ಹಣದಾಸೆಗೆ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ!

ಹಣಕ್ಕಾಗಿ ತಂದೆ ಅಪ್ರಾಪ್ತ ಮಗಳನ್ನೇ ವೇಶ್ಯಾವಾಟಿಕೆಗೆ ದೂಡಿದ ಘಟನೆ ಚಿಕ್ಕಮಗಳೂರಿನ ಬೀರೂರಿನಲ್ಲಿ ನಡೆದಿದೆ. ಸಂತ್ರಸ್ತೆಯ ಅಜ್ಜಿ ಮನೆಗೆ ಆಗಮಿಸಿದ್ದ ಮಂಗಳೂರಿನ ಕಿಂಗ್ಪಿನ್ನಿಂದ ಮಗಳ ಮೇಲೆ ಲೈಂಗಿಕ ಶೋಷಣೆ ನಡೆದಿತ್ತು. ಬಾಲಕಿ ದೂರಿನ ಮೇರೆಗೆ ತಂದೆ, ಅಜ್ಜಿ ಸೇರಿ 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.

ಹಣದಾಸೆಗೆ ಹೆತ್ತ ಮಗಳನ್ನೇ ವೇಶ್ಯಾವಾಟಿಕೆ ದಂಧೆಗೆ ದೂಡಿದ ತಂದೆ!
ಬಂಧಿತ ಆರೋಪಿಗಳು
Edited By:

Updated on: Jan 07, 2026 | 10:38 AM

ಚಿಕ್ಕಮಗಳೂರು, ಜನವರಿ 07: ತಂದೆ- ತಾಯಿ ಎಷ್ಟೇ ಕಷ್ಟವಿದ್ದರೂ ಮಕ್ಕಳು ಚನ್ನಾಗಿರಲೆಂದು ಯೋಚಿಸುತ್ತಾರೆ. ಆದರೆ ಇಲ್ಲೊಬ್ಬ ಪಾಪಿ ತಂದೆ ಹೆತ್ತ ಮಗಳನ್ನೇ ದಂಧೆಗಿಳಿಸಿದ್ದಾನೆ. ಹಣದಾಸೆಗಾಗಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆಯೇ ವೇಶ್ಯಾವಾಟಿಕೆಗೆ ದೂಡಿರುವ ಅಮಾನವೀಯ ಘಟನೆ ಚಿಕ್ಕಮಗಳೂರು ಜಿಲ್ಲೆಯ ಬೀರೂರಿನಲ್ಲಿ ನಡೆದಿದೆ.

ಅಜ್ಜಿ ಮನೆಗೆ ಬಂದಿದ್ದವಳಿಗೆ ಕಾದಿತ್ತು ಕಂಟಕ

ದಿನಕ್ಕೆ 5 ಸಾವಿರ ರೂಪಾಯಿ ಸಿಗುತ್ತದೆಯೆಂಬ ಆಸೆಗೆ ತಂದೆಯೊಬ್ಬ ಹೆತ್ತ ಮಗಳನ್ನೇ ದಂಧೆಗೆ ಒಪ್ಪಿಸಿದ್ದಾನೆ ಎನ್ನಲಾಗಿದೆ. ತಾಯಿಯನ್ನು ಕಳೆದುಕೊಂಡು ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತೆ, PUC ವರೆಗೂ ವಿದ್ಯಾಭ್ಯಾಸ ಮುಗಿಸಿದ ನಂತರ ತಂದೆ ಮನೆಗೆ ಮರಳಿದ್ದಳು. ಈ ವೇಳೆ ಡಿಸೆಂಬರ್​ನಲ್ಲಿ ತಂದೆಯೊಂದಿಗೆ ಅಜ್ಜಿಯ ಮನೆಗೆ ಹೋಗಿ 2 ದಿನ ಉಳಿದು ಬಂದಿದ್ದಳು. ಮತ್ತೊಮ್ಮೆ ಅಜ್ಜಿಯಿಂದ ಬುಲಾವು ಬಂದಿದೆಯೆಂದು ಆಕೆಯ ಮನೆಗೆ ಹೋದ ಹುಡುಗಿಗೆ ಕಂಟಕ ಕಾದಿತ್ತು. ಅದೇ ಸಂದರ್ಭದಲ್ಲಿ ಅಜ್ಜಿಯ ಮನೆಗೆ ಆಗಮಿಸಿದ್ದ ಭರತ್ ಶೆಟ್ಟಿ ಎಂಬಾತ ತಂದೆ- ಮಗಳೊಡನೆ ಸಲುಗೆ ಬೆಳೆಸಿದ್ದ. ಆತನ ಮನೆಗೆ ಬಂದು ತಂಗುವಂತೆಯೂ ತಿಳಿಸಿದ್ದ.

ಎರಡು ದಿನಗಳಕಾಲ ನಾಲ್ವರಿಂದ ಅತ್ಯಾಚಾರ

ಇದಕ್ಕೊಪ್ಪಿದ್ದ ತಂದೆ ಮಗಳಿಬ್ಬರೂ ಭರತ್​ನೊಂದಿಗೆ ಮಂಗಳೂರಿಗೆ ತೆರಳಿದ್ದರು. ಮಾರ್ಗ ಮಧ್ಯದಲ್ಲಿ ತಾನು ಮುಟ್ಟಾಗಿರುವುದಾಗಿ ತಂದೆಗೆ ತಿಳಿಸಿದ್ದಳು. ಆದಾಗಿಯೂ ಮರುದಿನ ಅಪ್ರಾಪ್ತೆ ಬಳಿ ಬಂದ ಭರತ್, 4-5 ಜನ ಬರುತ್ತಾರೆ, ಅವರೊಂದಿಗೆ ದೈಹಿಕ ಸಂಪರ್ಕ ಬೆಳೆಸುವಂತೆ ಒತ್ತಾಯಿಸಿದ್ದ ಎಂದು ಸಂತ್ರಸ್ತೆ ಆರೋಪಿಸಿದ್ದಾಳೆ. ಅವನ ಮಾತಿನಂತೆ 20ರಿಂದ ಹಿಡಿದು 45 ವರ್ಷ ವಯೋಮಿತಿಯ ನಾಲ್ವರು ಒಬ್ಬರಾದ ಮೇಲೊಬ್ಬರಂತೆ ಆಕೆಯನ್ನು ಲೈಂಗಿಕವಾಗಿ ಶೋಷಿಸಿದ್ದರು. ಇದಾದ ಮರುದಿನವೂ ಇದೇ ಕೆಲಸಕ್ಕೆ ಒತ್ತಾಯಿಸಿದಾಗ ಹುಡುಗಿ ನಿರಾಕರಿಸಿದರೂ ಮತ್ತೊಮ್ಮೆ ಆಕೆಯ ಮೇಲೆ ಅದೇ ರೀತಿಯ ಲೈಂಗಿಕ ದೌರ್ಜನ್ಯ ನಡೆದಿತ್ತು. ಈ ವೇಳೆ ನಾನು ಅಪ್ರಾಪ್ತೆ, ನನ್ನನ್ನು ಬಿಡಿ ಎಂದು ಎಷ್ಟೇ ಅಂಗಲಾಚಿದರೂ ಕೇಳದ ಕಾಮುಕರು, ನಾವು ಭರತ್ ಶೆಟ್ಟಿಗೆ ಹಣ ನೀಡಿದ್ದೇವೆಂದು ಹೇಳಿ ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.

ಇದನ್ನೂ ಓದಿ Chikkamagaluru: ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ

ಅಪ್ರಾಪ್ತ ಬಾಲಕಿ ನೀಡಿದ ದೂರಿನ ಮೇರೆಗೆ FIR ದಾಖಲಾಗಿದ್ದು, ಬಾಲಕಿಯ ತಂದೆ, ಅಜ್ಜಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಾಂಸ ದಂಧೆಯ ಕಿಂಗ್‌ಪಿನ್ ಎನ್ನಲಾಗಿರುವ ಭರತ್ ಶೆಟ್ಟಿ ಸೇರಿದಂತೆ ಒಟ್ಟು 12 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಭರತ್ ಶೆಟ್ಟಿಯ ವಿರುದ್ಧ ಮಂಗಳೂರು ಮತ್ತು ಉಡುಪಿ ಜಿಲ್ಲೆಗಳಲ್ಲಿ ವೇಶ್ಯಾವಾಟಿಕೆ ಸಂಬಂಧ 8ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಇನ್ನಷ್ಟು ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:25 am, Wed, 7 January 26