರಣವಾಗಬಹುದು. ಭಾರತದ ಸಂವಿಧಾನವು ಓಲೈಕೆ ರಾಜಕಾರಣವನ್ನೂ ಬಯಸುವುದಿಲ್ಲ . ಪೂರ್ವಾಗ್ರಹವನ್ನೂ ಒಪ್ಪುವುದಿಲ್ಲ. ರಾಷ್ಟ್ರ ನಿರ್ಮಾಣಕ್ಕೆ ಸೇವೆ ಸಲ್ಲಿಸಿದ ಸಂಸ್ಥೆಗಳ ಕೊಡುಗೆಯನ್ನು ಗೌರವಿಸುತ್ತಾ, ಯಾವುದೇ ರೀತಿಯ ಅತಿರೇಕ, ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳ ವಿರುದ್ಧ ಪಕ್ಷಪಾತವಿಲ್ಲದೆ ಕ್ರಮ ಕೈಗೊಳ್ಳುವುದೇ ನಿಜವಾದ ಸಂವಿಧಾನಾತ್ಮಕ ಕರ್ತವ್ಯ ಎಂದವರು ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.