
ಬೆಂಗಳೂರು, ಸೆಪ್ಟೆಂಬರ್ 05: ಆರೋಗ್ಯ ಸಚಿವ ಯು.ಟಿ. ಖಾದರ್ ಕಟ್ಟುನಿಟ್ಟಿನ ನಿರ್ದೇಶನದ ಮೇರೆಗೆ ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ನಗರದ ಪ್ರತಿಷ್ಠಿತ ವಿವೇಕನಗರ ಹಾಕಿ ಕ್ಲಬ್ ಮೇಲೆ ದಾಳಿ ಮಾಡಲಾಗಿದ್ದು, ಈ ವೇಳೆ ಆಹಾರ ತಯಾರಿಕಾ ಸ್ಥಳದಲ್ಲಿ ಜಿರಳೆ ಓಡಾಟ ಪತ್ತೆ ಸೇರಿದಂತೆ ತೀವ್ರ ನಿರ್ಲಕ್ಷ್ಯ ವಹಿಸಿರುವುದು ಬೆಳಕಿಗೆ ಬಂದಿದೆ. ಕ್ಲಬ್ ಆಡಳಿತ ಮಂಡಳಿಗೆ ಅಧಿಕಾರಿಗಳು ತಕ್ಷಣವೇ ನೋಟಿಸ್ ಜಾರಿ ಮಾಡಿದ್ದಾರೆ.
ಅಡುಗೆ ತಯಾರಿಸುವ ಜಾಗದಲ್ಲೇ ಜಿರಳೆಗಳು ರಾಜಾರೋಷವಾಗಿ ಓಡಾಡುತ್ತಿರುವುದು ಮತ್ತು ಕೀಟಗಳ ತೀವ್ರ ಹಾವಳಿ ಇರುವುದು ಕಂಡುಬಂದಿದ್ದು, ಆಹಾರ ಪದಾರ್ಥಗಳು ಕಲುಷಿತಗೊಳ್ಳುವ ಗಂಭೀರ ಪರಿಸ್ಥಿತಿ ನಿರ್ಮಾಣವಾಗಿತ್ತು. ಕನಿಷ್ಠ ಸ್ವಚ್ಛತೆ ಇಲ್ಲದ, ಗಬ್ಬು ನಾರುವ ವಾತಾವರಣದಲ್ಲೇ ಅಡುಗೆ ಸಿದ್ಧಪಡಿಸುತ್ತಿದ್ದುದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.
ಆಹಾರ ಸುರಕ್ಷತೆಯ ಪ್ರಾಥಮಿಕ ನಿಯಮಗಳನ್ನೂ ಗಾಳಿಗೆ ತೂರಿದ್ದ ಕ್ಲಬ್ ಸಿಬ್ಬಂದಿ, ವೆಜ್ ಹಾಗೂ ನಾನ್ವೆಜ್ ಪದಾರ್ಥಗಳನ್ನು ಪ್ರತ್ಯೇಕವಾಗಿ ಸಂಗ್ರಹಿಸಿಡುವ ವ್ಯವಸ್ಥೆಯನ್ನೇ ಮಾಡಿರಲಿಲ್ಲ. ಅತ್ಯಂತ ಬೇಜವಾಬ್ದಾರಿಯಿಂದ ಮಾಂಸಾಹಾರಿ ಪದಾರ್ಥಗಳ ಜೊತೆಯಲ್ಲೇ ಐಸ್ಕ್ರೀಂ ಇಟ್ಟಿರುವುದು ಪತ್ತೆಯಾಗಿದೆ. ಇದರ ಜೊತೆಗೆ ಅಡುಗೆಗೆ ಬಳಸಲು ಇಟ್ಟಿದ್ದ ತರಕಾರಿಗಳು ಕಿಂಚಿತ್ತೂ ತಾಜಾವಾಗಿರದೆ ಸಂಪೂರ್ಣ ಬಾಡಿ, ಕೊಳೆತ ಸ್ಥಿತಿಯಲ್ಲಿದ್ದವು.
ತಪಾಸಣೆ ವೇಳೆ ಮಾರಾಟಕ್ಕೆ ಹಾಗೂ ಬಳಕೆಗೆ ಇಟ್ಟಿದ್ದ ಅವಧಿ ಮೀರಿದ ಬರೋಬ್ಬರಿ 40 ತಂಪು ಪಾನೀಯ ಬಾಟಲಿಗಳನ್ನು ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಜತೆಗೆ ಸೋಡಾ ಬಾಟಲಿಗಳ ಮೇಲೆ ಎಫ್ಎಸ್ಎಸ್ಎಐ ಮಾನದಂಡಗಳಿಗೆ ವಿರುದ್ಧವಾಗಿ ಕಾನೂನುಬಾಹಿರವಾಗಿ ಲೇಬಲಿಂಗ್ ಮಾಡಿರುವುದು ಕಂಡುಬಂದಿದೆ. ಈ ಎಲ್ಲಾ ಗಂಭೀರ ಲೋಪಗಳ ಹಿನ್ನೆಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ (ಪರವಾನಗಿ ಮತ್ತು ನೋಂದಣಿ) ನಿಯಮಗಳು 2011ರ ಅಡಿಯಲ್ಲಿ ಮುಂದಿನ ಕಾನೂನು ಕ್ರಮ ಜರುಗಿಸಲಾಗುತ್ತಿದೆ.
ಇದನ್ನೂ ಓದಿ: ಅವಧಿ ಮೀರಿದ, ಮಿಸ್ಬ್ರ್ಯಾಂಡೆಡ್ ಆಹಾರ ಪತ್ತೆ: ಬೆಂಗಳೂರು ವ್ಯಾಪ್ತಿಯ 23 ಪಿಜಿಗಳಿಗೆ ನೋಟಿಸ್
ಸಾರ್ವಜನಿಕರ ಆರೋಗ್ಯ ಮತ್ತು ಆಹಾರ ಸುರಕ್ಷತೆಯ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ಎಚ್ಚರಿಸಿರುವ ಇಲಾಖೆ, ನಿಯಮ ಉಲ್ಲಂಘಿಸುವ ಘಟಕಗಳ ವಿರುದ್ಧ ಇಂತಹ ಕಠಿಣ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಸ್ಪಷ್ಟ ಸಂದೇಶ ರವಾನಿಸಿದೆ.
ವರದಿ: ವಿನಯ್ ಕುಮಾರ್
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.