
ಬೆಂಗಳೂರು, ಆಗಸ್ಟ್ 14: ಆರ್ಎಸ್ಎಸ್ (RSS) ಅಖಿಲ ಭಾರತ ಪ್ರಚಾರ ಪ್ರಮುಖ ಸುನಿಲ್ ಅಂಬೇಕರ್, ಭಾರತವು ಕೇವಲ ಆಧುನಿಕ ರಾಷ್ಟ್ರವಲ್ಲ; ಇದು ಸಾವಿರಾರು ವರ್ಷಗಳ ಸಾಂಸ್ಕೃತಿಕ ಪರಂಪರೆ ಹಾಗೂ ಸಾಮೂಹಿಕ ಕಲ್ಯಾಣದ ತತ್ತ್ವದ ಮೇಲೆ ನಿಂತಿರುವ ಜೀವಂತ ನಾಗರಿಕತೆಯಾಗಿದೆ ಎಂದು ತಮ್ಮ ಲೇಖನವೊಂದರಲ್ಲಿ ಬರೆದುಕೊಂಡಿದ್ದಾರೆ. ಆರ್ಎಸ್ಎಸ್ ತನ್ನ ಶತಮಾನೋತ್ಸವದ ಸಂದರ್ಭದಲ್ಲಿ ಐದು ಪ್ರಮುಖ ತತ್ತ್ವಗಳ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಸುನಿಲ್ ಅಂಬೇಕರ್ ಉಲ್ಲೇಖಿಸಿದ್ದಾರೆ.
ರಾಷ್ಟ್ರದ ಉಜ್ವಲ ಭವಿಷ್ಯ ನಿರ್ಮಾಣವು ಸಮಾಜದ ಪ್ರತಿಯೊಬ್ಬ ನಾಗರಿಕನ ಸಾಮೂಹಿಕ ಜವಾಬ್ದಾರಿಯಾಗಿದೆ ಎಂದು ಸುನಿಲ್ ಅಂಬೇಕರ್ ಪ್ರತಿಪಾದಿಸುತ್ತಾರೆ. ಕೇವಲ ರಾಜಕೀಯ ಪಲ್ಲಟ ಅಥವಾ ಆರ್ಥಿಕ ಬೆಳವಣಿಗೆಯಿಂದ ರಾಷ್ಟ್ರ ನಿರ್ಮಾಣ ಸಾಧ್ಯವಿಲ್ಲ; ಉನ್ನತ ನೈತಿಕ ಮೌಲ್ಯ, ಸ್ವಾರ್ಥರಹಿತ ಸೇವೆ ಮತ್ತು ಶಿಸ್ತಿನಿಂದ ಮಾತ್ರ ಬಲವಾದ ಸಮಾಜ ಕಟ್ಟಲು ಸಾಧ್ಯ ಎಂದು ಅವರು ಹೇಳುತ್ತಾರೆ. ಅಲ್ಲದೆ ಪ್ರತಿಯೊಬ್ಬರೂ ‘ಭಾರತ ಮಾತೆ’ಯ ಪುತ್ರರೆಂಬ ಭಾವನೆಯಿಂದ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂಬುದು ಸುನಿಲ್ ಅವರ ಅಭಿಪ್ರಾಯವಾಗಿದೆ.
ಸಮಾಜವನ್ನು ಭಾಷೆ, ಪ್ರದೇಶ, ಜಾತಿ ಅಥವಾ ರಾಜಕೀಯ ಸಿದ್ಧಾಂತಗಳ ಆಧಾರದಲ್ಲಿ ವಿಭಜಿಸುವ ‘ಗುರುತಿನ ರಾಜಕಾರಣ’ (Identity Politics) ರಾಷ್ಟ್ರೀಯ ಏಕತೆಗೆ ದೊಡ್ಡ ಸವಾಲಾಗಿದೆ ಎಂದು ಸುನಿಲ್ ಅಂಬೇಕರ್ ಎಚ್ಚರಿಸಿದ್ದಾರೆ. ನಮ್ಮಲ್ಲಿರುವ ವಿವಿಧ ಭಾಷೆಗಳು, ಬೌದ್ಧ, ಜೈನ ಹಾಗೂ ಸಿಖ್ ಪರಂಪರೆಗಳು ಒಂದಕ್ಕೊಂದು ವಿರೋಧಿಯಲ್ಲ; ಬದಲಾಗಿ ಇವೆಲ್ಲವೂ ಭಾರತೀಯ ಸಾಂಸ್ಕೃತಿಕ ಮೌಲ್ಯಗಳನ್ನು ಶ್ರೀಮಂತಗೊಳಿಸುವ ಸಹೋದರಿ ಪರಂಪರೆಗಳಾಗಿವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
1. ಸಾಮಾಜಿಕ ಸಾಮರಸ್ಯ: ಸಮಾಜದಲ್ಲಿ ಸಮಾನತೆ ಮತ್ತು ಒಗ್ಗಟ್ಟು ಮೂಡಿಸುವುದು.
2. ಪರಿಸರ ಸ್ನೇಹಿ ಜೀವನ: ಪ್ರಕೃತಿಯನ್ನು ರಕ್ಷಿಸುವ ಜೀವನಶೈಲಿ ಅಳವಡಿಕೆ.
3. ಕುಟುಂಬ ಪ್ರಬೋಧನ: ಕುಟುಂಬ ವ್ಯವಸ್ಥೆ ಹಾಗೂ ನೈತಿಕ ಮೌಲ್ಯಗಳ ಬಲವರ್ಧನೆ.
4. ಸ್ವದೇಶಿ ಮತ್ತು ಸ್ವಾವಲಂಬನೆ: ಸ್ಥಳೀಯ ಉತ್ಪನ್ನ ಹಾಗೂ ಚಿಂತನೆಗಳಿಗೆ ಆದ್ಯತೆ.
5. ನಾಗರಿಕ ಕರ್ತವ್ಯ: ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಮೂಲಭೂತ ಕರ್ತವ್ಯಗಳನ್ನು ನಿಷ್ಠೆಯಿಂದ ಪಾಲಿಸುವುದು.
ಅಂತಿಮವಾಗಿ, ‘ಶಾಖಾ’ಗಳ ಮೂಲಕ ವ್ಯಕ್ತಿ ನಿರ್ಮಾಣ ಮಾಡುವುದು ಹಾಗೂ ಯುವಜನತೆಯ ಶಕ್ತಿಯನ್ನು ರಾಷ್ಟ್ರ ಕಾರ್ಯಕ್ಕೆ ಜೋಡಿಸುವುದು ಭಾರತವನ್ನು ಸಶಕ್ತಗೊಳಿಸಲು ಅತ್ಯಗತ್ಯ ಎಂದು ಸುನಿಲ್ ಅಂಬೇಕರ್ ತಮ್ಮ ಲೇಖನದಲ್ಲಿ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:11 pm, Fri, 14 August 26