
ಬೆಂಗಳೂರು, ಆಗಸ್ಟ್ 05: ಅನಧಿಕೃತ ಬೈಕ್ ಟ್ಯಾಕ್ಸಿ ಮತ್ತು ಒನ್ ಸಿಟಿ ಒನ್ ರೇಟ್ ಜಾರಿಗೆ ತರವಂತೆ ಆಗ್ರಹಿಸಿ ಇಂದು ಬೆಳಿಗ್ಗೆ ಸಾರಿಗೆ ಇಲಾಖೆ ಮುಖ್ಯ ಕಚೇರಿಗೆ ಆಟೋ, ಕ್ಯಾಬ್ ಚಾಲಕರ ನಿರ್ಧಾರದ ಬೆನ್ನಲ್ಲೇ ಬೆಳ್ಳಂಬೆಳಗ್ಗೆ ಬೈಕ್ ಟ್ಯಾಕ್ಸಿ ವಿರುದ್ಧ ಆರ್ಟಿಒ ಅಧಿಕಾರಿಗಳು ಬೆಂಗಳೂರಿನಲ್ಲಿ (Bengaluru) ಕಾರ್ಯಾಚರಣೆ ನಡೆಸಿದ್ದಾರೆ. ಅಧಿಕಾರಿಗಳು ಮತ್ತು ಆಟೋ ಚಾಲಕರೇ ಪ್ರಯಾಣಿಕರ ರೀತಿ ರೈಡ್ ಬುಕ್ಕಿಂಗ್ ಮಾಡಿಕೊಂಡು ಸುಮಾರು 20 ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಮಾಹಿತಿ ನೀಡಿರುವ ರಾಜಾಜಿನಗರ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿ, ಶಿವಪ್ರಸಾದ್ ಮಲ್ಲಯ್ಯ, ಬೆಳಿಗ್ಗೆಯಿಂದಲೇ ಬೈಕ್ ಟ್ಯಾಕ್ಸಿ ವಿರುದ್ಧ ಕಾರ್ಯಾಚರಣೆ ಮಾಡ್ತಿದ್ದೇವೆ. ಸುಮಾರು ಇಪ್ಪತ್ತು ಬೈಕ್ ಟ್ಯಾಕ್ಸಿ ಗಳನ್ನು ಸೀಜ್ ಮಾಡಿದ್ದೇವೆ. ಕಾನೂನು ಪ್ರಕಾರ ಆರ್ಸಿ ಸಸ್ಪೆಂಡ್ ಮಾಡ್ತೀವಿ, ವೈಟ್ ಬೋರ್ಡ್ ವಾಹನವನ್ನು ಟ್ಯಾಕ್ಸಿಯಾಗಿ ಕನ್ವರ್ಟ್ ಮಾಡಿಕೊಂಡು ಬಳಕೆ ಮಾಡಲು ಬರೋದಿಲ್ಲ. ಹೀಗಾಗಿ ಸೆಕ್ಷನ್ 200ರ ಪ್ರಕಾರ ಈ ಬೈಕ್ಗಳ ಮೇಲೆ 10ರಿಂದ 15 ಸಾವಿರ ರೂಪಾಯಿ ದಂಡ ಹಾಕುತ್ತೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಇದು ನ್ಯಾಯನಾ? ನಮ್ಮ ಜೀವಕ್ಕೆ ಬೆಲೆ ಅನ್ನೋದೆ ಇಲ್ವಾ?: ರ್ಯಾಪಿಡೋ ಅಪಘಾತದಿಂದ ಆದ ನರಕಯಾತನೆ ಬಿಚ್ಚಿಟ್ಟ ಸಾನಿ ಕೃಷ್ಣ!
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳನ್ನು ಸೀಜ್ ಮಾಡುತ್ತಿರುವ ಆರ್ಟಿಒ ಕ್ರಮದ ವಿರುದ್ಧ ಬೈಕ್ ಚಾಲಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಯಾವುದೇ ಪೂರ್ವ ಸೂಚನೆ ಇಲ್ಲದೆ ಸೀಜ್ ಮಾಡಲಾಗುತ್ತಿದೆ ಎಂದು ಆರೋಪಿಸಿರುವ ಚಾಲಕರು, ಆ್ಯಪ್ಗಳ ಮೂಲಕ ಸೇವೆ ನೀಡುತ್ತಿರುವಾಗ ಇದು ಕಾನೂನುಬಾಹಿರ ಹೇಗೆ ಎಂದು ಪ್ರಶ್ನಿಸಿದ್ದಾರೆ. ಇದರಿಂದ ದೈನಂದಿನ ಜೀವನಕ್ಕೆ ತೊಂದರೆಯಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:52 pm, Wed, 5 August 26