ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು ದಾಖಲಾತಿಗೆ ತಟ್ಟಿದ ಸರ್ವರ್ ಪ್ರಾಬ್ಲಂ: ಪೋಷಕರು ಪರದಾಟ

ನೀಟ್ ಎಡವಟ್ಟಿನಿಂದ ಈ ವರ್ಷ ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜು ದಾಖಲಾತಿ ತಡವಾಗಿದೆ. ಕಳೆದ ಮೂರು ದಿನಗಳಿಂದ ಅಷ್ಟೇ ಕರ್ನಾಟಕ ಪರೀಕ್ಷೆ ಪ್ರಾಧಿಕಾರ ಸೀಟ್ ಹಂಚಿಕೆ ಮಾಡಿದ್ದು, ದಾಖಲಾತಿಗೆ ಮುಂದಾಗಿದೆ. ಆದ್ರೆ, ಕಡಿಮೆ ಅವಧಿ ಹಾಗೂ ಸರ್ವರ್ ಸಮಸ್ಯೆ ಪೋಷಕರ ಸಂಕಷ್ಟಕ್ಕೆ ಕಾರಣವಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ.

ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು ದಾಖಲಾತಿಗೆ ತಟ್ಟಿದ ಸರ್ವರ್ ಪ್ರಾಬ್ಲಂ:  ಪೋಷಕರು ಪರದಾಟ
ಇಂಜಿನಿಯರಿಂಗ್, ವೈದ್ಯಕೀಯ ಕಾಲೇಜು ದಾಖಲಾತಿಗೆ ತಟ್ಟಿದ ಸರ್ವರ್ ಪ್ರಾಬ್ಲಂ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on:Sep 04, 2024 | 10:53 PM

ಬೆಂಗಳೂರು, ಸೆ.04: ವೈದ್ಯಕೀಯ, ದಂತವೈದ್ಯಕೀಯ, ಆಯುಷ್, ಇಂಜಿನಿಯರಿಂಗ್, ಆರ್ಕಿಟೆಕ್ಚರ್, ಕೃಷಿ ವಿಜ್ಞಾನ, ವೆಟರಿನರಿ, ಬಿ-ಫಾರ್ಮ, ಬಿಎಸ್ಸಿ (ನರ್ಸಿಂಗ್), ಯೋಗ ಮತ್ತು ನ್ಯಾಚುರೋಪತಿ ಮುಂತಾದ ಕೋರ್ಸ್​ಗಳಿಗೆ ಕೆಇಎ ಸೀಟ್ ದಾಖಲಾತಿಗೆ ಮುಂದಾಗಿದೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ(KEA) ಇದೇ ಸೆ.5 ರೊಳಗೆ ದಾಖಲಾತಿಗೆ ಡೆಡ್ ಲೈನ್ ನೀಡಿದೆ. ಆದ್ರೆ, ಗಣೇಶ್ ಹಬ್ಬ ಹಾಗೂ ಕಡಿಮೆ ಅವಧಿ ಹಿನ್ನಲೆ ಬೆಳಗಾವಿ, ಕಲುಬುರಗಿ ಮತ್ತು ಬೀದರ್​ನಿಂದ ಬರುವ ಪೋಷಕರಿಗೆ ಪರದಾಟ ಶುರುವಾಗಿದೆ.

ಮಕ್ಕಳ ದಾಖಲಾತಿಗೆ ಪೋಷಕರ ಪರದಾಟ

ಹೌದು, ಬೆಂಗಳೂರಿಗೆ ಬಂದು ಚಲನ್ ಪಡೆದು ಬ್ಯಾಂಕಿಗೆ ಹಣ ಕಟ್ಟಿ, ಮತ್ತೆ ಕಾಲೇಜಿಗೆ ಹೋಗಿ ದಾಖಲಾತಿ ಪಡೆದುಕೊಳ್ಳುವುದು ಕಷ್ಟವಾಗಿದೆ. ಸೆಪ್ಟಂಬರ್ 5ರೊಳಗೆ ದಾಖಲಾತಿ ಪಡೆದುಕೊಳ್ಳುವುದು ಸವಾಲ್​ ಆಗಿದ್ದು, ಇದರ ಜೊತೆಗೆ ಚಲನ್ ಡೌನ್ ಲೋಡ್ ಹಾಗೂ ಕೆಇಎ ನಲ್ಲಿ ಸರ್ವರ್ ಕಾಟವೂ ಕೂಡ ಶುರುವಾಗಿದೆ. ಇದರಿಂದ ಮಕ್ಕಳ ದಾಖಲಾತಿಗೆ ಪೋಷಕರು ಪರದಾಡುವಂತಾಗಿದೆ.

ಇದನ್ನೂ ಓದಿ:ನೀಟ್ ಪರೀಕ್ಷೆ ವಿವಾದ; ಮೆಡಿಕಲ್, ಎಂಜಿನಿಯರಿಂಗ್ ಸೀಟ್​ ಗೊಂದಲ, ಈ ವಾರದಲ್ಲಿ ಕೌನ್ಸೆಲಿಂಗ್ ದಿನಾಂಕ ಪ್ರಕಟ

ಒಂದು ಕಡೆ ಸರ್ವರ್ ಸಮಸ್ಯೆ, ಮತ್ತೊಂದೆಡೆ ಕಡಿಮೆ ಅವಧಿ

ಈಗಾಗಲೇ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಯುಜಿ ನೀಟ್ ಯುಜಿ ಸಿಇಟಿ ಮೊದಲ ಸುತ್ತಿನ ಅಂತಿಮ ಸೀಟು ಹಂಚಿಕೆ ಫಲಿತಾಂಶ ಪ್ರಕಟ ಮಾಡಿದೆ. ವೈದ್ಯಕೀಯ, ದಂತವೈದ್ಯಕೀಯ, ಆಯುಷ್, ಎಂಜಿನಿಯರಿಂಗ್ ನ್ಯಾಚುರೋಪತಿ ಮುಂತಾದ ಕೋರ್ಸ್​ಗಳ ಅಭ್ಯರ್ಥಿಗಳಿಗೆ ನಾಲ್ಕು ಆಯ್ಕೆ​ಗಳಲ್ಲಿ ತಮಗೆ ಸರಿ ಎನಿಸುವ ಯಾವುದಾದರೂ ಒಂದನ್ನು ಆಯ್ಕೆ ಮಾಡಿ ಮೊದಲ ಆಯ್ಕೆಗೆ ಶುಲ್ಕ ಕಟ್ಟುವಂತೆ ಹೇಳಿದೆ. ಅಭ್ಯರ್ಥಿಗಳು ಸೆಪ್ಟೆಂಬರ್ 5ರ ಸಂಜೆ 5:30ರ ಒಳಗೆ ಶುಲ್ಕ ಪಾವತಿಸಬೇಕು. ಇಲ್ಲವಾದ್ರೆ ಕಾಲೇಜು ದಾಖಲಾತಿ ಇಲ್ಲ ಅಂತಿದೆ. ಇದರಿಂದ ಪೋಷಕರಿಗೆ ಟ್ರಬಲ್ ಶುರುವಾಗಿದೆ.

ಕೆಲ ದಿನಗಳ ಅವಧಿ ವಿಸ್ತರಿಸುವಂತೆ ಒತ್ತಾಯ

ಒಂದು ಕಡೆ ಸರ್ವರ್ ಸಮಸ್ಯೆ ಮತ್ತೊಂದು ಕಡೆ ಕಡಿಮೆ ಅವಧಿ ಡೆಡ್ ಲೈನ್ ಪೋಷಕರ ಸಂಕಷ್ಟಕ್ಕೆ ಕಾರಣವಾಗಿದ್ದು, ದಾಖಲಾತಿಗೆ ಕೆಲ ದಿನಗಳ ಅವಧಿ ವಿಸ್ತರಿಸುವಂತೆ ಒತ್ತಾಯ ಕೇಳಿ ಬಂದಿದೆ. ಇನ್ನು ಕೆಇಎ ಮಾತ್ರ ಇದೇ ಮೊದಲ ಬಾರಿಗೆ ಇಂಟರ್ ನೆಟ್ ಬ್ಯಾಂಕಿಂಗ್, ಡೆಬಿಟ್, ಕೆಡಿಟ್ ಕಾರ್ಡ್ ಮೂಲಕ ಶುಲ್ಕ ಪಾವತಿಸುವುದಕ್ಕೂ ಅವಕಾಶ ಕಲ್ಪಿಸಿದ್ದರಿಂದ ದಾಖಲಾತಿ ಪ್ರಕ್ರಿಯೆ ಸರಳವಾಗಿದೆ. ಅನೇಕರು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಪಾವತಿ‌ ಮಾಡಿದ್ದಾರೆ. ರಜಾ ದಿನಗಳಲ್ಲಿಯೂ ದಾಖಲಾತಿಗೆ ಅವಕಾಶ ನೀಡಲಾಗಿದೆ. ಸರ್ವರ್ ಸಮಸ್ಯೆ ಸರಿ ಮಾಡಲಾಗಿದೆ. ಹೀಗಾಗಿ ಮತ್ತೆ ಅವಧಿ ವಿಸ್ತರ್ಣೆ ಕಷ್ಟ ಅಂತಿದ್ದಾರೆ.

ಒಟ್ಟಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದೇ ಮೊದಲ ಬಾರಿಗೆ ಆನ್ ಲೈನ್ ಪಾವತಿ ಜಾರಿ ಮಾಡಿ ದಾಖಲಾತಿ ಸುಲಭ ಮಾಡಿದೆ. ಆದ್ರೆ, ಕೆಲ ಪೋಷಕರಿಗೆ ಸರ್ವರ್ ಕೈ ಕೊಡುತ್ತಿರುವುದು ಸಮಸ್ಯೆಗೆ ಕಾರಣವಾಗಿದ್ದು, ಕೆಇಎ ಈ ಕಡೆ ಗಮನ ಹರಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:20 pm, Wed, 4 September 24