ಮುಜರಾಯಿ ದೇವಸ್ಥಾನದಲ್ಲಿ ಇದೆಂಥಾ ಪ್ರಮಾದ: ಭಕ್ತರ ಪ್ರಸಾದದ ತಟ್ಟೆ ಕಿತ್ತು ಬಿಸಾಡಿದ ಸಿಬ್ಬಂದಿ
Chikkaballapur News: ದೇವರ ಪ್ರಸಾದದ ತಟ್ಟೆಯನ್ನು ಸಿಬ್ಬಂದಿ ಕಿತ್ತು ಎಸೆದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ ನಡೆದಿದೆ. ಮುಜರಾಯಿ ದೇವಸ್ಥಾನದಲ್ಲಿ ನಡದ ಪ್ರಮಾದ ತಡವಾಗಿ ಬೆಳಕಿಗೆ ಬಂದಿದ್ದು, ನೊಂದ ಕುಟುಂಬ ಇದೀಗ ಸಿಎಂ ಡಿಕೆ ಶಿವಕುಮಾರ್ಗೆ ದೂರು ನೀಡಿದೆ.

ಚಿಕ್ಕಬಳ್ಳಾಪುರ, ಆಗಸ್ಟ್ 30: ಚಿಕ್ಕಬಳ್ಳಾಪುರ (chikkaballapur) ತಾಲೂಕಿನ ಐತಿಹಾಸಿಕ ಹಾಗೂ ಪ್ರಸಿದ್ಧ ಮುಜರಾಯಿ ದೇವಾಲಯವಾದ ನಂದಿ ಗ್ರಾಮದ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ದೇವಸ್ಥಾನಕ್ಕೆ ಬಂದಿದ್ದ ಭಕ್ತರ ಕೈಯಲ್ಲಿದ್ದ ದೇವರ ಪ್ರಸಾದದ ತಟ್ಟೆಯನ್ನೇ ಸಿಬ್ಬಂದಿ ಕಿತ್ತು ಬಿಸಾಡಿ ದುಂಡಾವರ್ತನೆ ತೋರಿರುವ ಅಮಾನವೀಯ ಕೃತ್ಯ ನಡೆದಿದೆ. ಘಟನೆಯಿಂದ ಬೇಸತ್ತ ಕುಟುಂಬ ಸಿಎಂ ಡಿಕೆ ಶಿವಕುಮಾರ್ಗೆ (DK Shivakumar) ದೂರು ನೀಡಿದೆ.
ನಡೆದಿದ್ದೇನು?
ಆಂಧ್ರಪ್ರದೇಶ ಮೂಲದ ಕುಟುಂಬ ಭೋಗನಂದೀಶ್ವರ ದರ್ಶನಕ್ಕೆ ಆಗಮಿಸಿ ಪ್ರಸಾದ ಸ್ವೀಕರಿಸುತ್ತಿತ್ತು. ಈ ವೇಳೆ ಕುಟುಂಬದ ಸದಸ್ಯರು ಎರಡನೇ ಬಾರಿಗೆ ತಟ್ಟೆಗೆ ಅನ್ನ ಹಾಕಿಸಿಕೊಂಡಿದ್ದಾರೆ ಎಂಬ ಕ್ಷುಲ್ಲಕ ಕಾರಣಕ್ಕೆ ಕೋಪಗೊಂಡ ದೇವಸ್ಥಾನದ ಸಿಬ್ಬಂದಿ ಛಾನ್ಸಿ ಎಂಬಾಕೆ, ಭಕ್ತರ ಕೈಯಲ್ಲಿದ್ದ ಪ್ರಸಾದದ ತಟ್ಟೆಯನ್ನು ಕಸಿದು ಎಸೆದಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿಬ್ಬಂದಿಯ ಈ ದುರ್ವರ್ತನೆಯಿಂದ ತೀವ್ರ ಮನನೊಂದ ಮಹಿಳೆ, ನ್ಯಾಯಕ್ಕಾಗಿ ದೇವಸ್ಥಾನದಲ್ಲಿ ದೇವರ ಎದುರೇ ಧರಣಿ ಕುಳಿತುಕೊಂಡಿದ್ದಾರೆ.
ಇದನ್ನೂ ಓದಿ: ದೇವಸ್ಥಾನದ ಜಾಗದಲ್ಲಿ ಚರ್ಚ್ ನಿರ್ಮಾಣ ಆರೋಪ: ಎರಡು ಗುಂಪುಗಳ ಮಧ್ಯೆ ಮಾರಾಮಾರಿ, ನಿಷೇಧಾಜ್ಞೆ ಜಾರಿ!
ಸಿಬ್ಬಂದಿ ಛಾನ್ಸಿ ದೇವಸ್ಥಾನದ ಅಧಿಕೃತ ಸಿಬ್ಬಂದಿ ಅಲ್ಲದಿದ್ದರೂ, ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಕುಮ್ಮಕ್ಕಿನಿಂದಲೇ ದರ್ಪ ತೋರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ‘ತಮ್ಮ ಚಿಕ್ಕಪ್ಪ ರಾಜಕೀಯದಲ್ಲಿದ್ದಾರೆ’ ಎಂಬ ಪ್ರಭಾವವನ್ನು ಬಳಸಿಕೊಂಡು, ದೇವಸ್ಥಾನದ ಅರ್ಚಕರು ಹಾಗೂ ಇತರ ಸಿಬ್ಬಂದಿ ಮೇಲೂ ಈಕೆ ದುಂಡಾವರ್ತನೆ ತೋರುತ್ತಿದ್ದಾರೆ ಎನ್ನಲಾಗಿದೆ.
ಸಿಎಂ ಡಿಕೆ ಶಿವಕುಮಾರ್ಗೆ ದೂರು ನೀಡಿದ ಕುಟುಂಬ
ಇನ್ನು ಸಿಬ್ಬಂದಿ ಛಾನ್ಸಿ ವಿರುದ್ಧ ಮುಜರಾಯಿ ಇಲಾಖೆಯ ತಹಶೀಲ್ದಾರ್ ರುಕ್ಮಿಣಿ ಸೂಚನೆಗಳನ್ನು ದಿಕ್ಕರಿಸಿ ದುಂಡಾವರ್ತನೆ ಆರೋಪವೂ ಕೇಳಿಬಂದಿದೆ. ಸದ್ಯ ಘಟನೆಯಿಂದ ನೊಂದ ಕುಟುಂಬವು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸಿಎಂ ಡಿಕೆ ಶಿವಕುಮಾರ್ಗೆ ದೂರು ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




