
ರಾಮನಗರ, ಜೂನ್ 20: ರಾಜ್ಯ ಸರ್ಕಾರದ ಬಿಡದಿ ಟೌನ್ಶಿಪ್ ಯೋಜನೆ (Bidadi Township Project) ಬಗ್ಗೆ ಪರ ಹಾಗೂ ವಿರೋಧದ ಜಟಾಪಟಿ ತಾರಕಕ್ಕೇರಿದೆ. ಸುಮಾರು 516 ಎಕರೆಗೂ ಹೆಚ್ಚು ವ್ಯಾಪ್ತಿಯ ಭೂಸ್ವಾಧೀನ ವಿರೋಧಿಸಿ ಭಾನುವಾರ ಜೆಡಿಎಸ್ ಹಾಗೂ ರೈತ ಸಂಘಟನೆಗಳು ಬೃಹತ್ ಪಾದಯಾತ್ರೆ ಹಮ್ಮಿಕೊಂಡಿವೆ. ಬಿಡದಿ ಟೌನ್ಶಿಪ್ ಹೆಸರಿನಲ್ಲಿ ಬರೋಬ್ಬರಿ 33,562 ಕೋಟಿ ರೂ. ರಿಯಲ್ ಎಸ್ಟೇಟ್ ದಂಧೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ. ಆದರೆ ಇದೆಲ್ಲದರ ನಡುವೆ, ವಿರೋಧ ಲೆಕ್ಕಿಸದ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಭೂಮಿ ನೀಡುವ ರೈತರಿಗೆ ಪರಿಹಾರದ ಚೆಕ್ ವಿತರಿಸುವ ಕಾರ್ಯಕ್ಕೆ ಚಾಲನೆ ನೀಡಿದೆ. ರಾಮನಗರದ ಕಂದಾಯ ಭವನದಲ್ಲಿರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕಚೇರಿಯಲ್ಲಿ ಶಾಸಕ ಹೆಚ್.ಸಿ.ಬಾಲಕೃಷ್ಣ ನೇತೃತ್ವದಲ್ಲಿ ರೈತರಿಗೆ ಚೆಕ್ ಹಸ್ತಾಂತರಿಲಾಯಿತು. ಕೆಂಪಯ್ಯನಪಾಳ್ಯ, ವಡೇರಹಳ್ಳಿ, ಮುಂಡಹಳ್ಳಿ ಈ 3 ಕಂದಾಯ ಗ್ರಾಮಗಳ ಪೈಕಿ ಈವರೆಗೆ 270 ರೈತರು ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಮೊದಲ ಹಂತದಲ್ಲಿ ಕೆಂಪಯ್ಯನಪಾಳ್ಯದ 10ರೈತರಿಗೆ ಸಾಂಕೇತಿಕವಾಗಿ ಚೆಕ್ ನೀಡಲಾಯಿತು. ಕೆಂಪಯ್ಯನ ಪಾಳ್ಯದಲ್ಲಿ 1 ಎಕರೆ ಜಮೀನಿಗೆ 2,07,30,000 ರೂಪಾಯಿ ನಿಗದಿಪಡಿಸಿದೆ.
ರೈತ ಮಹಿಳೆ ಜಾನಕಮ್ಮ ಎಂಬವರು ಸರ್ಕಾರಕ್ಕೆ 1 ಎಕರೆ ಜಮೀನನ್ನು ಬಿಟ್ಟುಕೊಟ್ಟಿದ್ದು, ಈ ಪೈಕಿ 18 ಗುಂಟೆಗೆ 1,00,52,386 ರೂಪಾಯಿ ಪಡೆದಿದ್ದಾರೆ. ಇನ್ನುಳಿದ 22 ಗುಂಟೆಗೆ ನಿವೇಶನ ಪಡೆಯಲು ಒಪ್ಪಿದ್ದಾರೆ. ಪರಿಹಾರದ ಚೆಕ್ ಪಡೆದ ಮಹಿಳೆ ತಮಗೆ ತೃಪ್ತಿಯಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಇನ್ನು 6 ಗುಂಟೆ ಜಮೀನನ್ನು ಸರ್ಕಾರ ಬಿಟ್ಟುಕೊಟ್ಟ ಗಿರೀಶ್ ಎಂಬವರಿಗೆ 36,47,083 ರೂಪಾಯಿ ಪರಿಹಾರ ಸಿಕ್ಕಿದೆ.
ರೈತರಿಗೆ ಪರಿಹಾರ ನೀಡಲು ಸರ್ಕಾರದ ಬಳಿ ಹಣವಿಲ್ಲ ಎಂದ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಶಾಸಕ ಹೆಚ್.ಸಿ.ಬಾಲಕೃಷ್ಣ ತಿರುಗೇಟು ನೀಡಿದ್ದಾರೆ. ಪರಿಹಾರ ಕೊಡಿಸದಿದ್ದರೆ ರಾಜಕೀಯ ನಿವೃತ್ತಿಯಾಗುವೆ ಎಂದಿದ್ದಾರೆ.
ಇದನ್ನೂ ಓದಿ: ಬಿಡದಿ ಟೌನ್ಶಿಪ್: ಜಮೀನು ಕೊಟ್ಟವರಿಗೆ 2 ಕೋಟಿ ಅಥವಾ 50*50 ನಿವೇಶನ: ರೈತರಿಗೆ ಡಿಕೆಶಿ ಆಫರ್
ಒಟ್ಟಿನಲ್ಲಿ, ವಿರೋಧದ ಮಧ್ಯೆಯೂ ರೈತರಿಗೆ ಪರಿಹಾರ ವಿತರಣೆಗೆ ಚಾಲನೆ ಸಿಕ್ಕಿದೆ. ಯೋಜನೆಯನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರಾ? ಪ್ರತಿಭಟನೆ ಜೋರಾಗಲಿದೆಯಾ ಎಂಬುದನ್ನು ಕಾದುನೋಡಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ