ರಾಜ್ಯಕ್ಕೆ ಅಧಿಕೃತ ರಾಜ್ಯ ಧ್ವಜ ಬೇಕು; ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ, ಒಪ್ಪಿಗೆ ಕೊಡಬೇಕು -ಸಚಿವ ಪರಮೇಶ್ವರ್

ಕನ್ನಡ ಬಾವುಟಕ್ಕೆ ಕೇಂದ್ರದಿಂದ ಅನುಮತಿ ನೀಡದ ವಿಚಾರ ಸಂಬಂಧ ಮಾತನಾಡಿದ ಸಚಿವ ಪರಮೇಶ್ವರ್, ನಿನ್ನೆ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ರಾಜ್ಯಕ್ಕೆ ಅಧಿಕೃತ ರಾಜ್ಯ ಬಾವುಟ ಬೇಕು. ಬಾವುಟಕ್ಕೆ ಅನುಮತಿ ಸಿಕ್ಕರೆ ಬಾವುಟಕ್ಕೂ ಗೌರವ ಸಿಗಲಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅದಕ್ಕೆ ಕೇಂದ್ರ ಒಪ್ಪಿಗೆ ಕೊಡಬೇಕು. ಕೇಂದ್ರದ ಮೇಲೆ ಒತ್ತಡ ಹಾಕ್ತೀವಿ ಎಂದರು.

Follow us
| Updated By: ಆಯೇಷಾ ಬಾನು

Updated on:Nov 02, 2023 | 3:06 PM

ಬೆಂಗಳೂರು, ನ.02: ಕನ್ನಡ ರಾಜ್ಯೋತ್ಸವ (Kannada Rajyotsava) ಬೆನ್ನಲ್ಲೆ ಕನ್ನಡ ಧ್ವಜ ಮಾನ್ಯತೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಕನ್ನಡಕ್ಕೊಂದು ನಾಡಗೀತೆಯಂತೆ ನಾಡಧ್ವಜ ಇರಬೇಕೆಂಬುದು ಆರೂವರೆ ಕೋಟಿ ಕನ್ನಡಿಗರ ಒಕ್ಕೊರಲ ಒತ್ತಾಯ. ಕನ್ನಡಿಗರ ಎದೆಯ ದನಿಗೆ ಓಗೊಟ್ಟು ನಾಡ ದ್ವಜವೊಂದನ್ನು ವಿನ್ಯಾಸಗೊಳಿಸಿ, ಮನ್ನಣೆಗಾಗಿ ಐದು ವರ್ಷಗಳ ಹಿಂದೆಯೇ ನಾವು ಕೇಂದ್ರ ಸರ್ಕಾರಕ್ಕೆ ಕಳಿಸಿದ್ದೆವು. ಆದರೆ ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಈ ಬೇಡಿಕೆಯನ್ನು ತಿರಸ್ಕರಿಸಿ ಕನ್ನಡ-ಕನ್ನಡಿಗ-ಕರ್ನಾಟಕಕ್ಕೆ ಅನ್ಯಾಯ ಎಸಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಟ್ವೀಟ್ ಮಾಡಿ ಆಕ್ರೋಶ ಹೊರ ಹಾಕಿದ್ದರು. ಸದ್ಯ ಈಗ ಈ ಬಗ್ಗೆ ಗೃಹಸಚಿವ ಪರಮೇಶ್ವರ್ (Dr G Parameshwar) ಅವರು ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯಕ್ಕೆ ಅಧಿಕೃತ ರಾಜ್ಯ ಧ್ವಜ ಬೇಕು. ‘ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ, ಒಪ್ಪಿಗೆ ಕೊಡಬೇಕು ಎಂದರು.

ಕನ್ನಡ ಬಾವುಟಕ್ಕೆ ಕೇಂದ್ರದಿಂದ ಅನುಮತಿ ನೀಡದ ವಿಚಾರ ಸಂಬಂಧ ಮಾತನಾಡಿದ ಸಚಿವ ಪರಮೇಶ್ವರ್, ನಿನ್ನೆ ಈ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ. ರಾಜ್ಯಕ್ಕೆ ಅಧಿಕೃತ ರಾಜ್ಯ ಬಾವುಟ ಬೇಕು. ಬಾವುಟಕ್ಕೆ ಅನುಮತಿ ಸಿಕ್ಕರೆ ಬಾವುಟಕ್ಕೂ ಗೌರವ ಸಿಗಲಿದೆ. ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಅದಕ್ಕೆ ಕೇಂದ್ರ ಒಪ್ಪಿಗೆ ಕೊಡಬೇಕು. ಕೇಂದ್ರದ ಮೇಲೆ ಒತ್ತಡ ಹಾಕ್ತೀವಿ. ಒತ್ತಡ ಅಂದರೆ ತಲೆ ಮೇಲೆ ಕಲ್ಲು ಇಡೋಕೆ ಆಗೊಲ್ಲ. ಇನ್ನೊಂದು ಪತ್ರ ಬರೆದು ಆಗ್ರಹ ಮಾಡಬಹುದು ಅಷ್ಟೆ ಎಂದರು.

ಇನ್ನು ಇದೇ ವೇಳೆ, ಸುರ್ಜೇವಾಲ ಕಲೆಕ್ಷನ್​ಗೆ ಬಂದಿದ್ದಾರೆ ಎಂದು ಬಿಜೆಪಿ ಟೀಕೆ ವಿಚಾರ ಸಂಬಂಧ ಡಾ.ಜಿ.ಪರಮೇಶ್ವರ್​ ವಾಗ್ದಾಳಿ ಮಾಡಿದ್ದಾರೆ. ಕಲೆಕ್ಷನ್ ಅಂದ್ರೆ ಏನು ಹೆಗಲ ಮೇಲೆ ಬ್ಯಾಗ್ ಎತ್ಕೊಂಡು ಹೋಗ್ತಾರಾ? ಬಿಜೆಪಿ ಅಧಿಕಾರದಲ್ಲಿದ್ದಾಗ ಕಾರ್ಯದರ್ಶಿಗಳು ಅದನ್ನೇ ಮಾಡಿದ್ರಾ? ಬಿಜೆಪಿ ಪ್ರಧಾನ ಕಾರ್ಯದರ್ಶಿಗಳು ಪದೇಪದೆ ರಾಜ್ಯಕ್ಕೆ ಬರುತ್ತಿದ್ದರು. ಅವರೂ ಕಲೆಕ್ಷನ್​ ಮಾಡುತ್ತಿದ್ದರು ಅಂತಾ ನಾವು ಹೇಳಬೇಕಾಗುತ್ತದೆ ಎಂದರು.

ಇದನ್ನೂ ಓದಿ: ಕನ್ನಡ ಬಾವುಟದ ಹಳದಿ, ಕೆಂಪು ಬಣ್ಣ ಏನನ್ನು ಸಂಕೇತಿಸುತ್ತದೆ? ಹಿನ್ನೆಲೆಯೇನು?

ಸರ್ಕಾರದ ಪರ ಶಾಸಕರು ಮಾತನಾಡಬಹುದು-ಡಾ.ಪರಮೇಶ್ವರ್​

ಶಾಸಕರು ಬಹಿರಂಗವಾಗಿ ಮಾತಾಡಬಾರದು ಅನ್ನೋ ಹೈಕಮಾಂಡ್ ಸಂದೇಶ ವಿಚಾರಕ್ಕೆ ಉತ್ತರಿಸಿದ ಸಚಿವರು, ಶಾಸಕರಿಗೆ ಎಚ್ಚರಿಕೆ ಕೊಟ್ಟಿದ್ದಾರೆ ಅಂತ ಮಾಧ್ಯಮಗಳಲ್ಲಿ ನೋಡಿದ್ದೇನೆ. ಸರ್ಕಾರದ ಪರ ಮಾತಾಡೋರು ಮಾತಾಡಬಹುದು. ಸರ್ಕಾರದ ವಿರುದ್ಧ, ಗೊಂದಲದ ಹೇಳಿಕೆ ಕೊಡಬಾರದು ಅಂತ ಹೇಳಿದ್ದಾರೆ. ಮಾಧ್ಯಮಗಳಲ್ಲಿ ನಾನು ಇದನ್ನ ನೋಡಿದ್ದೇನೆ. ನನಗೇನು ಅ ಬಗ್ಗೆ ಗೊತ್ತಿಲ್ಲ. ನಮ್ಮನ್ನ ಯಾರನ್ನು ಅವರು ಕರೆಸಿ ಮಾತಾಡಿಲ್ಲ. ಸುರ್ಜೇವಾಲ, ಕೆ.ಸಿ.ವೇಣುಗೋಪಾಲ್​ ನಮ್ಮನ್ನು ಭೇಟಿ ಮಾಡಿಲ್ಲ. ಅಧ್ಯಕ್ಷರು ಮತ್ತು ಸಿಎಂರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಯಾವುದರ ಬಗ್ಗೆ ನಾಯಕರು ಚರ್ಚೆ ಮಾಡಿದ್ದಾರೋ ನನಗೆ ಗೊತ್ತಿಲ್ಲ ಎಂದರು.

17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ

ಬರ ಶುರುವಾಗಿ 3 ತಿಂಗಳು ಆಯ್ತು, ಮಳೆ ನಿಂತು 3 ತಿಂಗಳಾಯ್ತು. ಇಷ್ಟುದಿನ ಬಿಜೆಪಿಯವರು ಏನು ಮಾಡುತ್ತಿದ್ದರು ಎಂದು ಬೆಂಗಳೂರಿನಲ್ಲಿ ಬಿಜೆಪಿ ವಿರುದ್ಧ ಸಚಿವ ಡಾ.ಪರಮೇಶ್ವರ್ ವಾಗ್ದಾಳಿ ನಡೆಸಿದರು. ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳು ಬರ ಎಂದು ಘೋಷಿಸಿದ್ದೇವೆ. 17 ಸಾವಿರ ಕೋಟಿ ಬರ ಪರಿಹಾರಕ್ಕೆ ಕೇಂದ್ರಕ್ಕೆ ಮನವಿ ಮಾಡಿದ್ದೇವೆ. ಈವರೆಗೂ ಕೇಂದ್ರ ಸರ್ಕಾರ 1 ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಬಿಜೆಪಿ ನಾಯಕರು ಕೇಂದ್ರದ ಬಳಿ ಮಾತನಾಡಿ ಅನುದಾನ ಕೊಡಿಸಲಿ. ರಾಜ್ಯದ ಹಿತದೃಷ್ಟಿಯಿಂದ ಕೇಂದ್ರ ವಿಶೇಷ ಅನುದಾನ ಕೊಡಬೇಕು. ದೆಹಲಿಗೆ ಸರ್ವಪಕ್ಷ ಕರೆದೊಯ್ಯುವ ಬಗ್ಗೆ ಸಿಎಂ ನಿರ್ಧಾರ ಮಾಡ್ತಾರೆ ಎಂದರು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:47 pm, Thu, 2 November 23