
ಬೀದರ್, ಆಗಸ್ಟ್ 10: ಬೀದರ್ (bidar) ಜಿಲ್ಲೆಯ ಔರಾದ್ ತಾಲೂಕಿನ ವಡಗಾಂವ ಗ್ರಾಮದಲ್ಲಿ ಭಾನುವಾರ ಎರಡು ತಿಂಗಳ ಹಸುಗೂಸಿನ (baby) ಶವ ಬಾವಿಯಲ್ಲಿ ಪತ್ತೆಯಾಗಿತ್ತು. ಸದ್ಯ ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಗುವನ್ನ ತಾಯಿಯೇ ಕೊಂದು ಬಾವಿಯಲ್ಲಿ ಬಿಸಾಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಔರಾದ್ ತಾಲೂಕಿನ ಸಂತಪುರ ಪೊಲೀಸರು ತಾಯಿ ಸೇರಿದಂತೆ ಒಟ್ಟು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಕಾವಲಗುಡ್ಡ ಗ್ರಾಮದ ಸಂಜಯ್ ಮತ್ತು ವಾಣಿಶ್ರೀ ದಂಪತಿಯ ಎರಡು ತಿಂಗಳ ಗಂಡು ಮಗು ಓಂಕಾರ ಶವ ಬಾವಿಯಲ್ಲಿ ಪತ್ತೆ ಆಗಿದೆ. ಹೆರಿಗೆಗಾಗಿ ವಾಣಿಶ್ರೀ ಅವರು ತವರು ಮನೆಯಾದ ವಡಗಾಂವ್ಗೆ ಬಂದಿದ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಇದನ್ನೂ ಓದಿ: ಬೀದರ್ ಜಿಲ್ಲೆಯಲ್ಲೊಂದು ಅಮಾನವೀಯ ಕೃತ್ಯ: 2 ತಿಂಗಳ ಹಸುಗೂಸನ್ನ ಬಾವಿಗೆ ಬಿಸಾಡಿದ ಕಿರಾತಕರು
ಶನಿವಾರ ರಾತ್ರಿಯಿಂದಲೇ ಮಗು ದಿಢೀರ್ ಕಾಣೆಯಾಗಿದ್ದ ಹಿನ್ನೆಲೆ ಕುಟುಂಬಸ್ಥರು ಎಲ್ಲೆಡೆ ಹುಡುಕಾಡಿದ್ದಾರೆ. ಆದರೆ, ಭಾನುವಾರ ಸಾಯಂಕಾಲ ಗ್ರಾಮದ ಬಾವಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿತ್ತು. ಮೊದಲಿಗೆ ಯಾರೋ ಕಿರಾತಕರು ಮಗುವನ್ನು ಬಾವಿಗೆ ಬಿಸಾಡಿದ್ದಾರೆ ಎನ್ನಲಾಗಿತ್ತು.
ಇನ್ನು ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ತಾಯಿಯೇ ಮಗುವನ್ನ ಕೊಂದು ಬಾವಿಗೆ ಬಿಸಾಕಿರಬಹುದೆಂದು ಪೊಲೀಸರಿಗೆ ಮೇಲ್ನೋಟಕ್ಕೆ ಕಂಡು ಬಂದಿದೆ. ಹೀಗಾಗಿ ಕೊಲೆ ಆರೋಪದ ಮೇರೆಗೆ ಮಗುವಿನ ತಾಯಿ ವಾಣಿಶ್ರೀ ಸೇರಿದಂತೆ ಸೋದರ ಮಾವ ಸಂತೋಷ್, ಅಜ್ಜ ಬಸಪ್ಪ ಹಾಗೂ ಅಜ್ಜಿ ರತ್ನಮ್ಮ ಅವರನ್ನು ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದ್ದಾರೆ.
ಇದನ್ನೂ ಓದಿ: ನಂದಿ ಹಿಲ್ಸ್ ಮಾನ್ಸೂನ್ ಮ್ಯಾರಥಾನ್ ವೇಳೆ ದುರಂತ ಅಂತ್ಯಕಂಡ ಕ್ರೀಡಾಪಟು: ಹೃದಯಾಘಾತದಿಂದ ಸಾವು?
ಈ ಕುರಿತು ಸಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ನಾಲ್ವರನ್ನೂ ವಶಕ್ಕೆ ಪಡೆದು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:14 pm, Mon, 10 August 26