ವಿರೋಧಕ್ಕೆ ಮಣಿದ ಸರ್ಕಾರ: ‘ವಿವಾದಿತ ಜಾತಿ’ಗಳಿಗೆ ಕೊಕ್‌, ಕ್ರಿಶ್ಚಿಯನ್‌ ಜತೆ ಹಿಂದೂ ಜಾತಿಗಳ ಕಲಂ ತೆಗೆಯಲು ಸೂಚನೆ

Karnataka Caste Census; ಕರ್ನಾಟಕ ಕಾಂಗ್ರೆಸ್ ಸರ್ಕಾರದ ಪಾಲಿಗೆ ಜಾತಿಗಣತಿ ಕರಾಳ ಕನಸಿನಂತೆ ಆಗಿದೆ. ಯಾವಾಗ ಈ ಜೇನುಗೂಡಿಗೆ ಕೈಹಾಕಿದರೂ ಯಮಯಾತನೆ ಅನುಭವಿಸುತ್ತಿದೆ. ಈ ಹಿಂದಿನ ಜಾತಿಗಣತಿ ವರದಿಗೆ ಪ್ರಬಲ ಸಮುದಾಯಗಳು ಭಾರಿ ವಿರೋಧ ವ್ಯಕ್ತಪಡಿಸಿದ್ದವು. ಇದೇ ಕಾರಣಕ್ಕೆ ವರದಿಯನ್ನು ಬದಿಗೆ ಇಡಬೇಕಾಯಿತು. ಈಗ ಹೊಸದಾಗಿ ಆರಂಭಿಸಿರುವ ಜಾತಿ ಸಮೀಕ್ಷೆ ಕೂಡ ರಾಜ್ಯ ಸರ್ಕಾರದ ಪಾಲಿಗೆ ಉಗುಳುವಂತಿಲ್ಲ, ನುಂಗುವಂತಿಲ್ಲ ಅನ್ನುವಂತಾಗಿದೆ. ಇದೇ ಕಾರಣಕ್ಕೆ ಸಿಎಂ ಸಿದ್ದರಾಮಯ್ಯ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ವಿರೋಧಕ್ಕೆ ಮಣಿದ ಸರ್ಕಾರ: ‘ವಿವಾದಿತ ಜಾತಿ’ಗಳಿಗೆ ಕೊಕ್‌, ಕ್ರಿಶ್ಚಿಯನ್‌ ಜತೆ ಹಿಂದೂ ಜಾತಿಗಳ ಕಲಂ ತೆಗೆಯಲು ಸೂಚನೆ
ಸಿಎಂ ಸಿದ್ದರಾಮಯ್ಯ
Edited By:

Updated on: Sep 19, 2025 | 7:12 AM

ಬೆಂಗಳೂರು, ಸೆಪ್ಟೆಂಬರ್ 19: ಕರ್ನಾಟಕ ಸರ್ಕಾರದ ಜಾತಿ ಗಣತಿ (Caste Census) ಆಡಳಿತಾರೂಢ ಕಾಂಗ್ರೆಸ್ ಒಳಗೆಯೇ ಜಟಾಪಟಿಗೆ ಕಾರಣವಾಗಿದೆ. ಹೊಸ ಜಾತಿಗಳ ಸೇರ್ಪಡೆಯಿಂದ ಗೊಂದಲ ಸೃಷ್ಟಿಯಾಗಿದೆ. ಈ ಗೊಂದಲವನ್ನು ಸರಿಪಡಿಸದ ಹೊರತು ಜಾತಿಗಣತಿ ಬೇಡ. ಒಂದು ವೇಳೆ ಗೊಂದಲದ ನಡುವೆ ಜಾತಿಗಣತಿ ಮುಂದುವರಿಸಿದರೆ ತೊಂದರೆ ಬರಬಹುದು ಎಂದು ಗುರುವಾರ ಬೆಂಗಳೂರಿನಲ್ಲಿ ನಡೆದ ಸಂಪುಟ ಸಭೆಯಲ್ಲಿ ಕೆಲವು ಮಂದಿ ಸಚಿವರು ಮುಖ್ಯಮಂತ್ರಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಕ್ರಿಶ್ಚಿಯನ್‌ ಬ್ರಾಹ್ಮಣ, ಕ್ರಿಶ್ಚಿಯನ್‌ ಒಕ್ಕಲಿಗ, ಕ್ರಿಶ್ಚಿಯನ್‌ ಲಿಂಗಾಯತ, ಕ್ರಿಶ್ಚಿಯನ್‌ ಕುರುಬ, ಕ್ರಿಶ್ಚಿಯನ್‌ ದಲಿತ ಎಂಬಿತ್ಯಾದಿಯಾಗಿ ಹಿಂದೂ ಜಾತಿಗಳನ್ನು ಕ್ರಿಶ್ಚಿಯನ್‌ ಧರ್ಮಕ್ಕೆ ಜೋಡಿಸಿ ಜಾತಿ ಸಮೀಕ್ಷೆಯಲ್ಲಿ ಸೇರಿಸಲಾಗಿತ್ತು. ಈ ಪಟ್ಟಿಗೆ ವಿಪರೀತ ವಿರೋಧ ವ್ಯಕ್ತವಾಗಿತ್ತು. ವಿಪಕ್ಷಗಳು, ಹಿಂದೂ ಸಮುದಾಯ ಮಾತ್ರವಲ್ಲ, ಸಂಪುಟ ಸಭೆಯಲ್ಲಿ ಖುದ್ದು ಸಚಿವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲಾ ವಿವಾದಗಳ ಮಧ್ಯೆ ಜಾತಿಗಣತಿ ಮಾಡಬೇಕಾ? ಸದ್ಯಕ್ಕೆ ಬೇಡ ಮುಂದೂಡಿ ಎಂದು ಕೆಲವು ಮಂದಿ ಸಚಿವರು ಸಿಎಂಗೆ ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ, ಸಂತೋಷ್ ಲಾಡ್, ಮುನಿಯಪ್ಪ, ಭೈರತಿ ಸುರೇಶ್ ಮಾತ್ರ ಜಾತಿಗಣತಿಯನ್ನು ಈಗಿನ ರೀತಿಯಲ್ಲೇ ಮುಂದುವರಿಸಲು ಒಲವು ತೋರಿದ್ದಾರೆ. ಬಹುತೇಕ ಸಚಿವರು ಸಮೀಕ್ಷೆ ಮುಂದೂಡಿ ಎಂದು ಆಗ್ರಹಿಸಿದ್ದಾರೆ.

ಕ್ರಿಶ್ಚಿಯನ್‌ ಜತೆ ಹಿಂದೂ ಜಾತಿಗಳ ಕಲಂ ತೆಗೆಯಲು ಆಯೋಗಕ್ಕೆ ಸಿಎಂ ಸೂಚನೆ

ಸಚಿವರೇ ಹೀಗೆ ವಿರೋಧ ವ್ಯಕ್ತಪಡಿಸುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ಬೇಸರಗೊಂಡಿದ್ದಾರೆ. ಒಂದು ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಮಾತಿಗೂ ಅವಕಾಶ ನೀಡದಂತೆ ಸಚಿವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಾತಿಗಣತಿ ಗೊಂದಲದ ಬಗ್ಗೆ ಟೇಬಲ್‌ ಕುಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಚಿವರ ಆಕ್ರೋಶಕ್ಕೆ ಸಿಡಿಮಿಡಿಗೊಂಡ ಸಿಎಂ ಕುರ್ಚಿ ಮೇಲಿಂದ ಎದ್ದು ಅತ್ತಿತ್ತ ಓಡಾಡಿದ್ದಾರೆ. ಸಂಪುಟ ಸಭೆಯಲ್ಲಿ ಹೀಗೆ ಎಂದೂ ಸಿದ್ದರಾಮಯ್ಯ ಎದ್ದು ನಿಂತು ಓಡಾಡಿದ್ದೇ ಇಲ್ಲ. ಅಷ್ಟೇ ಅಲ್ಲ, ತಮ್ಮನ್ನು ಜಾತಿವಾದಿ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದರು. ಅಷ್ಟೇ ಅಲ್ಲ, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಿಗೆ ಜಾತಿ ಜೊತೆಗೆ ಕ್ರಿಶ್ಚಿಯನ್‌ ಧರ್ಮವನ್ನು ಸೇರಿಸಿರುವ ಕಲಂಗಳನ್ನು ತೆಗೆಯುವಂತೆ ಸೂಚನೆ ನೀಡಿದ್ದಾರೆ. ಈ ಮೂಲಕ ಕಳೆದ ಕೆಲವು ದಿನಗಳಿಂದ ಎದ್ದಿರುವ ವಿವಾದಗಳಿಗೆ ತೆರೆ ಎಳೆಯಲು ಸಿಎಂ ಮುಂದಾಗಿದ್ದಾರೆ.

ಇಂದು ಮತ್ತೆ ಸಂಪುಟ ಸಭೆ, ಅಂತಿಮ ನಿರ್ಧಾರ

ಇದೇ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ಇವತ್ತು (ಸೆಪ್ಟೆಂಬರ್ 19) ಬೆಳಗ್ಗೆ 10ಗಂಟೆಗೆ ಸಂಪುಟ ಸಹೋದ್ಯೋಗಿಗಳ ಸಭೆಗೆ ಕರೆದಿದ್ದಾರೆ. ಸಭೆಯಲ್ಲಿ ಜಾತಿಗಣತಿ ಗೊಂದಲಗಳ ಬಗ್ಗೆ ಚರ್ಚಿಸಲಿದ್ದಾರೆ. ಹೆಚ್ಚುವರಿ ಜಾತಿಗಳನ್ನು ತೆಗೆದು ಸಮೀಕ್ಷೆ ಮುಂದುವರಿಸುವ ಬಗ್ಗೆ ಈ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ. ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಸಚಿವರಾದ ಹೆಚ್.ಕೆ.ಪಾಟೀಲ್, ಈಶ್ವರ ಖಂಡ್ರೆ, ಸಂತೋಷ್ ಲಾಡ್, ಭೈರತಿ ಸುರೇಶ್, ಎಂಬಿ ಪಾಟೀಲ್, ಶಿವರಾಜ್ ತಂಗಡಗಿ ಸೇರಿದಂತೆ ಕೆಲ ಸಚಿವರು ಭಾಗಿಯಾಗಲಿದ್ದಾರೆ.

2 ಲಕ್ಷ ಕೈಪಿಡಿಗಳನ್ನು ತಿಪ್ಪೆಗೆ ಎಸೆದ ಹಿಂದುಳಿದ ವರ್ಗಗಳ ಆಯೋಗ!

ಜಾತಿ ಗಣತಿ ಸಮೀಕ್ಷೆಯ ಕೈಪಿಡಿಯಲ್ಲಿ 53 ಪ್ರಶ್ನೆಗಳಿತ್ತು. ಇದರಲ್ಲಿ ಕೆಲ ಪ್ರಮುಖ ಅಂಶಗಳನ್ನು ಬದಲಾವಣೆ ಮಾಡಿರುವ ಹಿಂದುಳಿದ ವರ್ಗಗಳ ಆಯೋಗ, ಹೊಸ ಕೈಪಿಡಿಯಲ್ಲಿ 50 ಪ್ರಶ್ನೆಗಳನ್ನು ಉಳಿಸಿದೆ. ಹೀಗಾಗಿ, 2 ಲಕ್ಷ ಜಾತಿಗಣತಿ ಕೈಪಿಡಿಯನ್ನು ತಿಪ್ಪೆಗೆ ಎಸೆದಿದೆ. ಸುಮಾರು 1 ಕೋಟಿ ರೂಪಾಯಿ ಹಣ ವ್ಯಯ ಮಾಡಿ ತಯಾರಿಸಿದ್ದ ಕೈಪಿಡಿ ಈಗ ನೀರಲ್ಲಿ ಹೋಮ ಮಾಡಿದಂತಾಗಿದೆ. ಅಷ್ಟೇ ಅಲ್ಲ, ಸೆಪ್ಟೆಂಬರ್ 22ರಿಂದ ಜಾತಿಗಣತಿ ಆರಂಭವಾಗಬೇಕಿದೆ. ಅಂದರೆ ಇನ್ನು ಮೂರು ದಿನದಲ್ಲಿ ಶಿಕ್ಷಕರಿಗೆ ಕೈಪಿಡಿ ವಿತರಣೆ ಮಾಡಿ, ಸಮೀಕ್ಷೆ ಆರಂಭ ಮಾಡಲು ಸಾಧ್ಯವಾಗುತ್ತಾ ಎಂಬ ಅನುಮಾನ ಮೂಡಿದೆ.

ಸಿದ್ದರಾಮಯ್ಯ ಸಂಪುಟದಲ್ಲಿ ತಾಳಮೇಳ ಇಲ್ಲ: ಬಿಜೆಪಿ ವ್ಯಂಗ್ಯ

ಈ ಎಲ್ಲಾ ಬೆಳವಣಿಗೆಗನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರು, ಸಿದ್ದರಾಮಯ್ಯ ಸಂಪುಟದಲ್ಲಿ ತಾಳಮೇಳ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಸಂಪುಟ ಸಭೆಯಲ್ಲಿ ಜಾತಿ ಜ್ವಾಲೆ:ಏರು ಧ್ವನಿಯಲ್ಲೇ ಸಚಿವರಿಂದ ಆಕ್ಷೇಪ,ಜಾತಿಗಣತಿ ಮುಂದೂಡಿಕೆ ಆಗುತ್ತಾ?

ಒಟ್ಟಿನಲ್ಲಿ, ಜಾತಿ ಗಣತಿಯೇ ಈಗ ಗೊಂದಲದ ಗೂಡಾಗಿದೆ. ಹೀಗಾಗಿ, ಸಿಎಂ ಸಿದ್ದರಾಮಯ್ಯ ತೆರೆ ಎಳೆಯಲು ವಿವಾದಿತ ಜಾತಿಗಳ ತೆಗೆಯಲು ಸೂಚಿಸಿದ್ದಾರೆ. ಇಂದು ಸಭೆ ಕೂಡ ನಡೆ ಸುತ್ತಿದ್ದಾರೆ. ಸಭೆಯಲ್ಲಿ ಏನೆಲ್ಲಾ ನಿರ್ಧಾರ ಕೈಗೊಳ್ಳಲಾಗುತ್ತದೆ? ನಿಗದಿಯಂತೆ ಸೋಮವಾರ ಜಾತಿಗಣತಿ ಆರಂಭವಾಗುತ್ತದೆಯಾ ಇಲ್ಲವಾ ಎಂಬುದೇ ಸದ್ಯದ ಪ್ರಶ್ನೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:03 am, Fri, 19 September 25

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us