
ಚಿಕ್ಕಬಳ್ಳಾಪುರ, ಜುಲೈ 29: ಆಸ್ಪತ್ರೆಯಲ್ಲಿ ನವಜಾತ ಶಿಶು (Newborn baby) ಬಿಟ್ಟು ಎಸ್ಕೇಪ್ ಆಗಿದ್ದ ತಾಯಿ ಅವಿವಾಹಿತೆ ಎನ್ನುವುದು ಇದೀಗ ತನಿಖೆಯಲ್ಲಿ ಪತ್ತೆ ಆಗಿದೆ. ಮಗು ಬಿಟ್ಟು ಹೋಗಿದ್ದ ತಾಯಿ ಇದೀಗ ಚಿಕ್ಕಬಳ್ಳಾಪುರ (chikkaballapur) ಮಕ್ಕಳ ರಕ್ಷಣಾಧಿಕಾರಿ ಮುಂದೆ ಪ್ರತ್ಯಕ್ಷವಾಗಿದ್ದಾರೆ. ಇನ್ನೊಂದೆಡರ ತಾಯಿ ಮಗು ಬಿಟ್ಟು ಹೋದ ದಿನ ಪೊಲೀಸರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡದೆ ದೇವನಹಳ್ಳಿಯ ನಕ್ಷತ್ರಾ ಖಾಸಗಿ ಆಸ್ಪತ್ರೆ ವೈದ್ಯರಿಂದ ಲೂ ಎಡವಟ್ಟಾಗಿದೆ.
ಹಾವೇರಿ ಮೂಲದ 21 ವರ್ಷದ ಈ ಯುವತಿ ತಾನು ಅವಿವಾಹಿತೆಯಾಗಿದ್ದು, ಮಗು ಬೇಡವೆಂದು ದೇವನಹಳ್ಳಿಯ ನಕ್ಷತ್ರ ಖಾಸಗಿ ಆಸ್ಪತ್ರೆಯಲ್ಲಿ ಬಿಟ್ಟು ಹೋಗಿರುವುದಾಗಿ ಮಾಹಿತಿ ನೀಡಿದ್ದಾರೆ. ಕಳೆದ ಶುಕ್ರವಾರ ಈ ಗಂಡು ಶಿಶು ಜನಿಸಿದ್ದು, ಆಸ್ಪತ್ರೆಯ ಸಂಪೂರ್ಣ ಬಿಲ್ ಪಾವತಿಸಿದ ನಂತರವೇ ತಾನು ಮಗುವನ್ನು ಬಿಟ್ಟು ತೆರಳಿದ್ದಾಗಿ ಯುವತಿ ಹೇಳಿದ್ದಾರೆ. ಸದ್ಯ ಮಕ್ಕಳ ಕಲ್ಯಾಣ ಸಮಿತಿ ಪದಾಧಿಕಾರಿಗಳು ಯುವತಿಗೆ ಆಪ್ತ ಸಮಾಲೋಚನೆ ನಡೆಸಿದ್ದು, ಆಕೆ ಈಗಲೂ ಮಗು ತನಗೆ ಬೇಡ ಎಂದೇ ಹೇಳಿದ್ದಾರೆ.
ಇನ್ನು ಪ್ರಕರಣದ ಆರಂಭದಲ್ಲಿ ದೇವನಹಳ್ಳಿಯ ನಕ್ಷತ್ರಾ ಖಾಸಗಿ ಆಸ್ಪತ್ರೆಯ ವೈದ್ಯರಿಂದ ದೊಡ್ಡ ಎಡವಟ್ಟಾಗಿರುವುದು ಕಂಡುಬಂದಿದೆ. ಯುವತಿ ಮಗುವನ್ನು ಬಿಟ್ಟು ಹೋದ ತಕ್ಷಣವೇ ಈ ಬಗ್ಗೆ ಪೊಲೀಸರಿಗಾಗಲಿ ಅಥವಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಾಗಲಿ ಯಾವುದೇ ಮಾಹಿತಿ ನೀಡಿಲ್ಲ.
ಇದನ್ನೂ ಓದಿ: ಸಿದ್ದರಬೆಟ್ಟದಲ್ಲಿ ಎಣ್ಣೆ ಪಾರ್ಟಿ: ಒಂದೇ ಬಾರಿಗೆ 6 ಪಿಡಿಒ, ಇಬ್ಬರು ಕಾರ್ಯದರ್ಶಿಗಳು ಸಸ್ಪೆಂಡ್
ತದನಂತರ ಅನಾರೋಗ್ಯದ ಹಿನ್ನೆಲೆಯಲ್ಲಿ ಮಗುವನ್ನು ಚಿಕ್ಕಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದಾಗ ಈ ಅಮಾನವೀಯ ಪ್ರಕರಣ ಬೆಳಕಿಗೆ ಬಂದಿತ್ತು. ಸದ್ಯ ಗಂಡು ಶಿಶುವನ್ನು ಚಿಕ್ಕಬಳ್ಳಾಪುರದ ಜಿಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಪಟ್ಟಣದ ನಕ್ಷತ್ರ ಖಾಸಗಿ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರ ಹಾವೇರಿ ಮೂಲದ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ ಮಗು ಕಡಿಮೆ ತೂಕ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಕಾರಣ ಹೆಚ್ಚಿನ ಚಿಕಿತ್ಸೆಗೆ ಚಿಕ್ಕಬಳ್ಳಾಪುರ ನಗರದ ಮಾನಸ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಜೊತೆ ಕೇರ್ಟೇಕರ್ ಬಂದಿದ್ದರೂ, ಮಗುವಿನ ತಾಯಿ ಆಸ್ಪತ್ರೆಯಲ್ಲಿ ಇಲ್ಲ ಎಂಬ ಮಾಹಿತಿ ವೈದ್ಯರಿಗೆ ಅನುಮಾನ ಹುಟ್ಟಿಸಿತ್ತು.
ತಾಯಿ ಕಾಣಿಸದ ಹಿನ್ನೆಲೆ ಆಸ್ಪತ್ರೆಯ ವೈದ್ಯರು ತಕ್ಷಣವೇ ಚಿಕ್ಕಬಳ್ಳಾಪುರ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಆಧರಿಸಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದ್ದರು.
ಇದನ್ನೂ ಓದಿ: ಲೋಕಾಪುರ ಡಿಸಿಸಿ ಬ್ಯಾಂಕ್ನಲ್ಲಿ ಗೋಲ್ಮಾಲ್: ಪರ್ಸನಲ್ ಖಾತೆಗೆ ಹಣ ಹಾಕಿಸಿಕೊಂಡು ಮ್ಯಾನೇಜರ್ ಎಸ್ಕೇಪ್
ಇನ್ನು ಆಸ್ಪತ್ರೆಯಲ್ಲಿ ಯುವತಿ ನೀಡಿದ್ದ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಆಕೆ ಹಾವೇರಿ ಜಿಲ್ಲೆ ಮೂಲದವಳು ಎಂಬುದು ತಿಳಿದುಬಂದಿತ್ತು. ಯುವತಿಗೆ ವಿವಾಹವಾಗಿರಲಿಲ್ಲ ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.