
ಚಾಮರಾಜನಗರ, ಜುಲೈ 05: ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಆರ್ಎಫ್ಒ ವಿರುದ್ಧ ಲೋಕಾಯುಕ್ತಕ್ಕೆ ದೂರು ನೀಡಿದ್ದ ಹಿನ್ನೆಲೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಕಾಡಂಚಿನ ಗ್ರಾಮ ಪಾಲಾರ್ ಹಾಡಿಯ ಆದಿವಾಸಿ ಸೋಲಿಗರಿಗೆ ಕಳೆದ ಒಂದು ವರ್ಷದಿಂದ ಮನೆ ಕಟ್ಟಿಕೊಳ್ಳಲು ಬಿಡದೆ ಮಲೆ ಮಹದೇಶ್ವರ ವನ್ಯಜೀವಿಧಾಮದ ಅರಣ್ಯ ಇಲಾಖೆ ಸಿಬ್ಬಂದಿ ಅಂಧಾ ದರ್ಬಾರ್ ನಡೆಸುತ್ತಿರುವ ಆರೋಪ ಕೇಳಿಬಂದಿದೆ. ಸಂಸದರು, ಜಿಲ್ಲಾಧಿಕಾರಿಗಳ ಸೂಚನೆಗೂ ಅಧಿಕಾರಿಗಳು ಕ್ಯಾರೇ ಎನ್ನುತ್ತಿಲ್ಲ. ಹೀಗಾಗಿ ನಮಗೆ ನ್ಯಾಯ ಬೇಕು ಎಂದು ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.
ಒಂದು ಮನೆಗೆ 1 ಸಾವಿರದಂತೆ 18 ಮನೆಗೆ 18 ಸಾವಿರ ರೂಪಾಯಿ ಹಣವನ್ನು ಡಿಆರ್ಎಫ್ಒ ಭೋಜಪ್ಪ ವಸೂಲಿ ಮಾಡಿದ್ದರಂತೆ. ಈ ಸಂಬಂಧ ಸೋಲಿಗ ಮುಖಂಡ ನಾಗೇಂದ್ರ ಎಂಬವರು ಲೋಕಾಯುಕ್ತಕ್ಕೆ ದೂರು ನೀಡಿದ್ದರು. ದೂರಿನ ಅನ್ವಯ ರೆಡ್ ಹ್ಯಾಂಡ್ ಆಗಿ ಭೋಜಪ್ಪರನ್ನು ಲೋಕಾಯುಕ್ತ ಅಧಿಕಾರಿಗಳು ಲಾಕ್ ಮಾಡಿದ್ದರು. ಬಳಿಕ ಪ್ರಕರಣ ಸಂಬಂಧ ಅವರನ್ನು ಅಮಾನತು ಕೂಡ ಮಾಡಲಾಗಿತ್ತು. ಇದೇ ಕಾರಣಕ್ಕೆ ಮನೆ ಕಟ್ಟಲು ಬಿಡದೆ ಅರಣ್ಯ ಇಲಾಖೆ ಸಿಬ್ಬಂದಿ ಹಿಂಸೆ ನೀಡುತ್ತಿದ್ದಾರೆ. ಲೋಕಾಯುಕ್ತದಲ್ಲಿ ಕೇಸ್ ನಡೆಯುತ್ತಿದೆ. ಹೀಗಾಗಿ ನೀವು ಮನೆ ಕಟ್ಟುವಂತಿಲ್ಲವೆಂದು ಧಮ್ಕಿ ಹಾಕುತ್ತಿದ್ದಾರೆ. ಅಷ್ಟಕ್ಕೂ ಲೋಕಾಯುಕ್ತ ಕೇಸ್ಗೂ ಮನೆ ಕಟ್ಟೋಕು ಏನು ಸಂಬಂಧ ಎಂಬ ಪ್ರಶ್ನೆ ಇಲ್ಲಿಯವರದ್ದು.
ಇದನ್ನೂ ಓದಿ: ಮೂರ್ನಾಲ್ಕು ತಿಂಗಳಿನಿಂದ 400ಕ್ಕೂ ಹೆಚ್ಚು ಮಂದಿಗೆ ಸಿಗ್ತಿಲ್ಲ ವೃದ್ಧಾಪ್ಯ ವೇತನ
ಹಾಡಿ ಜನತೆಗೆ ತೊಂದರೆ ಕೊಡದಂತೆ ಸ್ವತಃ ಜಿಲ್ಲಾಧಿಕಾರಿ ಹಾಗೂ ಸಂಸದ ಸುನೀಲ್ ಬೋಸ್ ಸೂಚಿಸಿದ್ದು, ಮನೆ ಕಟ್ಟಿಕೊಳ್ಳಲು ಅವಕಾಶ ನೀಡುವಂತೆ ತಿಳಿಸಿದ್ದರು. ಹೀಗಿದ್ದರೂ ಅರಣ್ಯ ಇಲಾಖೆ ಸಿಬ್ಬಂದಿಯ ಕಿರುಕುಳ ಮಾತ್ರ ತಪ್ಪಿಲ್ಲ. ಹಕ್ಕು ಪತ್ರ ಹೊಂದಿದ್ದರೂ ಮನೆ ಕಟ್ಟಲು ಬಿಡದೆ ಟಾರ್ಚರ್ ಕೊಡುತ್ತಿದ್ದಾರೆ ಎಂದು ದೂರಲಾಗಿದೆ. ಫಾರೆಸ್ಟ್ ಗಾರ್ಡ್ ಚಂದ್ರು ನಿರಂತರ ಕಾಟ ಕೊಡುತ್ತಿದ್ದಾರೆ ಎಂದು ಆರೋಪಿಸಲಾಗಿದ್ದು, ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಸಮಸ್ಯೆ ಬಗೆಹರಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ. ಕಾಡಿನ ಮಕ್ಕಳು ಗಾಳಿ, ಮಳೆ, ಚಳಿಗೆ ತತ್ತರಿಸಿ ಹೋಗಿದ್ದು, ಸುಭದ್ರ ಸೂರು ನಿರ್ಮಿಸಿಕೊಳ್ಳಲು ಇನ್ನಾದರೂ ಅವಕಾಶ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:13 am, Sun, 5 July 26