
ಚಿತ್ರದುರ್ಗ, ಏಪ್ರಿಲ್ 08: ಮಹಾರಾಷ್ಟ್ರದ ಪುಣೆ ಮೂಲದ ಉದ್ಯಮಿಯಿಂದ ಹಣ ಸುಲಿಗೆ ಮಾಡಿದ ಪ್ರಕರಣ ಸಂಬಂಧ ಚಿತ್ರದುರ್ಗ ಪೊಲೀಸರು ನಗರಸಭೆಯ ಮಾಜಿ ಸದಸ್ಯ ಚಂದ್ರಶೇಖರ್ ಅಲಿಯಾಸ್ ಖೋಟಾ ನೋಟು ಚಂದ್ರನನ್ನು ಬಂಧಿಸಿದ್ದಾರೆ. ಈತನಿಗ ಸಾಥ್ ನೀಡಿದ್ದ ಮಂಗಳೂರು ಮೂಲದ ಕುಖ್ಯಾತ ವಂಚಕ ರೋಷನ್ ಸಾಲ್ಡಾನ ಎಂಬಾತನನ್ನೂ ವಶಕ್ಕೆ ಪಡೆಯಲಾಗಿದ್ದು, ಆರೋಪಿ ಚಂದ್ರನಿಗೆ ಸಂಬಂಧಿತ ಬ್ಯಾಂಕ್ ಅಕೌಂಟ್ನಲ್ಲಿದ್ದ 50 ಲಕ್ಷ ರೂಪಾಯಿ ಹಣವನ್ನು ಫ್ರೀಜ್ ಮಾಡಿಸಲಾಗಿದೆ. ಆ ಮೂಲಕ ರಾಜ್ಯ, ಹೊರರಾಜ್ಯದ ಉದ್ಯಮಿಗಳಿಗೆ ವಂಚಿಸುತ್ತಿದ್ದ ಜಾಲ ಬೇಧಿಸಿರುವ ಪೊಲೀಸರು, ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಚಿತ್ರದುರ್ಗ ನಗರಸಭೆಗೆ ಸತತ ಎರಡು ಸಲ ಜೆಡಿಎಸ್ನಿಂದ ಸದಸ್ಯನಾಗಿ ಆಯ್ಕೆ ಆಗಿದ್ದ ಚಂದ್ರಶೇಖ ಅಸಲಿ ದಂಧೆಯೇ ವಂಚನೆ. ಖೋಟಾ ನೋಟು, ಹಣ ಡಬ್ಲಿಂಗ್ ದಂಧೆಯ ಕಿಂಗ್ ಪಿನ್ ಆಗಿರುವ ಈ ಚಂದ್ರ, ಅನೇಕ ಪ್ರಕರಣಗಳ ಆರೋಪಿ ಕೂಡ ಹೌದು. ಇದೇ ವಿಚಾರವಾಗಿ ಅನೇಕ ಸಲ ಜೈಲಿಗೆ ಹೋಗಿ ಬಂದರೂ ಈತ ತನ್ನ ಕರಾಳ ದಂಧೆ ಮಾತ್ರ ಬಿಟ್ಟಿರಲಿಲ್ಲ. ಇದೀಗ ಹೊಸ ರೀತಿಯ ವಂಚನೆಗೆ ಮುಂದಾಗಿದ್ದ ಆರೋಪಿ, ಕಡಿಮೆ ಬಡ್ಡಿ ದರದಲ್ಲಿ ಕೋಟಿಗಟ್ಟಲೆ ಹಣ ಸಾಲ ನೀಡುವುದಾಗಿ ನಂಬಿಸಿ ಉದ್ಯಮಿಗಳನ್ನು ಬುಟ್ಟಿಗೆ ಬೀಳಿಸುತ್ತಿದ್ದ. ವರ್ಷಕ್ಕೆ ಶೇ.3ರ ಬಡ್ಡಿ ದರದಲ್ಲಿ ಐವತ್ತು ಕೋಟಿ, ನೂರು ಕೋಟಿ ಫೈನಾನ್ಸ್ ನೀಡುವುದಾಗಿ ನಂಬಿಸಲು ಏಜಂಟರನ್ನೇ ನೇಮಿಸಿಕೊಂಡಿದ್ದ.
ಇದನ್ನೂ ಓದಿ: ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ; ನಡೀತಾ ಭೀಕರ ಕೊಲೆ?
ಇನ್ನು ಇದೇ ರೀತಿ ಪುಣೆ ಮೂಲದ ಉದ್ಯಮಿ ಗುರುರಾಜ್ ಚರಂತಿಮಠ ಎಂಬುವರಿಗೆ ಕರೆ ಮಾಡಿದ್ದ ಈತನ ಸಹಚರ ರೋಷನ್ ಸಾಲ್ಡಾನ, ಕಡಿಮೆ ಬಡ್ಡಿ ದರದಲ್ಲಿ ಸಾಲ ಕೊಡಿಸುವುದಾಗಿ ನಂಬಿಸಿದ್ದ. 52 ಕೋಟಿ ರೂ.ಫೈನಾನ್ಸ್ ಮಾಡಲು ಕಾಗದಪತ್ರ ಮತ್ತು ಭದ್ರತೆಗಾಗಿ 75 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ. ಅದರಂತೆ 50 ಲಕ್ಷ ರೂಪಾಯಿಯನ್ನು RTGS ಮೂಲಕ ಗುರುರಾಜ್ ನೀಡಿದ್ದರು. ಬಳಿಕ 25 ಲಕ್ಷ ರೂಪಾಯಿ ನಗದು ನೀಡಲೆಂದು ಆಗಮಿಸಿದವರನ್ನು ಚಿತ್ರದುರ್ಗದ ಕೋಟೆ ರಸ್ತೆಯಲ್ಲಿರುವ ಚಂದ್ರಶೇಖರ್ ಮನೆಗೆ ಕರೆಸಿಕೊಳ್ಳಲಾಗಿತ್ತು. ಅಲ್ಲಿ ಚಾಕು ತೋರಿಸಿ ಬೆದರಿಸಿದ್ದ ಆರೋಪಿಗಳು ಹಣ ಕಿತ್ತುಕೊಂಡು ಕಳುಹಿಸಿದ್ದರು. 2023ರ ಮೇ ತಿಂಗಳ 26ರಂದು ಈ ಘಟನೆ ನಡೆದಿತ್ತಾದ್ದರೂ ನಿನ್ನೆ ಅಂದರೆ 2026ರ ಏಪ್ರಿಲ್ 07ರಂದು ಈ ಸಂಬಂಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.