ಬೀದರ್​​: ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆ; ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಗಲ್ಫ್ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಸದ್ಯ ಕದನ ವಿರಾಮ ನೀಡಲಾಗಿದೆ. ಆದರೆ ಇತ್ತ ಈರುಳ್ಳಿ ಬೀಜ ಬೆಳೆಗಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯುದ್ಧದಿಂದ ರಫ್ತು ಸಮಸ್ಯೆ ಉಂಟಾಗಿ, ಈರುಳ್ಳಿ ಬೀಜದ ದರ ಕ್ವಿಂಟಾಲ್‌ಗೆ 1.2 ಲಕ್ಷದಿಂದ 80 ಸಾವಿರಕ್ಕೆ ಕುಸಿದಿದೆ. ಬೀದರ್ ಜಿಲ್ಲೆಯ ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸುತ್ತಿದ್ದು, ಕೃಷಿ ಮಾಡುವುದೇ ಕಷ್ಟವಾಗಿದೆ.

ಬೀದರ್​​: ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆ; ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ
ಈರುಳ್ಳಿ ಬೀಜ
Image Credit source: tv9 kannada
Edited By:

Updated on: Apr 08, 2026 | 8:13 PM

ಬೀದರ್, ಏಪ್ರಿಲ್​ 08: ಗಲ್ಫ್​​ ರಾಷ್ಟ್ರದಲ್ಲಿ ನಡೆಯುತ್ತಿರುವ ಯುದ್ಧಕ್ಕೆ (Gulf War) ಸದ್ಯ ಎರಡು ವಾರಗಳ ಕಾಲ ಕದನ ವಿರಾಮ ಘೋಷಿಸಲಾಗಿದೆ. ಆದರೆ ಯುದ್ಧದ ಎಫೆಕ್ಟ್​ ಈರುಳ್ಳಿ ಬೀಜ ಬೆಳೆಗಾರರಿಗೂ ತಟ್ಟಿದೆ. ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆಯಾಗಿದ್ದು, ರೈತರಿಗೆ ಸಂಕಷ್ಟ ತಂದೊಡ್ಡಿದೆ. ಯುದ್ಧದ ಪರಿಣಾಮದಿಂದಾಗಿ ಬೆಳೆಗಳ ದರ ಕುಸಿಯುತ್ತಿದ್ದು, ರೈತರನ್ನು ಕಂಗಾಲು ಮಾಡಿದೆ.

ಕ್ವಿಂಟಾಲ್​ಗೆ 80 ಸಾವಿರ ರೂ ಕುಸಿತ

ಮಧ್ಯ ಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದಿಂದಾಗಿ ಈರುಳ್ಳಿ ಬೆಳೆಗಾರರು ಸಂಕಷ್ಟಕ್ಕೆ ಸಿಲಿಕಿದ್ದಾರೆ. ಬೀದರ್ ಜಿಲ್ಲೆಯಲ್ಲಿ ಈರುಳ್ಳಿ ಬೀಜ ಬೆಳೆಗಾರರು ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ. ಕಳೆದ ವರ್ಷ ಒಂದು ಕ್ವಿಂಟಾಲ್ ಈರುಳ್ಳಿ ಬೀಜ ಮಾರುಕಟ್ಟೆಯಲ್ಲಿ 1 ಲಕ್ಷ 20 ಸಾವಿರ ರೂ ಮಾರಾಟವಾಗುತ್ತಿತ್ತು. ಆದರೆ ಈ ವರ್ಷ ಕ್ವಿಂಟಾಲ್​ಗೆ 80 ಸಾವಿರ ರೂ ಕುಸಿತವಾಗಿದ್ದು, ರೈತರನ್ನ ನಷ್ಟಕ್ಕೆ ತಳ್ಳಿದೆ.

ಇದನ್ನೂ ಓದಿ: ಮಧ್ಯಪ್ರಾಚ್ಯದ ವಾರ್​​ ಎಫೆಕ್ಟ್​​: ರೈತರ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಪಾತಾಳಕ್ಕಿಳಿದ ಬೆಲೆ

ಬೀದರ್ ಜಿಲ್ಲೆಯಲ್ಲಿ ಗುಣಮಟ್ಟದ ಈರುಳ್ಳಿ ಬೀಜ ಬೆಳೆಯಲಾಗುತ್ತದೆ. ಹೀಗಾಗಿ ಹೈದರಾಬಾದ್​ ಮಾರುಕಟ್ಟೆಯಲ್ಲಿ ಜಿಲ್ಲೆಯ ಈರುಳ್ಳಿ ಬೀಜಕ್ಕೆ ಭಾರೀ ಬೇಡಿಕೆಯಿದೆ. ಹೈದರಾಬಾದ್​ನಿಂದ ದಲ್ಲಾಳಿಗಳು ರೈತರಿಂದ ಈರುಳ್ಳಿ ಬೀಜ ಖರೀದಿಸಿ ವಿದೇಶಕ್ಕೆ ರಫ್ತು ಮಾಡುತ್ತಿದ್ದರು. ಆದರೆ ಯುದ್ಧದಿಂದ ರಫ್ತಿನಲ್ಲಿ ತೊಂದರೆ ಉಂಟಾಗಿದ್ದು, ದಲ್ಲಾಳಿಗಳು ಬೆಲೆ ಕಡಿಮೆ ಮಾಡಿ ರೈತರಿಂದ ಈರುಳ್ಳಿ ಬೀಜ ಖರೀದಿಸುತ್ತಿದ್ದಾರೆ. ಇದು ಸಹಜವಾಗಿಯೇ ರೈತರಿಗೆ ಸಂಕಷ್ಟ ತಂದಿದೆ.

ಜಿಲ್ಲೆಯೊಂದರಲ್ಲಿಯೇ ಸುಮಾರು 5 ಸಾವಿರಕ್ಕೂ ಅಧಿಕ ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೀಜವನ್ನ ಬೆಳೆಯುತ್ತಿದ್ದಾರೆ. ಔಷಧಿ ಗುಣಲಕ್ಷಣ ಹಾಗೂ ಪೌಷ್ಟಿಕಾಂಶ ಇರುವ ಈರುಳ್ಳಿ ಬೀಜ ಗಲ್ಫ್​ ರಾಷ್ಟ್ರಕ್ಕೆ ಹೆಚ್ಚಾಗಿ  ರಫ್ತಾಗುತ್ತಿತ್ತು.

ಬೆಲೆ ಕುಸಿತ ನಮ್ಮನ್ನು ಹೈರಾಣು ಮಾಡಿದೆ ಎಂದ ರೈತ

ಈ ಬೆಳೆ ಜಾನುವಾರು ಅಥವಾ ಕಾಡುಪ್ರಾಣಿಗಳ ಹಾವಳಿ ಇಲ್ಲದೆ ನೆಮ್ಮದಿಯಿಂದ ರೈತ ಬೆಳೆಯಬಹುದಾಗಿದೆ. ಇನ್ನೂ ಈರುಳ್ಳಿ ಬೀಜಕ್ಕೆ ದೇಶ ಸೇರಿದಂತೆ ಅಂತಾರಾಷ್ಟ್ರಿಯ ಮಟ್ಟದಲ್ಲಿ ಬಹು ಬೇಡಿಕೆಯಿದೆ. ಒಂದು ಎಕರೆ ಪ್ರದೇಶಕ್ಕೆ 70 ರಿಂದ 80 ಸಾವಿರ ರೂ ಖರ್ಚು ಮಾಡಿ ರೈತರು ಈರುಳ್ಳಿ ಬೀಜ ಬೆಳೆಯುತ್ತಾರೆ. ಕಡಿಮೆ ನೀರು ಇದ್ದರೂ ಸಾಕು ಬೆಳೆಯಬಹುದಾಗಿದೆ. ಹೀಗಾಗಿ ಬೀದರ್ ಬಯಲು ಸೀಮೆಯಾಗಿದ್ದರಿಂದ ಇಲ್ಲಿ ನೀರಾವರಿ ಹೆಚ್ಚಾಗಿಲ್ಲ. ಹೀಗಾಗಿ ಕಡಿಮೆ ನೀರು ಸೌಲಭ್ಯ ಹೊಂದಿರುವ ರೈತರು ಈರುಳ್ಳಿ ಬೀಜ ಬೆಳೆ ಕಡೆಗೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ. ಆದರೆ ಬೆಲೆ ಕುಸಿತ ನಮ್ಮನ್ನು ಹೈರಾಣು ಮಾಡಿದೆ ಎಂದು ರೈತ ಬಸವರಾಜ್​​ ಅಳಲು ತೋಡಿಕೊಂಡಿದ್ದಾರೆ.

ಇದನ್ನೂ ಓದಿ: ಚಿಯಾ ಬೆಳೆಗಾರರಿಗೆ ತಟ್ಟಿದ ಯುದ್ಧದ ಬಿಸಿ: ಸರ್ರನೆ ಕುಸಿದ ದರ; ಬೀದರ್​​ ರೈತರು ಕಂಗಾಲು

ಜಿಲ್ಲೆಯ ಬಹುತೇಕ ರೈತರು ಈರುಳ್ಳಿ ಬೀಜ ಕೃಷಿಯಲ್ಲಿ ತೊಡಗಿದ್ದಾರೆ. ಒಮ್ಮೆ ನಾಟಿ ಮಾಡಿದ ನಂತರ ಯಾವುದೇ ಖರ್ಚು ಇಲ್ಲದೇ ಶೂನ್ಯ ಬಂಡವಾಳದಲ್ಲಿ ಬೆಳೆಯಬಹುದಾಗಿದೆ. ಆದರೆ ಯುದ್ದದಿಂದಾಗಿ ದರ ಕುಸಿತವಾಗಿದ್ದು, ರೈತರನ್ನ ಕಂಗಾಲು ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Suresh Naik

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ...

Read More
Follow Us