ಅರಣ್ಯ ಒತ್ತುವರಿ ತೆರವಿಗೆ ಸೂಚನೆ ಬೆನ್ನಲ್ಲೇ ರೈತರನ್ನು ನಕ್ಸಲರನ್ನಾಗಿ ಮಾಡಬೇಡಿ ಎಂದು ಬ್ಯಾನರ್

ಅರಣ್ಯ ಒತ್ತುವರಿ ತೆರವಿಗೆ ರಾಜ್ಯ ಸರ್ಕಾರ ಖಡಕ್ ಸೂಚನೆ ರವಾನಿಸಿದ ಬೆನ್ನಲ್ಲೇ ಮಲೆನಾಡು ಹಾಗೂ ಕರಾವಳಿ ಭಾಗದಲ್ಲಿ ಮತ್ತೆ ನಕ್ಸಲ್ ಸದ್ದು ಮಾಡಲಾರಂಭಿಸಿದೆ. ಅರಣ್ಯ ಇಲಾಖೆಯು ಒತ್ತುವರಿ ತೆರವು ಸಂಬಂಧ ನೋಟಿಸ್ ನೀಡಿದ್ದರಿಂದ ರೈತರನ್ನು ನಕ್ಸಲರನ್ನಾಗಿ ಮಾಡಬೇಡಿ ಎಂದು ಬ್ಯಾನರ್ ಹಿಡಿದು ಎಚ್ಚರಿಕೆ ನೀಡಿದ್ದಾರೆ.

ಅರಣ್ಯ ಒತ್ತುವರಿ ತೆರವಿಗೆ ಸೂಚನೆ ಬೆನ್ನಲ್ಲೇ ರೈತರನ್ನು ನಕ್ಸಲರನ್ನಾಗಿ ಮಾಡಬೇಡಿ ಎಂದು ಬ್ಯಾನರ್
Follow us
| Updated By: ರಮೇಶ್ ಬಿ. ಜವಳಗೇರಾ

Updated on: Aug 25, 2024 | 1:28 PM

ಚಿಕ್ಕಮಗಳೂರು, (ಆಗಸ್ಟ್ 25): ಉತ್ತರ ಕನ್ನಡ ಜಿಲ್ಲೆಯ ಶಿರೂರಿನಲ್ಲಿ ನಡೆದ ಭೂಕುಸಿತ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ಸರ್ಕಾರ ಪಶ್ಚಿಮ ಘಟ್ಟದ ಅರಣ್ಯ ಪ್ರದೇಶದಲ್ಲಿರುವ ಅನಧಿಕೃತ ಹೋಂ ಸ್ಟೇ, ರೆಸಾರ್ಟ್‌ಗಳನ್ನು ತೆರವುಗೊಳಿಸಲು ಮುಂದಾಗಿದೆ. ಈ ಸಂಬಂಧ ಕೆಲವು ದಿನಗಳ ಹಿಂದೆ ಅರಣ್ಯ ಸಚಿವ ಈಶ್ವರ್‌ ಖಂಡ್ರೆ (Eshwar Khandre) ಅವರು ಸುತ್ತೋಲೆ ಹೊರಡಿಸಿದ್ದು, ಪಶ್ಚಿಮ ಘಟ್ಟದಲ್ಲಿ (Western Ghats) 2015ರಿಂದ ಈಚೆಗೆ ಆಗಿರುವ ಎಲ್ಲ ಅರಣ್ಯ ಒತ್ತುವರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರು. ಇದೀಗ ಎಲ್ಲ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ / ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಪತ್ರ ಬರೆದಿರುವ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಭೂ ದಾಖಲೆ) ವಸ್ತು ನಿಷ್ಠ ಮಾಹಿತಿಯನ್ನು ಕೂಡಲೇ ಸಲ್ಲಿಸುವಂತೆ ಸೂಚಿಸಿದ್ದಾರೆ.

ಅರಣ್ಯ ಒತ್ತುವರಿ ತೆರವು ಮಾಡುವಂತೆ ನೋಟಿಸ್ ನೀಡಿದ್ದಕ್ಕೆ ಸಿಡಿದೆದ್ದಿರುವ ರೈತರು ಪ್ರತಿಭಟನೆ ನಡೆಸಿದ್ದು, ರೈತರನ್ನು ನಕ್ಸಲರನ್ನಾಗಿ ಮಾಡಬೇಡಿ ಎಂದು ಬ್ಯಾನರ್ ಹಿಡಿದ ಆಕ್ರೋಶ ಹೊರಹಾಕಿದ್ದಾರೆ. ಸರ್ಕಾರದಿಂದ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಘೋಷಣೆ ಬಳಿಕ ಉಡುಪಿ, ಶಿವಮೊಗ್ಗ ಭಾಗದಲ್ಲಿ ನಕ್ಸಲ್ ಚಟುವಟಿಕೆಗೆ ಕಾರಣವಾಗಿತ್ತು. ಇದೀಗ ಇದೇ ಸ್ಥಳದಲ್ಲಿ ಅಂದರೆ ಮಲೆನಾಡು ಕರಾವಳಿ ಭಾಗದಲ್ಲಿ ನಕ್ಸಲ್ ಹುಟ್ಟಿಗೆ ಕರಣವಾಗಿದ್ದ ಸ್ಥಳದಲ್ಲಿ ಮತ್ತೆ ನಕ್ಸಲ್ ಸದ್ದು ಮಾಡಿದೆ.

ಇದನ್ನೂ ಓದಿ: ಸರ್ಕಾರಿಂದ ಕೋಟ್ಯಂತರ ರೂ. ವೈದ್ಯಕೀಯ ಬಿಲ್‌ ಕ್ಲೈಮ್ ಮಾಡಿಕೊಂಡ ಎಂಎಲ್​​ಸಿ, ಶಾಸಕರು

ನೀವು ಬಂದೂಕು ಹಿಡಿದು ತೆರವಿಗೆ ಬಂದ್ರೆ, ನಾವು ವಿರೋಧ ಮಾಡುತ್ತೇವೆ. ಮಚ್ಚು ಹಿಡಿದುಕೊಂಡು ತೆರವಿಗೆ ವಿರೋಧಿಸುತ್ತೇವೆ ಎಂದ ರೈತ ಮುಖಂಡ ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ ಅರಣ್ಯ ಇಲಾಖೆಯ ಅಧಿಕಾರಗಳ ಮುಂದೆ ನಾನು ನಕ್ಸಲ್ ಅಲ್ಲ . ನಕ್ಸಲ್ ಆಗು ಎಂದು ಮನೆಗೆ ಬಂದಿದ್ದರು. ನಮ್ಮಪ್ಪ ಬಿಡಲಿಲ್ಲ ಎಂದಿದ್ದಾರೆ. ಹೀಗಾಗಿ ಮಲೆನಾಡು ಭಾಗದಲ್ಲಿ ಒತ್ತುವರಿ ತೆರವು ಭಾರಿ ಚರ್ಚೆಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ