ಮಲ್ಲೇಶ್ವರ ಬಿಜೆಪಿ ಕಚೇರಿ ಮೇಲೆ ಉಗ್ರರ ಕಣ್ಣು; ಭದ್ರತೆ ಹೆಚ್ಚಿಸಿದ ಗೃಹ ಇಲಾಖೆ

| Updated By: ಆಯೇಷಾ ಬಾನು

Updated on: Sep 11, 2024 | 6:56 AM

ಎನ್‌ಐಎ ಚಾರ್ಜ್‌ಶೀಟ್‌ನಲ್ಲಿ ಬಯಲಾದ ಸ್ಫೋಟಕ ಸತ್ಯ ಈಗ ಬಿಜೆಪಿ ಪಾಳಯಕ್ಕೆ ಆತಂಕ ಹುಟ್ಟಿಸಿದೆ. ಬಿಜೆಪಿ ಕಚೇರಿ ಮೇಲೆ ಮತ್ತೊಂದು ಬಾಂಬ್ ದಾಳಿ ಸಂಚು ಸರ್ಕಾರದ ವೈಫಲ್ಯ ಎಂದು ಕೇಸರಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ಮಲ್ಲೇಶ್ವರ ಬಿಜೆಪಿ ಕಚೇರಿಗೆ ಭದ್ರತೆ ಇನ್ನಷ್ಟು ಹೆಚ್ಚಿಸಲಾಗಿದೆ.

ಮಲ್ಲೇಶ್ವರ ಬಿಜೆಪಿ ಕಚೇರಿ ಮೇಲೆ ಉಗ್ರರ ಕಣ್ಣು; ಭದ್ರತೆ ಹೆಚ್ಚಿಸಿದ ಗೃಹ ಇಲಾಖೆ
ಮಲ್ಲೇಶ್ವರ ಬಿಜೆಪಿ ಕಚೇರಿ ಮೇಲೆ ಉಗ್ರರ ಕಣ್ಣು
Follow us on

ಬೆಂಗಳೂರು, ಸೆ.11: ರಾಮೇಶ್ವರಂ ಕೆಫ್ ಬ್ಲಾಸ್ಟ್ (Rameshwaram Cafe Bomb Blast) ಪ್ರಕರಣ ಬೆಂಗಳೂರಿಗರನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಗರಂ ಗರಂ ಮಸಾಲೆ ದೋಸೆ ಸವಿಯಲು ಬಂದವರನ್ನು ನಡುಗುವಂತೆ ಮಾಡಿದ್ದ ಉಗ್ರರು ಕೆಫೆಯನ್ನೇ ಬ್ಲಾಸ್ಟ್ ಮಾಡಲು ಹೊರಟಿದ್ದರು. ಉಗ್ರರ ಬೆನ್ನು ಬಿದ್ದು ಮಖಾಡೆ ಮಲಗಿಸಿದ ಎನ್ಐಎ (NIA) ಹಾಗೂ ರಾಜ್ಯ ಪೊಲೀಸರಿಗೆ (Karnataka Police) ಬೆಚ್ಚಿ ಬೀಳಿಸುವಂತ ಮಾಹಿತಿ ಹೊರ ಬಂದಿದೆ. ಎನ್ಐಎ ಚಾರ್ಜ್ ಶೀಟ್ ನೋಡಿ ಮಲ್ಲೇಶ್ವರಂನ ಬಿಜೆಪಿ ನಾಯಕರೇ ನಡುಗಿ ಹೋಗಿದ್ದಾರೆ.

ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಎನ್ಐಎ ಸಲ್ಲಿಸಿರುವ ಚಾರ್ಜ್‌ಶೀಟ್ ನಲ್ಲಿ ರಾಜ್ಯ ಬಿಜೆಪಿ ಕಚೇರಿ ಮೇಲೂ ಉಗ್ರರಿಂದ ವಿಫಲ ಬಾಂಬ್ ದಾಳಿ ಯತ್ನ ನಡೆದಿತ್ತು ಅನ್ನೋ ಮಾಹಿತಿ ಬಯಲಾಗಿದೆ. ಈ ಬೆನ್ನಲ್ಲೇ ಗೃಹ ಇಲಾಖೆ ಸೂಚನೆ ಮೇರೆಗೆ ಮಲ್ಲೇಶ್ವರ ಬಿಜೆಪಿ ಕಚೇರಿಗೆ ಭದ್ರತೆ ಇನ್ನಷ್ಟು ಹೆಚ್ಚಳ ಮಾಡಲಾಗಿದೆ. ಮೆಟಲ್ ಡಿಟೆಕ್ಟರ್, ಬಿಗಿ ತಪಾಸಣೆ, ಹೆಚ್ಚುವರಿಯಾಗಿ ಪೊಲೀಸರ ನಿಯೋಜನೆ ಮಾಡಲಾಗಿದೆ. ಬಿಜೆಪಿ ಕಚೇರಿ ಪ್ರವೇಶಿಸುವವರು ಈ ಮೆಟಲ್ ಡಿಟೆಕ್ಟರ್ ಮೂಲಕವೇ ಪ್ರವೇಶಿಸುವಂತೆ ಸೂಚಿಸಲಾಗಿದೆ. ಜೊತೆಗೆ ನಿತ್ಯ ಮಲ್ಲೇಶ್ವರ ಪೊಲೀಸ್ ಇನ್ಸ್ಪೆಕ್ಟರ್, ಸಬ್ ಇನ್ಸ್ಪೆಕ್ಟರ್ ನಿಗಾ ವಹಿಸುವಂತೆಯೂ ಸೂಚಿಸಲಾಗಿದೆ.

ಇನ್ನು, ರಾಜ್ಯ ಬಿಜೆಪಿ ಕಚೇರಿ‌ಯನ್ನೂ ಉಗ್ರರು ಟಾರ್ಗೆಟ್ ಮಾಡಿದ್ರು ಅನ್ನೋ ವಿಚಾರ ಈಗ ಆತಂಕ ಸೃಷ್ಟಿಸಿದೆ. ಜನವರಿ 22 ರಂದು ಇಡೀ ದೇಶ ಅಯೋಧ್ಯೃ ಶ್ರೀರಾಮ ಮಂದಿರ ಪ್ರಾಣ ಪ್ರತಿಷ್ಠೆ ಸಂಭ್ರಮದಲ್ಲಿ ಮುಳುಗಿ ಹೋಗಿತ್ತು. ಕೆಫೆ ಬ್ಲಾಸ್ಡ್ ಆರೋಪಿಗಳು ಹಾಕಿದ್ದ ಸ್ಕೆಚ್ ಪ್ರಕಾರ ಅದೇ ಅಯೋಧ್ಯೆ ಪ್ರಾಣ ಪ್ರತಿಷ್ಠೆಯ ದಿನವೇ ಮಲ್ಲೇಶ್ವರಂ ಬಿಜೆಪಿ ಕಚೇರಿಗೆ ಬಾಂಬ್ ಇಡಲು ಸಂಚು ರೂಪಿಸಲಾಗಿತ್ತು. ಬಿಜೆಪಿ ಕಚೇರಿಗೆ ಬಾಂಬ್ ಇಡುವ ಯತ್ನ ಫೇಲ್ ಆಗಿದ್ದೇ ತಡ ಆರೋಪಿಗಳು ರಾಮೇಶ್ವರಂ ಕೆಫೆಗೆ ಸ್ಕೆಚ್ ಹಾಕಿದ್ದರು.

ಇದನ್ನೂ ಓದಿ: ತಮಿಳುನಾಡಿನವರಿಂದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್​: ಶೋಭಾಗೆ ಹೈಕೋರ್ಟ್​ ಪ್ರಶ್ನೆ

2013ರಲ್ಲಿ ಬಿಜೆಪಿ ಆವರಣದಲ್ಲೇ ಸಿಡಿದಿತ್ತು ಬಾಂಬ್

ಬಿಜೆಪಿ ನಾಯಕರು ಹಾಗೂ ಬಿಜೆಪಿ ಕಚೇರಿ ಮೇಲೆ ಉಗ್ರರ ಕಣ್ಣು ಬಿದ್ದಿರುವುದು ಇದೇ ಮೊದಲಲ್ಲ. 2013ರಲ್ಲಿಯೇ ಬಿಜೆಪಿ ಕಚೇರಿಯ ನೂರು ಮೀಟರ್ ಅಂತರದಲ್ಲಿ ಬಾಂಬ್ ಸ್ಪೋಟಗೊಂಡಿತ್ತು. ಕಡಿಮೆ ತೀವ್ರತೆಯ ಬಾಂಬ್ ಸ್ಫೋಟದಲ್ಲಿ 12 ಪೊಲೀಸ್ ಸಿಬ್ಬಂದಿ ಸೇರಿದಂತೆ 17 ಜನರು ಗಾಯಗೊಂಡಿದ್ದರು. ಮಲ್ಲೇಶ್ವರಂನಲ್ಲಿರುವ ಭಾರತೀಯ ಜನತಾ ಪಕ್ಷದ ಕೇಂದ್ರ ಕಚೇರಿಯಿಂದ ಸುಮಾರು 100 ಮೀಟರ್ ದೂರದಲ್ಲಿ ಸ್ಫೋಟ ಸಂಭವಿಸಿತ್ತು. 24 ಗಂಟೆಗಳ ಚುನಾವಣಾ ಕರ್ತವ್ಯಕ್ಕೆ ನಿಂತಿದ್ದ ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ವ್ಯಾನ್‌ನಲ್ಲಿ ಪೊಲೀಸ್ ಸಿಬ್ಬಂದಿ ಇದ್ದರು. ಎರಡು ಕಾರುಗಳು ಮತ್ತು ಎರಡು ದ್ವಿಚಕ್ರ ವಾಹನಗಳು ಸುಟ್ಟು ಹೋಗಿದ್ದರೆ, ಜನನಿಬಿಡ ಅರೆ ವಸತಿ ಪ್ರದೇಶವನ್ನು ಬೆಚ್ಚಿಬೀಳಿಸಿದ ಸ್ಫೋಟದಲ್ಲಿ ಪೊಲೀಸ್ ವ್ಯಾನ್ ಹಾನಿಗೊಳಗಾಗಿತ್ತು. 2013ರ ಚುನಾವಣೆ ಸಂದರ್ಭದಲ್ಲಿಯೇ ಆತಂಕಕ್ಕೆ ಒಳಗಾಗಿದ್ದ ಬಿಜೆಪಿಗೆ ಈಗ ಮತ್ತೆ ಆತಂಕ ಎದುರಾಗಿದೆ.

ಈ ವಿಷಯ ಈಗ ಬಿಜೆಪಿ ನಾಯಕರನ್ನೂ ಕೆರಳಿಸಿದೆ. ಇದು ರಾಜ್ಯ ಗೃಹ ಇಲಾಖೆ ಹಾಗೂ ಗುಪ್ತಚರ ಇಲಾಖೆಯ ಅತೀ ದೊಡ್ಡ ವೈಫಲ್ಯ ಎಂದು ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಸದ್ಯ ಎನ್ಐಎ ಚಾರ್ಜ್‌ಶೀಟ್ ರಾಜ್ಯದಲ್ಲಿ ಅಸುರಕ್ಷತೆ ವಾತಾವರಣದ ಸುಳಿವು ಕೊಟ್ಟಿದೆ. ಸರ್ಕಾರ ಉಗ್ರ ಚಟುವಟಿಕೆಗಳ ನಿಗ್ರಹಕ್ಕೆ ಬಿಗಿ ಕ್ರಮಗಳನ್ನು ವಹಿಸಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ