ಸಾರ್ವಜನಿಕರ ಕುಂದು ಕೊರತೆ ನಿರ್ವಹಣೆಗೆ ಡಿಕೆಶಿ ದಿಟ್ಟ ಹೆಜ್ಜೆ: ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಸೇವೆ ಇಲಾಖೆ ಸ್ಥಾಪನೆ

ನಮ್ಮ ದೇಶದಲ್ಲಿ ಸಮಸ್ಯೆಗಳಿಗೇನು ಕಡಿಮೆ ಇಲ್ಲ. ಹಾಗಿದ್ದರೆ, ಈ ಸಮಸ್ಯೆಗಳನ್ನು ಪರಿಹರಿಸುವವರು ಯಾರು? ಯಾರಿಗೆ ದೂರು ನೀಡಬೇಕು? ಎಂಬ ಪ್ರಶ್ನೆ ಉದ್ಭವಿಸುವುದು ಸಹಜ. ಆದರೆ, ಇದಕ್ಕೆ ಡಿಕೆ ಶಿವಕುಮಾರ್ ನೇತೃತ್ವದ ರಾಜ್ಯ ಕಾಂಗ್ರೆಸ್ ಸರ್ಕಾರ, ವೇದಿಕೆಯೊಂದನ್ನು ಕಲ್ಪಿಸಿ ಕೊಡಲು ಮುಂದಾಗಿದೆ. ಕೇಂದ್ರೀಕೃತ ಸಾರ್ವಜನಿಕ ಕುಂದುಕೊರತೆ ಪರಿಹಾರ, ಮೇಲ್ವಿಚಾರಣಾ ವ್ಯವಸ್ಥೆ, ನಾಗರಿಕರಿಗೆ ಸೇವೆಗಳ ವಿತರಣೆಗೆ ಸಂಬಂಧಿಸಿದ ಯಾವುದೇ ವಿಷಯದ ಕುರಿತು ತಮ್ಮ ಕುಂದುಕೊರತೆಗಳನ್ನು ದಾಖಲಿಸಲು ಪ್ರತ್ಯೇಕವಾಗಿ ಪ್ರಜಾಸೇವೆ ಎಂಬ ಇಲಾಖೆ ಸ್ಥಾಪನೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ.

ಸಾರ್ವಜನಿಕರ ಕುಂದು ಕೊರತೆ ನಿರ್ವಹಣೆಗೆ ಡಿಕೆಶಿ ದಿಟ್ಟ ಹೆಜ್ಜೆ: ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರ ಪ್ರಜಾಸೇವೆ ಇಲಾಖೆ ಸ್ಥಾಪನೆ
Dk Shivakumar

Updated on: Jun 20, 2026 | 3:03 PM

ಬೆಂಗಳೂರು, (ಜೂನ್ 20):  ಪ್ರಜೆಗಳಿಗಾಗಿ ಪ್ರಜೆಗಳಿಗೋಸ್ಕರವಾಗಿಯೇ ಸಿಎಂ ಡಿಕೆ ಶಿವಕುಮಾರ್ (DK Shivakumar) ದಿಟ್ಟ ಹೆಜ್ಜೆ ಇಟ್ಟಿದ್ದು, ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಲು ಒಂದು ಪ್ರತ್ಯೇಕ ವೇದಿಕೆ ಕಲ್ಪಿಸಿಕೊಟ್ಟಿದ್ದಾರೆ.  ಹೌದು.. ಕರ್ನಾಟಕ (Karnataka) ರಾಜ್ಯದ ನೂತನ ಮುಖ್ಯಮಂತ್ರಿ ಡಿಕೆ ಶಿವಕುಮಾರ ಅವರು ನಾಡಿನ ಜನರ ಕುಂದುಕೊರತೆ ಆಲಿಸಲು ಪ್ರತ್ಯೇಕ ಸಚಿವಾಲಯ ಸ್ಥಾಪಿಸುವುದಾಗಿ ಈಗಾಗಲೇ ಘೋಷಿಸಿದ್ದು, ಇಂದು (ಜೂನ್ 20) ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಎರಡನೇ ಸಚಿವ ಸಂಪುಟದಲ್ಲಿ ಈ ಬಗ್ಗೆ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಪ್ರಜಾಸೇವೆ ಇಲಾಖೆ (Prajaseve Department) ಎಂದು ನಾಮಕರಣ ಮಾಡುವುದಾಗಿ ಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದಾರೆ. ರಾಜ್ಯದಲ್ಲಿ ಜನಸಾಮಾನ್ಯರ ಸಮಸ್ಯೆಗಳನ್ನು ಆಲಿಸಿ, ಅದಕ್ಕೆ ಸ್ಪಂದಿಸಿ ನ್ಯಾಯ ದೊರಕಿಸಲು ಈ ಪ್ರಜಾಸೇವೆ ಇಲಾಖೆಯನ್ನು ರಚಿಸಲು ಸಚಿವ ಸಂಪುಟ ನಿರ್ಧರಿಸಿದ್ದು, ಈ ಹೊಸ ಇಲಾಖೆಯಲ್ಲಿ ಪ್ರತ್ಯೇಕವಾಗಿ ಸಚಿವರು ಹಾಗೂ IAS ಅಧಿಕಾರಿಗಳು ಇರಲಿದ್ದಾರೆ.

ಮುಖ್ಯಾಂಶಗಳು

  • ಸಚಿವ ಸಂಪುಟ ಬಳಿಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗೋಷ್ಠಿ
  • ಸಮಸ್ಯೆ ಇದ್ದಾಗ ನ್ಯಾಯ ಕೊಡಿಸಲು ಹೊಸ ಇಲಾಖೆ ಸ್ಥಾಪನೆ
  • ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪನೆ ಮಾಡುವುದಾಗಿ ಘೋಷಿಸಿದ ಡಿಕೆಶಿ
  • ಹೊಸ ಇಲಾಖೆಯಲ್ಲಿ ಪ್ರತ್ಯೇಕ ಸಚಿವರು, IAS ಅಧಿಕಾರಿಗಳು ಇರಲಿದ್ದಾರೆ
  • ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಹೇಳಿಕೆ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರ ನೇತೃತ್ವದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಂದು (ಜೂನ್ 20) ನಡೆದ 2ನೇ ಸಚಿವ ಸಂಪುಟ ಸಭೆಯಲ್ಲಿ ಪ್ರಜಾಸೇವೆ ಇಲಾಖೆಯನ್ನು ರಚಿಸುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಈ ಬಗ್ಗೆ ಸ್ವತಃ ಸಿಎಂ ಡಿಕೆ ಶಿವಕುಮಾರ್, ಸಂಪುಟ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಹೊಸ ಪ್ರಜಾಸೇವೆ ಇಲಾಖೆ ರಚನೆಯನ್ನು ಪ್ರಕಟಿಸಿದರು.

ಇದನ್ನೂ ಓದಿ: ಸಾರ್ವಜನಿಕರ ಕುಂದು ಕೊರತೆಗಳ ನಿರ್ವಹಣೆಗೆ, NRIಗೆ ಪ್ರತ್ಯೇಕ ಸಚಿವಾಲಯ: ಸಿಎಂ ಡಿಕೆಶಿ ಮಹತ್ವ ಘೋಷಣೆ

ಇಲಾಖೆಯಲ್ಲಿ ಪ್ರತ್ಯೇಕ ಸಚಿವರು, ಹಿರಿಯ IAS ಅಧಿಕಾರಿ

ಈ ಇಲಾಖೆಗೆ ಪ್ರತ್ಯೇಕ ಸಚಿವರು, ಹಿರಿಯ ಐಎಎಸ್ ಅಧಿಕಾರಿ ಇರುತ್ತಾರೆ. ಈ ಇಲಾಖೆ ಪೋಸ್ಟಮ್ಯಾನ್ ಕೆಲಸ ಮಾಡುವುದಿಲ್ಲ. ಜನರ ಸಮಸ್ಯೆಗಳಿಗೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತದೆ. ಸಚಿವರು ಎಲ್ಲಾ ೨೨೪ ಕ್ಷೇತ್ರಗಳಿಗೂ ಹೋಗಿ ಶಾಸಕರ ಜತೆ ಸಭೆ ನಡೆಸಿ ಜನರ ಅಹವಾಲುಗಳನ್ನು ಆಲಿಸಿ ನ್ಯಾಯ ದೊರಕಿಸುವ ಕೆಲಸ ಮಾಡಲಿದ್ದಾರೆ. ವಾರಕ್ಕೊಮ್ಮೆ ಕಡ್ಡಾಯವಾಗಿ ಶಾಸಕರ ಜತೆಗೂಡಿ ಜನಸ್ಪಂದನ ಸಭೆ ನಡೆಸಿ ಅಲ್ಲಿನ ಅಭಿಪ್ರಾಯಗಳನ್ನು ನಮಗೆ ತಲಪಿಸುತ್ತಾರೆ. ಅದಕ್ಕೆ ಪರಿಹಾರ ಕೊಡಿಸುವ ಕೆಲಸ ಮಾಡುತ್ತೇವೆ ಎಂದು ವಿವರಿಸಿದರು.

ಈ ಇಲಾಖೆಯಡಿ 224 ಕ್ಷೇತ್ರಗಳಲ್ಲಿ ಎಲ್ಲಾ ಸಚಿವರು ಸಭೆ ನಡೆಸಬೇಕು. ಸ್ಥಳೀಯ ಶಾಸಕರ ಜೊತೆ ವಾರಕ್ಕೊಮ್ಮೆ ಸಚಿವರು ಸಭೆ ನಡೆಸಬೇಕು. ಈ ಮೂಲಕ ಅಲ್ಲಿಂದ ಜನರ ಸಮಸ್ಯೆಗಳನ್ನ ಇಲಾಖೆಯಲ್ಲಿ ಇತ್ಯರ್ಥ ಪಡಿಸಲಾಗುವುದು ಎಂದು ಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

ಸಾರ್ವಜನಕರಿಗೆ ಅನುಕೂಲ

ಮೊನ್ನೇ ಅಷ್ಟೇ ಹಿರಿಯ ಅಧಿಕಾರಿಗಳ ಜೊತೆ ಸಭೆಯಲ್ಲಿ ಈ ಸಾರ್ವಜನಿಕರ ಕುಂದು ಕೊರತೆ ಆಲಿಸಲು ಪ್ರತ್ಯೇಕ ಸಚಿವಾಲಯದ ಸ್ಥಾಪನೆ ಬಗ್ಗೆ ಚರ್ಚಿಸಿದ್ದರು. ಇದೀಗ ಅಂತಿಮವಾಗಿ ಇಂದಿನ ಸಚಿವ ಸಂಪುಟ ಸಹ ಅನುಮೋದನೆ ನೀಡಿದೆ. ಇದಕ್ಕೆ ಪ್ರಜಾಸೇವೆ ಇಲಾಖೆ ಎಂದು ಹೆಸರಿಡಲಾಗಿದೆ. ಪ್ರತೇಕ ಇಲಾಖೆಯಾದರೆ ಸಾರ್ವಜನಿಕರು ತಮ್ಮ ತಮ್ಮ ಸಮಸ್ಯೆ , ಕುಂದು ಕೊರತೆಗಳನ್ನು ಅರ್ಜಿ ಮೂಲಕ ಈ ಇಲಾಖೆಗೆ ಸಲ್ಲಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ. ಆದ್ರೆ, ಕುಂದು ಕೊರತೆಯನ್ನು ಹೇಗೆ ಹೇಳಿಕೊಳ್ಳಬೇಕು? ಯಾರ ಮುಂದೆ ಹೇಳಿಕೊಳ್ಳಬೇಕು? ಇದಕ್ಕೆ ಯಾವೆಲ್ಲಾ ಅಧಿಕಾರಿಗಳು, ಸಚಿವರು ಇರುತ್ತಾರೆ ಎನ್ನುವ ಮುಂದಿನ ದಿನಗಳಲ್ಲಿ ಮಾರ್ಗಸೂಚಿ ಪ್ರಕಟವಾಗಲಿದೆ.

ಸಾರ್ವಜನಿಕ ಕುಂದುಕೊರತೆಗೆ ಪ್ರತ್ಯೇಕ ಸಚಿವಾಲಯ ರಚನೆ ಮಾಡಲಾಗುವುದು. ದಿನಕ್ಕೆ ಎರಡು ಮೂರು ತಂಡ ಪ್ರತಿಭಟನೆ ಮಾಡುತ್ತಿರುತ್ತದೆ. ಅವರ ಅಹವಾಲು ಕೇಳಬೇಕಾಗಿದೆ. ಏನಕ್ಕಾಗಿ ಪ್ರತಿಭಟನೆ ಮಾಡುತ್ತಿದ್ದಾರೆ?. ಅವರ ಬೇಡಿಕೆಗಳೇನು?. ಸಮಸ್ಯೆಗಳೇನು? ಎಂಬ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಬಳಿಕ ಅವರ ಸಮಸ್ಯೆಗೆ ಸ್ಪಂದಿಸಲು, ಪ್ರತ್ಯೇಕ ಸಚಿವಾಲಯ ಮಾಡಲು ತೀರ್ಮಾನ ಮಾಡಲಾಗಿದೆ ಎಂದು ಸಿಎಂ ಡಿಕೆ ಶಿವಕುಮಾರ್ ಹೇಳಿದ್ದನ್ನು ಇಲ್ಲಿ ಸ್ಮರಿಸಬಹುದು.

Published On - 2:44 pm, Sat, 20 June 26

Follow Us