ಚಿಕ್ಕಮಗಳೂರಲ್ಲಿ ನಕಲಿ ನಾಟಿ ತುಪ್ಪ ತಯಾರಿ ಜಾಲ ಪತ್ತೆ: ರಾಶಿ ರಾಶಿ ರಾಸಾಯನಿಕ ಕಂಡು ಅಧಿಕಾರಿಗಳೇ ದಂಗು!
ಚಿಕ್ಕಮಗಳೂರಿನಲ್ಲಿ ಡಾಲ್ಡಾ, ವನಸ್ಪತಿ ಹಾಗೂ ರಾಸಾಯನಿಕ ಬಳಸಿ ನಕಲಿ ನಾಟಿ ತುಪ್ಪ ತಯಾರಿಸುತ್ತಿದ್ದ ಜಾಲವನ್ನು ಆಹಾರ ಇಲಾಖೆ ಅಧಿಕಾರಿಗಳು ಪತ್ತೆಹಚ್ಚಿದ್ದು, ಎಸ್ಕೇಪ್ ಆಗಿರುವ ಬಳ್ಳಾರಿ ಮೂಲದ ಖದೀಮರಿಗಾಗಿ ಶೋಧ ನಡೆಸುತ್ತಿದ್ದಾರೆ. ಕಳೆದ ಹಲವು ವರ್ಷಗಳಿಂದಲೂ ಇವರು ಇದೇ ಕೆಲಸ ಮಾಡಿಕೊಂಡು ಬಂದಿರುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ.

ಚಿಕ್ಕಮಗಳೂರು, ಆಗಸ್ಟ್ 21: ಆಯುರ್ವೇದದಲ್ಲಿ ತನ್ನದೇ ಸ್ಥಾನ ಪಡೆದು , ಸಂಜೀವಿನಿ ಎಂಬ ಹೆಸರು ಪಡೆದಿರುವ ನಾಟಿ ತುಪ್ಪಕ್ಕೆ ಮಾರುಕಟ್ಟೆಯಲ್ಲಿ ಬಹು ಬೇಡಿಕೆ ಇದೆ. ಇದನ್ನೇ ಬಂಡವಾಳ ಮಾಡಿಕೊಂಡ ತಂಡವೊಂದು ಚಿಕ್ಕಮಗಳೂರಿನಲ್ಲಿ (Chikkamagaluru) ಕಲಬೆರಕೆ ತುಪ್ಪ ತಯಾರಿಸಿ ಮಾರಾಟ ಮಾಡುತ್ತಿರುವ ಆಘಾತಕಾರಿ ವಿಚಾರ ಅಧಿಕಾರಿಗಳ ದಾಳಿ ವೇಳೆ ಬಯಲಾಗಿದೆ. ನಗರದ ಮಾರ್ಕೆಟ್ ರಸ್ತೆಯ ಪಾಳುಬಿದ್ದ ಮನೆಯ ಮೇಲೆ ಆಹಾರ ಇಲಾಖೆಯ ಅಧಿಕಾರಿಗಳು ಪೊಲೀಸರ ನೆರವು ಪಡೆದು ರೇಡ್ ನಡೆಸಿದ್ದು, ಮನೆಯಲ್ಲಿ ಪತ್ತೆಯಾಗಿರುವ ರಾಶಿ ರಾಶಿ ರಾಸಾಯನಿಕ ಕಂಡು ಶಾಕ್ ಆಗಿದ್ದಾರೆ.
ದಾಳಿ ವೇಳೆ ಕೈಗೆ ಸಿಗದ ಆರೋಪಿಗಳು
ಪಾಳು ಬಿದ್ದ ಮನೆಯಲ್ಲಿ ನಕಲಿ ನಾಟಿ ತುಪ್ಪ ತಯಾರಿ ಬಗ್ಗೆ ಖಚಿತ ಮಾಹಿತಿಯ ಆಧಾರದಲ್ಲಿ ಅಧಿಕಾರಿಗಳು ಪಾಳು ಬಿದ್ದ ಮನೆ ಮೇಲೆ ದಾಲಿ ನಡೆಸಿದ್ದಾರೆ. ಆದರೆ ಈ ವೇಳೆ ಮನೆಯ ಬಾಗಿಲು ಲಾಕ್ ಆಗಿದ್ದ ಕಾರಣ, ಬೀಗ ಮುರಿದು ಒಳ ಪ್ರವೇಶಿಸಿದ ಅಧಿಕಾರಿಗಳು ಡಾಲ್ಡಾ, ವನಸ್ಪತಿ , ಪಾಮ್ ಆಯಿಲ್ ಸೇರಿ ವಿವಿಧ ರಾಸಾಯನಿಕಗಳ ಬಾಟಲಿಗಳನ್ನು ಸ್ಥಳದಲ್ಲಿ ಪತ್ತೆ ಮಾಡಿದ್ದಾರೆ. ಕಲಬೆರೆಕೆ ನಾಟಿ ತುಪ್ಪವನ್ನು ಖದೀಮರು ಹಳ್ಳಿ ಸೇರಿ ನಗರಗಳಲ್ಲಿಯೂ ಮಾರುತ್ತಿದ್ದರು ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ರಾಣಿ ಝರಿ ಪ್ರವಾಸಿ ತಾಣದಲ್ಲಿ ರೀಲ್ಸ್ಗಾಗಿ 3000 ಅಡಿ ಪ್ರಪಾತದ ಅಂಚಿನಲ್ಲಿ ಥಾರ್ ಜೀಪ್ ಓಡಿಸಿ ಹುಚ್ಚಾಟ
ಬೇರೆ ಜಿಲ್ಲೆಯಿಂದ ಬಂದವರಿಂದ ಕೃತ್ಯ
ಇನ್ನು ಈ ರೀತಿ ನಕಲಿ ನಾಟಿ ತುಪ್ಪ ತಯಾರಿಸುತ್ತಿದ್ದ ಗ್ಯಾಂಗ್ನ ಸದಸ್ಯರು ಸ್ಥಳೀಯರಲ್ಲ. ಬದಲಾಗಿ ಬಳ್ಳಾರಿಯಿಂದ ಬಂದವರು ಎಂಬುದು ಕೂಡ ಬಹಿರಂಗಗೊಂಡಿದೆ. ಕಳೆದ ಹಲವು ವರ್ಷಗಳಿಂದಲೂ ಇವರು ಇದೇ ಕೆಲಸ ಮಾಡಿಕೊಂಡು ಬಂದಿರುವ ವಿಚಾರವೂ ತನಿಖೆ ವೇಳೆ ಬಯಲಾಗಿದೆ. ಪುಟ್ಟ ಮಕ್ಕಳು ಸೇರಿದಂತೆ ಹಿರಿಯರವರೆಗೂ ಬಳಸುವ ನಾಟಿ ತುಪ್ಪದ ಹೆಸರಲ್ಲಿ ಕಲಬೆರೆಕೆ ಪದಾರ್ಥ ಮಾರುತ್ತಿದ್ದ ವಿಚಾರ ಕೇಳಿ ಸ್ಥಳೀಯರು ಬೆಚ್ಚಿಬಿದ್ದಿದ್ದು, ಎಸ್ಕೇಪ್ ಆಗಿರುವ ದಂಧೆಕೋರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಅವರೆಲ್ಲ ಖಾಕಿ ಖೆಡ್ಡಾಕ್ಕೆ ಬಿದ್ದ ಬಳಿಕವೇ ಈ ಬಗ್ಗೆ ಇನ್ನಷ್ಟು ವಿಚಾರಗಳು ಬಹಿರಂಗವಾಗಲಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




