ಬತ್ತಿ ಹೋಗಿದ್ದ ನದಿ-ನಾಲೆಗಳಲ್ಲಿ ನೀರಿನ ವೈಭವ; ಧಾರಾಕಾರ ಮಳೆಯಿಂದ ಒಂದೆಡೆ ಸಂತಸ ಮತ್ತೊಂದೆಡೆ ಸಂಕಷ್ಟ!

ಚಿಕ್ಕಬಳ್ಳಾಪುರ ಕಸಬಾ ಹೋಬಳಿಯಲ್ಲಿ 80.4 ಮಿಮಿ ಮಳೆಯಾಗಿದ್ದು, ಚಿಕ್ಕಬಳ್ಳಾಪುರ ನಗರದ ಸುಬ್ಬರಾಯನ ಪೇಟೆಯಲ್ಲಿ ಕೆಲವು ಹಳೆಯ ಮನೆಗಳು ಕುಸಿತ ಕಂಡಿವೆ. ಹಾಗೇಯೇ, ತಿಮ್ಮೇಗೌಡನ ಕೆರೆ ಪ್ರದೇಶವಾಗಿದ್ದ 8, 9 ನೇ ವಾರ್ಡ್​ಗಳಲ್ಲಿ ತಗ್ಗಿನಲ್ಲಿದ್ದ ಮನೆಗಳೊಳಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ.

ಬತ್ತಿ ಹೋಗಿದ್ದ ನದಿ-ನಾಲೆಗಳಲ್ಲಿ ನೀರಿನ ವೈಭವ; ಧಾರಾಕಾರ ಮಳೆಯಿಂದ ಒಂದೆಡೆ ಸಂತಸ ಮತ್ತೊಂದೆಡೆ ಸಂಕಷ್ಟ!
ಮಳೆಗೆ ಸೇವಂತಿ ಗಿಡ ಜಲಾವೃತವಾಗಿರುವುದು
Edited By:

Updated on: Jul 18, 2021 | 3:41 PM

ಚಿಕ್ಕಬಳ್ಳಾಪುರ: ಸದಾ ಬರಗಾಲದಿಂದ ಬಳಲುತ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಗೆ ಈ ಬಾರಿಯ ಮುಂಗಾರು ಒಂದಷ್ಟು ಆಶಾ ಭಾವನೆ ಮೂಡಿಸಿದೆ. ಶನಿವಾರ ರಾತ್ರಿ ಸುರಿದ ನಿರಂತರ ಮಳೆ ಕೆರೆ-ಹಳ್ಳಗಳಿಗೆ ನೀರು ತುಂಬಿಸಿದ್ದು, ರೈತರಲ್ಲಿ ಸಂತಸ ಮೂಡಿಸಿದೆ. ಚಿಕ್ಕಬಳ್ಳಾಪುರ ತಾಲೂಕಿನ ಶ್ರೀನಿವಾಸ ಸಾಗರ ಜಲಾಶಯ ವ್ಯಾಪ್ತಿಯಲ್ಲಿ 172 ಮಿಮಿ ಮಳೆಯಾಗಿದ್ದು, ಇಪ್ಪತ್ತು ವರ್ಷಗಳ ನಂತರ ಉತ್ತರ ಪಿನಾಕಿನಿ ನದಿ ಮೈ ತುಂಬಿದೆ. ಜಿಲ್ಲೆಯ ಮಳೆಗಾಲದ ನದಿಯಾಗಿರುವ ಉತ್ತರ ಪಿನಾಕಿನಿ ಬತ್ತಿ ಹೋಗಿ ದಶಕಗಳೇ ಕಳೆದಿದ್ದು, ನದಿ ಪ್ರದೇಶವೆಲ್ಲ ಮರಳು ದಂಧೆಯ ಗುಂಡಿಗಳಾಗಿತ್ತು. ಆದರೆ ಒಂದೇ ರಾತ್ರಿಯಲ್ಲಿ ಸುರಿದ ನಿರಂತರ ಮಳೆಯಿಂದ ಉತ್ತರ ಪಿನಾಕಿನಿ ನದಿ ತನ್ನ ಸ್ಥಳ ಗುರುತಿಸಿಕೊಂಡು ಹರಿಯುತ್ತಿರುವುದು ರೈತರಲ್ಲಿ ಸಂತಸ ಮೂಡಿಸಿದೆ.

ಅಷ್ಟೇ ಅಲ್ಲ ಜಿಲ್ಲೆಯ ಬಾಗೇಪಲ್ಲಿ ಮೂಲಕ ಆಂಧ್ರ ತಲುಪಲಿರುವ ಚಿತ್ರಾವತಿ ನದಿ, ಕೆಲವು ವರ್ಷಗಳಿಂದ ಬತ್ತಿ ಬರಡಾಗಿತ್ತು. ಆದರೆ ರಾತ್ರಿ ಸುರಿದ ಧಾರಾಕರ ಮಳೆಗೆ ಜೀವಕಳೆ ಬಂದಿದ್ದು, ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ. ಇದರಿಂದ ನದಿಯಲ್ಲಿ ನೀರು ಹರಿಯುವುದನ್ನು ನೋಡಲು ಸ್ಥಳಿಯ ರೈತರು ಮುಗಿಬಿದ್ದಾರೆ. ಕೆಲವು ವರ್ಷಗಳಿಂದ ನೀರೆ ಕಾಣದ ನದಿಗಳು ಒಂದೆ ಒಂದು ರಾತ್ರಿಯೊಳಗೆ ತಮ್ಮ ಅಸ್ತಿತ್ವ ಸಾಬೀತು ಪಡಿಸಿವೆ. ಒಂದು ವಾರಗಳ ಕಾಲ ಇದೇ ರೀತಿ ಹರಿದರೆ ಸಾವಿರಾರು ಅಡಿಗೆ ಕುಸಿದಿರುವ ಅಂತರ್ಜಲ ಸುಧಾರಿಸಲಿದೆ ಎಂಬ ನಿರೀಕ್ಷೆ ರೈತರದಾಗಿದೆ.

ಮಳೆಯಿಂದ ಕೆಲವು ರೈತರಿಗೆ ಸಂಕಷ್ಟ
ಮಳೆ ಬಂದ ಸಂಭ್ರಮದೊಂದಿಗೆ ಬೆಳೆನಷ್ಟದ ಸಂಕಟಕ್ಕೂ ರೈತರು ಒಳಗಾಗಿದ್ದು, ತಾಲೂಕಿನ ಮೈಲಪನಹಳ್ಳಿ ಭಾಗದಲ್ಲಿ ಕಂದವಾರ ಕೆರೆ ಹಿನ್ನೀರಿನ ಪ್ರದೇಶದಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದ, ಸೇವಂತಿ, ಗುಲಾಬಿ ಮುಂತಾದ ಹೂವಿನ ಬೆಳೆಗಳು ಹಾಗೂ ಬೀನ್ಸ್ ಮೊದಲಾದ ತರಕಾರಿ ಬೆಳೆಗಳ ತೋಟದಲ್ಲಿ ಎರಡು ಅಡಿ‌ ನೀರು ನಿಂತಿದ್ದು, ಬೆಳೆಗಳು ನಷ್ಟವಾಗಿವೆ.

ಚಿಕ್ಕಬಳ್ಳಾಪುರ ಕಸಬಾ ಹೋಬಳಿಯಲ್ಲಿ 80.4 ಮಿಮಿ ಮಳೆಯಾಗಿದ್ದು, ಚಿಕ್ಕಬಳ್ಳಾಪುರ ನಗರದ ಸುಬ್ಬರಾಯನ ಪೇಟೆಯಲ್ಲಿ ಕೆಲವು ಹಳೆಯ ಮನೆಗಳು ಕುಸಿತ ಕಂಡಿವೆ. ಹಾಗೇಯೇ, ತಿಮ್ಮೇಗೌಡನ ಕೆರೆ ಪ್ರದೇಶವಾಗಿದ್ದ 8, 9 ನೇ ವಾರ್ಡ್​ಗಳಲ್ಲಿ ತಗ್ಗಿನಲ್ಲಿದ್ದ ಮನೆಗಳೊಳಗೆ ನೀರು ನುಗ್ಗಿ ನಿವಾಸಿಗಳು ಪರದಾಡುವಂತಾಗಿದೆ. ಚರಂಡಿ ನೀರು‌ ಕೂಡ ಮಳೆ ನೀರಿನೊಂದಿಗೆ ಮನೆಗಳಿಗೆ ನುಗ್ಗಿದ್ದು‌, ರೋಗಭೀತಿ ಎದುರಾಗಿದೆ.

ನಂದಿಬೆಟ್ಟದ ರಸ್ತೆಗಳಲ್ಲಿ ಧರೆಗುರುಳಿದ ಮರಗಳು
ತಾಲೂಕಿನ ನಂದಿಬೆಟ್ಟ ರಸ್ತೆಯಲ್ಲಿ ಬೃಹತ್ ಗಾತ್ರದ ನೀಲಗಿರಿ ಮರಗಳು ರಸ್ತೆಗೆ ಉರುಳಿ ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಪೊಲೀಸರು ಸ್ಥಳೀಯರು ಇದನ್ನು ತೆರವುಗೊಳಿಸಿದ್ದು, ಸದ್ಯ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಒಟ್ಟಾರೆಯಾಗಿ ಒಂದೆ ದಿನ ರಾತ್ರಿ- ಹಗಲು ಎನ್ನದೆ ಸುರಿದ ಮಳೆಗೆ ಬಯಲು ಸೀಮೆಯಲ್ಲಿ ಬತ್ತಿ ಹೋಗಿದ್ದ ನದಿ, ನಾಲೆ, ಕೆರೆ-ಕುಂಟೆಗಳು ಮತ್ತೆ ನೀರಿನಿಂದ ಕಂಗೊಳಿಸುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿವೆ.

ಇದನ್ನೂ ಓದಿ :
Heavy Rain: ಭಾರೀ ಮಳೆಗೆ ನದಿಯಂತಾದ ವಾಣಿಜ್ಯ ನಗರಿ ರಸ್ತೆಗಳು; ತೇಲಿಹೋದ ಐಷಾರಾಮಿ ಕಾರುಗಳು

Tunga Dam: ತುಂಗಾ ಡ್ಯಾಂ ಭರ್ತಿ; ಮಲೆನಾಡಿನ ಸೌಂದರ್ಯದ ಹೆಚ್ಚಳಕ್ಕೆ ಸಾಕ್ಷಿ ಆಯ್ತು ಮುಂಗಾರು ಮಳೆ