ಗೋ ಹತ್ಯೆ ಮಾಡುತ್ತಿದ್ದ ಮನೆ ಮೇಲೆ ದಾಳಿ ಪ್ರಕರಣ: ಶಾಸಕ ಶರಣು ಸಲಗರ್ ಸೇರಿ 9 ಜನರ ವಿರುದ್ಧ ಎಫ್​ಐಆರ್

ಮನೆಯೊಂದರಲ್ಲಿ ನಡೆಯುತ್ತಿದ್ದ ಗೋ ಹತ್ಯೆಯನ್ನು ತಡೆದಿದ್ದ ಬಿಜೆಪಿ ಶಾಸಕ ಶರಣು ಸಲಗರ್ ಮತ್ತು ಅವರ ಬೆಂಬಲಿಗರು ವಿರುದ್ಧ ಎಫ್​ಐಆರ್ ದಾಖಲಾಗಿದೆ.

ಗೋ ಹತ್ಯೆ ಮಾಡುತ್ತಿದ್ದ ಮನೆ ಮೇಲೆ ದಾಳಿ ಪ್ರಕರಣ: ಶಾಸಕ ಶರಣು ಸಲಗರ್ ಸೇರಿ 9 ಜನರ ವಿರುದ್ಧ ಎಫ್​ಐಆರ್
ಗೋ ಹತ್ಯೆ ತಡೆದ ಬಸವಕಲ್ಯಾಣ ಶಾಸಕ ಶರಣು ಸಲಗರ್
Edited By:

Updated on: Jul 06, 2023 | 11:52 AM

ಬೀದರ್: ಗೋ ಹತ್ಯೆ ಮಾಡುತ್ತಿದ್ದ ಮನೆ ಮೇಲೆ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬಸವಕಲ್ಯಾಣ ಕ್ಷೇತ್ರದ ಬಿಜೆಪಿ ಶಾಸಕ ಶರಣು ಸಲಗರ್ (Sharanu Salgar) ಸೇರಿದಂತೆ ಒಟ್ಟು 9 ಜನರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಜೂಲೈ 1 ರಂದು ಬಸವಕಲ್ಯಾಣ ಪಟ್ಟಣದ ಹಿರೇಮಠ ಕಾಲೋನಿಯಲ್ಲಿ ಗೋ ಹತ್ಯೆ ನಡೆಯುತ್ತಿತ್ತು. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಶಾಸಕ ಶರಣು ಸಲಗರ್ ಮತ್ತು ಅವರ ಬೆಂಬಲಿಗರು ದೌಡಾಯಿಸಿ ಗೋ ಹತ್ಯೆ ತಡೆದಿದ್ದರು.ಈ ಸಂಬಂಧ ಇದೀಗ ಪ್ರಕರಣ ನಡೆದು ಐದು ದಿನಗಳ ಬಳಿಕ ಅಂದರೆ ನಿನ್ನೆ(ಜುಲೈ 05) ಬಸವಕಲ್ಯಾಣ(basavakalyan) ಪೊಲೀಸ್ ಠಾಣೆಯಲ್ಲಿ ಇನಾಮುಲ್ಲಾಖಾನ್ ಎನ್ನುವರು ದೂರು ದಾಖಲಿಸಿದ್ದಾರೆ.

ಇದನ್ನೂ ಓದಿ: ಬೀದರ್: ದಾಳಿ ನಡೆಸಿ ಗೋ ಹತ್ಯೆ ತಡೆದ ಬಸವಕಲ್ಯಾಣ ಶಾಸಕ ಶರಣು ಸಲಗರ್

ಬಕ್ರೀದ್​ ಹಬ್ಬದಂದು ಮನೆಯಲ್ಲಿ ಕುರ್ಬಾನಿ ಕೊಡುತ್ತಿದ್ದಾಗ ಶರಣು ಸಲಗರ್ ಮತ್ತು ಅವರ ಬೆಂಬಲಿಗರು ಮನೆ ಹತ್ತಿರ ಬಂದು ಹೆದರಿಸಿದ್ದಾರೆ. ಏಕೆ ನೀವು ಮನೆಯಲ್ಲಿ ಕುರ್ಬಾನಿ ಕೊಡುತ್ತೀರಿ. ಮಾನ ಮರ್ಯಾದೆ ಇದೆಯಾ. ನಿಮಗೆ ನಾಚಿಕೆ ಆಗಲ್ವಾ ಎಂದು ಮನೆಯ ಮಹಿಳೆರಿಗೆ ಅವಾಜ್ ಹಾಕಿದ್ದಾರೆ. ನಿಮ್ಮದು ಜಾಸ್ತಿಯಾಗಿದೆ. ನಿಮಗೆ ಹೇಗೆ ಪಾಠ ಕಲಿಸಬೇಕು ಎಂದು ನಮಗೆ ಗೊತ್ತಿದೆ ಎಂದು ಹೆದರಿಸಿದ್ದಾರೆ. ಅಲ್ಲದೇ ಮನೆಯೊಳಗೆ ನುಗ್ಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಇನಾಮುಲ್ಲಾಖಾನ್ ಅವರ ಮನೆಯಲ್ಲಿ ಕಾನೂನು ಬಾಹಿರವಾಗಿ ಗೋಹತ್ಯೆ ನಡೆಸಲು ತಯಾರಿ ನಡೆಸಲಾಗುತ್ತಿತ್ತು. ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಶರಣು ಸಲಗರ್ ಗೋಹತ್ಯೆ ತಡೆದು ಸ್ಥಳದಲ್ಲಿ ಇದ್ದುಕೊಂಡು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶಾಸಕರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಇನಾಮುಲ್ಲಾಖಾನ್ ಅವರು ಶರಣು ಸಲಗರ್ ಸೇರಿದಂತೆ ಒಟ್ಟು 9 ಜನರು ವಿರುದ್ಧ ಕೌಂಟರ್​ ಕೇಸ್ ದಾಖಲಿಸಿದ್ದಾರೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ