AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೀದರ್ ಬ್ರಿಮ್ಸ್ ಆಸ್ಪತ್ರೆ ಅವ್ಯವಸ್ಥೆ: ಕಂತೆ-ಕಂತೆ ಹಣ ನೋಡಿ ಉಪ ಲೋಕಾಯುಕ್ತರು ಶಾಕ್

ಇಂದು ಬೆಳ್ಳಂಬೆಳಗ್ಗೆ ಬೀದರ್​​ ವಿವಿಧ ಸ್ಥಳಗಳಿಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ನೇತೃತ್ವದ ತಂಡ ಭೇಟಿ ಮಾಡಿ ಪರಿಶೀಲನೆ ಮಾಡಿದರು. ಬೀದರ್‌ನ ಬ್ರಿಮ್ಸ್ ಆಸ್ಪತ್ರೆಗೆ ಭೇಟಿ ವೇಳೆ ಅಲ್ಲಿನ ಅವ್ಯವಸ್ಥೆ ಹಾಗೂ ಸ್ವಚ್ಛತೆಯ ಕೊರತೆಯನ್ನು ಕಂಡು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಬಳಿ ಕಂತೆ ಕಂತೆ ನೋಟು ಪತ್ತೆ ಆಗಿದೆ.

ಬೀದರ್ ಬ್ರಿಮ್ಸ್ ಆಸ್ಪತ್ರೆ ಅವ್ಯವಸ್ಥೆ: ಕಂತೆ-ಕಂತೆ ಹಣ ನೋಡಿ ಉಪ ಲೋಕಾಯುಕ್ತರು ಶಾಕ್
ಬ್ರಿಮ್ಸ್​ಗೆ ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ಭೇಟಿ
ಸುರೇಶ್ ನಾಯಕ್
| Edited By: |

Updated on: Jun 20, 2026 | 4:18 PM

Share

ಬೀದರ್, ಜೂನ್​​ 20: ನಗರದಲ್ಲಿ ಇಂದು ಬೆಳ್ಳಂಬೆಳಗ್ಗೆ ಫೀಲ್ಡ್‌ಗೆ ಇಳಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ನೇತೃತ್ವದ ತಂಡ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಸಾರ್ವಜನಿಕ ಸೇವೆಗಳ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಮಾಡಿದರು. ಅದರಲ್ಲೂ ಬೀದರ್​ನ (bidar) ಬ್ರಿಮ್ಸ್ ಆಸ್ಪತ್ರೆಯಲ್ಲಿನ ದಿಂಬು, ಬೆಡ್​ ಅವ್ಯವಸ್ಥೆ ಕಂಡು ನ್ಯಾ.ವೀರಪ್ಪ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಈ ವೇಳೆ ಲ್ಯಾಬ್ ಟೆಕ್ನಿಷಿಯನ್ ಬಳಿ ಕಂತೆ ಕಂತೆ ಹಣ ಪತ್ತೆ ಆಗಿದೆ.

ಮುಖ್ಯಾಂಶಗಳು

  • ಬೆಳ್ಳಂಬೆಳಗ್ಗೆ ಫೀಲ್ಡ್‌ಗಿಳಿದ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ನೇತೃತ್ವದ ತಂಡ
  • ಬೀದರ್​ನ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ
  • ಬ್ರಿಮ್ಸ್ ವೈದ್ಯಾಧಿಕಾರಿಗಳಿಗೆ ತರಾಟೆ

ಕೋಟಿ ಕೋಟಿ ಹಣವನ್ನು ಏನು ಮಾಡುತ್ತಿದ್ದೀರಿ: ನ್ಯಾ. ಬಿ. ವೀರಪ್ಪ ಪ್ರಶ್ನೆ

ದಿಂಬು, ಬೆಡ್ ನೋಡಿದರೆ ಜೈಲಿನಲ್ಲೂ ಈ ರೀತಿ ಇರುವುದು. ಏ ಡಾಕ್ಟರ್ರೆ ಇಂತಹ ಬೆಡ್ ಮೇಲೆ ನೀವು ಮಲಗುತ್ತೀರಾ ಕೋಟಿ ಕೋಟಿ ಹಣವನ್ನು ಏನು ಮಾಡುತ್ತಿದ್ದೀರಿ. 6 ಅಂತಸ್ತಿನ ಕಟ್ಟಡದಲ್ಲಿ ಬೆಡ್ ಇಲ್ಲ, ನೀರಿಲ್ಲಾ ಅಂದ್ರೆ ಹೇಗೆ? ರೋಗಿಗಳ ಸಂಬಂಧಿಕರಿಗೆ ಆಸನ ವ್ಯವಸ್ಥೆ ಕೂಡ ಇಲ್ಲ. ಹೇಗೆ ಆಸ್ಪತ್ರೆ ನಡೆಸುತ್ತಿದ್ದೀರಿ ಎಂದು ಬ್ರಿಮ್ಸ್ ನಿರ್ದೇಶಕಿ ಶಾಂತಲಾ ಕೌಜಲಗಿ, ಡಿಸ್ಟ್ರಿಕ್ ಸರ್ಜನ್‌ ಎಮ್‌ಎಸ್ ಬಾಳಿಗೆ ತರಾಟೆ ತೆಗೆದುಕೊಂಡರು. ವಾರಕ್ಕೊಮ್ಮೆ ಇಲ್ಲಿ ವಿಸಿಟ್ ಮಾಡಿದರೆ ಮಾತ್ರ ವ್ಯವಸ್ಥೆ ಸುಧಾರಣೆ ಆಗುತ್ತೆ ಎಂದರು.

ಲ್ಯಾಬ್ ಟೆಕ್ನಿಷಿಯನ್ ಬಳಿ ಕಂತೆ ಕಂತೆ ಹಣ ಪತ್ತೆ 

ಇನ್ನು ಇದೇ ವೇಳೆ ಬೀದರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಲ್ಯಾಬ್ ಟೆಕ್ನಿಷಿಯನ್ ಸಂಜುಕುಮಾರ್ ಬಳಿ ಕಂತೆ ಕಂತೆ ಹಣ ಪತ್ತೆ ಆಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಅದರಲ್ಲೂ ಲ್ಯಾಬ್ ಟೆಕ್ನಿಷಿಯನ್ ಬಳಿ ಒಂದು ಲಕ್ಷ ನಗದು ಮತ್ತು ಒಂದು ಲಕ್ಷ ರೂ ಮೊತ್ತದ ಚೆಕ್​​ ಹೇಗೆ ಬಂತು ಎಂದು ವೈದ್ಯರಿಗೆ ನ್ಯಾ.ಬಿ.ವೀರಪ್ಪ ತರಾಟೆ ತೆಗೆದುಕೊಂಡರು. ಹಣದ ಮಾಹಿತಿ ಕೇಳಿದಾಗ ಲ್ಯಾಬ್ ಟೆಕ್ನಿಷಿಯನ್ ತಡಬಡಾಯಿಸಿದ್ದಾನೆ. ಸದ್ಯ ಪತ್ತೆಯಾದ ಹಣವನ್ನು ಜಪ್ತಿ ಮಾಡಿ ಸ್ವಯಂಪ್ರೇರಿತ ಕೇಸ್​ ದಾಖಲಿಸಿಕೊಳ್ಳುವಂತೆ ನ್ಯಾಯಮೂರ್ತಿ ಸೂಚನೆ ನೀಡಿದರು.

ಬಸ್ ನಿಲ್ದಾಣದಲ್ಲಿ ಅವ್ಯವಸ್ಥೆ ಕಂಡು ಗರಂ ಆದ ಉಪ ಲೋಕಾಯುಕ್ತರು

ಇನ್ನು ಉಪ ಲೋಕಾಯುಕ್ತ ತಂಡ ನಗರದ ಕೇಂದ್ರೀಯ ಬಸ್ ನಿಲ್ದಾಣಕ್ಕೆ ಭೇಟಿ ಅಲ್ಲಿನ ಸ್ವಚ್ಛತೆ ಹಾಗೂ ಪ್ರಯಾಣಿಕರಿಗೆ ನೀಡಲಾಗುತ್ತಿರುವ ಸೌಲಭ್ಯಗಳನ್ನು ಪರಿಶೀಲಿಸಿದರು. ಬಸ್ ನಿಲ್ದಾಣದ ಆವರಣದಲ್ಲಿ ಅಸ್ವಚ್ಛತೆ ಹಾಗೂ ಅವ್ಯವಸ್ಥೆ ಕಂಡು ಬಂದ ಹಿನ್ನೆಲೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಉಪ ಲೋಕಾಯುಕ್ತರು, ಡಿಪೋ ವ್ಯವಸ್ಥಾಪಕರನ್ನು ತರಾಟೆ ತೆಗೆದುಕೊಂಡರು.

ಇದನ್ನೂ ಓದಿ: ಹಗಲು ದರೋಡೆ: ಬೀದರ್​ನಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ ಕೆಂಪು ಕಲ್ಲು ಗಣಿಗಾರಿಕೆ

ಬಳಿಕ ಬಸ್ ನಿಲ್ದಾಣದಲ್ಲಿರುವ ಹೋಟೆಲ್‌ಗಳಿಗೆ ಭೇಟಿ ನೀಡಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯನ್ನು ಪರಿಶೀಲಿಸಿದರು. ಹೋಟೆಲ್‌ಗಳಲ್ಲಿ ಅಗತ್ಯ ಮಟ್ಟದ ಸ್ವಚ್ಛತೆ ಕಾಪಾಡದಿರುವುದನ್ನು ಕಂಡು ಗರಂ ಆದ ತಂಡ, ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಕಟ್ಟುನಿಟ್ಟಿನ ಕ್ರಮಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us