ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶವವಾಗಿ ಪತ್ತೆ: ನಡೀತಾ ಭೀಕರ ಕೊಲೆ?
ಚಿತ್ರದುರ್ಗದಲ್ಲಿ ನಾಪತ್ತೆಯಾಗಿದ್ದ ಕಾಂಗ್ರೆಸ್ ಮುಖಂಡ ಶಿವಲಿಂಗಪ್ಪ ಶವವಾಗಿ ಪತ್ತೆಯಾಗಿದ್ದು, ಇದು ಭೀಕರ ಕೊಲೆ ಎಂದು ಶಂಕಿಸಲಾಗಿದೆ. ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದು, ಸಂಬಂಧಿಕರು ತನಿಖೆಗೆ ಆಗ್ರಹಿಸಿದ್ದಾರೆ. ಇದೇ ವೇಳೆ, ದಾವಣಗೆರೆಯಲ್ಲಿ ಹಿಟ್ ಅಂಡ್ ರನ್ಗೆ ಇಬ್ಬರು ಬೈಕ್ ಸವಾರರು ಬಲಿಯಾಗಿದ್ದು, ಚಿಕ್ಕಮಗಳೂರಿನಲ್ಲಿ ಹಾವು ಕಡಿತದಿಂದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ.

ಚಿತ್ರದುರ್ಗ/ ಚಿಕ್ಕಮಗಳೂರು, ಏಪ್ರಿಲ್ 02: ನಗರದ ಹೊರವಲಯದ ನಿರ್ಜನ ಪ್ರದೇಶದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಕಾಂಗ್ರೆಸ್ ಮುಖಂಡನ ಶವ ಪತ್ತೆಯಾಗಿದೆ. ಮೃತರನ್ನು ರಸಗೊಬ್ಬರ ಅಂಗಡಿ ನಡೆಸುತ್ತಿದ್ದ ‘ಕೈ’ ಮುಖಂಡ ಶಿವಲಿಂಗಪ್ಪ (50) ಎಂದು ಗುರುತಿಸಲಾಗಿದ್ದು, ಮೂರು ದಿನಗಳ ಹಿಂದೆ ಇವರು ನಾಪತ್ತೆಯಾಗಿದ್ದರು. ಇಂದು ಅವರ ಮೃತದೇಹ ಮುಖದ ಗುರುತು ಸಿಗದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ದುಷ್ಕರ್ಮಿಗಳು ಕೊಲೆ ನಡೆಸಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ತನಿಖೆಗೆ ಸಂಬಂಧಿಕರಿಂದ ಆಗ್ರಹ ವ್ಯಕ್ತವಾಗಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಹಿಟ್ ಆ್ಯಂಡ್ ರನ್ಗೆ ಬೈಕ್ ಸವಾರರು ಬಲಿ
ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಧಾರುಣವಾಗಿ ಮೃತಪಟ್ಟಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಹನಗವಾಡಿ ಸಮೀಪದ ಸಾಸ್ವಿಹಳ್ಳಿ- ಆನವೇರಿ ರಸ್ತೆಯಲ್ಲಿ ನಡೆದಿದೆ. ನವೀನ್ ಎನ್. ಎಂ. (33) ಮತ್ತು ಶಶಿಕುಮಾರ್ (32) ಮೃತರಾಗಿದ್ದು, ಡಿಕ್ಕಿ ರಭಸಕ್ಕೆ ನವೀನ್ ಸ್ಥಳದಲ್ಲಿಯೇ ಜೀವ ಬಿಟ್ಟಿದ್ದಾರೆ. ಶಶಿಕುಮಾರ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಪ್ರಾಣ ಕಳೆದುಕೊಂಡಿದ್ದಾರೆ. ಇವರಿಬ್ಬರು ಹೊನ್ನಾಳಿ ತಾಲೂಕಿನ ಹೊಸಹಳ್ಳಿ ಗ್ರಾಮದ ನಿವಾಸಿಗಳು ಎಂಬುದು ಗೊತ್ತಾಗಿದೆ. ಸ್ವಗ್ರಾಮದಿಂದ ಕಾರ್ಯ ನಿಮಿತ್ತ ಆನವೇರಿಗೆ ತೆರಳುತ್ತಿದ್ದಾಗ ಅಪಘಾತ ನಡೆದಿದೆ. ಅಪಘಾತ ಮಾಡಿದ ಚಾಲಕ ವಾಹನ ಸಹಿತ ಪರಾರಿಯಾಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪ್ರಾಧ್ಯಾಪಕರ ಜತೆ ಸಂಬಂಧ ಕಲ್ಪಿಸಿ ಅಪಪ್ರಚಾರ, ಬಿಎಎಂಎಸ್ ವಿದ್ಯಾರ್ಥಿನಿ ಆತ್ಮಹತ್ಯೆ!
ಹಾವು ಕಡಿದು ಮಹಿಳೆ ಸಾವು
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ 9ನೇ ಮೈಲಿಕಲ್ ಗ್ರಾಮದಲ್ಲಿ ಕಾಲಿಗೆ ಹಾವು ಕಡಿದು ಮಹಿಳೆಯೋರ್ವರು ಮೃತಪಟ್ಟಿದ್ದಾರೆ. ಛತ್ತೀಸ್ಗಢ ಮೂಲದ ಕಾರ್ಮಿಕ ಮಹಿಳೆ ಜಾಲ್ ಬಾಯಿ ಸಿಧಾರ್(42) ಮರತರಾಗಿದ್ದು, ಇವರು ಸಿಮೆಂಟ್ ಇಟ್ಟಿಗೆ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ತಡರಾತ್ರಿ ಮಲಗಿದ್ದ ವೇಳೆ ಕಾರ್ಮಿಕ ಮಹಿಳೆ ಜಾಲ್ ಬಾಯಿಗೆ ಹಾವು ಕಡಿದಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಸಿಂಗಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.