7 ವರ್ಷದ ಹಿಂದೆ ಮನೆ ಬಿಟ್ಟಿದ್ದ ಯುವಕ ಹೆಣ್ಣಾಗಿ ಪತ್ತೆ; ಸಾವನ್ನಪ್ಪಿದ ಮಂಗಳಮುಖಿಯ ರಹಸ್ಯ ಇಲ್ಲಿದೆ

Kolar Crime News: ವಂದನಾ ಅನ್ನೋ ಮಂಗಳಮುಖಿಯ ಬಗ್ಗೆ ಮಾಹಿತಿಯೇ ಇಲ್ಲದಿದ್ದವರಿಗೆ ಅಸಲಿ ಮುಖ ತಿಳಿದಿದ್ದೇ ನಿನ್ನೆ ರಾತ್ರಿ ವಂದನಾ ಮೃತಪಟ್ಟ ನಂತರ. ವಂದನಾಳ ಮೊದಲ ಹೆಸರು ಶಿವಕುಮಾರ್.​

7 ವರ್ಷದ ಹಿಂದೆ ಮನೆ ಬಿಟ್ಟಿದ್ದ ಯುವಕ ಹೆಣ್ಣಾಗಿ ಪತ್ತೆ; ಸಾವನ್ನಪ್ಪಿದ ಮಂಗಳಮುಖಿಯ ರಹಸ್ಯ ಇಲ್ಲಿದೆ
ಮೃತ ಮಂಗಳಮುಖಿ
Follow us
| Updated By: ಸುಷ್ಮಾ ಚಕ್ರೆ

Updated on:Aug 20, 2021 | 8:19 PM

ಕೋಲಾರ: ಅವನು ಆ ಮನೆಯ ಹಿರಿಯ ಮಗ, ಮನೆಯ ಜವಾಬ್ದಾರಿಗಳನ್ನು ಹೊತ್ತು ಸಂಸಾರವನ್ನು ತನ್ನ ಹೆಗಲ ಮೇಲೆ ಹೊರಬೇಕಿದ್ದವನು. ಆದರೆ, ಅವನ ಕೆಲವೊಂದು ಸಹವಾಸಗಳು ಆತನನ್ನು ಅವಳನ್ನಾಗಿ ಬದಲಿಸಿತ್ತು. ಪರಿಣಾಮವಾಗಿ ತನ್ನ ಹುಟ್ಟಿದ ಮನೆಯನ್ನು ಬಿಟ್ಟಿದ್ದವನು, ಈಗ ಮಂಗಳಮುಖಿಯಾಗಿ ಶವವಾಗಿ ಸಿಕ್ಕಿದ್ದಾಳೆ. 7 ವರ್ಷಗಳ ಹಿಂದೆ ಗಂಡಾಗಿ ಕಾಣೆಯಾದವನು ಹೆಣ್ಣಾಗಿ ಸಿಕ್ಕಿದ್ದು ಹೇಗೆ? ಇಲ್ಲಿದೆ ಕುತೂಹಲಕಾರಿ ಮಾಹಿತಿ…

ಶವಾಗಾರದ ಎದುರು ಸಾಲಾಗಿ ಕುಳಿತಿರುವ ಪೊಷಕರು, ಮಗನನ್ನು ನೆನೆದು ಕಣ್ಣೀರು ಹಾಕುತ್ತಿರುವ ಹೆತ್ತವರು. ಇಂಥದ್ದೊಂದು ದೃಶ್ಯ ಕಂಡು ಬಂದಿದ್ದು ಕೋಲಾರದಲ್ಲಿ. ಕಳೆದ ರಾತ್ರಿ ಕೋಲಾರ ನಗರದ ಗಾಂಧಿನಗರ ಬಡಾವಣೆಯಲ್ಲಿ ಮಂಗಳಮುಖಿಯೊಬ್ಬಳು ಜೀವನದಲ್ಲಿ ಜಿಗುಪ್ಸೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಳು. ವಂದನಾ ಆತ್ಮಹತ್ಯೆಗೆ ಶರಣಾದ ಮಂಗಳಮುಖಿ. ಕಳೆದ ನಾಲ್ಕು ತಿಂಗಳ ಹಿಂದೆ ಗಾಂಧಿನಗರದಲ್ಲಿ ರಾಮಚಂದ್ರಪ್ಪ ಎನ್ನುವವರ ಮನೆಯಲ್ಲಿ ಬಾಡಿಗೆ ಪಡೆದಿದ್ದ ವಂದನಾ ಕಳೆದ ರಾತ್ರಿ ಏಕಾಏಕಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಕೆಯ ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆದರೆ, ಎರಡು ದಿನದ ಹಿಂದೆ ವಂದನಾ ಮನೆಯ ಬಳಿ ಇದ್ದಾಗ ಕೆಲವು ಹುಡುಗರು ಬಂದು ಹೊಂಚು ಹಾಕುತ್ತಿದ್ದರಂತೆ. ಆಗ ಮನೆಯ ಮಾಲೀಕರು ಆ ಹುಡುಗರನ್ನು ಬೈದು ಕಳಿಸಿದ್ದರಂತೆ. ಅದಾದ ಮೇಲೆ ಮಂಕಾಗಿದ್ದ ವಂದನಾ ಯಾರ ಜೊತೆಗೂ ಮಾತನಾಡಿಲ್ಲ, ಮನೆಯಿಂದಲೂ ಹೊರಗೆ ಬಂದಿರಲಿಲ್ಲ.

ನಿನ್ನೆ ರಾತ್ರಿ ಎರಡು ದಿನವಾದರೂ ಮನೆಯಿಂದ ಹೊರಗೆ ಬಾರದ ಹಿನ್ನೆಲೆ ಮನೆಗೆ ಹೋಗಿ ನೋಡಿದಾಗ ವಂದನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಆದರೆ ವಂದನಾ ತಾನು ಮನೆಯ ಬಾಡಿಗೆ ಪಡೆಯುವಾಗ ಮನೆಯ ಮಾಲೀಕರಿಗೆ ತಾನು ಮೃತಪಟ್ಟರೆ ನಮ್ಮ ಮನೆಯವರು ಕೋಲಾರ ನಗರದ ಕೀಲುಕೋಟೆ ಬಡಾವಣೆಯಲ್ಲಿದ್ದಾರೆ ಎಂದು ಅವರ ಮನೆಯವರ ಹೆಸರು ಹೇಳಿದ್ದಳಂತೆ. ಹಾಗಾಗಿ ವಂದನಾ ಮೃತಪಟ್ಟ ವಿಷಯ ತಿಳಿದಾಗ ಮನೆಯ ಮಾಲೀಕ ರಾಮಚಂದ್ರಪ್ಪ ಗಲ್​ಪೇಟೆ ಪೊಲೀಸರಿಗೆ ಮಾಹಿತಿ ನೀಡಿ ಅವರ ಪೊಷಕರ ಮಾಹಿತಿಯನ್ನು ನೀಡಿದ್ದಾರೆ.

ಅವನು ಅವಳಾದ ಕತೆ: ವಂದನಾ ಅನ್ನೋ ಮಂಗಳಮುಖಿಯ ಬಗ್ಗೆ ಮಾಹಿತಿಯೇ ಇಲ್ಲದಿದ್ದವರಿಗೆ ಅಸಲಿ ಮುಖ ತಿಳಿದಿದ್ದೇ ನಿನ್ನೆ ರಾತ್ರಿ ವಂದನಾ ಮೃತಪಟ್ಟ ನಂತರ. ವಂದನಾಳ ಮೊದಲ ಹೆಸರು ಶಿವಕುಮಾರ್.​ ಕೀಲುಕೋಟೆ ಬಡಾವಣೆಯ ನಾರಾಯಣಸ್ವಾಮಿ ಎಂಬುವವರ ಹಿರಿಯ ಮಗ ಶಿವಕುಮಾರ್ 18 ವರ್ಷಗಳ ಕಾಲ ಮನೆಯಲ್ಲಿ ಕೆಲಸ ಮಾಡಿಕೊಂಡು ಇದ್ದವನು ಕೆಲವರ ಸಹವಾಸದಿಂದ ಮನೆಗೆ ಬಾರದೆ ಕೆಲವು ಮಂಗಳ ಮುಖಿಯರ ಜೊತೆಗೆ ಸೇರಿ ಮನೆಗೆ ಬರುವುದನ್ನೇ ಬಿಟ್ಟಿದ್ದನಂತೆ. ಆದರೆ, ಅವರ ತಂದೆ 2-3 ಬಾರಿ ಆತನನ್ನು ಹುಡುಕಿಕೊಂಡು ಮನೆಗೆ ಕರೆತಂದಿದ್ದರಾದರೂ ಅವನು ಮನೆಯಲ್ಲಿ ಇರುತ್ತಿರಲಿಲ್ಲ. ಆದರೆ ಏಳು ವರ್ಷಗಳ ಹಿಂದೆ ಒಮ್ಮೆ ಮನೆಗೆ ಬಂದು ಮನೆಯಲ್ಲಿದ್ದ ಆಧಾರ್​ ಕಾರ್ಡ್​ ತೆಗೆದುಕೊಂಡು ಹೋದ ಶಿವಕುಮಾರ್​ ಮತ್ತೆ ಎಲ್ಲಿ ಹೋದ ಅನ್ನೋದು ತಿಳಿದು ಬಂದಿರಲಿಲ್ಲ.

ಆದರೆ, ಕಳೆದ ರಾತ್ರಿಯೇ ತಮ್ಮ ಮಗ ಶಿವಕುಮಾರ್ ಎಂಬಾತ ವಂದನಾ​ ಆಗಿ ಬದಲಾಗಿದ್ದಾನೆ ಅನ್ನೋದು. ಸದ್ಯ ಮನೆಯ ಹಿರಿಮಗನನ್ನು ಕಳೆದುಕೊಂಡು ಕಣ್ಣೀರು ಹಾಕುತ್ತಿರುವ ಕುಟುಂಬಸ್ಥರು, ಮಂಗಳಮುಖಿಯರ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹೀಗೆ ಯುವಕರನ್ನು ಪುಸಲಾಯಿಸಿ ಹಾಳು ಮಾಡುತ್ತಿದ್ದಾರೆ ಎಂದು ಕಣ್ಣೀರು ಹಾಕಿದ್ದಾರೆ. ನಮ್ಮ ಮಗ ನಮ್ಮ ಜೊತೆಗಿರಲಿಲ್ಲ, ಕೊನೆ ಪಕ್ಷ ಅವನ ಅಂತ್ಯಸಂಸ್ಕಾರ ಮಾಡಿ ನಾವು ಋಣ ಕಳೆದುಕೊಳ್ಳುತ್ತೇವೆ ಅನ್ನೋದು ಶಿವಕುಮಾರ್​ ಹೆತ್ತವರ ಮಾತು.

ಒಟ್ಟಾರೆ, ಅವನಾಗಿ ಮನೆಯಿಂದ ಮನೆ ಬಿಟ್ಟು ಹೋದವನು ಇಂದು ಹೆಣ್ಣಾಗಿ ಶವವಾಗಿ ಸಿಕ್ಕಿದ್ದಾನೆ. ಮನೆಯ ಹಿರಿಮಗನಾಗಿ ಇಂದು ಇರಬೇಕಾಗಿದ್ದವನು ಇಂದು ಮಂಗಳಮುಖಿಯಾಗಿ ಅಲೆಮಾರಿ ಜೀವನ ಸಾಗಿಸುವಂತಾಗಿದ್ದು ದುರಂತ. ಇತ್ತ ಅವಳಾಗಿ ತಾನು ಸುಖವಾಗಿರದೆ, ಅವನಾಗಿ ತನ್ನ ಹೆತ್ತವರನ್ನು ಸುಖವಾಗಿ ಇಡದೆ, ಶಿವಕುಮಾರ್​ ವಂದನಾ ಆಗಿ ಸಾಧಿಸಿದ್ದಾದರೂ ಏನು? ಅನ್ನೋದು ಕೊನೆಯ ಪ್ರಶ್ನೆ.

(ವರದಿ: ರಾಜೇಂದ್ರ ಸಿಂಹ)

ಇದನ್ನೂ ಓದಿ: Crime News: ದಾರಿಮಧ್ಯೆ ಅನೈತಿಕ ಸಂಬಂಧ ವಿಚಾರ ಗಂಡ-ಹೆಂಡ್ತಿ ಜಗಳ: ಬೈಕ್ ನಿಲ್ಲಿಸಿ ಆತ್ಮಹತ್ಯೆ..!

ಅಮ್ಮಾ ಕಾಪಾಡು!; ತಾಯಿಯ ಎದುರಲ್ಲೇ ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ವಿಷ ಕುಡಿಸಿ ಕೊಲೆ

(Crime News Transgender who Leave his House 7 Years before Found Dead in Kolar)

Published On - 8:05 pm, Fri, 20 August 21