
ಚಿಕ್ಕಮಗಳೂರು, ಫೆ.17: ಪ್ರೀತಿಸಿ ಮದುವೆಯಾಗಿ 12 ವರ್ಷಗಳ ಸುಖ ಸಂಸಾರ ನಡೆಸಿದ್ದ ದಂಪತಿಗಳ ನಡುವೆ ಅನುಮಾನದ ಕಿಚ್ಚು ಹತ್ತಿ, ದಾಂಪತ್ಯ ಜೀವನವೇ ನಾಶವಾಗಿದೆ. ಈ ಅನುಮಾನದ ಭೂತದಿಂದ ಪತ್ನಿಯ ಕೊಲೆ ಮಾಡಿರುವ ಘಟನೆ ಬೀರೂರು ಪಟ್ಟಣದ ಚೌಡೇಶ್ವರಿಯಲ್ಲಿ ನಡೆದಿದೆ. ಕೊಲೆಯಾದ ಮಹಿಳೆಯನ್ನು ಮಮತಾ (32) ಎಂದು ಗುರುತಿಸಲಾಗಿದೆ. ಇದೀಗ ಕೊಲೆ ಮಾಡಿದ ಪತಿ ರಂಗನಾಥ್ ಪೊಲೀಸರ ವಶದಲ್ಲಿದ್ದಾನೆ. ಅಜ್ಜಂಪುರ ತಾಲೂಕಿನ ಬುರುಡೆಕಟ್ಟೆ ಗ್ರಾಮದ ರಂಗನಾಥ್ ಮತ್ತು ಮಮತಾ ಪರಸ್ಪರ ಪ್ರೀತಿಸಿ 12 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. 7 ವರ್ಷಗಳ ಹಿಂದೆ ಇವರು ಬೀರೂರಿಗೆ ಬಂದು ನೆಲೆಸಿದ್ದರು.
ಗಾರೆ ಕೆಲಸ ಮಾಡುತ್ತಿದ್ದ ರಂಗನಾಥ್ ಸುಖ ಸಂಸಾರವನ್ನು ಮಾಡುತ್ತಿದ್ದ, ಗಂಡನಿಗೆ ಸಹಾಯವಾಗಲಿ ಎಂದು ಮಮತಾ ಕೂಡ ಅಡಿಕೆ ಸುಲಿಯುವ ಮತ್ತು ಮದುವೆ ಮಂಟಪಗಳಲ್ಲಿ ಕೆಲಸ ಮಾಡುತ್ತಿದ್ದಳು. ಕೆಲಸದ ನಿಮಿತ್ತ ಹೊರಹೋಗುತ್ತಿದ್ದ ಮಮತಾಗೆ ಮೊಬೈಲ್ ಚಟ ಹೆಚ್ಚಾಗಿತ್ತು. ಇದರಿಂದ ಹಲವಾರು ಪುರುಷರ ಜೊತೆ ಅವರು ಸಂಪರ್ಕದಲ್ಲಿದ್ದಾಳೆ ಎಂಬ ಸಂಶಯ ರಂಗನಾಥ್ ಮನಸ್ಸಿನಲ್ಲಿ ಇತ್ತು. ಫೆಬ್ರವರಿ 4ರ ಸಂಜೆ ಮಗನ ಹುಟ್ಟುಹಬ್ಬದ ಆಚರಣೆಗೆ ಮನೆಯಲ್ಲಿ ಸಿದ್ಧತೆ ನಡೆದಿತ್ತು. ಇದೇ ವೇಳೆ ಮಮತಾ ಮೊಬೈಲ್ನಲ್ಲೇ ಬ್ಯುಸಿಯಾಗಿರುವುದನ್ನು ನೋಡಿ ರಂಗನಾಥ್ ಅವರ ಕೋಪ ನೆತ್ತಿಗೇರಿತ್ತು. ಆಕ್ರೋಶಗೊಂಡ ರಂಗನಾಥ್, ಮಕ್ಕಳ ಮುಂದೆಯೇ ಗಲಾಟೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಅಪಘಾತದಿಂದ ಯುವಕ-ಯುವತಿ ರಸ್ತೆ ಮಧ್ಯೆ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದರೂ ಬಾರದ ಆಂಬುಲೆನ್ಸ್
ಜಗಳ ವಿಕೋಪಕ್ಕೆ ಹೋಗಿ, ಮಮತಾಳನ್ನು ನೆಲಕ್ಕೆ ಕೆಡವಿ ಕತ್ತು ಹಿಸುಕಿ, ವೇಲ್ನಿಂದ ಬಿಗಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಹತ್ಯೆಯ ನಂತರ ರಾತ್ರಿಯಿಡೀ ಹೆಂಡತಿಯ ಶವ ಮತ್ತು ಮಕ್ಕಳ ಜೊತೆಯೇ ಕಳೆದ ಹಂತಕ ರಂಗನಾಥ್, ಫೆಬ್ರವರಿ 5ರ ಗುರುವಾರ ಬೆಳಿಗ್ಗೆ ಬೀರೂರು ಪೊಲೀಸ್ ಠಾಣೆಗೆ ಹೋಗಿ, ಸರ್, ನನ್ನ ಹೆಂಡತಿ ರಾತ್ರಿ ಚೆನ್ನಾಗಿದ್ದಳು, ಬೆಳಿಗ್ಗೆ ಎದ್ದೇಳುತ್ತಿಲ್ಲ ಎಂದು ಕಥೆ ಕಟ್ಟಿದ್ದಾನೆ. ಆದರೆ ಮನೆಗೆ ಬಂದು ಪರಿಶೀಲಿಸಿದ ಪೊಲೀಸರಿಗೆ ಕುತ್ತಿಗೆಯ ಮೇಲಿದ್ದ ಗುರುತುಗಳನ್ನು ನೋಡಿ ಇದು ಕೊಲೆ ಎಂದು ಖಚಿತವಾಗಿದೆ. ವಿಚಾರಣೆ ನಡೆಸಿದಾಗ ರಂಗನಾಥ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಹೆಂಡತಿ ಬರ್ಬರವಾಗಿ ಹತ್ಯೆಯಾಗಿದ್ದು, ಗಂಡ ಜೈಲು ಪಾಲಾಗಿದ್ದಾನೆ. ತಂದೆ-ತಾಯಿಯ ನಡುವಿನ ಜಗಳ ಮತ್ತು ಅನುಮಾನಕ್ಕೆ ಇಬ್ಬರು ಮುಗ್ಧ ಮಕ್ಕಳು ಅನಾರ್ಥರಾಗಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ