AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಗಾಲ ಆರಂಭವಾದರೂ ಜೋಗಿಮಟ್ಟಿ ವೀಕ್ಷಣೆಗೆ ಇನ್ನೂ ನಿರ್ಬಂಧ: ಪ್ರವಾಸಿಗರಿಂದ ಅರಣ್ಯ ಇಲಾಖೆಗೆ ಹಿಡಿಶಾಪ

ಬೇಸಿಗೆಯಲ್ಲಿ ಬೆಂಕಿ ಅವಘಡ ತಪ್ಪಿಸಲು ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮಕ್ಕೆ ಪ್ರವೇಶ ನಿರ್ಬಂಧಿಸಲಾಗಿತ್ತು. ಮಳೆಗಾಲ ಆರಂಭವಾಗಿದ್ದರೂ ಅರಣ್ಯ ಇಲಾಖೆ ಮಾತ್ರ ನಿರ್ಬಂಧ ತೆರವುಗೊಳಿಸಿಲ್ಲ. ಹಸಿರಾಗಿ ಕಂಗೊಳಿಸುತ್ತಿರುವ ಜೋಗಿಮಟ್ಟಿಯನ್ನು ನೋಡಲು ಬಂದ ಪರಿಸರ ಪ್ರೇಮಿಗಳು ನಿರಾಸೆಯಿಂದ ವಾಪಸಾಗುತ್ತಿದ್ದಾರೆ. ಇಲಾಖೆಯ ಈ ಕ್ರಮದಿಂದ ಆದಾಯಕ್ಕೂ ಹೊಡೆತ ಬಿದ್ದಿದೆ. ಕೂಡಲೇ ನಿರ್ಬಂಧ ತೆರವು ಮಾಡುವಂತೆ ಆಗ್ರಹ ಕೇಳಿಬಂದಿದೆ.

ಮಳೆಗಾಲ ಆರಂಭವಾದರೂ ಜೋಗಿಮಟ್ಟಿ ವೀಕ್ಷಣೆಗೆ ಇನ್ನೂ ನಿರ್ಬಂಧ: ಪ್ರವಾಸಿಗರಿಂದ ಅರಣ್ಯ ಇಲಾಖೆಗೆ ಹಿಡಿಶಾಪ
ಜೋಗಿಮಟ್ಟಿ Image Credit source: tv9 kannada
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: Jun 06, 2026 | 3:06 PM

Share

ಚಿತ್ರದುರ್ಗ, ಜೂನ್​​ 06: ಬಯಲುಸೀಮೆಯ ಊಟಿ ಎಂದೇ ಖ್ಯಾತಿ ಪಡೆದಿರುವ ಜೋಗಿಮಟ್ಟಿ (Jogi Matti)  ವನ್ಯಜೀವಿಧಾಮ ವೀಕ್ಷಣೆಗೆ ನಿತ್ಯ ನೂರಾರು ಜನರು ಆಗಮಿಸುತ್ತಾರೆ. ಬೇಸಿಗೆ ಕಾಲದಲ್ಲಿ ಜೋಗಿಮಟ್ಟಿ ಪ್ರವೇಶಕ್ಕೆ ಅರಣ್ಯ ಇಲಾಖೆ ಇತ್ತೀಚೆಗೆ ನಿರ್ಬಂಧ ವಿಧಿಸಿತ್ತು. ಆದರೆ ಮಳೆಗಾಲ (Monsoon) ಆರಂಭವಾದರೂ ನಿರ್ಬಂಧ ತೆರವುಗೊಳಿಸದಿರುವುದು ಪರಿಸರ ಪ್ರಿಯರ ಹಿಡಿಶಾಪಕ್ಕೆ ಗುರಿ ಆಗಿದೆ.

ಮುಖ್ಯಾಂಶಗಳು

  • ಬೇಸಿಗೆ ಕಾಲದಲ್ಲಿ ಬೆಂಕಿ ಅವಘಡ ತಪ್ಪಿಸಲು ಅರಣ್ಯ ಪ್ರವೇಶಕ್ಕೆ ನಿರ್ಬಂಧ.
  • ಮಳೆಗಾಲ ಶುರುವಾದರೂ ನಿರ್ಬಂಧ ತೆರವುಗೊಳಿಸದ ಅಧಿಕಾರಿಗಳು.
  • ಜೋಗಿಮಟ್ಟಿ ಸೊಬಗು ಸವಿಯಲು ಬಂದವರಿಗೆ ನಿರಾಸೆ.

ಪರಿಸರ ಪ್ರಿಯರು, ಪ್ರವಾಸಿಗರು ಬೇಸರ

ಕೋಟೆನಾಡು ಚಿತ್ರದುರ್ಗದ ಬಳಿರುವ ಜೋಗಿಮಟ್ಟಿ ವನ್ಯಧಾಮ ಕುರುಚಲು ಕಾಡಾಗಿದ್ದು, ಬೇಸಿಗೆಯಲ್ಲಿ ಗಿಡಮರಗಳು ಒಣಗಿ ನಿಂತಿರುತ್ತವೆ. ಸಣ್ಣ ಎಡವಟ್ಟನಿಂದ ಅರಣ್ಯವೇ ಹೊತ್ತಿ ಉರಿಯುವ ಸಾಧ್ಯತೆ ಇದೆ. ಬೆಂಕಿ ಹೊತ್ತಿದರೆ ಅರಣ್ಯದ ಜೊತೆಗೆ ಪ್ರಾಣಿ, ಪಕ್ಷಿಗಳಿಗೂ ತೊಂದರೆ ಆಗಲಿದೆ. ಹೀಗಾಗಿ ಬೇಸಿಗೆಯಲ್ಲಿ ಜೋಗಿಮಟ್ಟಿ ಪ್ರವೇಶಕ್ಕೆ ನಿರ್ಬಂಧಿಸಲಾಗುತ್ತದೆ. ಆದರೆ ಮಳೆಗಾಲ ಆರಂಭವಾದರೂ ನಿರ್ಬಂಧ ತೆರವುಗೊಳಿಸದೇ ಇರುವುದು ಪರಿಸರ ಪ್ರಿಯರಿಗೆ ಬೇಸರ ಮೂಡಿಸಿದೆ.

ಇದನ್ನೂ ಓದಿ: ಜೂ.1ರಿಂದ ಆ. 31ರವರೆಗೆ ದಾಂಡೇಲಿಗೆ ನೋ ಎಂಟ್ರಿ; ಸ್ಕೂಬಾ ಡೈವಿಂಗ್, ರ್ಯಾಫ್ಟಿಂಗ್‌ಗೆ ಬ್ರೇಕ್ ಹಾಕಿದ ಉತ್ತರ ಕನ್ನಡ ಡಿಸಿ

ಹಸಿರಿನಿಂದ ಕಂಗೊಳಿಸುತ್ತಿರುವ ಜೋಗಿಮಟ್ಟಿ ವೀಕ್ಷಣೆಗೆ ಬರುವ ಅನೇಕರು ನಿರಾಸೆಯಿಂದ ವಾಪಸ್ ಹೋಗುವಂತಾಗಿದ್ದು, ಅರಣ್ಯ ಇಲಾಖೆಗೆ ಇನ್ನೂ ಮಳೆಗಾಲವೇ ಶುರುವಾಗಿಲ್ವಾ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಇನ್ನು ಅರಣ್ಯ ಇಲಾಖೆಗೆ ಬರುವ ಆದಾಯಕ್ಕೂ ಕತ್ತರಿ ಬಿದ್ದಂತಾಗಿದೆ.

ಇನ್ನೊಂದು ಮಳೆ ಬಂದ ಮರುದಿನವೇ ನಿರ್ಬಂಧ ತೆರವು: ಗೋಪ್ಯಾ ನಾಯ್ಕ್

ಇನ್ನು ಪ್ರತಿನಿತ್ಯ ಜೋಗಿಮಟ್ಟಿ ಗೇಟ್ ಬಳಿಗೆ ಬರುವ ಅನೇಕ ಪ್ರವಾಸಿಗರು, ಪರಿಸರ ಪ್ರೇಮಿಗಳು ನಿರಾಸೆಯಿಂದ ವಾಪಸ್ ತೆರಳುತ್ತಿದ್ದಾರೆ. ಈ ಬಗ್ಗೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಗೋಪ್ಯಾ ನಾಯ್ಕ್ ಅವರನ್ನು ಕೇಳಿದರೆ, ಇನ್ನು ಕೆಲವೆಡೆ ಗಿಡಮರಗಳು ಒಣಗಿರುವ ಮಾಹಿತಿ ಇದೆ. ಇನ್ನೊಂದು ಮಳೆ ಬರಲಿ ಎಂದು ಕಾದಿದ್ದೇವೆ. ಮಳೆ ಬಂದ ಮರುದಿನವೇ ಜೋಗಿಮಟ್ಟಿ ಪ್ರವೇಶ ನಿರ್ಬಂಧ ತೆರವುಗೊಳಿಸುತ್ತೇವೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಮಾಜಿ ಜಿಪಂ ಸದಸ್ಯನಿಂದಲೇ ಖಾದಿ ಸಹಕಾರ ಸಂಘದ ಕೋಟ್ಯಂತರ ಆಸ್ತಿ ಕಬಳಿಕೆ

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಜೋಗಿಮಟ್ಟಿ ವನ್ಯಧಾಮ ವೀಕ್ಷಣೆಗೆ ವಿಧಿಸಿದ್ದ ನಿರ್ಬಂಧ ಇನ್ನೂ ತೆರವುಗೊಳಿಸದಿರುವುದು ಪರಿಸರ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನಾದರೂ ಅರಣ್ಯ ಇಲಾಖೆ ಈ ಬಗ್ಗೆ ಗಮನಹರಿಸಬೇಕಿದೆ. ಪರಿಸರ ಪ್ರಿಯರಿಗೆ, ಪ್ರವಾಸಿಗರಿಗೆ ಜೋಗಿಮಟ್ಟಿ ಅರಣ್ಯ ವೀಕ್ಷಣೆಗೆ ಅವಕಾಶ ಕಲ್ಪಿಸಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More