ಬರ ಪರಿಹಾರದಿಂದ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಟ್ಟ ಸಿದ್ದರಾಮಯ್ಯ: ವಿಜಯೇಂದ್ರ ಗಂಭೀರ ಆರೋಪ
ಲೋಕಸಭೆ ಚುನಾವಣೆ ಹೊಸಿಲಿನಲ್ಲಿ ‘ಟಿವಿ9’ಗೆ ಎಕ್ಸ್ಕ್ಲೂಸಿವ್ ಸಂದರ್ಶನ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಈಶ್ವರಪ್ಪ ಬಂಡಾಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಮಾತನಾಡಿದರು. ಬರ ಪರಿಹಾರ ಹಣ ಬಿಡುಗಡೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿರುವ ಅವರು, ಗಂಭೀರ ಆರೋಪವನ್ನೂ ಮಾಡಿದ್ದಾರೆ. ವಿಜಯೇಂದ್ರ ಮಾತಿನ ಪೂರ್ಣ ವಿವರಗಳಿಗೆ ಮುಂದೆ ಓದಿ.
![ಬರ ಪರಿಹಾರದಿಂದ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ಕೊಟ್ಟ ಸಿದ್ದರಾಮಯ್ಯ: ವಿಜಯೇಂದ್ರ ಗಂಭೀರ ಆರೋಪ](https://images.tv9kannada.com/wp-content/uploads/2024/04/by-vijayendra.jpg?w=1280)
ಬೆಂಗಳೂರು, ಏಪ್ರಿಲ್ 5: ಕೇಂದ್ರದಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಬರ ಪರಿಹಾರ (Drought Relief) ಹಣ ತಂದಿದೆ. ಅದೇ ಹಣದಲ್ಲಿ ಸಿಎಂ ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರ ಅಲ್ಪಸಂಖ್ಯಾತರಿಗೆ 10,000 ಕೋಟಿ ರೂಪಾಯಿ ಘೋಷಿಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (BY Vijayendra) ಗಂಭೀರ ಆರೋಪ ಮಾಡಿದರು. ‘ಟಿವಿ9’ಗೆ ನೀಡಿದ ಎಕ್ಸ್ಕ್ಲೂಸಿವ್ ಸಂದರ್ಶನದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬರ ಪರಿಹಾರ ನೀಡಿಲ್ಲ ಎಂಬ ರಾಜ್ಯ ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ತಿರುಗೇಟು ನೀಡಿದರು.
ಈಶ್ವರಪ್ಪ ರಾಜ್ಯಸಭೆ ಆಯ್ಕೆಗೆ ವರಿಷ್ಠರಿಗೆ ಮನವಿ ಮಾಡಿದ್ದೆ: ವಿಜಯೇಂದ್ರ
ರಾಜ್ಯದಲ್ಲಿ ಬಿಜೆಪಿಯ ಬೆಳವಣಿಗೆಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ಅವರ ಕೊಡುಗೆ ಇದೆ. ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಬೇಕು ಎಂದು ಪಕ್ಷದ ವರಿಷ್ಠರ ಬಳಿ ಮನವಿ ಮಾಡಿದ್ದೆ. ರಾಜ್ಯದ 25 ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ನಿರ್ಣಯ ವರಿಷ್ಠರದ್ದು. ಏನೇ ಗೊಂದಲ ಇದ್ದರೂ ನಮಗೆ ಸಹಿಸಿಕೊಂಡು ಹೋಗುವ ಶಕ್ತಿ ಇದೆ ಎಂದು ವಿಜಯೇಂದ್ರ ಹೇಳಿದರು.
ಬಿವೈ ರಾಘವೇಂದ್ರರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದು ಕೇಂದ್ರದ ವರಿಷ್ಠರು. ಈಶ್ವರಪ್ಪನವರನ್ನು ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಗ್ರಾಮೀಣಾಭಿವೃದ್ಧಿ ಸಚಿವರನ್ನಾಗಿ ಮಾಡಿದ್ದು ಯಡಿಯೂರಪ್ಪನವರು. ಈಶ್ವರಪ್ಪನವರಿಗೆ ತಪ್ಪು ಮಾಹಿತಿ ಹೋಗಿದೆ. ಅದೇನೇ ಇದ್ದರೂ 2 ಲಕ್ಷಗಳ ಮತಗಳ ಅಂತರದಿಂದ ರಾಘವೇಂದ್ರ ಗೆಲ್ಲುತ್ತಾರೆ ಎಂದು ಹೇಳಿದರು.
ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿದ್ದು ರಾಷ್ಟ್ರೀಯ ಅಧ್ಯಕ್ಷರು. ಎಲ್ಲರೂ ಸಮಾಲೋಚನೆ ಮಾಡಿಯೇ ರಾಜ್ಯಾಧ್ಯಕ್ಷನಾಗಿ ಮಾಡಿದ್ದಾರೆ. ವಿಧಾನಸಭಾ ಚುನಾವಣೆ ಮುಗಿದು 6 ತಿಂಗಳ ಬಳಿಕ ಆಯ್ಕೆ ಮಾಡಿದ್ದಾರೆ. ಬಿಜೆಪಿ ರಾಷ್ಟ್ರೀಯ ನಾಯಕರು ಚರ್ಚಿಸಿ ನನ್ನನ್ನು ಆಯ್ಕೆ ಮಾಡಿದ್ದಾರೆ. ಅಯ್ಯೋ ಪಾಪ ಎಂದು ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಮಾಡಿಲ್ಲ ಎಂದು ವಿಜಯೇಂದ್ರ ಹೇಳಿದರು.
‘ಮೋದಿ ಕೈ ಬಲಪಡಿಸುವುದೇ ಗುರಿ’
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿಯವರ ಕೈಬಲಪಡಿಸುವುದು ಒಂದೇ ನಮ್ಮ ಗುರಿ. ಚುನಾವಣೆಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವ ಸವಾಲಿದೆ. ನಮ್ಮ ಪಕ್ಷದ ವಿರೋಧಿಗಳ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಆದರೆ ಬಿಜೆಪಿಯಲ್ಲಿ ನಾವೇ ಜಗಳ ಮಾಡಬಾರದು ಎಂದು ಅವರು ಹೇಳಿದರು.
ಇದನ್ನೂ ಓದಿ: ಲೋಕಸಭೆ ಚುನಾವಣೆ 2024: ಬೂತ್ ಅಧ್ಯಕ್ಷರೊಂದಿಗೆ ಇಂದು ಪ್ರಧಾನಿ ಮೋದಿ ಸಂವಾದ
ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷ ಕಟ್ಟುವಲ್ಲಿ ಅನೇಕರ ಶ್ರಮ ಇದೆ. ಡಿ.ಹೆಚ್.ಶಂಕರಮೂರ್ತಿ, ಕೆ.ಎಸ್.ಈಶ್ವರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ನಾಯಕರು ರಾಜ್ಯದಲ್ಲಿ ಪಕ್ಷ ಕಟ್ಟುವಲ್ಲಿ ಶ್ರಮವಹಿಸಿದ್ದಾರೆ. ಯಡಿಯೂರಪ್ಪನವರು ಸೈಕಲ್ನಲ್ಲಿ ಓಡಾಡಿ ಪಕ್ಷ ಕಟ್ಟಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನಲ್ಲಿ ಈಗಲೂ ಮಾತನಾಡುತ್ತಾರೆ. ‘ನಿಮ್ಮ ತಂದೆ ಬಿ.ಎಸ್.ಯಡಿಯೂರಪ್ಪ ಸೈಕಲ್ನಲ್ಲೇ ಇಲ್ಲಿಗೆ ಬರುತ್ತಿದ್ದರು’ ಎಂದು ಅವರು ಹೇಳುತ್ತಿದ್ದಾರೆ. ರಾಜ್ಯದ ಎಲ್ಲ ಪ್ರದೇಶಕ್ಕೂ ಸೈಕಲ್ನಲ್ಲಿ ಹೋಗಿ ಪಕ್ಷ ಸಂಘಟಿಸಿದ್ದಾರೆ ಎಂದು ವಿಜಯೇಂದ್ರ ಹೇಳಿದರು.
‘ಗ್ಯಾರಂಟಿ ಕಾಪಿ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ’
60,000 ವೋಟ್ ಲೀಡ್ ಕೊಡಿ ಎಂದು ಸಿಎಂ ಸಿದ್ದರಾಮಯ್ಯ ಮೈಸೂರು ಜಿಲ್ಲೆಯ ವರುಣಾ ಕ್ಷೇತ್ರದಲ್ಲಿ ಮನವಿ ಮಾಡಿದ್ದಾರೆ. ಮುಖ್ಯಮಂತ್ರಿಗಳೇ, ಗ್ಯಾರಂಟಿ ಬಗೆಗಿನ ನಿಮ್ಮ ವಿಶ್ವಾಸ ಎಲ್ಲಿ ಹೋಯಿತು? ಗ್ಯಾರಂಟಿ ಯೋಜನೆ ಕಾಪಿ ಮಾಡುವ ದುರ್ಗತಿ ಬಿಜೆಪಿಗೆ ಬಂದಿಲ್ಲ ಎಂದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ