ಬೆಂಗಳೂರು: ವಿಲ್ಸನ್ ಗಾರ್ಡನ್ ನಿಗೂಢ ಸ್ಫೋಟದ ಕಾರಣ ಪತ್ತೆ
ವಿಲ್ಸನ್ ಗಾರ್ಡನ್ ನ ಚಿನ್ನಯ್ಯನ ಪಾಳ್ಯದಲ್ಲಿ ಶುಕ್ರವಾರ ಸಂಭವಿಸಿದ ಅನಿಲ ಸ್ಫೋಟದಲ್ಲಿ ಮೂವರು ಮೃತಪಟ್ಟಿದ್ದಾರೆ ಮತ್ತು ಹಲವು ಮನೆಗಳು ನಾಶವಾಗಿವೆ. ಆಡುಗೋಡಿ ಪೊಲೀಸರ ತನಿಖೆಯ ಪ್ರಕಾರ, ಅಡುಗೆ ಅನಿಲ ಸೋರಿಕೆಯಿಂದ ಈ ದುರ್ಘಟನೆ ಸಂಭವಿಸಿದೆ. ಶುಕ್ರವಾರ ಬೆಳಿಗ್ಗೆ ಸ್ಫೋಟ ಸಂಭವಿಸಿತು ಎಂದು ಪೊಲೀಸರು ತಿಳಿಸಿದ್ದಾರೆ. ತನಿಖೆ ಮುಂದುವರಿದಿದೆ.

ಬೆಂಗಳೂರು, ಆಗಸ್ಟ್ 19: ವಿಲ್ಸನ್ ಗಾರ್ಡನ್ನ ಚಿನ್ನಯ್ಯನ ಪಾಳ್ಯದಲ್ಲಿ ಅನುಮಾನಾಸ್ಪದವಾಗಿ ಶುಕ್ರವಾರ (ಆ.15) ಸ್ಫೋಟ (Explosion) ಸಂಭವಿಸಿದ್ದು, 8ಕ್ಕೂ ಹೆಚ್ಚು ಮನೆಗಳು ಧ್ವಂಸವಾಗಿದ್ದವು. ಘಟನೆಯಲ್ಲಿ ಮೂವರು ಮೃತಪಟ್ಟಿದ್ದಾರೆ. ಆಡುಗೋಡಿ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ದುರಂತಕ್ಕೆ ಕಾರಣವೇನೆಂಬುವುದು ಗೊತ್ತಾಗಿದೆ. ಅಡುಗೆ ಅನಿಲ (Gas Cylender) ಸೋರಿಕೆಯಾಗಿ ಸ್ಫೋಟ ಸಂಭವಿಸಿದೆ ಎಂದು ತನಿಖೆ ವೇಳೆ ಬಹಿರಂಗಗೊಂಡಿದೆ. ಮನೆಯಲ್ಲಿ ರಾತ್ರಿಯೆಲ್ಲ ಗ್ಯಾಸ್ ಸೋರಿಕೆಯಾಗಿತ್ತು. ಬೆಳಗ್ಗೆ ಮಗು ಟಿವಿ ಆನ್ ಮಾಡಿದಾಗ ಸ್ಫೋಟ ಸಂಭವಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸ್ಫೋಟಗೊಂಡ ದಿನ ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದನು. ಸೋಮವಾರ ತಾಯಿ ಕಸ್ತೂರಮ್ಮ ಮಗಳು ಖಯಾಲ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಒಟ್ಟು 11 ಜನ ಗಾಯಗೊಂಡಿದ್ದರು. 11 ಜನರಲ್ಲಿ ಮೂವರು ಮೃತಪಟ್ಟಿದ್ದಾರೆ. ಸರಸಮ್ಮ ಎಂಬುವರು ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 7 ಜನರು ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಆಡುಗೋಡಿ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಇದನ್ನೂ ಓದಿ: ಚಿನ್ನಯ್ಯನಪಾಳ್ಯ ನಿಗೂಢ ಸ್ಫೋಟ: ಭಯಾನಕ ದೃಶ್ಯದ ಸಿಸಿಟಿವಿ ವಿಡಿಯೋ ಇಲ್ಲಿದೆ
ಮೃತ ಕಸ್ತೂರಮ್ಮ ಮನೆಯಲ್ಲಿ ಸ್ಫೋಟ ಸಂಭವಿಸಿತ್ತು. ಮೃತ ಮುಬಾರಕ್ನ ಪಕ್ಕದ ಮನೆಯಲ್ಲಿ ಕಸ್ತೂರಮ್ಮ ವಾಸವಿದ್ದರು. ಸ್ಫೋಟದ ತೀವ್ರತೆಗೆ ಮೊದಲನೇ ಮಹಡಿಯ ಮನೆ ಗೋಡೆ ಛಾವಣಿ ಕುಸಿದು ಬಿದ್ದಿತ್ತು. 8ಕ್ಕೂ ಹೆಚ್ಚು ಮನೆಗಳಿಗೆ ಹಾನಿ ಉಂಟಾಗಿತ್ತು.
ಮನೆಗಳನ್ನು ನಾವೇ ದುರಸ್ತಿ ಮಾಡಿಸಿಕೊಡುತ್ತೇವೆ: ಸಿಎಂ ಸಿದ್ದರಾಮಯ್ಯ
ಘಟನಾ ಸ್ಥಳಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ ನೀಡಿದ ಪರಿಶೀಲಿಸಿದ್ದರು. ಬಳಿಕ ಮಾತನಾಡಿದ್ದ ಅವರು, ಮೇಲ್ನೋಟಕ್ಕೆ ಗ್ಯಾಸ್ ಸಿಲಿಂಡರ್ ಸ್ಫೋಟದಂತೆ ಕಂಡುಬಂದಿದೆ. ಕಸ್ತೂರಮ್ಮ ಎಂಬುವರಿಗೆ ಸೇರಿದ ಮನೆಯಲ್ಲಿ ಸ್ಫೋಟ ಸಂಭವಿಸಿದ್ದು, ಮುಬಾರಕ್ ಎಂಬ ಬಾಲಕ ಮೃತಪಟ್ಟಿದ್ದಾನೆ. ಸ್ಫೋಟದ ತೀವ್ರತೆಗೆ ಸುಮಾರು 13 ಮನೆಗಳಿಗೆ ಹಾನಿಯಾಗಿದ್ದು, ನಾವೇ ದುರಸ್ತಿ ಮಾಡಿಸಿಕೊಡುತ್ತೇವೆ ಎಂದು ಅವರು ಹೇಳಿದ್ದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:49 am, Tue, 19 August 25



