
ಬೆಂಗಳೂರು, ಅಕ್ಟೋಬರ್ 11: ಬೆಂಗಳೂರಿನ ಅಭಿವೃದ್ಧಿಗೆ ಇವರು ಯಾರೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ನಿನ್ನೆ ಮಳೆಯಲ್ಲಿ ಟಾರ್ ಹಾಕುತ್ತಿದ್ದ ವರದಿಯನ್ನು ನಾನು ನೋಡಿದೆ. ಮಳೆ ನೀರು ನಿಂತಲ್ಲಿ ಟಾರ್ ಹಾಕುವ ಟೆಕ್ನಾಲಜಿಯನ್ನು ಕಾಂಗ್ರೆಸ್ನವರು (Congress) ತಂದಿದ್ದಾರೆ. ಇದು ಅಮೆರಿಕಾದಲ್ಲೂ ಇಲ್ಲಾ, ಜಪಾನ್ನಲ್ಲೂ ಇಲ್ಲಾ. ಅಂತಹ ಟೆಕ್ನಾಲಜಿಯನ್ನು ಭಾರತಕ್ಕೆ ತಂದಿದ್ದಾರೆ. ಈ ವಿಚಾರಕ್ಕೆ ಇವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ (R Ashoka) ವ್ಯಂಗ್ಯವಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ಬೆಂಗಳೂರು ನಗರದಲ್ಲಿ ಸುರಿದ ಭಾರಿ ಮಳೆಯಿಂದ ಅವಾಂತರ ಸೃಷ್ಟಿಯಾಗಿದೆ. ಒತ್ತುವರಿ ತೆರವು ಮಾಡಿ ಸಮಸ್ಯೆಯಾಗದಂತೆ ನೋಡಿಕೊಳ್ಳುತ್ತೇವೆ ಎಂದಿದ್ರು. ಈಗ ಸಿಎಂ ಸಿದ್ದರಾಂಯ್ಯ ಅದೇ ಡೈಲಾಗ್ ಹೊಡೆದು ಹೋಗುತ್ತಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: Bengaluru Rains: ಬೆಂಗಳೂರಲ್ಲಿ ಮಳೆಯ ಅಬ್ಬರಕ್ಕೆ ಹೊಳೆಯಂತಾಗಿರುವ ರೈನ್ಬೋ ಡ್ರೈವ್ ಲೇಔಟ್
ಕೋಲ್ಡ್ ಟಾರ್ ಮಳೆ ನಿಂತ ಮೇಲೆ ಹಾಕುವುದು, ಮಳೆ ಬಂದಾಗ ಹಾಕುವುದಲ್ಲ. ಅದನ್ನ ಪ್ರಯೋಗ ಮಾಡಿ ನಾವು ಫೈಲ್ ಆಗಿದ್ದೇವೆ. ಅದು ಬೇಡ ಅಂತಾ ನಾವು ರಿಜೆಕ್ಟ್ ಮಾಡಿದ್ದೇವೆ. ರಾಜಕಾಲುವೆಗಳನ್ನು ಸರಿ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ. ಸಿಎಂ, ಡಿಸಿಎಂ ನಗರ ಪ್ರದಕ್ಷಿಣೆಗೆ ಹೋಗದಿರುವುದೇ ಒಳ್ಳೆಯದು. ಸಿಟಿ ರೌಂಡ್ಸ್ಗೆ ಹೋದರೆ 3 ರಿಂದ 4 ಗಂಟೆ ಟ್ರಾಫಿಕ್ ಜಾಮ್ ಆಗುತ್ತದೆ. ಸಿಟಿ ರೌಂಡ್ಸ್ಗೆ ಹೋಗದಿದ್ದರೆ ಅಷ್ಟು ಹೊತ್ತು ಜನ ಸೇಫ್ ಆಗಿರುತ್ತಾರೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.
ರಾಜ್ಯ ಸರ್ಕಾರದಲ್ಲಿ ಹಣ ಇಲ್ಲ, ಪಾಲಿಕೆಯಲ್ಲೂ ಹಣ ಇಲ್ಲ. ಸಿಎಂ ಮಾತಿಗೆ ಗುತ್ತಿಗೆದಾರರು ನಯಾ ಪೈಸೆ ಬೆಲೆ ಕೊಡುತ್ತಿಲ್ಲ. ಸರ್ಕಾರ ಹೇಳಿಕೆಗಳಲ್ಲೇ ಇದೆ ಹೊರತು ಕೆಲಸ ಮಾಡಲು ಹಣ ಇಲ್ಲ. ಮರ್ಯಾದೆ ಹೋಗುತ್ತದೆ ಅಂತಾ ಇವರು ಹೇಳಿಕೊಳ್ಳುತ್ತಿಲ್ಲ ಅಷ್ಟೇ. ಶ್ವೇತಪತ್ರ ಹೊಡಿಸಿದರೆ ಇವರ ಬಣ್ಣ ಇಡೀ ದೇಶಕ್ಕೆ ಗೊತ್ತಾಗುತ್ತದೆ. ವಿಶ್ವ ಬ್ಯಾಂಕ್ ಮಂಜೂರು ಮಾಡಿದ ಹಣ ಎಲ್ಲೋಯ್ತು ಗೊತ್ತಿಲ್ಲ. ಡಿ.ಕೆ.ಶಿವಕುಮಾರ್ ಅಧಿಕಾರ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಎಂದಿದ್ದಾರೆ.
ಸಚಿವರಿಗೆ ಸಿಎಂ ಡಿನ್ನರ್ ಮೀಟಿಂಗ್ ಆಯೋಜಿಸಿರುವ ವಿಚಾರವಾಗಿ ಮಾತನಾಡಿದ ಅವರು, ಬಿಹಾರ ಚುನಾವಣೆಗೆ ಫಂಡ್ ಸಂಗ್ರಹಕ್ಕೆ ಡಿನ್ನರ್ ಮೀಟಿಂಗ್ ಕರೆದಿರುವುದು. ಸಚಿವರು ಯಾರು ಯಾರು ಎಷ್ಟು ಕೊಡಬೇಕು ಅಂತಾ ಫಿಕ್ಸ್ ಮಾಡುತ್ತಾರೆ. ಚಿನ್ನದ ಗಟ್ಟಿ ಸಿಕ್ಕಿಹಾಕಿಕೊಂಡಿದೆ, ಹಾಗಾಗಿ ಪರ್ಯಾಯ ವ್ಯವಸ್ಥೆ ಮಾಡಲು ಡಿನ್ನರ್ ಮೀಟಿಂಗ್ ಕರೆದಿದ್ದಾರೆ ಎಂದು ಆರ್. ಅಶೋಕ್ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.