ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆ, ಪುತ್ರನ ಬಂಧಿಸಿದ ಬಾಗೇಪಲ್ಲಿ ಪೊಲೀಸರು

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿ ಗ್ರಾಮದಲ್ಲಿ ಅಕ್ರಮವಾಗಿ ನೆಲೆಸಿದ್ದರೆಂಬ ಆರೋಪದಡಿ ಪಾಕಿಸ್ತಾನ ಮೂಲದ ಮಹಿಳೆ ಹಾಗೂ ಆಕೆಯ ಪುತ್ರನನ್ನು ಪೊಲೀಸರು ಬಂಧಿಸಿದ್ದಾರೆ. ಭಾರತೀಯ ಪೌರತ್ವವಿಲ್ಲದಿದ್ದರೂ ಆಧಾರ್, ರೇಷನ್ ಕಾರ್ಡ್, ಮತದಾರರ ಗುರುತಿನ ಚೀಟಿ ಸೇರಿದಂತೆ ಹಲವು ದಾಖಲೆಗಳನ್ನು ಹೊಂದಿದ್ದ ಆರೋಪವೂ ಅವರ ವಿರುದ್ಧ ಕೇಳಿಬಂದಿದೆ.

ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆ, ಪುತ್ರನ ಬಂಧಿಸಿದ ಬಾಗೇಪಲ್ಲಿ ಪೊಲೀಸರು
ಬಾಗೇಪಲ್ಲಿ ಪೊಲೀಸ್ ಠಾಣೆ
Image Credit source: tv9
Edited By:

Updated on: Jul 11, 2026 | 10:10 AM

ಮುಖ್ಯಾಂಶಗಳು

  • ವೀಸಾ ಅವಧಿ ಮುಗಿದ ಬಳಿಕವೂ ಇಲ್ಲೇ ವಾಸ
  • ಅಕ್ರಮ ದಾಖಲೆ ಹೊಂದಿದ ಆರೋಪ
  • ತಾಯಿ, ಪುತ್ರನ ವಿರುದ್ಧ ಪ್ರಕರಣ ದಾಖಲು

ಚಿಕ್ಕಬಳ್ಳಾಪುರ, ಜುಲೈ 11: ಚಿಕ್ಕಬಳ್ಳಾಪುರ (Chikkaballapur ಜಿಲ್ಲೆಯ ಬಾಗೇಪಲ್ಲಿ ತಾಲೂಕಿನ ದಾಸಗಾರೆಪಲ್ಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನ ಮೂಲದ ಫರ್ಹಾನಾಜ್ ಮತ್ತು ಆಕೆಯ ಪುತ್ರ ಮೊಹಮ್ಮದ್ ಫರ್ದೀನ್ ಖಾನ್ ಅನ್ನು ಬಾಗೇಪಲ್ಲಿ ಪೊಲೀಸರು ಬಂಧಿಸಿದ್ದಾರೆ. ವೀಸಾ ಅವಧಿ ಮುಗಿದ ಬಳಿಕವೂ ಭಾರತದಲ್ಲೇ ಅಕ್ರಮವಾಗಿ ನೆಲೆಸಿದ್ದ ಆರೋಪದಡಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ.

ಸ್ಥಳೀಯ ನಿವಾಸಿಯ ಮದುವೆಯಾಗಿ ಇಲ್ಲೇ ವಾಸ

ಪೊಲೀಸರ ಪ್ರಾಥಮಿಕ ಮಾಹಿತಿಯ ಪ್ರಕಾರ, ದಾಸಗಾರೆಪಲ್ಲಿಯ ನಿವಾಸಿ ಅಯೂಬ್ ಖಾನ್ ಪಾಕಿಸ್ತಾನ ಮೂಲದ ಫರ್ಹಾನಾಜ್ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದು, ಅವರಲ್ಲಿ ಪುತ್ರ ಮೊಹಮ್ಮದ್ ಫರ್ದೀನ್ ಖಾನ್‌ನನ್ನೂ ಪೊಲೀಸರು ಬಂಧಿಸಿದ್ದಾರೆ. ಫರ್ಹಾನಾಜ್ ಹಾಗೂ ಪುತ್ರ ಪಾಕಿಸ್ತಾನದ ಪೌರತ್ವ ಹೊಂದಿದ್ದಾರೆ ಎಂದು ತಿಳಿದುಬಂದಿದೆ.

ಭಾರತೀಯ ಪೌರತ್ವ ಇಲ್ಲದಿದ್ದರೂ ರೇಷನ್ ಕಾರ್ಡ್, ವೋಟರ್ ಐಡಿ!

ಆರೋಪಿಗಳಿಬ್ಬರೂ ಭಾರತೀಯ ಪೌರತ್ವ ಹೊಂದಿರದಿದ್ದರೂ ಅಕ್ರಮವಾಗಿ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಹಾಗೂ ಬ್ಯಾಂಕ್ ಖಾತೆಗಳನ್ನು ಹೊಂದಿರುವ ಆರೋಪವೂ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ದಾಖಲೆಗಳ ಸತ್ಯಾಸತ್ಯತೆಯನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಇದನ್ನೂ ಓದಿ: ‘ಅಕ್ರಮ ವಲಸಿಗರಿಗೆ ಮಣೆ, ಭದ್ರತೆಗೆ ಧಕ್ಕೆ’: ಕರ್ನಾಟಕ ಶಾಶ್ವತ ನಿವಾಸಿ ಪ್ರಮಾಣ ಪತ್ರಕ್ಕೆ ತಡೆನೀಡಲು ಅಮಿತ್ ಶಾಗೆ ಶೋಭಾ ಪತ್ರ

ಫರ್ಹಾನಾಜ್ ಅವರ ಪತಿ ಅಯೂಬ್ ಖಾನ್ ಪ್ರಸ್ತುತ ಕತಾರ್‌ನಲ್ಲಿ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು, ಫರ್ಹಾನಾಜ್ ಮತ್ತು ಇಬ್ಬರು ಮಕ್ಕಳು ದಾಸಗಾರೆಪಲ್ಲಿ ಗ್ರಾಮದಲ್ಲೇ ವಾಸಿಸುತ್ತಿದ್ದರು ಎಂದು ತಿಳಿದುಬಂದಿದೆ.

ಆಪರೇಷನ್ ಸಿಂದೂರ್ ನಂತರ ನವೀಕರಣಗೊಳ್ಳದ ವೀಸಾ

ಫರ್ಹಾನಾಜ್ ಮತ್ತು ಮಕ್ಕಳ ವೀಸಾ ಅವಧಿ ಮುಕ್ತಾಯಗೊಂಡಿದ್ದರೂ ಅವರು ಪಾಕಿಸ್ತಾನಕ್ಕೆ ಮರಳಿರಲಿಲ್ಲ. ‘ಆಪರೇಷನ್ ಸಿಂದೂರ್’ ನಂತರ ವೀಸಾ ನವೀಕರಣವೂ ಆಗಿರಲಿಲ್ಲ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಅಕ್ರಮ ವಲಸಿಗರಾಗಿರುವ ಕುರಿತು ದೂರು ದಾಖಲಾಗಿದ್ದು, ತನಿಖೆ ನಡೆಸಿದ ಪೊಲೀಸರು ತಾಯಿ ಹಾಗೂ ಪುತ್ರನನ್ನು ಬಂಧಿಸಿ ಕಾನೂನು ಕ್ರಮ ಕೈಗೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:09 am, Sat, 11 July 26

Follow Us