ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್​ ಪತ್ನಿಗೆ ಡಿಜಿಟಲ್ ಅರೆಸ್ಟ್: 14 ಲಕ್ಷ ರೂ ವಂಚನೆ

ನಿತ್ಯ ಒಂದಿಲ್ಲೊಂದು ಸೈಬರ್ ವಂಚನೆ ಪ್ರಕರಣಗಳು ವರದಿ ಆಗುತ್ತಿವೆ. ಈ ಸೈಬರ್ ವಂಚನೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಜನ ಸಾಮಾನ್ಯರಿಂದ ಹಿಡಿದು ಸ್ಟಾರ್ ನಟ-ನಟಿಯರು ಸೇರಿದಂತೆ ರಾಜಕಾರಣಿಗಳನ್ನು ಟಾರ್ಗೆಟ್​ ಮಾಡುತ್ತಿದ್ದಾರೆ. ಇದೀಗ ಬಿಜೆಪಿ ಸಂಸದರ​ ಪತ್ನಿಗೆ ಡಿಜಿಟಲ್ ಅರೆಸ್ಟ್ ಮಾಡಿ ಲಕ್ಷಾಂತರ ರೂ ಹಣ ದೋಚಿದ್ದಾರೆ.

ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ ಕೆ ಸುಧಾಕರ್​ ಪತ್ನಿಗೆ ಡಿಜಿಟಲ್ ಅರೆಸ್ಟ್: 14 ಲಕ್ಷ ರೂ ವಂಚನೆ
ಡಾ.ಪ್ರಿಯಾ
Edited By:

Updated on: Sep 22, 2025 | 3:51 PM

ಬೆಂಗಳೂರು, ಸೆಪ್ಟೆಂಬರ್​ 22: ಚಿಕ್ಕಬಳ್ಳಾಪುರ ಬಿಜೆಪಿ ಸಂಸದ ಡಾ.ಕೆ.ಸುಧಾಕರ್​ ಪತ್ನಿಗೆ (k sudhakar wife) ಡಿಜಿಟಲ್ ಅರೆಸ್ಟ್ (Digital arrest) ಮಾಡಿ ವಂಚಕರು ಬರೋಬ್ಬರಿ 14 ಲಕ್ಷ ರೂ ಹಣ ದೋಚಿರುವಂತಹ ಘಟನೆ ಬೆಳಕಿಗೆ ಬಂದಿದೆ. ಆ.26ರಂದೇ ಪಶ್ಚಿಮ ಸೈಬರ್ ಠಾಣೆಗೆ ಡಾ.ಪ್ರಿಯಾ ದೂರು ನೀಡಿದ್ದರು. ಗೋಲ್ಡನ್ ಅವರ್​ನಲ್ಲಿ ದೂರು‌ ನೀಡಿದ್ದರಿಂದ 14 ಲಕ್ಷ ರೂ ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್​ ವಂಚಕರ ಜಾಲ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಬಿಜೆಪಿ ಸಂಸದ ಡಾ.ಕೆ.ಸುಧಾಕರ್​ ಪತ್ನಿ ಡಾ.ಪ್ರಿಯಾ ಅವರಿಗೆ ಆಗಸ್ಟ್ 26ರಂದು ಸೈಬರ್ ವಂಚಕರಿಂದ ಫೋನ್​ ಕಾಲ್​ ಬಂದಿದೆ. ನಾವು ಮುಂಬೈ ಸೈಬರ್​ ಡಿಪಾರ್ಟ್ಮೆಂಟ್ ಸಿಬ್ಬಂದಿ ಎಂದು ಹೇಳಿಕೊಂಡು ವಂಚಿಸಿದ್ದಾರೆ.

ವಂಚಿಸಿದ್ದು ಹೇಗೆ

ಅಪರಿಚಿತ ವ್ಯಕ್ತಿಯೊಬ್ಬ ನಿಮ್ಮ ದಾಖಲೆಗಳನ್ನು ಬಳಸಿಕೊಂಡಿದ್ದಾರೆ. ನಿಮ್ಮ ಹೆಸರಲ್ಲಿ ಕ್ರೆಡಿಟ್ ಕಾರ್ಡ್ ಮಾಡಿಸಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾನೆ ಎಂದು ಸೈಬರ್​​ ವಂಚಕರು ಕಥೆ ಕಟ್ಟಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಹಬ್ಬದ ಸಂದರ್ಭದಲ್ಲಿ ಆ್ಯಕ್ಟೀವ್ ಆದ ಸೈಬರ್​ ವಂಚಕರು: ಬ್ಯಾಂಕ್​​​ ಆಫರ್​​ ಹೆಸರಿನಲ್ಲಿ ವಂಚನೆ​​

ಇನ್ನು ವಂಚನೆಗೆ ಒಳಗಾಗಿರುವುದು ಗೊತ್ತಾಗುತ್ತಿದ್ದಂತೆ ರಾಷ್ಟ್ರೀಯ ಸೈಬರ್ ಸಹಾಯವಾಣಿ 1930ನಲ್ಲಿ ಡಾ. ಪ್ರಿಯಾ ದೂರು ದಾಖಲಿಸಿದ್ದರು. ಇದರಿಂದ ತಕ್ಷಣ ಹಣ ವರ್ಗಾವಣೆಯಾಗಿದ್ದ ಅಕೌಂಟ್ ಫ್ರೀಜ್ ಆಗಿದೆ. ಬಳಿಕ ಹಣ ವಾಪಸ್​ಗೆ ಪೊಲೀಸರು ಕೋರ್ಟ್ ಮೊರೆ ಹೋಗಿದ್ದರು.

ಇದನ್ನೂ ಓದಿ: ಹಿರಿಯ ಐಎಎಸ್ ಅಧಿಕಾರಿ ಹೆಸರಿನಲ್ಲಿ ನಕಲಿ ಫೇಸ್​ಬುಕ್ ಖಾತೆ; ಸೈಬರ್ ಪೊಲೀಸರ ಮೊರೆ ಹೋದ ಮಣಿವಣ್ಣನ್!

ಸೆ.3ರಂದು ಹಣ ವಾಪಸ್ ಮಾಡಲು ಸಂಬಂಧಪಟ್ಟ ಬ್ಯಾಂಕ್​ಗೆ ಕೋರ್ಟ್ ಆದೇಶಿಸಿದೆ. ಇದರಿಂದ ಸಂಪೂರ್ಣ 14 ಲಕ್ಷ ರೂ. ಹಣ ಕೂಡ ವಾಪಸ್ ಬಂದಿದೆ. ಸದ್ಯ ಸೈಬರ್​ ವಂಚಕರ ಜಾಲ ಪತ್ತೆಗೆ ಶೋಧ ಕಾರ್ಯ ಮುಂದುವರಿಸಿದ್ದಾರೆ.

ಐಎಎಸ್ ಅಧಿಕಾರಿ ಹೆಸರಲ್ಲೂ ವಂಚನೆ

ಇನ್ನು ಇತ್ತೀಚೆಗೆ ಹಿರಿಯ ಐಎಎಸ್ ಅಧಿಕಾರಿ ಮೇಜರ್ ಮಣಿವಣ್ಣನ್​ಗೆ ಸೈಬರ್ ವಂಚಕರು ವಂಚಿಸಿದ್ದರು.  ಅವರ ಹೆಸರಿನಲ್ಲಿ ಫೇಸ್ ಬುಕ್ ಖಾತೆ ತೆರೆದು ಫರ್ನಿಚರ್ ಮಾರಾಟದ ಹೆಸರಿನಲ್ಲಿ ಅವರ ಆಪ್ತರಿಗೆ ವಂಚಿಸಲಾಗಿತ್ತು. ಬಳಿಕ ಆರೋಪಿಗಳ ಪತ್ತೆ ಮಾಡಿ ಅಕೌಂಟ್ ಡಿಆ್ಯಕ್ಟಿವೇಟ್ ಮಾಡುವಂತೆ ಪೊಲೀಸರಲ್ಲಿ ಮಣಿವಣ್ಣನ್ ಮನವಿ ಮಾಡಿಕೊಂಡಿದ್ದರು.

ವರದಿ: ಪ್ರದೀಪ್​ ಚಿಕ್ಕಾಟೆ, ಟಿವಿ9 ಬೆಂಗಳೂರು 

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 1:59 pm, Mon, 22 September 25