
ಬೆಂಗಳೂರು, ಫೆ. 01: ವಿಜಯನಗರ ಜಿಲ್ಲೆ ಕೊಟ್ಟೂರು ಪಟ್ಟಣದಲ್ಲಿ ತ್ರಿವಳಿ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದೆ. ಆರೋಪಿ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರಿಗೆ ತಿಳಿಸಿದ್ದ. ಆದ್ರೆ ತನಿಖೆ ವೇಳೆ ತಂಗಿ ಗರ್ಭಿಣಿ ಎಂದು ಈತ ಕತೆ ಕಟ್ಟಿದ್ದಾನಾ ಎನ್ನುವ ಶಂಕೆಯೀಗ ಪೊಲೀಸರನ್ನು ಕಾಡ್ತಿದೆ. ಬೆಟ್ಟಿಂಗ್, ಗ್ಯಾಂಬ್ಲಿಂಗ್ ಚಟಕ್ಕೆ ಬಿದ್ದಿದ್ದ ಆರೋಪಿ ಅಕ್ಷಯ್, ಹಣದ ವಿಚಾರಕ್ಕೆ ಮನೆಯವರನ್ನು ಕೊಲೆಗೈದಿರುವ ಸಾಧ್ಯತೆ ಇದೆ ಎನ್ನಲಾಗಿದೆ. ವಿಚಾರಣೆ ವೇಳೆ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಿಗೆ ಬಂದಿವೆ.
ದಾವಣಗೆರೆ ಜಿಲ್ಲೆ ಜಗಳೂರಿನಲ್ಲದ್ದ ಮನೆ ಮಾರಾಟದಿಂದ ಅಕ್ಷಯ್ ಕುಟುಂಬಕ್ಕೆ 1.5 ಕೋಟಿ ರುಪಾಯಿ ಹಣ ಬಂದಿತ್ತು. ಈ ದುಡ್ಡನ್ನು ಮಗಳ ಮದುವೆಗೆ ಎಂದು ತಂದೆ ಭೀಮರಾಜ್ ಹಾಗೇಯೇ ಇರಿಸಿದ್ದರು. ಆದರೆ ಬೆಟ್ಟಿಂಗ್ನಿಂದ ಸಾಲ ಮಾಡಿಕೊಂಡಿದ್ದ ಮಗ ಅಕ್ಷಯ್, ಮನೆ ಮಾರಾಟದ ಹಣ ಕೊಡುವಂತೆ ತಂದೆಯನ್ನು ಪೀಡಿಸುತ್ತಿದ್ದನಂತೆ. ಆದರೆ ಮನೆಯವರು ಅಕ್ಷಯ್ಗೆ ಹಣ ನೀಡಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ತಂದೆ, ತಾಯಿ ಹಾಗೂ ತಂಗಿಯನ್ನ ಈತ ಕೊಂದಿರುವ ಶಂಕೆ ತನಿಖೆ ವೇಳೆ ಪೊಲೀಸರಿಗೆ ಬಂದಿದೆ. ಪ್ರಕರಣ ಆರಂಭದಿಂದಲೂ ಆರೋಪಿ ಅಕ್ಷಯ್ ಒಂದೊಂದು ಕತೆ ಹೇಳಿಕೊಂಡು ಬಂದಿದ್ದಾನೆ. ಆರಂಭದಲ್ಲಿ ಬೆಂಗಳೂರಿಗೆ ಬಂದಿದ್ದ ಕುಟುಂಬ ನಾಪತ್ತೆಯಾಗಿದೆ ಎಂದು ಪೊಲೀಸರಿಗೆ ಹೇಳಿ ಈತ ಯಾಮಾರಿಸಿದ್ದ. ಈಗ ಮದುವೆಗೆ ಮೊದಲೇ ತಂಗಿ ಗರ್ಭಿಣಿ ಆದ ಕಾರಣ ಕುಟುಂಬವನ್ನು ಹತ್ಯೆ ಮಾಡಿರೋದಾಗಿ ಈತ ಹೇಳಿರೋದು ಪೊಲೀಸರಲ್ಲಿ ಸಾಕಷ್ಟು ಪ್ರಶ್ನೆ ಹುಟ್ಟು ಹಾಕಿದೆ.
ಇದನ್ನೂ ಓದಿ: ತ್ರಿವಳಿ ಕೊಲೆಯ ಕಾರಣ ಬಯಲು, ಲವ್ವಿಡವ್ವಿಯಿಂದ ತಂಗಿ ಗರ್ಭಿಣಿಯಾದ್ದು ತಿಳಿದು ಕುಟುಂಬವನ್ನೇ ಮುಗಿಸಿದ ಅಣ್ಣ!
ಆರೋಪಿ ಅಕ್ಷಯ್, ಮೂವರನ್ನು ಮನೆಯಲ್ಲಿಯೇ ಪ್ರತ್ಯೇಕವಾಗಿ ಕೊಲೆಗೈದಿದ್ದ. ಮೊದಲು ಚಾಕುವಿನಿಂದ ಇರಿದು ತಾಯಿಯನ್ನು ಕೊಲೆ ಮಾಡಿರುವ ಪಾಪಿ ಪುತ್ರ, ಬಳಿಕ ತಂಗಿಗೆ ಕರೆ ಮಾಡಿ ನಿನಗೆ ಗಿಫ್ಟ್ ತಂದಿರುವೆ ಅಂತಾ ಮನೆಗೆ ಕರೆದು ಆಕೆಯನ್ನೂ ಸಾಯಿಸಿದ್ದ. ಇಬ್ಬರ ಮೃತದೇಹಗಳನ್ನು ಕೊಠಡಿಯಲ್ಲಿ ಇಟ್ಟಿದ್ದ. ಮನೆಗೆ ಬಂದ ತಂದೆ ಟಿವಿ ನೋಡುತ್ತಾ ಕುಳಿತಿದ್ದಾಗ ಅವರ ಕತೆಯನ್ನೂ ಮುಗಿಸಿ, ಮನೆಯ ಹಾಲ್ನಲ್ಲೇ ಮೂರು ಮೃತದೇಹಗಳನ್ನು ಹೂತಿದ್ದ ಎಂಬ ವಿಷಯ ತನಿಖೆ ವೇಳೆ ಬಯಲಾಗಿತ್ತು.
ಪ್ರದೀಪ್ ಚಿಕ್ಕಾಟಿ, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:44 pm, Sun, 1 February 26