ಕೊವಿಡ್​ ಮಾರ್ಗಸೂಚಿಗಳ ಜಾರಿಗೊಳಿಸುವುದು ಈ ವರ್ಷ ಕಷ್ಟ ಕಷ್ಟವಾಗಿದೆ: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್​ ಸೂದ್

Praveen Sood : ಎರಡನೆಯ ವರ್ಷವೂ ಜನರ ಮೇಲೆ ಕೊವಿಡ್​ ನಿರ್ಬಂಧಗಳನ್ನು ಹೇರುವುದು ಅಷ್ಟು ಸುಲಭವಲ್ಲ. ಸೋಂಕು ಹಬ್ಬುವಿಕೆಯನ್ನು ಸರ್ಕಾರ ನಿಯಂತ್ರಿಸಲಿ ಎಂದು ಜನ ಬಯಸುತ್ತಾರೆ. ಆದರೆ ಅವರ ದೈನಂದಿನ ಯಾವುದೇ ಚಟುವಟಿಕೆಗೆ ನಿರ್ಬಂಧ ಹಾಕಿದಾಗ ಪ್ರಶ್ನಿಸತೊಡಗುತ್ತಾರೆ.

ಕೊವಿಡ್​ ಮಾರ್ಗಸೂಚಿಗಳ ಜಾರಿಗೊಳಿಸುವುದು ಈ ವರ್ಷ ಕಷ್ಟ ಕಷ್ಟವಾಗಿದೆ: ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್​ ಸೂದ್
ಕರ್ನಾಟಕ ಡಿಜಿಪಿ ಪ್ರವೀಣ್​ ಸೂದ್​
Follow us
|

Updated on: May 01, 2021 | 11:21 AM

ಬೆಂಗಳೂರು: ಕೊರೊನಾ ಸೋಂಕು ಅಟ್ಟಹಾಸ ತೋರುತ್ತಿರುವಾಗ ಕೊವಿಡ್​ ಮಾರ್ಗಸೂಚಿಗಳನ್ನು ಜಾರಿಗೊಳಿಸುವುದು ಈ ವರ್ಷ ಕಷ್ಟ ಕಷ್ಟವಾಗಿದೆ ಎಂದು ಸ್ವತಃ ಕರ್ನಾಟಕದ ಪೊಲೀಸ್ ಮಹಾ ನಿರ್ದೇಶಕ (Karnataka DGP) ಪ್ರವೀಣ್​ ಸೂದ್ ಹೇಳಿದ್ದಾರೆ. ಸತತವಾಗಿ ಎಡರನೇ ವರ್ಷವೂ ಕಾಡುತ್ತರುವ ಕೊರೊನಾ ಸೋಂಕಿನ ಸಮ್ಮುಖದಲ್ಲಿ ಕೊವಿಡ್​ ಶಿಸ್ತು ಪಾಲಿಸುವುದು ಕಷ್ಟ ಸಾಧ್ಯವಾಗಿದೆ. ಸೋಂಕು ಅತ್ಯಂತ ವೇಗವಾಗಿ ಹರಡುತ್ತಿರುವಾಗ ಪೊಲೀಸರು ಬಸವಳಿದಿದ್ದಾರೆ. ಆದ್ದರಿಂದ ಕೊವಿಡ್​ ಸಂಬಂಧಿ ಕೆಲಸ ಕಾರ್ಯಗಳನ್ನು ಅನುಷ್ಠಾನಗೊಳಿಸುವುದು ಸವಾಲಿನದ್ದಾಗಿದೆ ಎಂದು DGP ಪ್ರವೀಣ್​ ಸೂದ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಎರಡನೆಯ ವರ್ಷವೂ ಜನರ ಮೇಲೆ ಕೊವಿಡ್​ ನಿರ್ಬಂಧಗಳನ್ನು ಹೇರುವುದು ಅಷ್ಟು ಸುಲಭವಲ್ಲ. ಸೋಂಕು ಹಬ್ಬುವಿಕೆಯನ್ನು ಸರ್ಕಾರ ನಿಯಂತ್ರಿಸಲಿ ಎಂದು ಜನ ಬಯಸುತ್ತಾರೆ. ಆದರೆ ಅವರ ದೈನಂದಿನ ಯಾವುದೇ ಚಟುವಟಿಕೆಗೆ ನಿರ್ಬಂಧ ಹಾಕಿದಾಗ ಪ್ರಶ್ನಿಸತೊಡಗುತ್ತಾರೆ. ಸೋಂಕಿನ ವಿರುದ್ಧ ಸಾರ್ವಜನಿಕ ನಡುವಳಿಕೆಗಳು ಬೇಜಾವಾಬ್ದಾರಿಯಿಂದ ಕೂಡಿದ್ದಾಗಿದ್ದು ಕೊವಿಡ್​ ಸಂಬಂಧಿತ ನಿರ್ಬಂಧಗಳನ್ನು ಜಾರಿಗೊಳಿಸುವುದು ಕಷ್ಟ ಕಷ್ಟವಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್​ ಸೂದ್ ಅವರು ಸೂಕ್ಷ್ಮವಾಗಿ ಹೇಳಿದ್ದಾರೆ.

ನಮ್ಮ ಪೊಲೀಸರು ನಿಜಕ್ಕೂ ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಜವಾಬ್ದಾರಿ ನಿಭಾಯಿಸುತ್ತಿದ್ದಾರೆ. ಪೊಲೀಸ್ ವ್ಯವಸ್ಥೆಯನ್ನೂ ಅವರು ಪಾಲನೆ ಮಾಡಬೇಕಾಗಿದೆ. ನೆರೆಯ ರಾಜ್ಯಗಳಲ್ಲಿ ನಡೆದ ಚುನಾವಣೆಗಳಲ್ಲಿ ನಮ್ಮ ಪೊಲೀಸರು ಸೇವೆ ಸಲ್ಲಿಸಿ, ಮರಳಿದ್ದಾರೆ. ಕೇರಳದಿಂದ 2,000 ಕೆಎಸ್ಆರ್​ಪಿ ಸಿಬ್ಬಂದಿ, ತಮಿಳುನಾಡಿನಿಂದ 10,000 ಗೃಹರಕ್ಷಕ ದಳದವರು, ಕೇರಳ-ಪುದುಚೇರಿಯಿಂದ 2,000 ಗೃಹರಕ್ಷಕ ದಳದವರು ಚುನಾವಣಾ ಕರ್ತವ್ಯ ಮುಗಿಸಿ ವಾಪಸಾಗಿದ್ದಾರೆ. ಆರೋಗ್ಯ ಇಲಾಖೆಯ ಜೊತೆಗೂಡಿ ಅವರಿಗೆಲ್ಲ ಸಾಮೂಹಿಕ ಕೊವಿಡ್​ ಟೆಸ್ಟಿಂಗ್​ ಮಾಡಿಸಲಾಗುತ್ತಿದೆ. ಚುನಾವಣೆ ಡ್ಯೂಟಿಗೆ ತೆರಳುವ ಮುನ್ನ ಶೇ. 90ರಷ್ಟು ಮಂದಿಗೆ ಲಸಿಕೆ ಹಾಕಿಸಲಾಗಿತ್ತು. ನಾವು ನಮ್ಮ ಸಿಬ್ಬಂದಿ ಮತ್ತು ಅವರ ಕುಟುಂಬಗಳನ್ನು ಜೋಪಾನ ಮಾಡಬೇಕಾಗಿದೆ.

ಸದ್ಯ ಈ ಬಾರಿ ನಮ್ಮ ಪೊಲೀಸರಲ್ಲಿ ಹೆಚ್ಚಿನ ಮಂದಿಗೆ ಸೋಂಕು ತಗುಲಿಲ್ಲ. ಆದರೆ ಅವರ ಕುಟುಂಬಗಳಲ್ಲಿ ಸೋಂಕು ಪೀಡಿತರು ಹೆಚ್ಚಾಗಿದ್ದಾರೆ. ನಮ್ಮ ಪೊಲೀಸರಲ್ಲಿ ಕೇವಲ ಹತ್ತಾರು ಮಂದಿಗೆ ಸೋಂಕು ತಗುಲಿದೆ. ಅದೇ ಅವರ ಕುಟುಂಬಸ್ಥರಲ್ಲಿ ಸುಮಾರು 500 ಮಂದಿಗೆ ಸೋಂಕು ತಗುಲಿದೆ. ಇದು ಪರಿಸ್ಥಿತಿಯನ್ನು ಇನ್ನಷ್ಟು ಹೈರಾಣಗೊಳಿಸಿದೆ ಎಂದು ಶೂನ್ಯದತ್ತ ಕಣ್ಣುಹಾಯಿಸುತ್ತಾರೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್​ ಸೂದ್.

(coronavirus second consecutive year enforcing covid norms not easy this year says Karnataka DGP Praveen Sood) ಇದನ್ನೂ ಓದಿ: ಎಲ್ಲಾ ಪೊಲೀಸ್​ ಸಿಬ್ಬಂದಿಗೆ ವಾರದ ರಜೆ ಕಡ್ಡಾಯವಾಗಿ ನೀಡಬೇಕು -DG & IGP ಪ್ರವೀಣ್ ಸೂದ್​ ಸೂಚನೆ