ಶೃಂಗೇರಿ: ಬೆಂಗಳೂರು ಗ್ರಾಮಾಂತರದ ಬಗ್ಗೆ ಮಾತನಾಡುವುದಿಲ್ಲವೆಂದ ಡಿಕೆ ಶಿವಕುಮಾರ್, ಕಾರಣವೇನು?

| Updated By: ಗಣಪತಿ ಶರ್ಮ

Updated on: Mar 26, 2024 | 2:22 PM

ಧರ್ಮಸ್ಥಳ, ಕುಕ್ಕೆ ಸುಬ್ರಹ್ಮಣ್ಯ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ನಂತರ ಡಿಸಿಎಂ ಡಿಕೆ ಶಿವಕುಮಾರ್ ಶೃಂಗೇರಿ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಇದೇ ವೇಳೆ, ಶೃಂಗೇರಿ ಜಗದ್ಗುರುಗಳ ಭೇಟಿಯಾಗಿ ಆಶೀರ್ವಾದ ಪಡೆದ ಅವರು, ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು. ಡಿಕೆ ಶಿವಕುಮಾರ್ ಏನೇನಂದರು ಎಂಬ ವಿವರ ಇಲ್ಲಿದೆ.

ಶೃಂಗೇರಿ: ಬೆಂಗಳೂರು ಗ್ರಾಮಾಂತರದ ಬಗ್ಗೆ ಮಾತನಾಡುವುದಿಲ್ಲವೆಂದ ಡಿಕೆ ಶಿವಕುಮಾರ್, ಕಾರಣವೇನು?
ಶೃಂಗೇರಿಯಲ್ಲಿ ಡಿಕೆ ಶಿವಕುಮಾರ್
Follow us on

ಚಿಕ್ಕಮಗಳೂರು, ಮಾರ್ಚ್​ 26: ಲೋಕಸಭೆ ಚುನಾವಣೆ (Lok Sabha Elections) ವಿಚಾರವಾಗಿ ಬೆಂಗಳೂರು ಗ್ರಾಮಾಂತರ (Bengaluru Rural) ಕ್ಷೇತ್ರದ ಬಗ್ಗೆ ಏನೂ ಮಾತನಾಡುವುದಿಲ್ಲ. ಇಡೀ ರಾಜ್ಯದ ಬಗ್ಗೆ ಮಾತನಾಡುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದರು. ಶೃಂಗೇರಿಯಲ್ಲಿ ಮಾತನಾಡಿದ ಅವರು, ನಾನು ರಾಜ್ಯದ ವಿಚಾರ ಮಾತನಾಡುತ್ತೇನೆ, ಗ್ರಾಮಾಂತರದ ಬಗ್ಗೆ ಮಾತಾಡುವುದಿಲ್ಲ. ಗ್ರಾಮಾಂತರದಲ್ಲಿ ದೇವೇಗೌಡರ ಸೊಸೆ ಇದ್ದಾಗಲೂ ಇದೇ ಪರಿಸ್ಥಿತಿ ಇತ್ತು. ಅಂದಿಗೂ ಇಂದಿಗೂ ಬಹಳ ವ್ಯತ್ಯಾಸವಿದೆ ಎಂದರು.

ಪ್ರತಿ ಪಂಚಾಯಿತಿಗೆ ಸದಸ್ಯನಾಗಿದ್ದಂತೆ ಸುರೇಶ್ ಸೇವೆ ಮಾಡುತ್ತಿದ್ದಾರೆ. ಸುರೇಶ್ ಬಗ್ಗೆ ಕ್ಷೇತ್ರದ ಪ್ರತಿ ಮನೆಗೂ ಗೊತ್ತು. ಜನ ತೀರ್ಮಾನ ಮಾಡುತ್ತಾರೆ ಎಂದು ಅವರು ಹೇಳಿದರು.

ಜೆಡಿಎಸ್ ನಾಯಕ ಹೆಚ್​ಡಿ ಕುಮಾರಸ್ವಾಮಿ ಮಂಡ್ಯದಲ್ಲಿ ಸ್ಪರ್ಧಿಸುವಂತೆ ಕಾರ್ಯಕರ್ತರು ಒತ್ತಡ ಹಾಕುತ್ತಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿ, ಅದು ಅವರ ಪಕ್ಷದ ವಿಚಾರ. ಅವರ ಆಯ್ಕೆ. ಮಂಡ್ಯ, ಬೆಂಗಳೂರು, ಗ್ರಾಮಾಂತರ ಚಿಕ್ಕಬಳ್ಳಾಪುರ ಹಾಸನ ಎಲ್ಲಿಯಾದರೂ ಸ್ಪರ್ಧೆ ಮಾಡಲಿ. 2 ಪಾರ್ಟಿ ಸೇರಿ ತೀರ್ಮಾನ ಮಾಡಿದ್ದಾರೆ. ಅವರಿಗೆ ಅನುಕೂಲವಾಗುವ ಕಡೆ ನಿಲ್ಲಲಿ. ಈಗ ನಾವ್ಯಾಕೆ ಅದರ ಬಗ್ಗೆ ಮಾತನಾಡಬೇಕು. ಮೊದಲಿಂದ ನಾವು ಹೇಗೆ ನಡೆದುಕೊಂಡಿರುತ್ತೇಯೋ ಅದರ ಆಧಾರದ ಮೇಲೆ ಜನ ತೀರ್ಮಾನ ಮಾಡುತ್ತಾರೆ ಎಂದು ಡಿಕೆ ಶಿವಕುಮಾರ್ ಹೇಳಿದರು.

ತಂಗಡಗಿ ಹೇಳಿಕೆ ಸಮರ್ಥಿಸಿದ ಡಿಕೆ ಶಿವಕುಮಾರ್

‘ಮೋದಿ ಮೋದಿ’ ಎಂಬ ಘೋಷಣೆ ಕೂಗುವ ಯುವಕರ ಕೆನ್ನೆಗೆ ಬಾರಿಸಬೇಕು ಎಂಬ ಸಚಿವ ಶಿವರಾಜ ತಂಗಡಗಿ ಹೇಳಿಕೆಯನ್ನು ಡಿಕೆ ಶಿವಕುಮಾರ್ ಸಮರ್ಥಿಸಿಕೊಂಡಿದ್ದಾರೆ. ನಾಡ ಭಾಷೆಯಲ್ಲಿ ತಂಗಡಗಿ ಮಾತನಾಡಿದ್ದಾರೆ ಅಷ್ಟೇ. ಅದೇನು ದೊಡ್ಡದಲ್ಲ. ತಂಗಡಗಿಯನ್ನ ಲೀಡರ್ ಮಾಡುತ್ತಿದ್ದಾರೆ ಬಿಜೆಪಿಯವರು, ಮಾಡಲಿ ಎಂದು ಹೇಳಿದ್ದಾರೆ.

ಎಲ್ಲರ ಆಶೀರ್ವಾದ ಪಡೆದ ಬಳಿಕ ಧರ್ಮ ಯುದ್ಧ

ಎಲ್ಲರೂ ಅವರವರ ಧರ್ಮದ ಬಗ್ಗೆ ನಂಬಿಕೆ ಇಟ್ಟುಕೊಂಡು ಬದುಕಬೇಕು. ಎಲ್ಲ ಮಾಡುವುದು ನೆಮ್ಮದಿ, ಶಾಂತಿಗೋಸ್ಕರ. ಇವತ್ತು ಶಾರದಾಂಬೆಯ ಸನ್ನಿದಿಗೆ ಬಂದಿದ್ದೇನೆ, ಬೆಳಗ್ಗೆ ಧರ್ಮಸ್ಥಳಕ್ಕೆ ಮತ್ತು ಕುಕ್ಕೆಗೆ ಹೋಗಿದ್ದೆ. ಈಗ ತಾನೆ ಗುರುಗಳನ್ನು ಭೇಟಿ ಮಾಡಿದ್ದೇನೆ, ಸಂಜೆ ಕೊಲ್ಲೂರಿಗೆ ಹೋಗುತ್ತೇನೆ. ನಾಳೆ ಕುಮಟಾ‍, ಇಡಗುಂಜಿ ಗಣಪತಿ ದೇವಸ್ಥಾನಕ್ಕೆ ಹೋಗುತ್ತೇನೆ. ನಾಳೆ ಮೈಸೂರಿಗೆ ಹೋಗಿ ಚಾಮುಂಡೇಶ್ವರಿ ದರ್ಶನ ಪಡೆಯುತ್ತೇನೆ. ಎಲ್ಲರ ಆಶೀರ್ವಾದ ಪಡೆದು ಧರ್ಮದ ಯುದ್ಧ ಪ್ರಾರಂಭವಾಗಲಿದೆ. ಪ್ರಯತ್ನ ವಿಫಲವಾಗಬಹುದು ಆದರೆ ಪ್ರಾರ್ಥನೆ ವಿಫಲ ಆಗುವುದಿಲ್ಲ ಎಂಬುದು ನನ್ನ ನಂಬಿಕೆ. ಪ್ರಾರ್ಥನೆ ಫಲ ಕೊಡುತ್ತದೆ ಎಂಬ ನಂಬಿಕೆ ನನ್ನದು ಎಂದು ಡಿಕೆ ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಧರ್ಮ ಯುದ್ಧಕ್ಕೂ ಮುನ್ನ ಮಂಜುನಾಥನ ದರ್ಶನ ಪಡೆದೆ: ಧರ್ಮಸ್ಥಳದಲ್ಲಿ ಡಿಕೆ ಶಿವಕುಮಾರ್ ಮಾರ್ಮಿಕ ಮಾತು

ನನ್ನ ಪರವಾಗಿ, ಪಕ್ಷ, ಸರ್ಕಾರದ ಪರವಾಗಿ, ನಮ್ಮನ್ನು ನಂಬಿರುವ ಜನತೆಯ ಪರವಾಗಿ, ಜನತೆಗಾಗಿ ಒಳ್ಳೆಯ ಆಡಳಿತ ಕೊಡುವ ಶಕ್ತಿ ಕೊಡು ಎಂದು ಪ್ರಾರ್ಥನೆ ಮಾಡಿದ್ದೇನೆ. ನಾವು ನುಡಿದಂತೆ ನಡೆಯಲು ಜನ ಶಕ್ತಿ ಕೊಟ್ಟಿದ್ದಾರೆ. ಇದಕ್ಕಿಂತ ಭಾಗ್ಯ ಇನ್ನೇನು ಬೇಕು? 5 ಗ್ಯಾರಂಟಿಗಳಿಗೆ ಬಜೆಟ್​​​ನಲ್ಲಿ ದುಡ್ಡಿಟ್ಟು ಜನತೆಗೆ ಸೇವೆ ಮಾಡುವ ಭಾಗ್ಯ ಕೊಟ್ಟಿದ್ದಾರೆ. ಈ ಗ್ಯಾರೆಂಟಿಗೆ ಐದು ವರ್ಷದ ವಾರಂಟಿ ಇದೆ. ಫ್ಯಾನು, ಕುಕ್ಕರ್​ಗೆ ಒಂದು ವರ್ಷ ಗ್ಯಾರೆಂಟಿ ಕೊಡುತ್ತಾರೆ. ನಮ್ಮ ಗ್ಯಾರೆಂಟಿಗೆ 5 , 10 ವರ್ಷ ಕಾಲದ ವಾರಂಟಿ ಮಾಡು ಎಂದು ಕೇಳಲು ಬಂದಿದ್ದೇನೆ ಎಂದು ಶೃಂಗೇರಿ ಜಗದ್ಗುರುಗಳ ಭೇಟಿ ಬಳಿಕ‌ ಡಿಕೆ ಶಿವಕುಮಾರ್ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ